ಮಗಧ ಸಾಮ್ರಾಜ್ಯದ ಹರಿವಿನ ವಿಸ್ತೃತವಾದ ಮಾಹಿತಿ ನೀಡುವ ‘ಮಾಗಧೇಯ’


ಭಾರತವನ್ನಾಳಿದ ಹಲವಾರು ಚಕ್ರವರ್ತಿಗಳಲ್ಲಿ ಪರಿಪೂರ್ಣರೆನ್ನಿಸಿಕೊಂಡವರೆಂದರೆ ಬಿಂಬಸಾರ ಮತ್ತು ಸಮುದ್ರ ಗುಪ್ತ. ಈ ಕೃತಿಯಲ್ಲಿ ಸಮುದ್ರಗುಪ್ತನ ಆಡಳಿತಾತ್ಮಕ ನೀತಿ, ವ್ಯಕ್ತಿತ್ವ, ವಿಜಯದ ಹರಿಕಾರ ಎನ್ನಿಸಿಕೊಂಡ ಬಗೆ, ಹೀಗೆ ಹಲವಾರು ವಿಷಯಗಳನ್ನು ತಿಳಿಸುತ್ತದೆ. ಜೊತೆಗೆ ಯುದ್ಧ ದಾಹಿಯಾಗಿದ್ದ ಆತ ಗೆದ್ದ ರಾಜ್ಯವನ್ನು ಹಿಂತಿರುಗಿಸುತ್ತಾ ಸ್ನೇಹ ಸಂಬಂಧದಿಂದಲೇ ರಾಜ್ಯವನ್ನು ವಿಸ್ತರಿಸುವ ಆತನ ವ್ಯಕ್ತಿತ್ವವನ್ನು ತೋರಿಸುತ್ತದೆ ಎನ್ನುತ್ತಾರೆ ಬರಹಗಾರ್ತಿ ಅಶ್ವಿನಿ ಸುನಿಲ್. ಲೇಖಕ, ಸಂಶೋಧಕ ಸದ್ಯೋಜಾತ ಭಟ್ಟ ಅವರ ಮಾಗಧೇಯ ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಪುಸ್ತಕದ ಹೆಸರು : ಮಾಗಧೇಯ
ಲೇಖಕರು: ಸದ್ಯೋಜಾತ
ಬೆಲೆ :300
ಪುಟಗಳ ಸಂಖ್ಯೆ: 328
ಪ್ರಕಾಶಕರು: ಸಮನ್ವಿತ
ಪ್ರಥಮ ಮುದ್ರಣ: 2022

ಇತಿಹಾಸದ ಬಗ್ಗೆ ಕಡಿಮೆ ಜ್ಞಾನವನ್ನು ಹೊಂದಿರುವ ನನಗೆ ಪುಸ್ತಕ ಓದಲು ಪ್ರಾರಂಭಿಸುವಾಗ ಇದನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಎಂಬ ಭಯವಿತ್ತು. ಮೊದಲ ಎರಡು ಪುಟವನ್ನು ಓದುತ್ತಿದ್ದಾಗಲೇ ನನ್ನ ಭಯಕ್ಕೆ ಅರ್ಥವಿಲ್ಲ ಎಂಬ ಅರಿವಾಗಿತ್ತು.

ಭಾರತದ ಇತಿಹಾಸದಲ್ಲಿ ಮಗಧ ಸಾಮ್ರಾಜ್ಯದ ಗುರುತು ಬಹುದೊಡ್ಡದು. ಬಿಂಬಸಾರ,ಸಮುದ್ರಗುಪ್ತರಂತಹ ಮಹಾನ್ ನಾಯಕರ ಕರ್ಮಭೂಮಿ ನಮ್ಮ ನೆಲ. ನಮ್ಮ ದೇಶದ ರಾಜಕೀಯ ದಲ್ಲಿ ಬಹಳಷ್ಟು ಮಹತ್ವಪೂರ್ಣ ಘಟನೆಗಳು ಇವರ ಕಾಲದಲ್ಲಿ ನಡೆದಿತ್ತು. ವಿದ್ಯೆಗೆ ಇವರಿಂದ ದೊರೆತ ಪ್ರೋತ್ಸಾಹ ಅಪಾರ. ಕಾಶಿಯನ್ನು ವಿದ್ಯಾಕೇಂದ್ರವಾಗಿ ಬೆಳೆಸುವಲ್ಲಿ ಗುಪ್ತರು ಬಹುದೊಡ್ಡ ಪಾತ್ರವನ್ನು ವಹಿಸಿದರು. ಈ ಎಲ್ಲ ನಿಟ್ಟಿನಲ್ಲಿ ಸದ್ಯೋಜಾತರ ಮಾಗಧೇಯ ಕೃತಿಯು ನಮಗೆ ಮಗಧ ಸಾಮ್ರಾಜ್ಯದ ಹರಿವಿನ ವಿಸ್ತೃತವಾದ ಮಾಹಿತಿಯನ್ನು ಒದಗಿಸುತ್ತದೆ.

ಈ ಪುಸ್ತಕದಲ್ಲಿ ಪ್ರಧಾನವಾಗಿ ಮಗದರ ಇತಿಹಾಸವನ್ನು ದಾಖಲಿಸಿದ್ದರೂ, ಭಾರತವನ್ನಾಳಿದ ಸುಮಾರು 130 ಪ್ರಧಾನ ರಾಜವಂಶಗಳು, ಆರ್ಯರು ಮತ್ತು ವ್ರಾತ್ಯ ರ ಕುರಿತು, ಸೂತಪುರಾಣಿಕರು ಕುರಿತು ಇನ್ನೂ ಹಲವಾರು ವಿಷಯಗಳ ಕುರಿತು ಬಹಳಷ್ಟು ಮಾಹಿತಿಗಳಿವೆ

ಭಾರತವನ್ನಾಳಿದ ಹಲವಾರು ಚಕ್ರವರ್ತಿಗಳಲ್ಲಿ ಪರಿಪೂರ್ಣರೆನ್ನಿಸಿಕೊಂಡವರೆಂದರೆ ಬಿಂಬಸಾರ ಮತ್ತು ಸಮುದ್ರ ಗುಪ್ತ. ಈ ಕೃತಿಯಲ್ಲಿ ಸಮುದ್ರಗುಪ್ತನ ಆಡಳಿತಾತ್ಮಕ ನೀತಿ, ವ್ಯಕ್ತಿತ್ವ, ವಿಜಯದ ಹರಿಕಾರ ಎನ್ನಿನಸಿಕೊಂಡ ಬಗೆ, ಹೀಗೆ ಹಲವಾರು ವಿಷಯಗಳನ್ನು ತಿಳಿಸುತ್ತದೆ. ಜೊತೆಗೆ ಯುದ್ಧ ದಾಹಿಯಾಗಿದ್ದ ಆತ ಗೆದ್ದ ರಾಜ್ಯವನ್ನು ಹಿಂತಿರುಗಿಸುತ್ತಾ ಸ್ನೇಹ ಸಂಬಂಧದಿಂದಲೇ ರಾಜ್ಯವನ್ನು ವಿಸ್ತರಿಸುವ ಆತನ ವ್ಯಕ್ತಿತ್ವವನ್ನು ತೋರಿಸುತ್ತದೆ.

ಮಧ್ಯಕಾಲೀನ ಯುಗದಲ್ಲಿ ಕಾಶಿಯು ಪ್ರಖ್ಯಾತಿಯನ್ನು ಹೊಂದಲು ಕಾರಣವಾದದ್ದು ತೀರ್ಥಕ್ಷೇತ್ರವಾಗಿ ಮತ್ತು ಕಲಿಕಾ ಕೇಂದ್ರವಾಗಿ . ಆಗಿನ ಕಾಲದಲ್ಲಿಯೇ ಕಾಶಿಯ ಗಲ್ಲಿಗಲ್ಲಿಗಳು ವಿದ್ಯಾಕೇಂದ್ರವಾಗಿದ್ದು, ಬನಾರಸ್ ಸಂಗೀತ ಕಲಿಕೆಯ ಕೇಂದ್ರವಾಗಿತ್ತು. ವಿದ್ಯೆ, ಕಲೆ, ಸಾಹಿತ್ಯಕ್ಕೆ ದೊರೆಯುತ್ತಿದ್ದ ಪ್ರೋತ್ಸಾಹ, ಆ ಕಾಲದಲ್ಲಿಯೇ ನಮ್ಮ ದೇಶದಲ್ಲಿ ವಿದ್ಯೆಯ ಮಹತ್ವವನ್ನು ಅರಿತಿದ್ದದ್ದು ಸ್ಪಷ್ಟವಾಗಿ ತಿಳಿಯುತ್ತದೆ.

ದೇವನು ಪ್ರಿಯ ಎನ್ನಿಸಿಕೊಂಡ ಇತಿಹಾಸ ಪುರುಷ ಸರ್ವಧರ್ಮ ಸಮನ್ವಯಯಾಗಿದ್ದ, ಬಿಂಬಸಾರನು ಬೌದ್ಧ ಜೈನ, ಹಿಂದೂ ,ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿದ್ದ. ಭಾರತದ ತವರು ಎಂದು ಕರೆಯಲ್ಪಡುವ ವಿದೇಹದ ಕಥೆ ವೇದ ಪುರಾಣಗಳ ಕಾಲದಿಂದಲೂ ಹೇಳಲ್ಪಡುತ್ತದೆ. ಇದು ಇಕ್ಷ್ವಾಕು,ನಿಮಿ,ಮಿಥಿ, ಜನಕ ಹೀಗೆ ಹಲವು ರಾಜರಿಂದ ಆಳಲ್ಪಟ್ಟಿದೆ.

ಇಂದಿನ ಭೂಗರ್ಭ ವಿಜ್ಞಾನಿಗಳು ಪ್ರಾಚೀನ ಕಾಲದಲ್ಲಿ ಜ್ವಾಲಾಮುಖಿಯ ಸ್ಫೋಟ ವಾಗಿರಬಹುದು ಎಂದು ಹೇಳುತ್ತಿದ್ದರೆ , ಅದಕ್ಕೆ ಪೂರಕವಾಗಿ ಬಾಯಿಯಲ್ಲಿ ಅಗ್ನಿಯನ್ನು ತುಂಬಿಕೊಂಡಿದ್ದ, ವಿದೇಘಮಾಥವನ ಬಾಯಿಂದ ಅನಿರೀಕ್ಷಿತವಾಗಿ ಹೊರಗೆ ಬರುವ ಅಗ್ನಿಯು ಕೆನ್ನಾಲಿಗೆ ಚಾಚಿ ಪ್ರಪಂಚವನ್ನೇ ನುಂಗುತ್ತಿದ್ದಾಗ ಸದಾನೀರ ನದಿಯು ರಕ್ಷಿಸಿದ ಬಗೆ, ಈ ಅಗ್ನಿಯಿಂದ ಗಂಗೆಯ ದಕ್ಷಿಣ ಪಾರ್ಶ್ವ ಒಣಭೂಮಿ ಯಾದದ್ದು ಹೀಗೆ ಹಲವು ಘಟನೆಗಳು ನೇರ ಸಂಬಂಧವನ್ನು ಕಲ್ಪಿಸುತ್ತದೆ.

'ಮಿಥಿಲೆಯ ಹಾದಿಯಲ್ಲಿ ರಾಮ' ಅಧ್ಯಾಯವು ಶ್ರೀರಾಮನ ಕುರಿತು, ಅಹಲ್ಯೆ ಎನ್ನುವ ಅಚೇತನ ಶರೀರ, ಜನಕನ ಮಿಥಿಲೆ ಹೇಗಿತ್ತು? ಕೀಕಟ ಮತ್ತು ಪ್ರಮಗಂಧರ ಕಾಲದ ಮಗದ ಕುರಿತಷ್ಟೇ ಅಲ್ಲದೆ, ಪಾಟಲಿಪುತ್ರದ ಶರ್ಯಾತ, ನಾಭಾಗ ಇಳಾ, ಕಾನ್ಯಕುಬ್ಜ, ಹೈಹಯರ,ಎರಡನೇ ಮಹಾಜನಕ, ಅಂಗತಿ, ಸಾಧೀನ, ಯಾಜ್ಞವಲ್ಕ್ಯ, ವಿದ್ವತ್ಕುಲರ ಕಾಲದಲ್ಲಿ ಮಗಧದ ಆಡಳಿತದ ಕುರಿತಾದ ಹಲವು ಘಟನೆಗಳತ್ತ ಬೆಳಕು ಚೆಲ್ಲಿದ್ದಾರೆ.

ವೈಶಾಲಿಯ ರಾಜವಂಶ ಅಧ್ಯಾಯವು ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದಾದ ವೈಶಾಲಿ ಯನ್ನು ಆಳಿದ ರಾಜವಂಶಗಳ ಕುರಿತು ವಿಸ್ತೃತ ಮಾಹಿತಿಯನ್ನು ಒದಗಿಸುತ್ತದೆ.

ಋಗ್ವೇದ, ರಾಮಾಯಣ, ಅಗ್ನಿಪುರಾಣ ,ಮಹಾಭಾರತ, ವಾಯುಪುರಾಣ, ಮತ್ಸ್ಯಪುರಾಣ, ಭಾಗವತ ಪುರಾಣ ಗಳಲ್ಲಿ ಮಗಧದ ಉಲ್ಲೇಖವಿದ್ದು ಅಲ್ಲಿಯ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.

ಮಹಾಭಾರತದ ಜರಾಸಂಧ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಆತ ಮಗಧ ರಾಜ್ಯಕ್ಕೆ ಸೇರಿದವನೆಂದು ತಿಳಿದವರು ವಿರಳ. ಇನ್ನೂ ಹಲವಾರು ರಾಜ ಮಹಾರಾಜರ ಕುರಿತು ನಮಗೆಲ್ಲಾ ತಿಳಿದಿದ್ದರೂ ಅವರಿಗೂ ಮಗದ ದೇಶಕ್ಕೂ ಇರುವ ಸಂಬಂಧ ತಿಳಿದಿರುವುದು ವಿರಳ.

ಮಹಾಭಾರತದ ಕಾಲದಿಂದ ಅಲೆಕ್ಸಾಂಡರ್ ನ ಕಾಲದವರೆಗೆ ಹಲವು ರಾಜವಂಶಗಳು ಮಗದ ರಾಜ್ಯವನ್ನಾಳಿದೆ. ಇತಿಹಾಸಕಾರರು ಹಲವು ವರ್ಷಗಳ ನಮ್ಮ ದೇಶದ ಇತಿಹಾಸವನ್ನು ಮುಚ್ಚಿಟ್ಟಿದ್ದಾರೆ.ಹಾಗೆಯೇ ಇಂದು-ನಿನ್ನೆಯದಲ್ಲ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ನೆಲ ಅಂದಿಗೂ ಇಂದಿಗೂ ಯಾವತ್ತಿಗೂ ನಾಗರಿಕವಾಗಿತ್ತು ಎನ್ನುವ ಅರಿವು ಮೂಡುತ್ತದೆ. ರಾಮಾಯಣ-ಮಹಾಭಾರತದಂತಹ ಗ್ರಂಥಗಳನ್ನು ಓದಿದ್ದರೂ ಅದಕ್ಕಿರುವ ಇನ್ನೊಂದು ಆಯಾಮದ ಅರಿವು ಮಗಧೀರ ಪುಸ್ತಕದಲ್ಲಿ ಓದತ್ತಿದ್ದಂತೆ ಆಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಹಲವಾರು ಆಕರ ಗ್ರಂಥಗಳನ್ನು ಅಭ್ಯಸಿಸಿ ರಚಿಸಿರುವ ಮಾಗಧೇಯ ಕೃತಿಯು ನಮ್ಮ ಕಣ್ಣಿಗೆ ಬೀಳದೆ ಮರೆಯಾಗಿರುವ, ನಮ್ಮ ಸಂಸ್ಕೃತಿಯ ವಿವಿಧ ಆಯಾಮಗಳನ್ನು, ನಮ್ಮ ಸಂಸ್ಕೃತಿಯಲ್ಲಿ ಮಗಧರ ಪಾತ್ರವನ್ನು ತೋರಿಸಿ ಕೊಡುತ್ತದೆ.

ಮಾಗಧೇಯ ಕೃತಿಯನ್ನು ಓದಿ ನನ್ನ ಅರಿವಿಗೆ ಬಂದ ವಿಷಯಗಳ ಬಗ್ಗೆ ಬರೆಯುವ ಪುಟ್ಟ ಪ್ರಯತ್ನವಷ್ಟೇ.

ಸದ್ಯೋಜಾತ ಭಟ್ಟ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...