ಭಾಶಾಹೀನರ ಸಂಗ ಅಭಿಮಾನ ಭಂಗ

Date: 19-03-2021

Location: .


ಭಾಷೆ ಕೇವಲ ಸಂವಹನದ ಉದ್ದೇಶ ಹೊಂದಿಲ್ಲ. ಭಾಷೆ ಯನ್ನು ಬಳಸುವ ಜನರು ಅದರ ಲೋಕೋಪಯೋಗಿ ಕಾರ್ಯವನ್ನು ಬದಿಗೆ ಸರಿಸಿ, ಈಗ ದ್ವೇಷದಿಂದ ಮತ್ತೊಬ್ಬರ ಮೇಲೆ ಆಕ್ರಮಣ ಮಾಡಲು ಬಳಸಲಾಗುತ್ತಿದೆ. ಅದರಿಂದ ಉಂಟಾಗುವ ಅಪಾಯಗಳ ಕುರಿತು ಲೇಖಕ ರಂಗನಾಥ ಕಂಟನಕುಂಟೆ ಅವರು ತಮ್ಮ ‘ಮಾತಿನ ಮರೆ’ ಅಂಕಣದಲ್ಲಿ ಚರ್ಚಿಸಿದ್ದಾರೆ.

ದ್ವೇಶದ ಭಾಶೆ ಮತ್ತು ಪ್ರತಿದ್ವೇಶದ ಭಾಶೆಯ ಅಪಾಯಗಳು
ಇದು ಬಹಳ ವಿಚಿತ್ರ ಸಂಗತಿಯಾದರೂ ವಾಸ್ತವದ ಸಂಗತಿ. ಅದೇನೆಂದರೆ ಆಧುನಿಕ ಭಾರತದಲ್ಲಿ ’ಧರ್ಮ’ ಶಕ್ತಿರಾಜಕಾರಣದ ಕೇಂದ್ರಕ್ಕೆ ಬಂದ ನಂತರ ಸಾರ್‍ವಜನಿಕ ಭಾಶೆಯ ಸ್ವರೂಪವೇ ಬದಲಾಗಿ ಹೋಗಿದೆ. ಸದ್ಯದಲ್ಲಿ ಸಾರ್‍ವಜನಿಕ ಭಾಶೆ ಮುಕ್ತಮಾತುಕತೆಯ ಸಂವಾದದ ಚಹರೆಯನ್ನು ಕಳೆದುಕೊಂಡು ಆಕ್ರಮಣ ಮತ್ತು ಪ್ರತಿ ಆಕ್ರಮಣದ ಸ್ವರೂಪ ಪಡೆದುಕೊಂಡಿದೆ. ಭಾಶೆಯನ್ನು ಬಳಸುವಾಗ ಸಹನೆ ಮತ್ತು ಲಜ್ಜೆಗಳ ಎಲ್ಲೆಯನ್ನು ಮೀರಲಾಗುತ್ತಿದೆ. ಅಲ್ಲದೆ `ಧರ್ಮ’ಗಳು ಬೋಧಿಸುವ ದಯೆ, ಕರುಣೆ, ಮಮತೆ, ಸಾಮರಸ್ಯ, ಸೌಹಾರ್ದತೆ, ಸಹಿಶ್ಣತೆಯ ಗುಣಗಳಿಗೆ ವಿರುದ್ಧವಾದ ’ದ್ವೇಶದಭಾಶೆ’ ಮುಂಚೂಣಿಗೆ ಬಂದಿದೆ. ಇಲ್ಲಿನ ದುರಂತವೆಂದರೆ, ದ್ವೇಶದ ಭಾಶೆಯನ್ನು ಬಳಸುವ ಜನರನ್ನು ವಿರೋಧಿಸುವ ಭರದಲ್ಲಿ ಅವರ ವಿರೋಧಿಗಳು ಕೂಡ ’ಆಕ್ರೋಶ ಮತ್ತು ಅಸಹನೆ’ಯ ಭಾಶೆಯನ್ನೇ ಬಳಸುತ್ತಿದ್ದಾರೆ. ದ್ವೇಶದ ಭಾಶೆಗೆ ಪ್ರತಿದ್ವೇಶದ ಭಾಶೆ ಬಳಕೆಯಾಗುತ್ತಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ದೇವರು ಮತ್ತು ಧರ್ಮಗಳು ಚರ್ಚೆಯ ಕೇಂದ್ರಕ್ಕೆ ಬಂದಾಗ ಅವುಗಳ ವಕ್ತಾರರ ಭಾಶೆ ಯಾವಾಗಲೂ ಒಂದು ಬಗೆಯ ಆಕ್ರಮಣಕಾರಿ ಗುಣವನ್ನೇ ಪಡೆದುಕೊಳ್ಳುವಂತೆ ಕಾಣುತ್ತದೆ. ಅದರಲ್ಲಿಯೂ ಏಕದೇವೋಪಾಸನೆಯನ್ನು ಪ್ರತಿಪಾದಿಸುವ ಎಲ್ಲ ಧಾರ್ಮಿಕ ಪಂಥಗಳು ಇಂತಹ ಆಕ್ರಮಣಕಾರಿ ಭಾಶೆಯನ್ನೇ ಬಳಸುವುದನ್ನು ಕಾಣಬಹುದು. ಪುರಂದರದಾಸರು ತಮ್ಮದೊಂದು ಕೀರ್‍ತನೆಯಲ್ಲಿ, ’ಮೂರ್ಖರಾದರು ಇವರು ಲೋಕದೊಳಗೆ ಏಕದೈವವ ಬಿಟ್ಟು ಕಾಕು ದೈವವ ಭಜಿಸಿ’ ಎನುತ್ತಾರೆ. ಇಲ್ಲಿ ತಾವು ನಂಬಿದ ದೈವ, ಧರ್ಮದ ವಿಚಾರಗಳ ಹೊರತಾಗಿರುವ ಜನರ ಬಗೆಗೆ ತಮ್ಮ ಭಿನ್ನಮತ ವ್ಯಕ್ತಪಡಿಸುವಾಗ ಅವರ ಭಾಶೆ ಕೊಂಚ ವ್ಯಂಗ್ಯ ಸೇರಿಕೊಂಡು ಒರಟಾಗುತ್ತದೆ. ಬಸವಣ್ಣ ಕೂಡ ಕೆಲವೊಮ್ಮೆ ಆಕ್ರಮಣಕಾರಿ ಭಾಶೆಯನ್ನೇ ಬಳಸುತ್ತಾನೆ.
ಭಕ್ತರ ಕಂಡರೆ ಬೋಳಪ್ಪಿರಯ್ಯ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯ,
ಹಾರುವರ ಕಂಡರೆ ಹರಿನಾಮವೆಂಬಿರಯ್ಯ
ಅವರವರ ಕಂಡರೆ ಅವರವರಂತೆ,
ಸೂಳೆಗೆ ಹುಟ್ಟಿದವರ ತೋರದಿರಯ್ಯ,
ಕೂಡಲಸಂಗಮಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ,
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ (
ಎಲ್ ಬಸವರಾಜು, ಪು.54 )
ಎನ್ನುತ್ತಾನೆ. ಈ ವಚನದಲ್ಲಿ `ಸೂಳೆಗೆ ಹುಟ್ಟಿದವರ ತೋರದಿರಯ್ಯ’ ಎನ್ನುವಲ್ಲಿ ಒಂದು ಬಗೆಯ ಸಿಟ್ಟು ಆಕ್ರೋಶ ‘ಅಸಹನೆ’ ಎದ್ದು ಕಾಣಿಸುತ್ತದೆ. ಅವಕಾಶವಾದಿಗಳ ಹಾಗೆ ವರ್‍ತಿಸುವ ಭಕ್ತರ ಕಂಡು ವ್ಯಕ್ತಮಾಡುತ್ತಿರುವ ಸಿಟ್ಟು ಸಮಣರ, ಹಾರುವರ ಬಗೆಗಿನ ಸಿಟ್ಟು ಕೂಡ ಆಗಿದೆ. ಕೂಡಲಸಂಗಮನಲ್ಲದ ಇತರೆ ದೈವಗಳ ಬಗೆಗೆ ಆಸಕ್ತಿ ತೋರಿಸುವ ಜನರ ಬಗೆಗೆ ಇರುವ ಸಿಟ್ಟಿನ ಮೂಲದಲ್ಲಿ ದೇವರು ಮತ್ತು ಧರ್ಮ ಪರವಾದ ’ಕಟ್ಟಾವಾದಿತನ’ ಎದ್ದು ಕಾಣಿಸುತ್ತದೆ. ಅಂದರೆ ಧಾರ್ಮಿಕವಾದ ಭಾವನೆಯಲ್ಲಿ ಕಟ್ಟಾವಾದಿತನ ದೃಢವಾಗುವ ಹೊತ್ತಿನಲ್ಲಿ ಭಾಶೆ ವ್ಯಗ್ರ ಸ್ವರೂಪವನ್ನು ಪಡೆಯುವುದು ಅಚ್ಚರಿಯ ಸಂಗತಿ. ಜನಪದ ದೈವಗಳನ್ನು ಟೀಕಿಸುವ ಉತ್ಸಾಹದಲ್ಲಿ `ಮಡಕೆ ದೈವ, ಮೊರ ದೈವ, ಕಲ್ಲು ದೈವಗಳೆಂದು' ಬಸವಣ್ಣ ಜರಿಯುತ್ತಾನೆ. ಹಾಗೆಯೇ ವೈದಿಕ ಪರಂಪರೆಯನ್ನು ಟೀಕಿಸುವ ಉಮೇದಿನಲ್ಲಿ ಅಲ್ಲಮ ಕೂಡ ’ಪುರಾಣವೆಂಬುದು ಪುಂಡರಗೋಷ್ಠಿ’ ಎಂದುಬಿಡುತ್ತಾನೆ! ಅಕ್ಕಮಹಾದೇವಿ ತನ್ನದೊಂದು ವಚನದಲ್ಲಿ ’ಗೋವಿಂದನ ನಯನ ತನ್ನ ಉಂಗುಶ್ಟದ ಮೇಲಿಪ್ಪುದು’ ಎನ್ನುತ್ತಾಳೆ. ಕನಕದಾಸ ವಿಶ್ಣು ಮತ್ತು ಶಿವರ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸುತ್ತಾನೆ. ಆದರೂ ಅವನಲ್ಲಿಯೂ ನಾರಾಯಣನಿಶ್ಟೆ ಉಗ್ರವಾಗಿ ವ್ಯಕ್ತವಾಗುವಾಗ ಅವನ ಭಾಶೆಯು ಆಕ್ರಮಣಕಾರಿಯಾಗುತ್ತದೆ. ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದವರ ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು ಎನ್ನುತ್ತಾನೆ. ಇಲ್ಲಿ ಕನಕ ಜನಪದ ದೈವಗಳನ್ನು ನಿರಾಕರಿಸುವಾಗ ವ್ಯಕ್ತಪಡಿಸಿರುವ ಮಾತಿನಲ್ಲಿ ಅಸಹನೆ, ಆಕ್ರೋಶವಿದೆ ಎನ್ನಿಸುತ್ತದೆ. ಠಕ್ಕು ದೇವರು ಎಂದು ಜರಿಯುವ, ವ್ಯಂಗ್ಯವಾಡುವ ಬಗೆಯಿದೆ. ’ಜಡ ದೈವಗಳ ಪೂಜೆ ಬೇಡಿರೋ’ ಎಂದು ಕೊನೆಗೆ ಕರೆ ಕೊಡುತ್ತಾನೆ. ಜನಪದ ದೈವಗಳು ಠಕ್ಕು ಮತ್ತು ಜಡದೇವರಾದರೆ ನಾರಾಯಣನೂ ಅಂತಹ ಠಕ್ಕಿನ ಮತ್ತು ಜಡದೇವರೇ ಅಲ್ಲವೇ? ಅಂದರೆ ತಮ್ಮ ದೇವರು ಧರ್ಮಗಳನ್ನು ಸಮರ್ಥಿಸಿಕೊಳ್ಳುವ ವಿಚಾರಕ್ಕೆ ಬಂದಾಗ ವಿರಾಗಿಗಳ ಸಂತರ ಭಾಶೆಯೂ ಸ್ವಲ್ಪ ಲಯ ತಪ್ಪಿ ಒರಟಾಗುತ್ತದೆ. ಅವರೂ ಅಸಹನೆಯ ಆಕ್ರೋಶದ ಭಾಶೆಯನ್ನೇ ಬಳಸಿರುವುದನ್ನು ಗಮನಿಸಬಹುದು. ಹಾಗೆಯೇ ಕೆಲವು ಜೈನ, ಶೈವ ಧರ್ಮೀಯ ಕವಿಗಳಲ್ಲಿಯೂ ಇಂತಹದೇ ಭಾಶೆ ಢಾಳಾಗಿ ಕಾಣಿಸುತ್ತದೆ. ನಮ್ಮ ಪರಂಪರೆಯಲ್ಲಿ ಧಾರ್ಮಿಕ ನಿಶ್ಟೆಯನ್ನು ಆತ್ಯಂತಿಕವಾಗಿ ವ್ಯಕ್ತಪಡಿಸುವ ಉತ್ಸಾಹದಲ್ಲಿ ’ಅನ್ಯ’ವಾದುದು ಇಲ್ಲವೇ ತನ್ನ ’ಎದುರಾಳಿ’ಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಲ್ಲಗಳೆಯುವ ಹೊತ್ತಿನಲ್ಲಿ ಆಕ್ರಮಣಕಾರಿಯಾದ ಭಾಶೆ ಬಳಸಿರುವುದನ್ನು ಕಾಣಬಹುದು

ಹೀಗೆ ವ್ಯಕ್ತಮಾಡಿರುವವರು ಮೂಲತಃ ಅನುಭಾವಿಗಳು, ಜ್ಞಾನಿಗಳು, ವಿರಾಗಿಗಳು, ಕವಿಗಳು ಮತ್ತು ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಮಹಾತ್ಮರು. ತಮ್ಮ ಆರಾಧ್ಯ ದೈವವನ್ನು ಪ್ರಾಮಾಣಿಕವಾಗಿ ನಂಬಿರುವ ನಿಜವಾದ ಭಕ್ತರು ಮತ್ತು ನಿಸ್ವಾರ್ಥಿಗಳು. ಇವರೂ ಕೂಡ ಅನ್ಯರ ಧಾರ್ಮಿಕ ನಿಶ್ಟೆ ಮತ್ತು ಎದುರಾಳಿಗಳ ವಿಚಾರವನ್ನು ಖಂಡಿಸುವ ಹೊತ್ತಿನಲ್ಲಿ ’ದ್ವೇಶದ ಭಾಶೆ’ ಬಳಸಿದ್ದಾರೆ ಎನ್ನಲು ಬಾರದಿದ್ದರೂ, ಭಾವಾವೇಶದ, ಆಕ್ರೋಶದ ಭಾಶೆ ಬಳಸಿದ್ದಾರೆ ಎನ್ನಬಹುದು. ಇವರು ಬೇರೆಯವರನ್ನು ವಿಮರ್ಶೆ ಮಾಡಿದಶ್ಟು ತೀವ್ರವಾಗಿಯೇ ತಮ್ಮನ್ನೂ ವಿಮರ್ಶೆ ಮಾಡಿಕೊಂಡಿರುವುದು ತಿಳಿದು ಬರುತ್ತದೆ. ಇದು ಅವರ ಭಾಶೆಯನ್ನು ದ್ವೇಶದ ಭಾಶೆಯಾಗುವ ಅಪಾಯದಿಂದ ತಪ್ಪಿಸಿದೆ.
ಆದರೆ ಇಂದು ದೇವರು ಧರ್ಮಗಳ ಹೆಸರಿನಲ್ಲಿ ಮೂಲಭೂತವಾದಿಗಳಾಗಿ ಬದಲಾಗಿರುವ ’ದೇಶಭಕ್ತರು’ ಬೇರೆಯವರ ಮೇಲೆ ದಾಳಿ ಮಾಡುವ ’ದ್ವೇಶಭಕ್ತ’ರಾಗಿದ್ದಾರೆಯೇ ಹೊರತು ತಮ್ಮ ಧರ್ಮ, ಆಚರಣೆ ಮತ್ತು ವ್ಯಕ್ತಿಗತ ನಡತೆಗಳನ್ನು ವಿಮರ್ಶೆ ಮಾಡಿಕೊಳ್ಳುವುದೇ ಇಲ್ಲ. ಹಾಗಾಗಿ ಅಲ್ಲಿ ದ್ವೇಶದ ಭಾಶೆಯು ಹುಲುಸಾಗಿ ಬೆಳೆಯುತ್ತದೆ. ಅವರಿಂದ ಮತ್ತಾವುದೇ ಬಗೆಯ ಹೊಸ ಅರಿವು ಸೃಶ್ಟಿಯಾಗುವುದಿಲ್ಲ. ಅವರು ಕಿಚ್ಚಿನ ಬೊಂಬೆಗಳಂತಿದ್ದು ಬೇರೆಯವರನ್ನು ಸುಟ್ಟು ತಾವೂ ದಹಿಸಿಹೋಗುತ್ತಾರೆ. ಆತ್ಮವಿಮರ್ಶೆಯಿಲ್ಲದ ಮತ್ತು ಜ್ಞಾನದ ಗಂಧಗಾಳಿಯೂ ಇಲ್ಲದ ಅಜ್ಞಾನ-ಮೌಢ್ಯಗಳ ಮೂರ್‍ತ ರೂಪವಾಗಿರುವ ಧಾರ್ಮಿಕ ಮೂಲಭೂತವಾದಿಗಳು ಎಂದಿಗೂ ಯಾವುದೇ ಜ್ಞಾನವನ್ನು ಸೃಶ್ಟಿಸುವುದಿಲ್ಲ. ಅವರು ದೇಶಕ್ಕೆ, ಮನುಕುಲಕ್ಕೆ ಅವರು ಕಂಟಕವಾಗಿರುತ್ತಾರೆಯೇ ಹೊರತು ಅವರು ಪರಿಹಾರವಾಗಿರುವುದಿಲ್ಲ. ಈ ಮೂಲಭೂತವಾದಿಗಳು/ಕೋಮುವಾದಿಗಳು ದೇವರು ಮತ್ತು ಧಾರ್ಮಿಕ ವಿಚಾರಗಳನ್ನು ಸ್ವಾರ್ಥ, ದ್ವೇಶದ ರಾಜಕಾರಣಕ್ಕೆ ಬಳಸುತ್ತಾರೆ. ಹಾಗಾಗಿಯೇ ಅವರ ಭಾಶೆ ದ್ವೇಶದ ಲೇಪನ ಪಡೆದುಕೊಂಡು ಬಳಕೆಯಾಗುತ್ತದೆ.

ಅಲ್ಲಮ, ಬಸವಣ್ಣ, ಕನಕ ಮುಂತಾದವರು ಆಳವಾದ ಜ್ಞಾನದೊಂದಿಗೆ ವೈಚಾರಿಕವಾಗಿ ಎದುರಾಳಿಗಳ ಚಿಂತನೆಯನ್ನು ಗೆಲ್ಲುವ ಹಠದಲ್ಲಿ ಕೊಂಚ ಆವೇಶದ ಭಾಶೆಯನ್ನು ಬಳಸುತ್ತಾರೆ. ಮತ್ತು ಹೊಸ ತಿಳಿವನ್ನು ಸೃಶ್ಟಿಸುತ್ತಾರೆ. ಆದರೆ ವೈಚಾರಿಕತೆ ಜ್ಞಾನಗಳ ಶತ್ರುಗಳಾಗಿರುವ ಎಲ್ಲ ಧರ್ಮಗಳ ಮೂಲಭೂತವಾದಿಗಳು ಮತಾಂಧರು ತಮ್ಮ ಅಜ್ಞಾನವನ್ನು ಮರೆಮಾಚಲೆಂದೇ ಸಂವಾದದ ಬದಲಿಗೆ ದ್ವೇಶದ ಭಾಶೆಗೆ ಮೊರೆಹೋಗುತ್ತಾರೆ. ಅಂದರೆ ತಮ್ಮ ಸ್ವಾರ್ಥ, ದುಶ್ಟತನ, ಅವೈಚಾರಿಕತೆ, ಅಜ್ಞಾನ, ಟೊಳ್ಳುತನಗಳನ್ನು ಮುಚ್ಚಿಕೊಳ್ಳಲು ದ್ವೇಶದ ಭಾಶೆಯ ಮೊರೆಹೋಗುತ್ತಾರೆ. ’ಬಾಯಿದ್ದವರು ಬರದಲ್ಲಿಯೂ ಬದುಕಿದರು’ ಎಂಬಂತೆ ವೈಚಾರಿಕತೆ ಮತ್ತು ಸತ್ಯ ಸಂಗತಿಗಳ ಆಧಾರದ ಮೇಲೆ ಜ್ಞಾನದ ಮೂಲಕ ಎದುರಾಳಿಗಳನ್ನು ಗೆಲ್ಲಲಾಗದ ಹೊತ್ತಿನಲ್ಲಿ ಗಂಟಲುಮಾರಿತನದಿಂದ ದ್ವೇಶದ ವಾಗ್ದಾಳಿಗಳಿಂದ ಗೆಲ್ಲಲು ಪ್ರಯತ್ನಿಸಲಾಗುತ್ತದೆ. ಇದೂ ಸಾಲದಾದಾಗ ನೇರವಾಗಿ ದೈಹಿಕವಾಗಿ ಹಲ್ಲೆ ಮಾಡುವ ಮಟ್ಟಕ್ಕಿಳಿಯುತ್ತಾರೆ. ವಿಚಾರದ ಮೂಲಕ ಗೆಲ್ಲಲು ಸಾಧ್ಯವಾಗದೇ ಇದ್ದಾಗ ದ್ವೇಶದ ಭಾಶೆಯನ್ನು ಬಳಸಲಾಗುತ್ತದೆ. ಇಂತಹ ಭಾಶೆಯ ಮೂಲಕವೇ ಎದುರಾಳಿಗಳಲ್ಲಿ ಭಯೋತ್ಪಾದನೆ ಮೂಡಿಸಲಾಗುತ್ತದೆ. ಇಂತಹ ಭಯೋತ್ಪಾದನೆ ಮತ್ತು ದ್ವೇಶದ ಭಾಶೆಯ ಮೂಲಕವೇ ಜನರ ಮನಸ್ಸನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ.

ವ್ಯಂಗ್ಯವೆಂದರೆ ಇಂತಹ ದ್ವೇಶ ಮತ್ತು ಭಯೋತ್ಪಾದನೆಯ ಭಾಶೆಯ ಹಿಂದಿರುವ ಸಾರ್‍ವಜನಿಕ ವಂಚನೆಯನ್ನು ಅರ್ಥಮಾಡಿಕೊಳ್ಳದೆ ಅದಕ್ಕೆ ಬಲಿಯಾಗುವ ಜನರ ಸಂಖ್ಯೆ ದೇಶದಲ್ಲಿ ಹೆಚ್ಚಿದೆ. ಇದು ಈ ಕಾಲದ ದೊಡ್ಡ ದುರಂತ. ಹೀಗೆ ಮುಗ್ಧ ಮನಸ್ಸುಗಳನ್ನು ವಶಪಡಿಸಿಕೊಳ್ಳುವವರಿಗೆ ಬಲಿಯಾಗಿ ದ್ವೇಶ ಭಾಶೆಯನ್ನೇ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಂಡಿದ್ದಾರೆ. ಇವರು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದು ದ್ವೇಶದ ಸಂದೇಶಗಳನ್ನು ಹೆಚ್ಚೆಚ್ಚು ಪ್ರಸಾರ ಮಾಡುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ದ್ವೇಶದ ಭಾಶೆ ಮತ್ತು ಸಂದೇಶಗಳ ಪ್ರಸಾರದ ಸುನಾಮಿಯೇ ಬುಗಿಲೆದ್ದಿದೆ. ಆದ್ದರಿಂದಲೇ ಎಲ್ಲೆಡೆ ದ್ವೇಶದ ಭಾಶಣಗಳು ಸಂದೇಶಗಳು ಅನುರಣಿಸುತ್ತಿವೆ. ಈ ಪ್ರವಾಹದಲ್ಲಿ ಕೊಚ್ಚಿಹೋಗುವವರ ಸಂಖ್ಯೆ ವಿಪರೀತವಾಗಿದೆ. ಇಂದು ’ದ್ವೇಶಭಾಶೆ’ ಪ್ರಸಾರಕ್ಕೆ ಮುಖ್ಯವಾಹಿನಿಯ ಮಾಧ್ಯಮಗಳೇ ಟೊಂಕ ಕಟ್ಟಿ ನಿಂತಿವೆ. ಅಂದರೆ ಬಹುತೇಕ ಪ್ರಭಾವಿ ಮಾಧ್ಯಮಗಳ ಭಾಶೆಯೇ ದ್ವೇಶಭಾಶೆಯಾಗಿಬಿಟ್ಟಿದೆ. ಇದು ಬಹಳ ಅಪಾಯಕಾರಿ ವಿದ್ಯಮಾನ.

ಶತ್ರುಹತ್ಯೆ ಮತ್ತು ಸ್ವ-ಹತ್ಯೆ
ಇಂತಹ ವಿದ್ಯಮಾನದ ಬೆಳವಣಿಗೆಗೆ ಬಹುಸಂಖ್ಯಾತರ ಧಾರ್ಮಿಕ ಮೂಲಭೂತವಾದ, ಕೋಮುವಾದ ಮತ್ತು ಉಗ್ರರಾಶ್ಟ್ರೀಯವಾದಗಳು ಕಾರಣವಾಗಿವೆ. ದ್ವೇಶದ ಭಾಶೆಗೆ ಧರ್ಮ ಮತ್ತು ರಾಶ್ಟ್ರೀಯತೆಗಳು ಇಂಬು ನೀಡಿರುವುದರಿಂದ ಈ ವಿಚಾರಗಳ ಬೆಂಬಲಿಗರು ತಮ್ಮ ಎದುರಾಳಿಗಳ ಮೇಲೆ ಅತ್ಯಂತ ಹೀನವಾದ ಭಾಶೆ ಬಳಸಿ ಆಕ್ರಮಣ ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಹಾದಿಬೀದಿಗಳಲ್ಲಿ ಗುಂಪುದಾಳಿ ಮಾಡಿ ದಾಂಧಲೆ ಸೃಶ್ಟಿಸುವುದು ಒಂದು ಬಗೆಯಾದರೆ ನಿತ್ಯವೂ ವಿದ್ಯುನ್ಮಾನ ಮಾಧ್ಯಮಗಳು; ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆಫ್ ಮತ್ತು ಫೇಸ್ಬುಕ್‌ಗಳ ಮೂಲಕ ತಮ್ಮ ಎದುರಾಳಿಗಳ ಮೇಲೆ ಮುಗಿಬೀಳಲಾಗುತ್ತಿದೆ. ಹೀಗೆ ಮುಗಿಬೀಳುವ ವೇಳೆ ಅತ್ಯಂತ ಅಸಹ್ಯಕರ ಮತ್ತು ನೀಚಮಟ್ಟದ ಭಾಶೆ ಬಳಸಲಾಗುತ್ತದೆ. ತಮ್ಮ ಎದುರಾಳಿಗಳ ಮೇಲೆ ದಾಳಿ ಆರೋಪ ಮಾಡುವಾಗ ಸಂವಾದದ ಭಾಶೆಯನ್ನು ಬಳಸುವುದಿಲ್ಲ. ಬದಲಿಗೆ ತಮ್ಮ ಸೈದ್ಧಾಂತಿಕ ಎದುರಾಳಿಗಳ ವ್ಯಕ್ತಿತ್ವವನ್ನು ಹೀನಗೊಳಿಸುವಂತಹ ಭಾಶೆಯನ್ನು ಬಳಸಲಾಗುತ್ತದೆ. ಆ ಮೂಲಕ ಅವರ ವ್ಯಕ್ತಿತ್ವವನ್ನು ವಿಕೃತಗೊಳಿಸಲಾಗುತ್ತದೆ. ಸಮಾಜದಲ್ಲಿ ಅವರ ಬಗೆಗೆ ಅಪನಂಬಿಕೆಯನ್ನು ಸೃಶ್ಟಿಸಲಾಗುತ್ತದೆ. ಇಂತಹ ಅಪಪ್ರಚಾರವನ್ನು ಸುಳ್ಳು ಸಂದೇಶಗಳನ್ನು ನಂಬುವಂತಹ ಜನಸಮೂಹವನ್ನು ವ್ಯವಸ್ಥಿತವಾಗಿ ಸೃಶ್ಟಿಸಿಕೊಳ್ಳಲಾಗಿದೆ. ಇದೇ ಫ್ಯಾಸಿಸಂನ ನಿಜವಾದ ಉದ್ದೇಶ ಕೂಡ ಆಗಿರುತ್ತದೆ. ಇಲ್ಲಿ ನಿಜವಾದ ಧರ್ಮ, ಭಾಶೆ ಮತ್ತು ಮೌಲ್ಯಗಳು ಎಲ್ಲವೂ ಅವಸಾನಗೊಳ್ಳುತ್ತವೆ ಇಲ್ಲವೇ ಅನರ್ಥ ಪಡೆದುಕೊಳ್ಳುತ್ತವೆ. ಅಂದರೆ ಧರ್ಮದ ಹೆಸರಿಯಲ್ಲಿಯೇ ಧರ್ಮದ ನೈಜ ಮೌಲ್ಯಗಳನ್ನು ನಾಶ ಮಾಡಲಾಗುತ್ತದೆ.

ಹೀಗೆ ತಮ್ಮ ’ಸೈದ್ಧಾಂತಿಕ ಎದುರಾಳಿ’ಗಳ ಮೇಲೆ ದಾಳಿ ಮಾಡಲು ಬಳಸುವ ಭಾಶೆ ಅದು ಎದುರಾಳಿಗಳನ್ನು ಮಾತ್ರ ನಾಶ ಮಾಡುವುದಿಲ್ಲ. ಬದಲಿಗೆ ಮೊದಲು ’ದ್ವೇಶಭಾಶೆ’ ಬಳಸುವವರನ್ನೇ ನಾಶಮಾಡಿರುತ್ತದೆ. ಯಾಕೆಂದರೆ ಅವರು ಮೊದಲು ತಮ್ಮ ವ್ಯಕ್ತಿತ್ವವನ್ನು ಕೊಂದುಕೊಂಡು ಅಮಾನುಶರಾಗಿ ಬದಲಾಗಿರುತ್ತಾರೆ. ಯಾವುದೇ ಬಗೆಯ ವೈಚಾರಿಕತೆ ಮತ್ತು ನೈಜವಾದ ಧಾರ್ಮಿಕ ಮೌಲ್ಯಗಳಲ್ಲಿ ನಂಬಿಕೆಯಿಟ್ಟಿರುವುದಿಲ್ಲ. ಇವುಗಳ ಬಗೆಗೆ ವಚನಕಾರರಂತೆ ಪ್ರಾಮಾಣಿಕವಾಗಿ ಶೋಧನೆಯನ್ನೂ ಮಾಡುವುದಿಲ್ಲ. ಅವುಗಳ ನಿಜನೆಲೆಯನ್ನು ಅರಿವ ತುಡಿತವಿರುವುದಿಲ್ಲ. ಅವನ್ನು ಕುರುಡಾಗಿ ಭಾವಿಸಿ ಧರ್ಮದ, ದೇಶದ ಮತ್ತು ಸಂಸ್ಕೃತಿ ರಕ್ಶಣೆಯ ಹೆಸರಿನಲ್ಲಿ ದ್ವೇಶದ ಭಾಶೆಯೊಂದಿಗೆ ದಾಳಿ ನಡೆಸಲಾಗುತ್ತದೆ. ಅಲ್ಲದೆ, ಅವರ ಭಾಶೆ ವೈಚಾರಿಕವೂ ಚಿಂತನಶೀಲವೂ ಆದ ಸೃಜನಶೀಲ ಭಾಶೆಯಲ್ಲ. ಅದು ಯಾವುದೇ ಹೊಸ ವಿಚಾರವನ್ನೂ ಹುಟ್ಟಿಸುವುದಿಲ್ಲ. ಅದು ಒಂದು ಬಗೆಯ ಕಿಚ್ಚಿನ ಭಾಶೆ. ಕಿಚ್ಚು ಎಲ್ಲವನ್ನೂ ದಹಿಸುವಂತೆ ಕಿಚ್ಚಿನ ಭಾಶೆ ಬಳಸುವ ವ್ಯಕ್ತಿಗಳನ್ನು, ಅವರು ನಂಬಿರುವ ಧರ್ಮ ಮತ್ತು ಸಂಸ್ಕೃತಿಯ ಉದಾತ್ತ ಮೌಲ್ಯಗಳನ್ನೂ ನಾಶ ಮಾಡುತ್ತಿರುತ್ತವೆ. ಅಲ್ಲದೆ ಈ ಭಾಶೆ ಸೃಜನಶೀಲತೆ ವಿರೋಧಿಯಾಗಿದ್ದು ವಿದ್ವಂಸಕಾರಿಯಾಗಿರುತ್ತದೆ. ಹಾಗಾಗಿ ಇಲ್ಲಿ ನಡೆಯುವುದು ಶತ್ರುಹತ್ಯೆಯಲ್ಲ! ಸ್ವಹತ್ಯೆ ಇಲ್ಲವೇ ಆತ್ಮಹತ್ಯೆ.
ದುರಂತವೆಂದರೆ ಇಂತಹ ವಿದ್ವಂಸಕಾರಿಯಾದ ಭಾಶೆಯೇ ಇಂದಿನ ಮುಖ್ಯವಾಹಿನಿ ಮಾಧ್ಯಮಗಳ ಭಾಶೆಯಾಗಿಬಿಟ್ಟಿದೆ. ಇಂದಿನ ಮುಖ್ಯವಾಹಿನಿಯ ಮಾಧ್ಯಮಗಳು, ಅಧಿಕಾರಶಕ್ತಿಗಳು, ಧರ್ಮರಕ್ಶಕರು, ವಿದ್ವಂಸಕಾರಿ ಭಾಶೆಯನ್ನು ಬಳಸುತ್ತಿರುವ ಕಾರಣ ದ್ವೇಶದ ವಿಚಾರಗಳನ್ನು ಹೊರತುಪಡಿಸಿ ಹೊಸ ವಿಚಾರದ ಕೊಡುಗೆ ನೀಡುವುದಿಲ್ಲ. ದೇಶಭಕ್ತಿ ದ್ವೇಶಭಕ್ತಿಯಾಗಿ ಕೆಲಸ ಮಾಡುತ್ತಿರುತ್ತದೆ. ಆದರೆ ಬಸವಣ್ಣ, ಅಲ್ಲಮ ಅಕ್ಕ ಕನಕನಂತಹವರು ಸಿಟ್ಟಿನ ಆವೇಶದ ಆಕ್ರೋಶದ ಭಾಶೆಯನ್ನು ಬಳಸಿದರೂ ಅವರು ತಮ್ಮೊಳಗೆ ದ್ವೇಶದ ಭಾವನೆ ಹೊಂದಿರುವುದಿಲ್ಲ. ತಮ್ಮ ತಮ್ಮ ಅಂತರಂಗದಲ್ಲಿರುವ ಅಜ್ಞಾನ, ಸ್ವಾರ್ಥ ದ್ವೇಶದ ಭಾವನೆಗಳನ್ನು ಖಾಲಿಮಾಡಿಕೊಂಡ ನಂತರವೇ ಅವರು ಮಾತನಾಡುತ್ತಿದ್ದಾರೆ. ಅವರ ವಿಡಂಬನೆಯ ಭಾಶೆ ಆಳವಾದ ಜ್ಞಾನದಿಂದ ಹುಟ್ಟಿರುವುದರಿಂದ ಅದರಲ್ಲಿ ದ್ವೇಶವಿರುವುದಿಲ್ಲ. ಬದಲಿಗೆ ಅದು ದಪ್ಪ ಚರ್ಮದ ಜನರನ್ನು ತಿವಿದು ಎಚ್ಚರಿಸುತ್ತದೆ. ಆದರೆ ಇಂದು ದ್ವೇಶದ ಭಾಶೆಯನ್ನು ಬಳಸುವ ಜನರು ತಮ್ಮೊಳಗಿನ ಅಜ್ಞಾನದ ಕೊಡವನ್ನು ಖಾಲಿ ಮಾಡದೆ ಅದಕ್ಕೆ ಇನ್ನಶ್ಟು ಮೌಢ್ಯಗಳನ್ನು ದುಶ್ಟತನವನ್ನು ತುಂಬಿಕೊಳ್ಳಲು ದ್ವೇಶದ ಲೇಪನ ಮಾಡಿ ಅದನ್ನು ಅಲಗಾಗಿಸಿ ಎದುರಾಳಿಗಳ ಮೇಲೆ ದಾಳಿ ಮಾಡುತ್ತಾರೆ. ಇದು ಅವರನ್ನು ಮತ್ತು ಜನರನ್ನು ನಾಶ ಮಾಡುತ್ತದೆ. ಪುರಂದರದಾಸರು ’ವಿಚಾರವಿಲ್ಲದೆ ಪರರ ದೂಶಿಸುವುದಕ್ಕೆ ಚಾಚಿಕೊಂಡಿರುವಂತೇ ಇರುವ ನಾಲಿಗೆ’ಗಳು ಎನ್ನುತ್ತಾರೆ. ಅಂದರೆ ವಿಚಾರಹೀನತೆಯೇ ದ್ವೇಶದ ಭಾಶೆ ಬಳಸುವುದರ ಮೂಲ. ಅಂತಹವರೇ ನಾಲಗೆಗಳನ್ನು ಆಯುಧವಾಗಿಸಿ ದಾಳಿ ಮಾಡುತ್ತ ಅರಿವಿನ ಶತ್ರುಗಳಾಗಿ ಬೆಳೆಯುತ್ತಾರೆ. ಪುರಂದರ ದಾಸರು ’ಭಾಶಾಹೀನರ ಸಂಗ ಅಭಿಮಾನ ಭಂಗ’ ಎನ್ನುತ್ತಾರೆ. ಅಂದರೆ ದ್ವೇಶಭಾಶೆ ಭಾಶಾಹೀನತೆಯ ದ್ಯೋತಕವೂ ಹೌದು. ಸಾಮಾಜಿಕ ಸೌಖ್ಯದಲ್ಲಿ ಭಾಶೆಯ ಪಾತ್ರ ಬಹಳ ಮಹತ್ವದ್ದು. ಹಾಗಾಗಿ ದ್ವೇಶಭಾಶೆಯಿಂದ ನಿಡುಗಾಲದಲ್ಲಿ ಸಾಮಾಜಿಕ ಸೌಖ್ಯದದ ಮೇಲೆ ಆಗುವ ಪರಿಣಾಮಗಳೇನು? ಎಂಬುದನ್ನು ಊಹಿಸಿದರೆ ಆತಂಕವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಸಂಗತಿಯೆಂದರೆ ಇಂತಹ ದ್ವೇಶಭಾಶೆಯನ್ನು ವಿರೋಧಿಸುವ ಒಂದು ವಿದ್ಯಮಾನವೂ ಇಂದು ಭಾರತದಲ್ಲಿ ಪ್ರಬಲವಾಗಿಯೇ ಬೆಳೆದಿದೆ. ಆದರೆ ಇದರಲ್ಲಿ ಒಂದು ವರ್‍ಗ ದ್ವೇಶಭಕ್ತಿಗೆ ಪದಲಿಯಾಗಿ ಪ್ರತಿದ್ವೇಶಭಕ್ತಿ ಭಾಶೆಯನ್ನು ಬಳಸುತ್ತಿದೆ. ಅಂದರೆ ಮತೀಯವಾದಿಗಳ ನೀಚಭಾಶೆಯನ್ನು ಖಂಡಿಸಲು ಅಂತಹದೇ ಭಾಶೆಯನ್ನು ಅದನ್ನು ವಿರೋಧಿಸುವ ಜನರು ಬಳಸುತ್ತಿದ್ದಾರೆ. ಇಂತಹ ಕಡೆ ಬಲಪಂಥೀಯರಲ್ಲಿ ಕಾಣುವಂತಹ ಅಸಹನೆ ಅಸಹಿಶ್ಣತೆಯ ಭಾವಗಳೇ ವಿರೋಧಿಸುವವರ ಭಾಶೆಯಲ್ಲಿ ಎದ್ದು ಕಾಣಿಸುತ್ತಿರುತ್ತದೆ. ಇದು ಅನೌಪಚಾರಿಕ ವಲಯದಲ್ಲಿ ಹೆಚ್ಚು. ವಿಶೇಶವಾಗಿ ಫೇಸ್ಬುಕ್‌ನಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಟ್ರೊಲ್ ಭಾಶೆಯೇ ಇಲ್ಲಿ ಪ್ರಧಾನ. ಬಲಪಂಥೀಯರು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಖಂಡಿಸಲು ವಿರೋಧಿಸಲು ಗೇಲಿ ವ್ಯಂಗ್ಯ ಅಸಹ್ಯ ಬೈಗುಳ ಇತ್ಯಾದಿ ಎಲ್ಲವನ್ನೂ ಬಳಸುತ್ತಾರೆ. ಇಂತಹ ಭಾಶೆಯನ್ನು ಬಳಸಿ ಸಂವಾದ ನಡೆಸುವಾಗ ಅಲ್ಲಿ ಕೇಳುಗರ ಇಲ್ಲವೇ ಯಾರನ್ನು ಉದ್ದೇಶಿಸಿ ಬರೆಯಲಾಗಿರುತ್ತದೆಯೋ ಅವರಲ್ಲಿ ಯಾವ ಬದಲಾವಣೆಯೂ ಕಾಣಿಸುವುದಿಲ್ಲ. ವಿಚಾರ ಪ್ರಚೋದಕವೂ ಆಗಿರುವುದಿಲ್ಲ. ಅಂತಹ ಕಡೆ ಬಳಕೆಯಾಗಿರುವ ಭಾಶೆ ಕೇಳುಗರಲ್ಲಿಯೇ ಬೇರೆ ಬಗೆಯ ಅಸಹನೆ ಸೃಶ್ಟಿಸುವ ಸಾಧ್ಯತೆಗಳೇ ಹೆಚ್ಚು. ಅಂದರೆ ನೀಚ ಭಾಶೆಗೆ ಮತ್ತೊಂದು ಬಗೆಯ ನೀಚ ಭಾಶೆ ಮದ್ದಲ್ಲ. ದ್ವೇಶದ ಭಾಶೆಗೆ ಪ್ರತಿದ್ವೇಶದ ಭಾಶೆ ಮದ್ದಲ್ಲ. ಅಂತಹ ಕಡೆ ಸೌಹಾರ್ದದ ಪ್ರೀತಿಯ ಭಾಶೆಯೇ ಮದ್ದಾಗಿರುತ್ತದೆ. ಆವೇಶದ ಆಕ್ರೋಶದ ಭಾಶೆಗೆ ಮೆಲುದನಿಯ ಮೃದುತ್ವದ ’ಬುದ್ಧಭಾಶೆ’ಯೇ ಮದ್ದಾಗಿರುತ್ತದೆ. ಆದರೆ ಇದನ್ನು ಅರಿತುಕೊಳ್ಳದ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದ್ವೇಶದ ಭಾಶೆಯನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇಂತಹ ಪ್ರತಿದ್ವೇಶದ ಭಾಶೆ ಕೇಳುಗರಲ್ಲಿ ಯಾವುದೇ ಚಿಂತನೆಯನ್ನು ಎಚ್ಚರವನ್ನೂ ಮೂಡಿಸುವುದಿಲ್ಲ. ಬದಲಿಗೆ ಮತ್ತಶ್ಟು ಅಕರಾಳ ವಿಕರಾಳಗಳ ಭಾವನೆಗಳನ್ನೇ ಸೃಶ್ಟಿಸುತ್ತದೆ. ಸಾರ್‍ವಜನಿಕ ಭಾಶೆ ಅಕರಾಳ ವಿಕರಾಳ ಆದಶ್ಟೂ ಅದು ಒಟ್ಟು ದೇಶದ ವೈಚಾರಿಕ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ದ್ವೇಶದ ನುಡಿಗೆ ಪ್ರತಿದ್ವೇಶದ ನುಡಿಯನ್ನು ಬಳಸದೆ ಪ್ರೀತಿಯ ನುಡಿಯನ್ನು ಬಳಸಬೇಕಾಗಿರುತ್ತದೆ. ಅಜ್ಞಾನದಿಂದ, ದುಶ್ಟತನದಿಂದ ಮಾಡುವ ಉದ್ದೇಶಪೂರ್‍ವಕ ದಾಳಿಗೆ ಎದುರಾಳಿಯ ಮನಸ್ಸಿನಲ್ಲಿಯೂ ವಿಚಾರದ ಹಣತೆ ಹಚ್ಚುವಂತಹ ಭಾಶೆಯನ್ನು ಬಳಸಬೇಕಾಗುತ್ತದೆ. ಇದೇ ಇಂದಿನ ಅಗತ್ಯ.

ಮಿತ್ರಹತ್ಯೆ ಮತ್ತು ಸ್ವ-ಹತ್ಯೆ
ಸಾಮಾಜಿಕ ಮಾಧ್ಯಮಗಳ ಮೂಲಕ ’ಮುಖೇಡಿ’ ಚರ್‍ಚೆಯನ್ನು ಮಾಡಲು ಮುಂದಾದ ನಂತರ ಮಿತ್ರಸಂವಾದವೂ ಶತ್ರುಸಂವಾದದಂತೆ ಬದಲಾಗಿದೆ. ಇದು ಇನ್ನೊಂದು ದೊಡ್ಡ ದುರಂತ. ಖಾಸಗಿಯಾಗಿ ನಡೆಯಬೇಕಾದ ಚರ್‍ಚೆಗಳು ಸಾರ್‍ವಜನಿಕವಾಗಿ ನಡೆಯುತ್ತವೆ. ಸಾರ್‍ವಜನಿಕವಾಗಿ ನಡೆಯಬೇಕಾದ ಚರ್‍ಚೆಗಳು ಕಣ್ಮರೆಯಾಗುತ್ತಿವೆ. ಎದುರಾಬದುರು ನಡೆಯುವ ಮಾತುಕತೆಯಲ್ಲಿ ಬಳಕೆಯಾಗುವ ಭಾಶೆಯ ಬಗೆಯೇ ಬೇರೆ. ಅಲ್ಲಿ ಮಾತು ಯಾವುದೇ ವ್ಯಕ್ತಿಯ ಎದುರು ನಿಲ್ಲದೆ ಮರೆಯಲ್ಲಿ ನಿಂತು ಮಾತನಾಡುವಾಗ ವಿಚಿತ್ರವಾದ ’ಪೌರುಶ’ ಬಂದುಬಿಡುತ್ತದೆ. ಇಲ್ಲಿ ವಿಶ್ವಾಸಗಳಿಗಿಂತ ಅಸಹನೆ ಮತ್ತು ನಂಜಿನ ಭಾವನೆಗಳು ಕಿಡಿಯಾಡುತ್ತಲೇ ಇರುತ್ತವೆ. ಈ ಕಿಡಿಗಳು ಅಲ್ಲಿಯೇ ನಂದಿಹೋಗುವ ಬದಲು ಅವು ಬಾಳಿನುದ್ದಕ್ಕೂ ಮುಂದುವರೆಯುವ ಸಾಧ್ಯತೆಗಳಿರುತ್ತವೆ. ಇದು ನಂಬಿಕೆಗಿಂತ ಅಪನಂಬಿಕೆಯ ಬೆಳೆಯನ್ನೇ ಹೆಚ್ಚು ಬೆಳೆಯುತ್ತಿದೆ. ಇಲ್ಲಿ ಮಾತು ಮನಸ್ಸುಗಳನ್ನು ಬೆಸೆಯುವುದಕ್ಕಿಂತ ಬೇರ್‍ಪಡಿಸುವ ಕೆಲಸವನ್ನೇ ಹೆಚ್ಚು ಮಾಡುತ್ತಿರುತ್ತದೆ. ಅಲ್ಲದೆ ಇಂತಹ ಸಮಯದಲ್ಲಿ ಮಿತ್ರಹತ್ಯೆ ಮತ್ತು ಸ್ವಹತ್ಯೆಗಳು ಹೆಚ್ಚು ನಡೆಯುತ್ತಿರುತ್ತವೆ. ತಮಗಿಂತ ಭಿನ್ನವಾದ ಅಭಿಪ್ರಾಯ ಮಂಡಿಸುವವರ ಮೇಲೆ ದಂಡೆತ್ತಿ ಹೋಗುವ ಭರದಲ್ಲಿ ಸಂವಾದ ಚೌಕಟ್ಟು ಮೀರಿದ ಭಾಶೆಯನ್ನು ಬಳಸಲಾಗುತ್ತದೆ.
ಇಂತಹ ಸಂದರ್ಭದಲ್ಲಿ ವಿಚಾರವನ್ನು ತಮ್ಮೆದುರು ಇರುವವರಿಗೆ ಮನನ ಮಾಡಿಸುವ ಬದಲಿಗೆ ಆರೋಪ ಮಾಡುವ ಇಲ್ಲವೇ ದೂರುವ ಕೆಲಸ ಮಾಡಲಾಗುತ್ತದೆ. ಇದು ಒಂದು ಬಗೆಯ ಅಸಹನೆ ಮತ್ತು ದ್ವೇಶದ ಭಾವನೆಯನ್ನೇ ಅಂತರಂಗದಲ್ಲಿ ಹೊಂದಿರುವುದನ್ನು ಗಮನಿಸಬಹುದು. ಇವು ಕೆಲವೊಮ್ಮೆ ಅತಿರೇಕ ಮುಟ್ಟಿರುವುದೂ ಉಂಟು. ನಿಜವೆಂದರೆ ಇಲ್ಲಿನ ಎಶ್ಟೋ ಸಂಗತಿಗಳು ಸಾರ್‍ವಜನಿಕವಾಗಿ ಚರ್ಚಿಸ ತಕ್ಕ ವಿಚಾರಗಳೇ ಆಗಿರುವುದಿಲ್ಲ. ಮುಕ್ತವಾಗಿ ಚರ್‍ಚಿಸತಕ್ಕ ವಿಚಾರಗಳು ಮತ್ತು ಖಾಸಗಿಯಾಗಿ ಚರ್‍ಚಿಸಬೇಕಾದ ವಿಚಾರಗಳು ಬೇರೆ ಬೇರೆ. ಆದರೆ ಅದನ್ನು ಮರೆತು ಪರಸ್ಪರ ಕೆಸರೆರೆಚಿಕೊಳ್ಳುವ ಕೆಲಸವನ್ನು ಸಾರ್‍ವಜನಿಕ ವೇದಿಕೆಗಳಲ್ಲಿ ಮಾಡಲಾಗುತ್ತಿದೆ. ಇದರಿಂದ ಒಂದುಗೂಡಬೇಕಾದ ಜನರು ಚಿದ್ರಗೊಳ್ಳುತ್ತಿದ್ದಾರೆ. ಕೂಡುವ ಮನಸ್ಸುಗಳು ಮುರಿದು ಬೀಳುತ್ತಿವೆ. ಇಂತಹ ಅಪಾಯಕಾರಿ ವಿದ್ಯಮಾನಕ್ಕೆ ವೇದಿಕೆ ರೂಪಿಸಿರುವುದು ಸಾಮಾಜಿಕ ಮಾಧ್ಯಮಗಳು. ಇದರಿಂದ ಜನವಿರೋಧಿ ಆಳುವ ವರ್‍ಗಗಳು ಮತ್ತು ಪ್ರತಿಗಾಮಿ ಪುರೋಹಿತಶಾಹಿ ಶಕ್ತಿಗಳೇ ಹೆಚ್ಚು ಪ್ರಯೋಜನ ಪಡೆಯುತ್ತಿವೆ. ಆದರೆ ಜನರು ಒಗ್ಗೂಡಲು ಬಳಸಿಕೊಳ್ಳಬೇಕಾದ ವೇದಿಕೆಗಳನ್ನು ವಿಘಟನೆಗೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ಇದು ಭಾಶೆಯ ಸಮಸ್ಯೆಯೋ ಇಲ್ಲವೇ ಅದನ್ನು ಅರಿತು ಬಳಸದೇ ಇರುವವರ ಸಮಸ್ಯೆಯೋ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.

ಭಾಶೆಯ ಲೋಕೋಪಯೋಗಿ ಕಾರ್‍ಯ
ಕುವೆಂಪು ಅವರು ಭಾಶೆಯನ್ನು ಭಾವೋಪಯೋಗಿ ಮತ್ತು ಲೋಕೋಪಯೋಗಿ ಎಂದು ಎರಡು ನೆಲೆಯಲ್ಲಿ ಗುರುತಿಸುತ್ತಾರೆ. ಲೋಕೋಪಯೋಗಿ ಭಾಶೆ ಸಾರ್‍ವಜನಿಕ ಸಂವಹನದ ಮೂಲಕ ಮನಸ್ಸುಗಳನ್ನು ಬೆಸೆಯಬೇಕು. ಹಾಗೆಯೇ ಭಾವೋಪಯೋಗಿ ಗುಣದ ಮೂಲಕ ಮಾನವರು ಭಾಶೆಯನ್ನು ತಮ್ಮ ಅಂತರಂಗದ ವಿಕಾಸಕ್ಕೆ ಬಳಸಿಕೊಳ್ಳಬೇಕಿರುತ್ತದೆ. ಆದರೆ ದ್ವೇಶ ಮತ್ತು ಪ್ರತಿದ್ವೇಶಗಳ ಭಾಶೆ ಸಾಮಾಜಿಕ ನೆಲೆಯಲ್ಲಿ ಅದು ಸಮಾಜವನ್ನು ಭಿನ್ನ ವರ್‍ಗಗಳನ್ನು ಒಗ್ಗೂಡಿಸುವುದಿಲ್ಲ; ಬದಲಿಗೆ ವಿಭಜಿಸುತ್ತದೆ. ಹಾಗೆಯೇ ದ್ವೇಶ ಪ್ರತಿದ್ವೇಶಗಳ ಭಾಶೆ ಕೂಡ ಅಂತರಂಗವನ್ನು ಬೆಳಗುವುದಿಲ್ಲ. ಮತ್ತು ಅದು ಸೃಜನಶೀಲವಾದ ಕಾರ್‍ಯಗಳಿಗೂ ಒದಗಿಬರುವುದಿಲ್ಲ. ಅಂತಹ ದ್ವೇಶ ಮತ್ತು ಪ್ರತಿದ್ವೇಶಗಳ ಭಾಶೆಯಿಂದ ಯಾವುದೋ ಹೊಸ ಚಿಂತನೆಯನ್ನು ಮನಸ್ಸುಗಳನ್ನು ಹುಟ್ಟಿಸಲು ಸಾಧ್ಯವಿಲ್ಲ. ’ಕಾಂತಾಸಂಹಿತೆ’ಯಂತಹ ಪ್ರೇಮದಭಾಶೆ ಮಾತ್ರವೇ ಹೊಸವಿಚಾರ ಮಂಡಿಸಲು ಪ್ರಯೋಜನಕ್ಕೆ ಬರುತ್ತದೆ; ದ್ವೇಶದ ಭಾಶೆಯಲ್ಲ. ದ್ವೇಶದ ಭಾಶೆ-ಭಾಶಣಗಳು ಒಂದು ಸಮಾಜದ ರೋಗವನ್ನು ಎತ್ತಿತೋರಿಸುತ್ತವೆಯೇ ಹೊರತು ಅದು ಸಮಾಜದ ಅತ್ಯುನ್ನತ ಸಾಧನೆಯನ್ನು ಬಿಂಬಿಸುವುದಿಲ್ಲ.

ಕಾಡ್ಗಿಚ್ಚಿನ ಎದುರು ’ನೀರು’ ಮಹತ್ವ ಪಡೆಯುವಂತೆ ದ್ವೇಶದ ಭಾಶೆಯ ಎದುರು ಬುದ್ಧನ ಕಾರುಣ್ಯದ ಭಾಶೆ ಮಹತ್ವ ಪಡೆಯುತ್ತದೆ. ಅಂಗುಲಿಮಾಲನಂತಹ ಭಯಹುಟ್ಟಿಸುವ ವ್ಯಕ್ತಿಯ ಎದುರು ಬುದ್ಧ ನಿಲ್ಲಲು ಸಾಧ್ಯವಾಗಿದ್ದು ಕಾರುಣ್ಯ ಭಾಶೆಯ ಮೂಲಕವೇ. ಗಾಂಧೀಜಿ ಬ್ರಿಟಿಶರನ್ನು ಎದುರಿಸಿದ್ದು ಇಂತಹ ಪ್ರೇಮದ ಭಾಶೆಯ ಮೂಲಕವೇ ಆಗಿತ್ತು. ಇದುವರೆಗಿನ ಚರಿತ್ರೆಯ ಅನುಭವದಿಂದ ಕಲಿತಿರುವ ಪಾಠಗಳನ್ನು ಗಮನಿಸಿದರೆ ಕ್ರೌರ್‍ಯಕ್ಕೆ ಎದುರಾಗಿ ನಿಂತು ಗೆದ್ದಿರುವುದು ಕ್ರೌರ್‍ಯವಲ್ಲ; ಬದಲಿಗೆ ಪ್ರೇಮ ಕರುಣೆ ದಯೆ ಮತ್ತು ಸಹನೆಯ ಮೌಲ್ಯಗಳು ಮಾತ್ರವೇ ಆಗಿದೆ. ಇಂದಿನ ಅಗತ್ಯವೂ ಕೂಡ ಸಹನೆಯ ಮತ್ತು ಕರುಣೆಯ ಭಾಶೆಯೇ ಆಗಿದೆ. ಆದರೆ ಇಂದು ಕ್ರೌರ್‍ಯವನ್ನು ಎದುರುಗೊಳ್ಳುವ ದಿಟ್ಟತೆ ತೋರುತ್ತಿರುವ ಜನರೂ ಕೂಡ ಕೆಲವೊಮ್ಮೆ ಸಹನೆ ಕಳೆದುಕೊಂಡು ಪ್ರತಿಕ್ರಿಯಿಸುವುದು ಎದ್ದು ಕಾಣಿಸುತ್ತದೆ. ಕೆಲವೊಮ್ಮೆ ದ್ವೇಶಭಾಶೆಯ ಅತಿರೇಕದ ವರ್‍ತನೆಗಳನ್ನು ಕಂಡಾಗ ಆವೇಶ ಆಕ್ರೋಶಗಳು ಹುಟ್ಟಬಹುದು. ಆದರೆ ಅಂತಹ ಆವೇಶ ಆಕ್ರೋಶಗಳನ್ನು ತಮ್ಮ ಎದುರಾಳಿಗಳಂತೆ ಮೈದುಂಬಿಕೊಂಡಾಗ ವಿಚಾರ ಮತ್ತು ಚರ್ಚೆಗಳು ದಾರಿ ತಪ್ಪುತ್ತವೆ. ಭಾಶೆ ಹದಗೆಡುತ್ತದೆ. ಸಾಮಾಜಿಕ ಆರೋಗ್ಯ ಮತ್ತಶ್ಟು ನಾಶವಾಗುತ್ತದೆ. ಹಾಗಾಗಿ ಬದಲಾವಣೆ ಬಯಸುವ ಮನಸ್ಸುಗಳು ತಮ್ಮ ಉದಾತ್ತ ಚಿಂತನೆಗಳಿಗೆ ತಕ್ಕುನಾದ ಕಾರುಣ್ಯದ ಭಾಶೆಯನ್ನೇ ಬಳಸಬೇಕಾಗುತ್ತದೆ. ಅತಿರೇಕದ ಭಾಶೆಯನ್ನು ಬಳಸಿದರೆ ಅದು ವಿಚಾರ ಸಂವಹನ ನಡೆಸದೆ ಹಾದಿತಪ್ಪಿರುವ ಮನಸ್ಸುಗಳನ್ನು ಪರಿವರ್‍ತಿಸುವ ಬದಲು ಮತ್ತಶ್ಟು ಕೆರಳಿಸುವ ಅಪಾಯವಿರುತ್ತದೆ. ಈ ಬಗೆಗೆ ಎಚ್ಚರಿಕೆ ಅಗತ್ಯವಿದೆ.

ಈ ಅಂಕಣದ ಹಿಂದಿನ ಬರೆಹಗಳು

ಮುಸುಕು ನುಡಿ ಮತ್ತು ಆಹಾರದಲ್ಲಿ ಹಾಲಾಹಲ

ಸುಳ್ಳಿನ ಕೈಗಾರಿಕೆಗಳಲ್ಲಿ ಅರಿವಿನ ಹತ್ಯೆ

ಟ್ರಂಪಣ್ಣನ ಅಮೆರಿಕದಲ್ಲಿ ಸುಳ್ಳುಗಳ ಸುನಾಮಿ!

ಕೇಳ್ವಿಯೆಂಬ ಕೂರಲಗು ಮತ್ತು ಪ್ರಭುತ್ವ

ಹೊಸ ಶಿಕ್ಶಣ ನೀತಿ ಮತ್ತು ತಾಯ್ನುಡಿ ಕಲಿಕೆ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...