About the Author

ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು.

ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ಮುನ್ನ 1942ರಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ್ದರು. ತರೀಕೆರೆಯಲ್ಲಿ ನಡೆದ ಮೊದಲನೇ ಅಖಿಲ ಕರ್ನಾಟಕ ಜನಪದ ಸಮ್ಮೇಳನ (1967) ಅಧ್ಯಕ್ಷರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1969) ನೀಡಿತ್ತು. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (1979), ಅಮೆರಿಕಾದಲ್ಲಿ ಗೊರೂರು ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದ್ದವು. ಶಿರಸಿಯಲ್ಲಿ ನಡೆದ 55ನೇ ಕನ್ನಡ ಸಾಹಿತ್ಯ ಸಮ್ಮೇಳನ (1982) ಅಧ್ಯಕ್ಷರಾಗಿದ್ದರು.

ಕಥೆ, ಕಾದಂಬರಿ, ಲಲಿತಪ್ರಬಂಧ, ಜೀವನಚರಿತ್ರೆಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ. 60ಕ್ಕೂ ಹೆಚ್ಚು ಕೃತಿ ರಚಿಸಿರುವ ಗೊರೂರು ಅವರ ಕೃತಿಗಳು ಜನಪ್ರಿಯವಾಗಿವೆ. ಅವರ ಪ್ರಧಾನ ಕೃತಿಗಳು ಹೀಗಿವೆ :

ಹಳ್ಳಿಯ ಚಿತ್ರಗಳು, ನಮ್ಮ ಊರಿನ ರಸಿಕರು, ಬೈಲಹಳ್ಳಿ ಸರ್ವೆ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ಕಥೆಗಳು ಮತ್ತು ಇತರ ಚಿತ್ರಗಳು, ಶಿವರಾತ್ರಿ, ಬೆಸ್ತರ ಕರಿಯ, ಗೋಪುರದ ಬಾಗಿಲು ಇತ್ಯಾದಿ ಗದ್ಯ ಕೃತಿಗಳು. ಹಳ್ಳಿಯ ಹಾಡು, ಹಳ್ಳಿಯ ಬಾಳು, ಜನಪದ ಜೀವನ ಮತ್ತು ದರ್ಶನ ಇತ್ಯಾದಿ ಜಾನಪದ ಕೃತಿಗಳು. ಅಮೆರಿಕಾದಲ್ಲಿ ಗೊರೂರು-ಪ್ರವಾಸ ಗ್ರಂಥ, ಗಾಂಧೀಜಿ ಆತ್ಮಕಥೆ ಅನುವಾದ.

ಗೊರೂರು ರಾಮಸ್ವಾಮಿ ಅಯ್ಯಂಗಾರ್

(04 Jul 1904-28 Sep 1991)

BY THE AUTHOR