About the Author

’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.

ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ಸವಾಲುಗಳು (2004), ಸ್ಥಿತಿಪ್ರಜ್ಞೆ (2007), ಮತ್ತೆ ಮತ್ತೆ ಪಂಪ (2008), ಸಾಹಿತ್ಯ ಸಮೀಕ್ಷೆ (2009). ಉತ್ತರಾರ್ಧ (2011) ಅವರ ವಿಮರ್ಶಾ ಕೃತಿಗಳು.

ಕನ್ನಡ ಸಣ್ಣ ಕಥೆಗಳು (1978), ಹೊಸಗನ್ನಡ ಕವಿತೆ (1985), ಶತಮಾನದ ಕನ್ನಡ ಸಾಹಿತ್ಯ ಸಂ. 2 (2000) ಶತಮಾನದ ಕನ್ನಡ ಸಾಹಿತ್ಯ ಸಂ. 2 (2009) ಕೃತಿಗಳನ್ನು ಸಂಪಾದಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸಾಹಿತ್ಯ ವಿಮರ್ಶೆ ಪ್ರಶಸ್ತಿಯು 'ನಿರಪೇಕ್ಷ' (1985), ವಿ. ಎಂ. ಇನಾಂದರ್‌ ವಿಮರ್ಶೆ ಪ್ರಶಸ್ತಿ 'ನಿಜದನಿ' (1989)ಗೆ ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (19990), ಕರ್ನಾಟಕ ರಾಜ್ಯ ಪ್ರಶಸ್ತಿ (2000), ಜಿ. ಎಸ್. ಶಿವರುದ್ರಪ್ಪ ವಿಮರ್ಶೆ ಪ್ರಶಸ್ತಿ (2004), ಶಿವರಾಮ ಕಾರಂತ ಪ್ರಶಸ್ತಿ (20009), ಪಂಪ ಪ್ರಶಸ್ತಿ (2010), ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಡಿ. ಲಿಟ್ ಪದವಿ (2014), ತೀನಂಶ್ರೀ ವಿಮರ್ಶೆ ಪ್ರಶಸ್ತಿ (2014) ಅವರಿಗೆ ದೊರೆತ ಗೌರವಗಳು.

ಅಮೆರಿಕದ ಮ್ಯಾಡಿಸನ್ ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯ (1983) ಹಾಗೂ ಅಮೆರಿಕ ಸರ್ಕಾರದದ ಅತಿಥಿಯಾಗಿ ಅಮೆರಿಕ (2000) ಪ್ರವಾಸ ಮಾಡಿದ್ದ ಅವರು ಇಂಗ್ಲೆಂಡ್ (2000) ಮತ್ತು ಚೀನಾ (2006)ಗಳಿಗೂ ಭೇಟಿ ನೀಡಿದ್ದಾರೆ. 

ಜಿ.ಎಚ್. ನಾಯಕರು 2023 ಮೇ 26ರಂದು ನಿಧನರಾದರು

ಜಿ. ಎಚ್. ನಾಯಕ

(18 Sep 1935-26 May 2023)

Books about Author