About the Author

ಡಾ. ನಾಗರಾಜ ರಾವ್ ಹವಾಲ್ದಾರ್ ಅವರು ಮೂಲತಃ ಬಳ್ಹೊಳಾರಿ ಜಿಲ್ಲೆಯ ಹೊಸಪೇಟೆಯವರು. ಪಂಡಿತ್ ಮಾಧವ ಗುಡಿ ಹಾಗೂ ಪಂ. ಪಂಚಾಕ್ಷರಿ ಸ್ವಾಮಿ ಅವರ ಶಿಷ್ಯರು.ಖ್ಯಾತ ಶಾಸ್ತ್ರೀಯ ಹಿಂದೂಸ್ತಾನಿ ಗಾಯಕರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ "ಸಂಗೀತ ರತ್ನ" ಪದವಿ ಅಧ್ಯಯನ ವೇಳೆ ಪಂಡಿತ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಸಂಗಮೇಶ್ವರ ಗುರಾವ, ಡಾ. ಬಿ.ಡಿ. ಪಾಠಕ್ ಅವರ ಗರಡಿಯಲ್ಲಿ ಬೆಳೆದವರು. 

ಕ.ವಿ.ವಿ.ಯಿಂದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕದೊಂದಿಗೆ  ಎಂ..ಎ, ಹಾಗೂ ‘ಕರ್ನಾಟಕದಲ್ಲಿ ಶಾಸ್ತ್ರೀಯ ಸಂಗೀತದ ಇತಿಹಾಸ’ ವಿಷಯದ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದರು. ಖಯಾಲ್ ಮತ್ತು ಲಘು ಪ್ರಕಾರಗಳಲ್ಲಿ ಹಲವಾರು ಆಲ್ಬಮ್‌ಗಳನ್ನು ಸಿದ್ಧಪಡಿಸಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಚಾರಕ್ಕೆ ಮೀಸಲಾದ ಸುನಾದ ಕಲಾ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ಗಿರೀಶ ಕಾರ್ನಾಡ್ ರ ತಲೆದಂಡ , ರೂಪಾಂತರ ನಾಟಕ ತಂಡವು ಪ್ರದರ್ಶಿಸಿದ ಪಿ. ಲಂಕೇಶ್ ಅವರ ಗುಣಮುಖ , ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ ದ ಟೆಲವಿಷನ್ ಆವೃತ್ತಿ ಮತ್ತು ಟಿ.ಎನ್.ಸೀತಾರಾಮ್ ಅವರ ಟೆಲಿವಿಷನ್ ಧಾರಾವಾಹಿ, ಮುಖಾಮುಖಿ ಗೆ ಸಂಗೀತ ನೀಡಿದ್ದಾರೆ. ಸಂಗೀತ ಕುರಿತು ಹಲವಾರು ಕಾರ್ಯಾಗಾರ ಹಾಗೂ ಶಿಬಿರಗಳಲ್ಲಿ ಉಪನ್ಯಾಸವನ್ನೂ ನೀಡಿದ್ದಾರೆ. ಕರ್ನಾಟಕದ ಹಿಂದೂಸ್ತಾನಿ ಸಂಗೀತದ ಪಠ್ಯಪುಸ್ತಕ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ನಾಗರಾಜರಾವ್ ಹವಾಲ್ದಾರ್