About the Author

ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ದಾವಣಗೆರೆ ಜಿಲ್ಲೆಯ, ನ್ಯಾಮತಿ ತಾಲೂಕಿನ ಜೀನಹಳ್ಳಿಯವರು. ತಂದೆ- ಎಂ. ತೀರ್ಥಪ್ಪ, ತಾಯಿ- ನಿಂಗಮ್ಮ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಜೀನಹಳ್ಳಿಯಲ್ಲಿ ಹಾಗೂ ಪಿ.ಯು.ಸಿಯನ್ನು ನ್ಯಾಮತಿಯಲ್ಲಿ, ಬಿ.ಎ.ಪದವಿಯನ್ನು ಶಿವಮೊಗ್ಗದಲ್ಲಿ ಪೂರ್ಣಗೊಳಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದರು. ಶಿಕಾರಿಪುರ, ಬೆಮಿಲ್ ಖೇಡ(ಹುಮನಾಬಾದ ತಾಲೂಕು) ಅಜ್ಜಂಪುರ ಕಾಲೇಜುಗಳಲ್ಲಿ ಗುತ್ತಿಗೆ ಕನ್ನಡ ಉಪನ್ಯಾಸಕರಾಗಿ(1980-1983) ಕಾರ್ಯನಿರ್ವಹಿಸಿದರು. 1983 ರಲ್ಲಿ ಸರಕಾರಿ ಕೆಲಸಕ್ಕೆ ಸೇರಿ ಬೆಂಗಳೂರು, ಮೈಸೂರಿನ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅಧೀಕ್ಷಕರು, ಪತ್ರಾಂಕಿತ ವ್ಯವಸ್ಥಾಪಕರು, ಪತ್ರಾಂಕಿತ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಜನಪದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಕ್ಷೇತ್ರಗಳೆಲ್ಲಿ ಕೃಷಿ ಮಾಡಿರುವ ಅವರು ಈವರೆಗೆ 11 ಮಕ್ಕಳ ಕವನ ಸಂಕಲನ, ನಾಲ್ಕು ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ‘ಹಾಡು ನನ್ನ ಹಾಡು’ ಕೃತಿಗೆ ವಸುದೇವ ಭೂಪಾಲಂ ದತ್ತಿನಿಧಿ ಪ್ರಶಸ್ತಿ ಹಾಗೂ ಕನ್ನಡ ಪುಸ್ತಕ ಸೊಗಸು ಬಹುಮಾನ ದೊರೆತಿದೆ. ‘ಹೇಳು ಹೇಳು ನಾನು ಯಾರು’ ಒಗಟಿನ ಪುಸ್ತಕಕ್ಕೆ ಗೊರೂರು ಸಾಹಿತ್ಯ ಪ್ರಶಸ್ತಿ ಬಂದಿದೆ. ‘ಹೇಳು ಯಾರಮ್ಮ’ ಕವನಕ್ಕೆ ಪ್ರಜಾವಾಣಿ ವಿಶೇಷಾಂಕದಲ್ಲಿ ಮೊದಲ ಬಹುಮಾನ ದೊರೆತಿದೆ. ‘ಮಮ್ಮಿ ನಂಗೆ ಇಷ್ಟಕಣೆ’ ಪದ್ಯ ಮಹಾರಾಷ್ಟ್ರದ 7ನೇ ತರಗತಿ ಸುಗಮ ಭಾರತಿಯಲ್ಲಿ ಪಠ್ಯವಾಗಿದೆ. ಸುಗ್ಗಿ ಸಂಕ್ರಾಂತಿ ಹಾಡು ಮೈಸೂರು ಆಕಾಶವಾಣಿಯ ಝೇಂಕಾರದಲ್ಲಿ ಪ್ರಸಾರಗೊಂಡಿದೆ. ಮೌನ ಮುತ್ತಿನ ಸಾಲು ಎಂಬ ಪ್ರೇಮ ಕವನ ಸಂಕಲನ, ಅಮ್ಮ ಮತ್ತು ಮೇಡಂ, ಲಂಕೇಶ್ ಮತ್ತು ಇತರ ಕವನಗಳು ಕೃತಿಗಳನ್ನು ಪ್ರಕಟಿಸಿದ್ದಾರೆ.

ಜೀನಹಳ್ಳಿ ಸಿದ್ಧಲಿಂಗಪ್ಪ

(17 May 1958)