Date: 17-02-2020
Location: ಬೆಂಗಳೂರು
ದ. ರಾ. ಬೇಂದ್ರೆ ಅವರ `ಪದಾ ಹೊರಗ ಬರೋದಿಲ್ಲ - ಕದಾ ತೆರೆಯೋದಿಲ್ಲ ಅಂತಃಕರಣ’ ಕವಿತೆ ಹಾಡುವ ಮೂಲಕ ಬೆಂಗ್ಳೂರಾಗು ಬೇಂದ್ರೆ ಕಾರ್ಯಕ್ರಮವನ್ನು ಸಾಹಿತಿ ಎಂ. ಆರ್. ಕಮಲ ಅವರು ಮಾತು ಶುರುಮಾಡಿದರು. ನಂತರ ಮಾತನಾಡಿದ ಅವರು “ಹೆಂಗರಳು ಇದ್ದರೆ ಮಾತ್ರ ಅಂತಃಕರಣ ಇರಲು ಸಾಧ್ಯ ಅನ್ನುವಲ್ಲಿಗೆ ಅಡಿಗರು ಬೇಂದ್ರೆ ಅವರಿಗೆ ಯುಗದ ವಾಣಿ ಎಂದದ್ದು ತಪ್ಪಲ್ಲ ಅನ್ನಿಸುವಷ್ಟು ನಮ್ಮನ್ನು ಬೇಂದ್ರೆ ರುಚಿಗೆ ಎದೆ ತೆರೆದುಕೊಳ್ಳುತ್ತದೆ. ಅಂತಃಕರಣ ಇರೋದು ಹೆಣ್ಣಿನಲ್ಲಿ ಎಂದು ಗುರುತಿಸಿದ ಮೊದಲ ಕವಿ ಬೇಂದ್ರೆ. ಈ ಹೆಂಗರಳು ಎಂಬ ಕಲ್ಪನೆ ಬಂದದ್ದೆ ಅರ್ಧನಾರೀಶ್ವರದಿಂದ. ಕಾವ್ಯದ ಮೂಲ ಸೆಲೆ ಇರೋದೇನೆ ಮಾತೃತ್ವದ ಶಕ್ತಿಯಲ್ಲಿ ಅಂತ ಬೇಂದ್ರೆ ಬಹು ನಂಬಿದವರು” ಎಂದು ತಿಳಿಸಿದರು.
“ಬೇಂದ್ರೆ ಅವರು ಎಲ್ಲವನ್ನೂ ಜೀವ ತುಂಬಿ ಒಲವ ಸುರಿದು ನೋಡುತ್ತಿದ್ದರಿಂದ ಅಂತಃಕರಣ ಎನ್ನುವುದು ಹುಟ್ಟಾ ಬೆನ್ನಿಗಂಟಿ ಬಂದ ಸಾವಿನಷ್ಟೆ ಜೊತೆಯಾಗಿತ್ತೇನೊ ಅನ್ನಿಸುತ್ತದೆ. ಬೇಂದ್ರೆ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದು ‘ನಾನು’ ಎನ್ನುವ ಕವಿತೆಯಲ್ಲಿ. ಅದರೊಳಗು ಸಹ ತಾವು ತಾಯಿಯ ಮಗ ಎಂಬುದನ್ನು ಅದ್ಭುತವಾಗಿ ಸ್ಪಷ್ಟಪಡಿಸುತ್ತಾರೆ. ವಿಶ್ವಮಾತೆ, ಭೂಮಿತಾಯಿ, ಭಾರತ ಮಾತೆ, ಕನ್ನಡತಾಯಿ, ಜನ್ಮ ಕೊಟ್ಟ ಅಂಬಿಕೆ ಹೀಗೆ ಐದೂ ಜನರನ್ನು ನೆನೆಯುವ ಬೇಂದ್ರೆ ಅಲ್ಲಿ ತನಗಿದ್ದ ಒಲವಿನ ಹೆಂಗರಳು ಬಿಚ್ಚಿಟ್ಟಿದ್ದಾರೆ!” ಎಂದು ಬೇಂದ್ರೆ ಅವರ ಕವಿತೆಗಳ ಅಂತಃಕರಣವನ್ನು ತೆರೆದರು.
‘ಇಳಿದು ಬಾ ತಾಯೆ ಇಳಿದು ಬಾ / ನಿಂತ ನೆಲವೆಂದು ಕಡಿಲಾಕ , ಬಡಿಲಾಕ ’ ಮುಂತಾದ ಬೇಂದ್ರೆ ಅವರ ಕವಿತೆಗಳನ್ನು ಎಂ. ಆರ್. ಕಮಲ ಹಾಗೂ ಇನ್ನಿತರರು ವಾಚಿಸಿ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಬೇಂದ್ರೆ ಕವಿತೆಗಳ ಹಾಡು, ಓದು, ಚರ್ಚೆ ಅವರ ಬದುಕು ಬರಹದ ಕುರಿತು ಸಂವಾದ ನಡೆಸಲಾಯಿತು. ರಾಜಕುಮಾರ ಮಡಿವಾಳರ, ವಿವೇಕ, ಮೌನೇಶ್ ಕನಸುಗಾರ, ಸುಮಾ ರಮೇಶ, ವೆಂಕಟೇಶ ಮೂರ್ತಿ ಸೇರಿದಂತೆ ಇನ್ನಿತರ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.