ಹೊಸ ಲೋಕವನ್ನೇ ಪರಿಚಯಿಸುವ ‘ಚೆನ್ನಬೈರಾದೇವಿ’


ಸಾಹಿತಿ ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಕಾದಂಬರಿಯ ಬಗ್ಗೆ ಸುಗುಣಾ ಮಹೇಶ್ ಅವರು ಬರೆದಿರುವ ಬರೆಹ ನಿಮ್ಮ ಓದಿಗಾಗಿ..

ಚಿನ್ನಮ್ಮ, ಅವ್ವರಸಿ, ಸಣ್ಣಮ್ಮ, ಕಾನೂರು ರಾಣಿ, ಕಾಳು ಮೆಣಸಿನ ರಾಣಿ.... ಆಹಾ! ಈ ಹೆಸರು ನನ್ನ ಮನದಲ್ಲಿ ರಿಂಗಣಿಸುತ್ತಲೇ ಇದೆ.... ಚೆನ್ನಮ್ಮನ ಗುಂಗಿನಿಂದ ಹೊರಬರಲಾಗದಷ್ಟು ಆವರಿಸಿಕೊಂಡಿದ್ದಾಳೆ. ಗೇರುಸೊಪ್ಪೆ, ನಗಿರೆ, ಹಾಡುವಳ್ಳಿ.... ಹೀಗೆ ಹಲವಾರು ಮಲೆನಾಡ ಹೆಸರು ಮನಸ್ಸಿಗೆ ಮುದನೀಡುತ್ತದೆ.

ಹೆಣ್ಣು ಯಾರಾದರೇನು ಅವಳು ಎಂಥಹ ಸ್ಥಾನದಲ್ಲಿದ್ದರೂ ಅವಳ ನಡತೆಗೊಂದು ಕಪ್ಪುಚುಕ್ಕೆ ಇಟ್ಟುಬಿಟ್ಟರೆ ಅವಳನ್ನು ಸೋಲಿಸುವುದು ಸುಲಭ ಎಂದು ಜನ ಅಂದಿಗೂ ಇಂದಿಗೂ ಅದನ್ನೇ ಪಾಲಿಸುತ್ತಾ ಬಂದಿದ್ದಾರೆ. ಆದರೆ ಇದೆಲ್ಲವನ್ನೂ ಮೀರಿ ಬದುಕಿಗೊಂದು ಅರ್ಥ ಕಲ್ಪಿಸುವಲ್ಲಿ ಚೆನ್ನಭೈರಾದೇವಿ ಯಶಸ್ವಿಯಾಗಿದ್ದಾಳೆ.

ಇತಿಹಾಸದ ಪುಟಗಳಲ್ಲಿ ಯಾರು ಕಂಡು ಕೇಳರಿಯದ ವ್ಯಕ್ತಿ ಜೀವನ ಚೆನ್ನಮ್ಮನದು ಎಂದು ಹೇಳಬಯಸುತ್ತೇನೆ. ಯಾವ ರಾಜರೂ ಶಾಂತಿದೂತರಲ್ಲ ಸದಾ ಒಂದಿಲ್ಲೊಂದು ಆಮಿಷಕ್ಕೆ ಅಥವಾ ರಾಜ್ಯ ವಿಸ್ತಾರಕ್ಕೆ ಯುದ್ಧದ ನೆತ್ತರು ಹರಿಸಿದವರೇ ಇದ್ದಾರೆ. ಇವೆಲ್ಲವುಗಳಲ್ಲಿ ವಿಭಿನ್ನತೆ ಕಾಪಾಡಿದ ರಾಣಿ ಎಂದರೆ ಚೆನ್ನಭೈರಾದೇವಿ ಜೈನ ಧರ್ಮದ ಪ್ರತಿಪಾದಕಿಯಂತೆ ಜನರ ಸೇವೆ, ದುಷ್ಟರ ಧಮನ ಮಾಡಿದವಳು.

ಗೋವೆಯನ್ನು ನುಂಗಿ ನೀರು ಕುಡಿಯುತ್ತಲಿದ್ದ ಪೋರ್ಚುಗೀಸರು, ಅಲ್ಲಿ ನಡೆದ ಧಾರುಣ ಘಟನೆಗಳು ನಮ್ಮಲ್ಲಿ ದುಃಖಕ್ಕೆ ದೂಡುತ್ತದೆ. ಗೋವೆಯಲ್ಲಿ ಜರುಗಿದ ಅಮಾನವೀಯ ಕೃತ್ಯಗಳು ತನ್ನ ನಗರಕ್ಕೆ ತಾಕಕೂಡದೆಂದು ಚೆನ್ನಮ್ಮ ಅತಿ ಸೂಕ್ಷವಾಗಿ ನಿಭಾಯಿಸಿ, ಅಂತಹ ಪೋರ್ಚುಗೀಸರನ್ನೇ ಮರುಳು ಮಾಡಿದ ಮಹಾತಾಯಿ... ಅವರೂ ಸಹ ಇವಳಲ್ಲಿ ವಿನಮ್ರತೆ ಕಾಪಾಡಿಕೊಳ್ಳುವಂತೆ ಮಾಡಿದ್ದಳು ಚೆನ್ನಮ್ಮ.

ಹಿರಿಯರು ಹೇಳುತ್ತಾರೆ "ಹೊರಗಿನ ಶತ್ರುಗಳನ್ನು ಹಿಮ್ಮೆಟ್ಟಬಹುದು ಆದರೆ ಒಳಗಿನ ಶತ್ರುಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ" ಅದರಂತೆ ಚೆನ್ನಮ್ಮನಿಗೂ ಒಳಗಿನ ಶತ್ರುಗಳಿಂದಲೇ ನೋವು, ಅಪಮಾನ, ರಾಜ್ಯಕ್ಕೆ ಕುತ್ತು ಬರುವ ಸ್ಥಿತಿ ಬಂದು ತಲುಪಿತು ಅದರಲ್ಲಿ ಚೆನ್ನಗೊಂಡನ ಪಾತ್ರವೇ ದೊಡ್ಡದು... ಕೆಳದಿಯ ವೆಂಕಟಪ್ಪ ನಾಯಕನ ಮುಂದೆ ಶರಣಾಗಬೇಕಾಯ್ತು... ಕೆಳದಿಯವರೂ ಇವಳ ಗುಣಕ್ಕೂ ಗೌರವ ಸೂಚಕ.

ಧನಕನ, ಅಷ್ಟೈಶ್ವರ್ಯಗಳನ್ನು ಜನರ ಹಿತಕ್ಕೆ ಶೇಖರಿಸಿಟ್ಟು, ರಕ್ತಪಾತಗಳನ್ನು ಆದಷ್ಟು ತಡೆಯುತ್ತಾ, ತನ್ನತನ ಕಾಪಾಡಿಕೊಂಡ ರಾಣಿ ಕೊನೆಗೆ ಎಲ್ಲವನ್ನು ಬಿಟ್ಟು ನಿರ್ಲಿಪ್ತ ಭಾವದಲ್ಲಿ ಹೋಗುವುದಿದೆಯಲ್ಲ ಅದೊಂದು ಕಲೆ... ಈ ಕಲೆ ರಾಣಿಗೆ ಕರಗತವಾಗಿತ್ತು...

ಬದುಕೆಂದರೆ ತೆರೆಯೊಂದು ಬಂದರೆ ಹೆಜ್ಜೆಯ ಗುರುತೆಲ್ಲ ತೊಳೆದು ಹೋಗುವ ಮರಳು ತೀರದ ಪಯಣವಾಗಬೇಕು ... -ಚೆನ್ನಭೈರಾದೇವಿ (ಜೀನದತ್ತರ ಮಾತು) ತನ್ನ ಕೊನೆಗಾಲದಲ್ಲಿ ಚೆನ್ನಮ್ಮ ಶಬಲೆಯೊಂದಿಗೆ ಹಂಚಿಕೊಂಡ ಮಾತಿನಲ್ಲಿ ಎಷ್ಟು ಅರ್ಥವಿದೆ ನೋಡಿ, ತನ್ನ ಹೆಸರಿಗೆ ಬಸದಿ, ದೇಗುಲಗಳನ್ನು ಕಟ್ಟಿಕೊಳ್ಳಲಿಲ್ಲ, ಶಿಲಾಶಸನಗಳ ಕಟ್ಟಿ ಹೆಸರಿನ ಗುರುತೂ ಹಚ್ಚಿ ಎಲ್ಲೂ ಮೆರೆಯಲಿಲ್ಲ... ಎಲ್ಲೂ ನಾನು ಹೀಗೆ ಮಾಡಿದೆ, ನನ್ನದು ಈ ರಾಜ್ಯ, ನಾನು ಕಟ್ಟಿದ್ದು ಎಂಬ ನನ್ನದೆಲ್ಲವನ್ನೂ ಮೀರಿ ಬೆಳೆದ ಈ ಚೆನ್ನಭೈರವಿ ಪ್ರತಿ ಅರಸರಿಗೂ ಮಾಧರಿ..ಅವ್ವರಸಿಗೆ ನಮೋ ನಮಃ... ಕಥೆ ಓದಬೇಕು ಇತಿಹಾಸದ ಕಥಾಹಂದರ ಬರೆದ ಡಾ. ಗಜಾನನ ಶರ್ಮರವರಿಗೆ ಶಿರಭಾಗಿ ನಮಿಸುವೆ... ಇತಿಹಾಸ ಮತ್ತು ವ್ಯಕ್ತಿಜೀವನ ಎರಡನ್ನು ಬಹಳ ಸೊಗಸಾಗಿ ಚಿತ್ರಿಸುವುದಲ್ಲದೆ ಓದುತ್ತಾ ಚೆನ್ನಮ್ಮನ ಜೀವನವನ್ನು ಕಣ್ಣ ಮುಂದೆ ಕಟ್ಟಿಕೊಟ್ಟಿದ್ದಾರೆ.

ಕೊನೆಯಲ್ಲಿ ಕಾಡುತ್ತಲಿರುವುದು ಜಿನದತ್ತ (ಚೆನ್ನಭೈರಾದೇವಿ ಸ್ನೇಹಿತ) ಪೋರ್ಚುಗೀಸರ ನಾಡು ಸೇರಿದವ ಏನಾದನೋ ಎಲ್ಲಿದ್ದನೋ ಅವನ ಅಂತ್ಯಕಾಲ ಹೇಗಿತ್ತು ಎಂದು!!!
ನನಗೆ ಒಮ್ಮೊಮ್ಮೆ ಇತಿಹಾಸ ಓದುವ ಹುಚ್ಚು ಅದೇ ಹುಚ್ಚಿನಲ್ಲಿ ಚೆನ್ನಭೈರಾದೇವಿ ಹಿಡಿದುಕೊಂಡೆ ಅದು ಹಿಂದು ಮುಂದೆನದೆ ಎರಡು ಬಾರಿ ಓದಿಸಿಕೊಂಡು ಹೋಗಿದೆ...

 

-ಸುಗುಣಾ ಮಹೇಶ್

ಗಜಾನನ ಶರ್ಮ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
ಚೆನ್ನಭೈರಾದೇವಿ ಕೃತಿ ಪರಿಚಯ ಇಲ್ಲಿದೆ..

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...