About the Author

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ಉಪನ್ಯಾಸಕರಾಗಿದ್ದರು. 1983 ರಲ್ಲಿ ಪ್ರಜಾವಾಣಿ, ಸುಧಾ, ಡೆಕ್ಕನ್‍ಹೆರಾಲ್ಡ್ ಪತ್ರಿಕಾ ಸಮೂಹ ಸೇರಿ 31 ವರ್ಷ ಕಾಲ ವಿವಿಧ ಸಂಪಾದಕೀಯ ಹುದ್ದೆ ನಿರ್ವಹಿಸಿ ಸುದ್ದಿಸಂಪಾದಕರಾಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ನಟ, ನಿರ್ದೇಶಕರಾಗಿ ರಂಗಪ್ರವೇಶ ಮಾಡಿ ಸಂಘಟಕರಾಗಿ ಬೆಳೆದ ಗುಡಿಹಳ್ಳಿಯವರು ರಂಗ ಬರವಣಿಗೆಗೆ ಜೀವನ ಮುಡಿಪಾಗಿಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ, ಪ್ರೆಸ್‍ಕ್ಲಬ್ ಉಪಾಧ್ಯಕ್ಷ, ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದರು. ರಾಜ್ಯೋತ್ಸವ, ಕೆಂಪೇಗೌಡ, ಮುರುಘರಾಜೇಂದ್ರ, ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರು. ಹರಪನಹಳ್ಳಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಂಗ ದಿಗ್ಗಜರ ಹಲವಾರು ವ್ಯಕ್ತಿಚಿತ್ರಗಳು ಶಾಲೆ, ಕಾಲೇಜು ಪಠ್ಯಪುಸ್ತಕಗಳಲ್ಲಿ ಪಾಠಗಳಾಗಿವೆ. ಗುಡಿಹಳ್ಳಿ ಬರೆದದ್ದಕ್ಕಿಂತ ಬರೆಯಿಸಿದ್ದೇ ಹೆಚ್ಚು, ರಂಗದ ಮೇಲೆ ಮೆರೆದದ್ದಕ್ಕಿಂತ ತೆರೆಯ ಹಿಂದೆ ದುಡಿದದ್ದೇ ಹೆಚ್ಚು. ರಂಗಭೂಮಿ ಬಿಟ್ಟರೆ ಮತ್ತೇನು ಗೊತ್ತಿಲ್ಲ ಎಂಬಂತೆ ಬದುಕುತ್ತಿರುವ ನಿಷ್ಕಾಮ ರಂಗಕರ್ಮಿ. ಗುಡಿಹಳ್ಳಿ ನಾಗರಾಜ್ ಅವರ ರಂಗಕೃತಿಗಳು: ರಂಗನಾಟಕ ಪ್ರಯೋಗ ಸಾರ್ಥಕತೆ, ತೆರೆ ಸರಿದಾಗ (ಮಾಲತಿಶ್ರೀ ಮೈಸೂರು ಆತ್ಮಕತೆ), ರಂಗಸಿರಿ (ಮರಿಯಮ್ಮನಹಳ್ಳಿ ಡಾ.ನಾಗರತ್ನಮ್ಮ ಆತ್ಮಕತೆ), ಗುಬ್ಬಿ ವೀರಣ್ಣ, ಡಾ.ಲಕ್ಷ್ಮಣದಾಸ್, ಗಾನಕೋಗಿಲೆ,ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು, ಮೇಕಪ್‍ಮನ್ ಸುಬ್ಬಣ್ಣ, ರಂಗನೇವರಿಕೆ, ರಂಗಸಂದರ್ಶನ, ರಂಗದಿಗ್ಗಜರು, ಚಿಂದೋಡಿ ಲೀಲಾ, ಕಲಾಗ್ರಾಮ, ಜನಪರ ರಂಗಭೂಮಿ, ರಂಗಸೆಲೆ ಇತ್ಯಾದಿ.

ಅವರ ಸಂಪಾದಿತ ಕೃತಿಗಳು: ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ರಂಗಮಾಹಿತಿ ಮಾಲಿಕೆ, ಹಾಗೂ ರಂಗಸಂಪನ್ನರು ಮಾಲಿಕೆಯ 40 ಕೃತಿಗಳು, ವೃತ್ತಿ ರಂಗದ ಮಹತ್ತರ ನಾಟಕಗಳು (ರಾಮಕೃಷ್ಣ ಮರಾಠೆ ಜತೆಗೆ), ಶತಮಾನದ ಶಕಪುರುಷ ಏಣಗಿ ಬಾಳಪ್ಪ (ಈ ಮೂರೂ ಸರಣಿ ನಾಟಕ ಅಕಾಡೆಮಿ ಪ್ರಕಟಣೆ), ಪಿ.ಬಿ.ಧುತ್ತರಗಿ ಆಯ್ದ ನಾಟಕಗಳು (ಪುಸ್ತಕ ಪ್ರಾಧಿಕಾರದ ಪ್ರಕಟಣೆ) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ. ಹಲವಾರು ಪ್ರಶಸ್ತಿ ಗೌರವಗಳು ಶ್ರೀಯುತರಿಗೆ ಲಭಿಸಿವೆ.

ಗುಡಿಹಳ್ಳಿ ನಾಗರಾಜ