ಪದ ಪದ ಕಟ್ಟುಪದ

Author : ಬೇಲೂರು ರಘುನಂದನ್

Pages 144

₹ 175.00




Year of Publication: 2021
Published by: ಶಾರದಾ ಪ್ರತಿಷ್ಠಾನ
Address: ನಂ.249/ ಆರ್, 2ನೇ ಸಿ ಕ್ರಾಸ್, ಗಿರಿನಗರ ಅಡಿಸನಲ್ ಎಕ್ಸ್ ಟೆಷನ್, ಬೆಂಗಳೂರು- 560 085
Phone: 9606883158

Synopsys

ಲೇಖಕ ಬೇಲೂರು ರಘುನಂದನ್ ಅವರ ಕಟ್ಟುಪದಗಳ ಸಂಕಲನ ‘ಪದ ಪದ ಕಟ್ಟುಪದ’. ಡಾ. ರಾಜಶೇಖರ ಮಠಪತಿ ಅವರು ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅನುವಾದಕಿ, ವಿಮರ್ಶಕಿ ಎಂ.ಎಸ್. ಆಶಾದೇವಿ ಕೃತಿಯ ಬಗ್ಗೆ, ಕನ್ನಡ ಕಾವ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ತಲೆಮಾರಿನ ಲೇಖಕರಲ್ಲಿ ಬೇಲೂರು ರಘುನಂದನ್ ಮುಂಚೂಣಿಯಲ್ಲಿರುವವರು. ಹೆಣ್ಣಿನ ಭೌತಿಕ ಸೌಂದರ್ಯವೇ ಶುರು ಮತ್ತು ಕೊನೆಯಾಗಿ, ಕಾವ್ಯದ ಆಕರ್ಷಣೆಯನ್ನು ಹೆಚ್ಚಿಸುವ ಸಾಧನವಾಗಿ ಮಾತ್ರ ಹೆಣ್ಣು ಬಳಕೆಯಾಗಿರುವುದು ಸ್ಥಾಪಿತ ಪರಂಪರೆಯೇ ಆಗಿರುವ ವಾಸ್ತವದ ಹಿನ್ನೆಲೆಯಲ್ಲಿ ಹೆಣ್ಣನ್ನು ಅವಳ ಚೈತನ್ಯದಲ್ಲಿ, ಶಕ್ತಿ ಮತ್ತು ನಿಜದಲ್ಲಿ ಗುರುತಿಸುವ ರಘುನಂದನರ ಕಾವ್ಯ ಮತ್ತು ನಾಟಕ ಸ್ತ್ರೀ ಸಂಕಥನದ ಆಶಯಗಳನ್ನು ಬಲಪಡಿಸುವ ದೃಷ್ಟಿಯಿಂದ ತುಂಬಾ ಸ್ವಾಗತಾರ್ಹ’ ಎಂದಿದ್ದಾರೆ.

ಸಾಹಿತಿ ಎಲ್.ಎನ್. ಮುಕುಂದರಾಜು ಅವರು ಹೇಳುವಂತೆ ಕಾವ್ಯಕ್ಕೆ ಇರಬಹುದಾದ ಸೋಜಿಗಗಳನ್ನು, ನವಿರು ಭಾವನೆಗಳನ್ನು ಬೇಲೂರು ರಘುನಂದನ್ ಅವರು ಕಾಪಿಟ್ಟುಕೊಳ್ಳುವುದಾದಲ್ಲಿ ನಮ್ಮ ಕಾಲದ ಅತ್ಯುತ್ತಮ ವಚನಕಾರರಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಸಾಧನೆಯ ದಿಟದ ಛಲ ರಘುನಂದನ್ ಅವರಿಗೆ ಇದೆ. ಅತ್ಯುತ್ತಮ ತಾತ್ವಿಕತೆಯನ್ನು ಮನದಟ್ಟು ಮಾಡಿಸಬಲ್ಲ ವಚನದ ಸಾಲುಗಳನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ಬೇಲೂರರಿಗಿದೆ’ ಎಂದಿದ್ದಾರೆ.

ಸಾಹಿತಿ ಪಿ.ಚಂದ್ರಿಕಾ ಅವರ ಮಾತಿನಂತೆ,ತನ್ನ ಬಿಳಲುಗಳನ್ನು ಮುಂಚಾಚುತ್ತಾ, ಚಾಚುತ್ತಾ ನೆಲದ ಮಣ್ಣನ್ನು ಹಿಡಿಯಾಗಿಸುತ್ತಾ ಬೇರ ಕಣ್ಣುಗಳನ್ನು ಆಳದಲ್ಲಿ ನೆಟ್ಟು ವಿಸ್ತಾರಕ್ಕೆ ಮೈಚಾಚುವ ಅದ್ಭುತ ಪ್ರಕ್ರಿಯೆಯನ್ನು ರಘುನಂದನ ಅವರ ನಾಲ್ಕು ಕಟ್ಟುಪದಗಳ ಸಂಕಲನಗಳಲ್ಲಿ ಕಾಣುತ್ತೇವೆ ಎಂದರೆ ಅತಿಶಯದ ಮಾತಲ್ಲ. ಸೃಜನಶೀಲತೆಯ ಎತ್ತರವನ್ನು ಬಿಟ್ಟ ಕಣ್ಣಿಂದ ಕಾಣುತ್ತಲೇ ಅದನ್ನು ಮುಟ್ಟುವ ಮಾಂತ್ರಿಕತೆಯ ಕ್ಷಣಕ್ಕೆ ಕಾಯುತ್ತ ಕೂತಿರುವ ರಘುನಂದನ ಧ್ಯಾನಕ್ಕೆ ಪಕ್ಕಾದವರ ಹಾಗೇ ಕಾಣುತ್ತಾರೆ ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಡಾ.ನೀಲಗಿರಿ ಎಂ. ತಳವಾರ್ ಅವರು ಹೇಳುವಂತೆ ಬೇಲೂರು ರಘುನಂದನ್ ಹಮ್ಮುಬಿಮ್ಮುಗಳಿಲ್ಲದ ಕವಿ. ತಮ್ಮ ವಿನಯ ಮತ್ತು ಸರಳತೆಯನ್ನು ಹಾಗೇ ಉಳಿಸಿಕೊಂಡು ಬೌದ್ಧಿಕವಾಗಿ, ಸೃಜನಶೀಲತೆಯ ಮತ್ತು ಸಾಮಾಜಿಕ ಸ್ಥಾನಮಾನದ ನೆಲೆಯಲ್ಲಿ ಸಾಕಷ್ಟು ಬೆಳೆದಿದ್ದಾರೆ. ಇಡಿಯಾಗಿ ಒಟ್ಟು ಮಹಿಳಾ ಪರವಾದ ಗಟ್ಟಿ ದನಿಯೊಂದನ್ನು ಕಟ್ಟುಪದಗಳಲ್ಲಿ ಕಾಣಬಹುದು. ರಘುನಂದನ್ ಅವರಿಗೆ ವಚನಗಳ ರಚನೆ ಸುಲಭವಾಗಿದೆ, ಲೀಲಾಜಾಲವಾಗಿದೆ. ಆದರೆ ಇಲ್ಲಿನ ರಚನೆಗಳನ್ನು ಓದುತ್ತಾ ಹೋಗುವ ಓದುಗ ಕ್ರಮೇಣ ಸಂವಹನಕ್ಕೊಳಗಾಗಿ ಪದ ಸಂವೇದನೆಗೆ ಒಳಗಾಗುತ್ತಾನೆ’ ಎಂದಿದ್ದಾರೆ.

ಬೇಲೂರು ರಘುನಂದನ್ ಅವರು ಕಟ್ಟುಪದಗಳನ್ನು ವಚನಕ್ಕೆ ಪರ‍್ಯಾಯವಾಗಿ ರಚಿಸಿದ್ದಾರೆ. `ಶಿವಶರಣರ ಮಾದರಿಯಲ್ಲಿಯೇ ಜೀವ ಶಿವರ ಸಂಬಂಧ, ಜೀವನ ಸಂಘರ್ಷ, ಆಧ್ಯಾತ್ಮಿಕದ ಒಳನೋಟ, ಸಾಮಾಜಿಕ ವಿಡಂಬನೆ, ತಾರ್ಕಿಕದ ವ್ಯಂಗ್ಯ, ಅಲೌಕಿಕದ ದರ್ಶನ ಪ್ರಜ್ಞೆ ಮತ್ತು ಅನುಭವದಂತಹ ತಾತ್ವಿಕ ಅಂಶಗಳ ಪುನರ್ ಪರಿಶೀಲನೆಯನ್ನು, ಪುನರ್ ವ್ಯಾಖ್ಯಾನವನ್ನು’ ಹಲವು ನೆಲೆಗಳಲ್ಲಿ ರಘುನಂದನ್ ಮಾಡಿರುವುದನ್ನು ಗಮನಿಸಬಹುದು. ಅಲ್ಲಮನ ಬೆಡಗಿನ ವಚನಗಳನ್ನು ಹೋಲುವ ರೂಪದಲ್ಲಿ ಬಹಳ ಕ್ಲಿಷ್ಟವಾದ ವಿಚಾರಗಳನ್ನು, ಮೂಡಲಾಗದ ರಹಸ್ಯಮಯವಾದ ರೀತಿಯಲ್ಲಿ ತಮ್ಮ ಕಟ್ಟುಪದಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಸಿದ್ಧಯ್ಯ ಪುರಾಣಿಕರು, ಕಮಲ ಹಂಪನಾ ಇನ್ನೂ ಅನೇಕರು ನಡೆದು ಬಂದ ಈ ಆಧುನಿಕ ವಚನಕಾರರ ದಾರಿಯಲ್ಲಿ ಬೇಲೂರು ರಘುನಂದನ್ ಅವರು ಅದ್ಭುತವಾದ ಮತ್ತು ವಿಶೇಷವಾದ ವಚನಗಳನ್ನು ಕಟ್ಟುಪದಗಳ ರೂಪದಲ್ಲಿ ರಚಿಸಿದ್ದಾರೆ ಎಂದು ಡಾ.ಗುರುದೇವಿ ಹುಲ್ಲೆಪ್ಪನವರಮಠ ಅವರು ಅಭಿಪ್ರಾಯಪಟ್ಟಿದ್ದಾರೆ.

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books