ಮರೆತಿಟ್ಟ ವಸ್ತುಗಳು

Author : ತೇರಳಿ ಎನ್. ಶೇಖರ್

₹ 170.00




Year of Publication: 2021
Published by: ಕರ್ನಾಟಕ ಸಾಹಿತ್ಯ ಅಕಾದೆಮಿ
Address: ಬೆಂಗಳೂರು

Synopsys

ಮಲಯಾಳಂನ ಮಹತ್ವದ ಕವಿ ಹಾಗೂ ಮಲಯಾಳದ ಆಧುನಿಕ ಕಾವ್ಯದ ನಿರ್ಮಾಪಕರಲ್ಲಿ ಒಬ್ಬರಾದ ಕೆ. ಸಚ್ಚಿದಾನಂದನ್ ಅವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ’ಮರನ್ನುವೆಚ್ಚ ವಸ್ತುಕಳ್’ ಮೂಲ ಕೃತಿಯ ಕನ್ನಡ ಅನುವಾದ ತೆರಳಿ ಎನ್. ಶೇಖರ್ ಅವರ ‘ಮರೆತಿಟ್ಟ ವಸ್ತುಗಳು ಕವಿತಾ ಸಂಕಲನವಿದು.

ಭಾರತ ಅನೇಕ ಕಾಲಘಟ್ಟಗಳಲ್ಲಿ ಎದುರಿಸಿದ ಮಹತ್ವದ ಪಲ್ಲಟಗಳನ್ನೂ ತಲ್ಲಣಗಳನ್ನೂ ಅವುಗಳ ದುರಂತ ಪರಿಣಾಮಗಳನ್ನೂ ಅನುಭವಿಸಿದ ಇತಿಹಾಸ ದಾಖಲಿತ ಅಂಶಗಳನ್ನೂ ಈ ಕೃತಿ ಒಳಗೊಂಡಿದೆ. ಬದುಕನ್ನೂ ಪ್ರಕೃತಿಯನ್ನೂ ಸಾವನ್ನು ಕುರಿತ ಧ್ಯಾನಸ್ಥ ಮನಸ್ಥಿತಿ ಇಲ್ಲಿದೆ. ವರ್ತಮಾನದ ಕ್ರೌರ್ಯಗಳ ಕುರಿತು ಪ್ರತಿಭಟನೆ ಇದೆ. ತೀಕ್ಷ್ಣ ವ್ಯಂಗ್ಯ ಪ್ರತಿಕ್ರಿಯೆ, ವಿಷಾದ ತುಂಬಿದೆ. ಕಾಲದೊಂದಿಗೆ ತೀವ್ರತರವಾಗಿ ಪ್ರತಿಕ್ರಿಯಿಸುವ ಇಲ್ಲಿಯ ಕವಿತೆಗಳು, ಯಾವತ್ತಿಗೂ ಯಾವುದೇ ಭಾಗದಿಂದಾದರೂ ಬಂದೆರಗಬಹುದಾದ ಅನ್ಯಾಯಗಳಿಗೆ ಮಿಕಗಳಂತೆ ಗುರಿಯಾಗುವವರ ಪರವಾಗಿ ದೃಢನಿಲುವು ತಾಳುತ್ತವೆ. ಸೃಷ್ಟಿ ಮತ್ತು ಸಾವಿನ ರಹಸ್ಯ ಹುಡುಕುವ ನಮ್ಮ ಕಾಲದ ಸಾಕ್ಷಿಪ್ರಜ್ಞೆಯಾಗಿರುವ ಶಕ್ತ ಕವಿಯೊಬ್ಬನ ಅಂತರಂಗವನ್ನು ಪರಿಚಯಿಸುತ್ತದೆ. ತಮ್ಮ ‘ಬದುಕು ಮತ್ತು ಕಾವ್ಯ’ ಕುರಿತು ಕವಿಯ ಮಹತ್ವದ ಬರಹವೂ ಈ ಸಂಕಲನದಲ್ಲಿದೆ.

About the Author

ತೇರಳಿ ಎನ್. ಶೇಖರ್

ಕವಿ, ಬರಹಗಾರ ತೇರಳಿ ಎನ್. ಶೇಖರ್ ಅವರು ಮೂಲತಃ ದಕ್ಷಿಣ ಕನ್ನಡ ಗುರುವಾಯೂರುನವರು. ಮಲಯಾಳದಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಮಲಯಾಳಕ್ಕೆ ಕೃತಿಗಳ ಅನುವಾದಕರು. ಅವರು, ಮಲಯಾಳದ ಆಧುನಿಕ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕೆ. ಜೆ. ಶಂಕರಪಿಳ್ಳೆ ಯವರ ಆಯ್ದ ‘ಕೆ. ಜಿ ಶಂಕರ ಪಿಳ್ಳೆಯವರ ಕವಿತೆಗಳು’ ಸಂಕಲನವನ್ನು ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ್ದಾರೆ. ಕೃತಿಗಳು : ಮರೆತಿಟ್ಟ ವಸ್ತುಗಳು (ಅನುವಾದ), ಕೆ. ಜಿ ಶಂಕರ ಪಿಳ್ಳೈಯವರ ಕವಿತೆಗಳು (ಅನುವಾದ) ...

READ MORE

Reviews

‘ಮರೆತಿಟ್ಟ ವಸ್ತುಗಳು’ ಕೃತಿಯ ವಿಮರ್ಶೆ

ತೇರಳಿ. ಎನ್. ಶೇಖರ ಅವರು ಅನುವಾದಿಸಿದ ಮಲಯಾಳಂ ಕವಿ ಸಚ್ಚಿದಾನಂದನ್ ಅವರ ‘ಮರೆತಿಟ್ಟ ವಸ್ತುಗಳು’ ಒಂದು ಅಪರೂಪದ ಕಾವ್ಯ. ಈ ಮೊದಲು ಮಲೆಯಾಳಂನಿಂದ ಅನುವಾದಗೊಂಡ ಅನೇಕ ಕಾವ್ಯ, ಕಥೆ, ಕಾದಂಬರಿಗಳನ್ನು ಓದಿದ್ದೇನೆ. ಆದರೆ ಈ ಕವಿತೆಗಳನ್ನು ಓದಿರಲಿಲ್ಲ. ಈ ವಿಶಿಷ್ಟ ಕವಿತೆಗಳನ್ನು ತೇರಳಿ.ಎನ್.ಶೇಖರ ಸಮರ್ಥವಾಗಿ ಮೂಲಕ್ಕೆ ಅಪಚಾರವಾಗದಂತೆ ಅನುವಾದಿಸಿದ್ದಾರೆ. ಮೂಲದ ಸೊಗಸನ್ನು, ಸೊಗಡನ್ನು, ಯಥಾವತ್ತಾಗಿ ತಂದಿದ್ದಾರೆ. ಈ ಕವಿತೆಗಳಲ್ಲಿಯ ಭಾವ, ವಿಷಯ, ವಸ್ತುವೈವಿಧ್ಯ, ಪ್ರೀತಿ, ದೇವರು, ಬದುಕು, ಸಾವು ಹೀಗೆ ನಾನಾರೀತಿಯ ತುಡಿತಗಳನ್ನು, ಸಾಮಾಜಿಕ ಕಳಕಳಿ, ವ್ಯವಸ್ಥೆಯ ವಿಡಂಬನೆ, ವ್ಯಂಗ್ಯವು ರೂಪಕಗಳ ಮೂಲಕ ಮನತಟ್ಟುತ್ತದೆ.ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ತೇರಳಿ ಎನ್. ಶೇಖರ್ ಅವರು ಕೇರಳದ ಗುರುವಾಯೂರಿನಲ್ಲಿ ವಾಸಿಸುತ್ತಿರುವವರು. ಕಾವ್ಯವೆಂಬುದು ಅವರ ಪ್ರೀತಿಯ ಆಯ್ಕೆ. ‘ಈ ಶಬ್ದ’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಮರ್ಥ ಹಿಡಿತ ಹೊಂದಿರುವುದರಿಂದ ಅವರು ಅನೇಕ ಕವನಗಳನ್ನು ಅಲ್ಲಿನ ಓದುಗರು, ಇಲ್ಲಿಯೂ, ಇಲ್ಲಿಯೂ ಇಲ್ಲಿನ ಓದುಗರು ಅಲ್ಲಿಯೂ ಓದುವಂತೆ ಮಾಡಿದ್ದಾರೆ. ಹಾಗೆಯೇ ಭಾಷೆಗಳ ಏಳುಬೀಳುಗಳ ಕುರಿತೂ ಅರಿವು ಇರುವವರು.ಈ ಪುಸ್ತಕದಲ್ಲಿ ಗಮನ ಸೆಳೆದ ‘ಒಂದು ದಿವಸ’ ಕವಿತೆ ವಿಭಿನ್ನವಾಗಿದೆ. ತಾಯಿ ಭಾಷೆಯು ಇನ್ನೊಂದು ಭಾಷೆಯ ಅಡಿಯಲ್ಲಿ ಸಿಕ್ಕು ನಶಿಸಿ ಹೋಗುವ ಬಗೆಗಿನ ವಿಡಂಬನೆ ಮತ್ತು ದುರಂತದ ಚಿತ್ರಣವಾಗಿದೆ. ವಿಷಾದವೆಂದರೆ ಕನ್ನಡದ ಸ್ಥಿತಿಯೂ ಅದೇ ಆಗಿದೆ. ಆದ್ದರಿಂದ ಕವಿತೆಯು ಸಕಾಲಿಕ ಮೌಲ್ಯವನ್ನೂ ಬಿಂಬಿಸುತ್ತದೆ.

‘ ಒಂದು ಸ್ವೀಡಿಷ್ ಸಂಜೆಯ ನೆನಪಿಗೆ ‘ ಕವಿತೆಯ ಸಾಲುಗಳನ್ನು ನೋಡೋಣ.‘ ತಾವು ನನ್ನ ಬಟ್ಟಲಿಗೆಕೆಂಪಗಿನ ಶರತ್ಕಾಲವನ್ನುನಿಲ್ಲಿಸದೆ ತುಂಬುತಿದ್ದೀರಿ’ಎಂದು ಋತುವನ್ನು ಬಟ್ಟಲಿಗೆ ತುಂಬುವುದು ನನಗೆ ತುಂಬ ಮೋಹಕವಾಗಿ ತೋರಿದೆ. ರೂಪಕಗಳು ಸಶಕ್ತವಾಗಿರುವ ಕವಿತೆ ಇದಲ್ಲವೇ. ಅವುಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ದಾಟಿಸುವುದು ಕೂಡ ಸವಾಲಿನ ಕೆಲಸವೇ ಆಗಿದೆ.‘ಮರಗಳು’ ಎಂಬ ಇನ್ನೊಂದು ಕವಿತೆಯ ಸಾಲುಗಳಲ್ಲಿ ಅದು ಇನ್ನಷ್ಟು ಸಮರ್ಥವಾಗಿ ಗೋಚರಿಸುತ್ತದೆ.‘ನೆನಪುಗಳಲ್ಲಿ ವಸಂತ ಇರುವವರೆಗೂಅವು ಮುಪ್ಪನ್ನು ಹಳಿಯುವದಿಲ್ಲ’ಬದುಕಿನ ದೃಷ್ಟಿಕೋನವನ್ನು ಹಿಡಿದಿಡುವ ಈ ಸಾಲುಗಳು ಕವಿತೆಯನ್ನು ಮತ್ತೆ ಮತ್ತೆ ಓದುವಂತೆ ಮಾಡಿದವು. ‘ಒಗಟುಗಳು’ ಕವನದಲ್ಲಿ ಪ್ರಣಯವನ್ನು ಹೊಸರೀತಿಯಲ್ಲಿ ಪರಿಪರಿಯಾಗಿ ವರ್ಣಿಸಿದ್ದಾರೆ.‘ನೀನು ಅದೆಷ್ಟು ಹತ್ತಿರಆದರೂ ಅದೆಷ್ಟು ದೂರ!’ಎಂದು ಆರಂಭವಾಗುತ್ತ ನಾನಾಪರಿಯಾಗಿ ಹತ್ತಿರವಾದರೂ ದೂರ, ದೂರವಾದರೂ ಹತ್ತಿರ, ಇದರ ಒಡಲ್ಲಲಿಯ ಅನಂತತೆ, ನೋವು, ಕ್ಷಣಿಕತೆ ಹೇಳುತ್ತ ಹೇಳುತ್ತ ಕೊನೆಗೆ,‘ಅದೆಷ್ಟು ಹತ್ತಿರವೀ ದೂರಅದೆಷ್ಟು ಅನಂತ ಕ್ಷಣಿಕತೆಅದೆಷ್ಟು ಮಧುರವೀ ಕಹಿ’ಎಂಬ ಸಾಲುಗಳು ಮೂಲ ಕನ್ನಡದ್ದೇ ಕವಿತೆಯಂತೆ ಆಪ್ತವಾಗಿ ನಿಲ್ಲುತ್ತದೆ.‘ನೀನು ಹೀಗೆಮುಟ್ಟಿ ಮುಟ್ಟದೆನಿಕಟವರ್ತಿಯಾಗುವೆ ಕ್ಷಣಿಕ!’ಮನಮಿಡಿಯುವ ಸಾಲುಗಳೊಂದಿಗೆ ಕವಿತೆಯೊಂದು ಮುಗಿಯುತ್ತದೆ- ಒಂದು ನಿಟ್ಟುಸಿರಿನೊಡನೆ.‘ಒಂದು ಪ್ರೇತ ಕಥೆ’ಯಲ್ಲಿ ಕವಿಗಳು ಓದಬೇಕಾದುದನ್ನು ಸೂಚ್ಯವಾಗಿ, ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಇಲ್ಲಿ ಎಲ್ಲ ಕವಿತೆಗಳು ತಮ್ಮ ತಮ್ಮ ವೈವಿಧ್ಯತೆಯಿಂದ ಮನಸೂರೆಗೊಳ್ಳುತ್ತವೆ, ಅನೇಕ ಬಾರಿ ಆಲೋಚಿಸುವಂತೆ ಮಾಡುತ್ತವೆ; ಖುಷಿಯನ್ನೂ ಕೊಡುತ್ತವೆ. ಹಾಗೆ ಬರೆಯುತ್ತ ಹೋದರೆ ಎಲ್ಲ ಕವಿತೆಗಳ ಬಗೆಗೂ ಬರೆಯಬೇಕಾಗುತ್ತದೆ ಎಂದು ಅನಿಸುತ್ತದೆ. ಓದುವ ಖುಷಿಯನ್ನು ಕೊಡುವ ಈ ಕೃತಿಯಲ್ಲಿ ಯಾವುದನ್ನೂ ಬಿಡುವಂತೆಯೇ ಇಲ್ಲ.

ಕೊನೆಗೆ ಈ ಸಂಕಲನದ ಹೆಸರಾಗಿರುವ ಕವಿತೆ ‘ಮರೆತಿಟ್ಟ ವಸ್ತುವಗಳು’ಒಂದು ಕ್ಲಾಸಿಕ್ ಕವಿತೆ ಎನ್ನಬೇಕು. ಅಪರೂಪದ ವಿಶಿಷ್ಟ ಕವಿತೆ ಹಲುವಾರು ರೀತಿಯಲ್ಲಿ ಸಕಾಲಿಕ. ಅದನ್ನು ಪ್ರತಿಯೊಬ್ಬರೂ ತಮ್ಮ ಬದುಕಿಗೆ ಅನ್ವಯಿಸಿಕೊಳ್ಳಬಹುದು.ಒಂದು ತೀರ ಸಹಜ, ನೈಜ ಭಾವ ಇಲ್ಲಿದೆ.ಇಷ್ಟುಕಾಲವು ಮರೆತಿಟ್ಟಿದ್ದೆಲ್ಲವುಈಗ ಒಮ್ಮೆಲೆ ನೆನಪಾಗುತ್ತವೆಬಾಲ್ಯಕಾಲ, ಆ ಮುಗ್ಧತೆ, ಮರೆತಿಟ್ಟ ಛತ್ರಿ, ಪೆನ್ನು, ಅಂಗಿ, ಪುಸ್ತಕ, ತೀರಿಸದ ಸಾಲ, ಜೊತೆಗೆ ಮರೆತ ಸ್ನೇಹಕೂಡ. ಅಲ್ಲದೆ ಇದು ಪ್ರೆಮಕ್ಕೂ, ಸೃಷ್ಟಿಗೂ ಅನ್ವಯಿಸುತ್ತದೆ. ಕೊನೆಗೆ ದೇವರೂ ಈ ಭೂಮಿಯನ್ನು ಮರೆತ್ತಿದ್ದಾನೆಂದು ಹೀಗೆ ಹೇಳುವರು,‘ಈಗ ಅನಿಸುತ್ತಿದೆಈ ಭೂಮಿಯನ್ನು ದೇವರುಮರೆತಿಟ್ಟಿದ್ದೆಂದುಆದರಲ್ಲಿ ನಮ್ಮನ್ನೂ ಸಹನೆನಪು ಬಂದಂತೆಲ್ಲಅವನು ವಾಪಸ್ಸು ತೆಗೆದುಕೊಳ್ಳುತ್ತಾನೆ.ನದಿಗಳನ್ನು,ಕಾಡುಗಳನ್ನು,ನಮ್ಮನ್ನೂ.’ಈ ಮರೆವಿನಲ್ಲಿ ಏನಿದೆ? ಏನೆಲ್ಲ ಇದೆ. ನೋವು, ಖುಷಿ, ದುಃಖ. ಅಂದರೆ ಬದುಕೇ ಇದೆ. ಒಂದು ಜೀವಿತಾವಧಿಯ ಕಥೆ ವ್ಯಥೆ ಬಯಕೆ ಕಂಬನಿ ಪಶ್ಚಾತಾಪ ಏನೆಲ್ಲವನ್ನೂ ಒಳಗೊಂಡಂತೆ ಪದಗಳು ಎಷ್ಟು ಭಾರವಾಗಿವೆ.ತೇರಳಿ.ಎನ್.ಶೇಖರ ಅವರು ತುಂಬ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಹೊರಭಾಷೆಯ ಸಾಹಿತ್ಯ ನಮಗೆ ಓದಲು ಸಿಗುವುದು ಅನುವಾದಗಳಿಂದ ಮಾತ್ರ. ಅನುವಾದಕಾರರು ಅವುಗಳ ಪರಿಚಯವನ್ನು ಮಾಡಿಕೊಡುತ್ತ ನಮ್ಮ ಹೃದಯದ ಕಿಟಕಿಗಳನ್ನು ತೆರೆದಿಡುವಂತಹ ಕೆಲಸ ಮಾಡುತ್ತಾರೆ. ಮೂಲವನ್ನೇ ಓದುತ್ತಿರುವಂಥ ಅನುಭೂತಿಯನ್ನು, ಖುಷಿಯನ್ನು ಒಬ್ಬ ಸಮರ್ಥ ಅನುವಾದಕ ಮಾತ್ರ ಕೊಡಬಲ್ಲ.

ಅವರು ಅನುವಾದಿಸಿದ ಕವಿತೆಗಳನ್ನು ಓದಿ ನನಗನಿಸಿದ ಸಾಲುಗಳು ಇಲ್ಲಿವೆ:‘ಬದುಕು ಮರೆತಿಟ್ಟ ವಸ್ತುಗಳಲ್ಲಿ,ಪ್ರೀತಿ ಮರೆತಿಟ್ಟ ವಸ್ತುಗಳಲ್ಲಿ,ನಾನೂ ಒಂದುಅಯ್ಯೋ ದೇವರೆ,ಅವಕೆಂದು ನನ್ನ ನೆನಪಾಗಲಿಲ್ಲ.ಇನ್ನುಆಶಿಸುತ್ತೇನೆ,ಸಾವು ಮರೆತಿಟ್ಟ ವಸ್ತುಗಳಲ್ಲಿ,ನಾನು ಇಲ್ಲವೆಂದುನಾನು ಇಲ್ಲವೆಂದು.’

(ಕೃಪೆ : ಕೆಂಡಸಂಪಿಗೆ, ಬರಹ : ಎಚ್.ಎಸ್.ಮುಕ್ತಾಯಕ್ಕ)

‘ಮರೆತಿಟ್ಟ ವಸ್ತುಗಳು’ ಕೆಂಡಸಂಪಿಗೆ

Related Books