About the Author

ಲೇಖಕಿ ಸಹನಾ ಕಾಂತಬೈಲು ಅವರು ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು. ಕೇವಲ ಪಿ.ಯು.ಸಿ ವರೆಗೆ ವಿದ್ಯಾಬ್ಯಾಸ ಪಡೆದ ಅವರು ತಮ್ಮ 17ನೇ ವಯಸ್ಸಿಗೆ ವಿವಾಹವಾದರು. 20ನೇ ಹರೆಯದಲ್ಲೇ ಮಂಗಳ, ಸುಧಾ, ತುಷಾರ, ಮಯೂರ, ಕರ್ಮವೀರದಲ್ಲಿ ಅವರ ಹಲವಾರು ಹನಿಗವಿತೆಗಳು ಪ್ರಕಟವಾಗಿವೆ. ಚುಟುಕುಗಳ ರಚನೆಗಾಗಿ ಕೇರಳದಲ್ಲಿ ನಡೆದ ಅಂತರಾಜ್ಯ ಮಟ್ಟದ ಪ್ರತಿಷ್ಟಿತ ಚುಟುಕು ಶ್ರೀ ಪ್ರಶಸ್ತಿ ದೊರೆಕಿದೆ. ಅಲ್ಲದೇ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಹಿಂದೆ ಶಿವಮೊಗ್ಗೆಯಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. 

ಕೃಷಿಯನ್ನೇ ನೆಚ್ಚಿಕೊಂಡ ಮನೆ ಅವರದ್ದಾಗಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಒಲವಿತ್ತು ಮುಂದೆ ಕೃಷಿ ಕುರಿತ ಬರಹಗಳನ್ನು ಆರಂಭಿಸಿದ ಅವರು ಸುಮಾರು 60ಕ್ಕೂ ಮಿಕ್ಕಿ ಕೃಷಿಕ ಮಹಿಳೆಯರ ಯಶೋಗಾಥೆಯನ್ನು ಪ್ರಜಾವಾಣಿಯಲ್ಲಿ ಬರೆದರು, ಇನ್ನೂ ಬರೆಯತ್ತಲೇ ಇರುವ ಇವರು ನಾಡುಕಂಡತಹ ಕೆಲವೇ ಕೆಲವು ಕೃಷಿಬರಹಗಾರ್ತಿಯಲ್ಲಿ ಒಬ್ಬರು. ಪುಟ್ಟ ಹಳ್ಳಿಯಲ್ಲಿರುವ ಸಹನಾ ಕಾಂತಬೈಲು ಕರ್ನಾಟಕ ರಾಜ್ಯದಾದ್ಯಂತ ಹಲವಾರು ನೈಜ ಅಭಿಮಾನಿ ಬಳಗ ಹೊಂದಿದ್ದಾರೆ. ಕವಿತೆಯ ಮೂಲಕ ಬರಹವನ್ನಾರಂಭಿಸಿದ ಸಹನಾ ತಮ್ಮ, ಸ್ವಾನುಭವ, ಪ್ರಾಮಾಣಿಕ, ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರು. ಅವರ ‘ಆನೆ ಸಾಕಲು ಹೊರಟವಳು’ ಕೃತಿಗೆ ಅಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ ದೊರಕಿದೆ. ಇವರ ಮತ್ತೊಂದು ಕೃತಿ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿದೆ

ಸಹನಾ ಕಾಂತಬೈಲು