ಬೀಳದ ಗಡಿಯಾರ

Author : ಬಸು ಬೇವಿನಗಿಡದ

Pages 108

₹ 90.00




Year of Publication: 2019
Published by: ಪ್ರೇಮ ಪ್ರಕಾಶನ
Address: 90, ಬೆಳಕು, ವಿವೇಕಾನಂದ ಬ್ಲಾಕ್, ಶಿಕ್ಷಕರ ಬಡಾವಣೆ, ಮೈಸೂರು
Phone: 9886026085

Synopsys

ಬೀಳದ ಗಡಿಯಾರ ಎಂಟು ಕಥೆಗಳುಳ್ಳ ಮಕ್ಕಳ ಕಥಾ ಸಂಕಲನವಾಗಿದೆ. ಕಾಲಕ್ಕೆ ತಕ್ಕಂತೆ ಮಕ್ಕಳ ಓದು ಬದಲಾಗುತ್ತದೆ. ಇಂದಿನ ಪ್ರಸ್ತುತ ಸಂದರ್ಭವನ್ನಾಧರಿಸಿ, ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳು ಸಾಹಿತ್ಯವನ್ನು ಓದಬೇಕು. ಹೊಸಕಾಲದ ವಿವಿಧ ಬಗೆಯ ಮಕ್ಕಳ ಲೋಕವನ್ನು ಅರಿಯಲು ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಓದಬೇಕಾದ ಕಥೆಗಳಾಗಿವೆ.

About the Author

ಬಸು ಬೇವಿನಗಿಡದ
(12 July 1964)

ಕಥೆಗಾರ  ಹಾಗೂ ಅನುವಾದಕ ಬಸು ಬೇವಿನಗಿಡದ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳುಬುಟ್ಟಿ , ನೆರಳಿಲ್ಲದ ಮರ, ಬೀಳದ ಗಡಿಯಾರ  (ಕಥಾ ಸಂಕಲನಗಳು), ಕನಸು, ಇಳೆಯ ಅರ್ಥ (ಕವನ ಸಂಕಲನಗಳು), ದಕ್ಕದ ಕಾಡು (ಅನುವಾದಿತ ಕಥೆಗಳ ಸಂಕಲನ) ಬಿ.ಎ. ಸನದಿ (ಜೀವನಚಿತ್ರ) , ನಾಳೆಯ ಸೈರ್ಯ, ಓಡಿ ಹೋದ ಹುಡುಗ ...

READ MORE

Reviews

ಮಕ್ಕಳ ಸಾಹಿತ್ಯಕ್ಕೆ ಸಾರ್ಥಕ ಕೊಡುಗೆಗಳು

ಅದ್ಭುತ ರಮ್ಯ, ಪುರಾಣ ಕಥೆಗಳು ಅಡುಗೂಲಜಿಯ ಕಥೆಗಳು, ಪಂಚತಂತ್ರ ಮೊದಲಾದ ಕಥೆಗಳ ಕಾಲ ಕಳೆದು ವಾಸ್ತವ ಬದುಕಿನ ವರ್ತಮಾನದ ಅನೇಕ ಸಂಗತಿಗಳನ್ನು ಕಥೆಗಳನ್ನಾಗಿ ಮಾಡುವ ಕಥನ ಕಲೆ ಕನ್ನಡಕ್ಕೆ ಹೊಸದೇನಲ್ಲ. ಆದರೂ “ಬೀಳದ 'ಗಡಿಯಾರ' ನಮ್ಮ ವಿಶೇಷ ಗಮನ ಸೆಳೆಯುವ ಕಥಾ ಸಂಕಲನ. ಯಾವುದೇ ಬೋಧನೆಯಿಲ್ಲದೆ ನವಿರಾಗಿ ನೇರವಾಗಿ ನಮಗೇ ಅರಿವಾಗುವಂತೆ ಘಟನೆಗಳ ಮೂಲಕ ಹೆಣೆದ ತಿಳುವಳಿಕೆ ನೀಡುವ ಮಾದರಿ ಇಲ್ಲಿದೆ. ಡಾ. ಬಸು ಲೇಖಕರು ಅದಕ್ಕೆಂದೇ ಕೃತಿಗೆ ಮಕ್ಕಳಿಗೆ ಹೊಸಕಾಲದ ಕಥೆಗಳು ಎಂದು ಅಡಿಟಿಪ್ಪಣಿಯನ್ನೂ ನೀಡಿದ್ದಾರೆ.  ಈ ಕೃತಿಯ ಎಂಟೂ ಕಥೆಗಳು ವಾಸವದಲ್ಲಿ ನಮ್ಮ ಮಕ್ಕಳಲ್ಲಿ ಕಾಣುವ ಸಿಟ್ಟು, ಮತ್ಸರ, ಸಂತಸ, ಜಗಳ ಇತ್ಯಾದಿ ಸಹಜ ಆಗುಹೋಗುಗಳ ವಾತಾವರಣದಲ್ಲಿಯೇ 'ಫ್ರೆಂಡ್ಸ್ ಅಂಡ್ ನೈಬರ್‍ಸ್' ಎಂಬ ಕಥಾಮಾಲಿಕೆಗಳ ನೆನಪೊಂದು ಇಲ್ಲಿ ಹಾದು ಹೋಗುತ್ತದೆ. ಇಲ್ಲಿ ಮಕ್ಕಳು ರೈಲು ಹತ್ತಿ ಇಳಿಯುವ, ಚಿಲ್ಲರೆ ಇಲ್ಲದೆ ಟಿಕೆಟ್‌ಗೆ ಪರದಾಡುವ, ದಾರಿಯಲ್ಲಿ ತಮ್ಮದೇ ಓರಗೆಯ ಹುಡುಗನೊಬ್ಬ ಬೂಟುಪಾಲಿಷ್ ಮಾಡುವುದನ್ನು ಗಮನಿಸುವ, ದಾರಿತಪ್ಪಿ ನಗರದಲ್ಲೆಲ್ಲೂ ಹೋಗಿ ಇಳಿಯುವ, ದಾರಿ ಹುಡುಕಿ ಬರುವ ಸಾಕುಪ್ರಾಣಿಗಳು ವಾಹನಗಳ ಮಧ್ಯೆ ಬಂದಾಗ ಆಗುವ ಗಲಿಬಿಲಿ ಇವೆಲ್ಲವನ್ನೂ ಮಕ್ಕಳ ಅನುಭವದಲ್ಲಿ ಹಿಡಿದಿಟ್ಟಿವೆ.

ಈ ಕಥಾಸಂಕಲನವು ಎಂಟು ಕಥೆಗಳನ್ನೊಳಗೊಂಡಿದ್ದು ಶೀರ್ಷಿಕೆಯ ಕಥೆಯಲ್ಲಿ ಗಂಗಾಧರನೆಂಬ ಬಾಲಕ, ಅಪ್ಪ ಅಮ್ಮನ ಮುದ್ದಿನಿಂದ ಹಟಮಾರಿತನ ಸಿಟ್ಟು ಸೆಡವು ಸ್ವಭಾವವನ್ನು ಹೊಂದಿರುತ್ತಾನೆ. ಇದರಿಂದ ತಂದೆ ತಾಯಿಗಳು ಅನುಭವಿಸುವ ಕಿರಿಕಿರಿ ಮಗನ ದೆಸೆಯಿಂದ ಮನೆಮಾಲೀಕರಿಂದ ಬಯ್ಕಿಸಿಕೊಳ್ಳುವುದು, ಮಕ್ಕಳನ್ನು ದ್ವೇಷಮಾಡುವ ಮನೆಯಲ್ಲಿ ಹೆಂಗೀ ಇರೋದು' ಅಂತ ಹೆಂಡತಿ ಹೇಳಿದರೂ ಅಲ್ಲೇ ವಾಸಿಸುವುದು, ಗಂಗಾಧರ ಒಮ್ಮೆ ಜೋರಾಗಿ ಬಾಗಿಲು ಹಾಕಿದಾಗ ಗೋಡೆಯ ಗಡಿಯಾರ ಬಿದ್ದು ಚೂರಾಗುವುದು. ತಾಯಿ ಸಹನೆಯಿಂದ ಅವನ್ನೆಲ್ಲ ಎತ್ತಿಟ್ಟು ಮತ್ತೆ ಮುದ್ದಿಡುವುದು, ಕೊನೆಗೆ ಗಂಗಾಧರನಿಗೆ ಶಾಲೆಯಲ್ಲಿ ಗಡಿಯಾರ ಬಹುಮಾನವಾಗಿ ಬಂದಾಗ ಅವನೇ ಅಪ್ಪನಿಗೆ ಜೋರಾಗಿ ಬಾಗಿಲು ಹಾಕಬೇಡ ಗಡಿಯಾರ ಬೀಳುತ್ತದೆ ಎಂದು ಹೇಳಿದಾಗ ಅವನ ವರ್ತನೆಯಲ್ಲಿ ಆದ ಬದಲಾವಣೆ ಇಡೀ ಸಮಾಜದ ಚಿತ್ರಣ ಹಾಗೂ ಮನೋವಿಕಾಸದ ದೃಷ್ಟಿಯಿಂದ ಅತ್ಯುತ್ತಮ ಕಥೆಯಾಗಿದೆ. ಇಲ್ಲಿ ಬರುವ ಗಾದೆಗಳು, ಚಿಕ್ಕ ಪದ್ಯಗಳು, ಗೀಗೀ ಪದಗಳು, ಪ್ರಾಣಿ ಪಕ್ಷಿ ಲೋಕದ ಕಾಳಜಿ ಎಲ್ಲವೂ ಮಕ್ಕಳ ಮನೋಲೋಕವನ್ನು ಪ್ರಭಾವಿಸಬಲ್ಲ ಆ ಕಥೆಗಳ ಸಂಕಲನ ಇದಾಗಿದೆ.

-ಮಂಜುಳಾ ಎಂ. ರಾಜು

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ ( ಜುಲೈ 2019)

 

 

Related Books