ಭಾವನೆಗಳೊಂದಿಗೆ ಬಾಂಧವ್ಯ ಬೆಸೆಯುವ ಕಲೆ ‘ಕಥಾಗತ’ : ಸದ್ಯೋಜಾತ ಭಟ್ಟ


''ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಆಕಾಲಕ್ಕೆ ಕೊಂಡೊಯ್ಯುವ ಕಲೆ ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾಗಿ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಫುಟವಾಗುವುದು ಮಧ್ಯದಲ್ಲಿ.ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಂದೆ ಇದು ಸಿಗಲಾರದೇನೋ ಎನ್ನುವ ಭಾವನೆ ಕೆದುಕುತ್ತದೆ'' ಎನ್ನುತ್ತಾರೆ ಲೇಖಕ ಸದ್ಯೋಜಾತ ಭಟ್ಟ . ಅವರು ಲೇಖಕ ನವೀನ ಗಂಗೋತ್ರಿ ಅವರ ಕಥಾಗತ ಕತೆಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

‘ಸ್ಫುರತ್ಕಲಾಲಾಪ-ವಿಲಾಸಕೋಮಲಾ ಕರೋತಿ ರಾಗಂ ಹೃದಿ ಕೌತುಕಾಧಿಕಮ್’ - ಇದು ಬಾಣ ಭಟ್ಟನ ಕಾದಂಬರಿಯಲ್ಲಿ ಬರುವ ಒಂದು ಶ್ಲೋಕದ ತುಣುಕು. ಒಮ್ಮೆ ನಮ್ಮನ್ನು ಕಾದಂಬರಿಯ ಲೋಕಕ್ಕೆ ಕೊಂಡೊಯ್ಯುವುದು ಕಥಾಗತ. ಹೌದು ಬಾಣ ಮತ್ತು ಭಾರವಿಯ ಪರಿಚಯವಿದ್ದರೆ ನವೀನ್ ಗಂಗೋತ್ರಿಯವರಿಗೆ ಆ ಬಾಣ, ಭಾರವಿ ಎನ್ನುವ ಪಿತೃದೇವತೆಗಳು ಆವಾಹಿಸಿರಬಹುದೇನೋ ಎನ್ನುವಷ್ಟರ ಮಟ್ಟಿಗೆ ಕಥಾಗತ ಆವರಿಸಿ ಬಿಡುತ್ತದೆ. ನಾನಿಲ್ಲಿ ಮುಖಸ್ತುತಿಯನ್ನು ಮಾಡುತ್ತಿಲ್ಲ. ಇಲ್ಲಿ ಕಥಾಗತದಲ್ಲಿ ಇವರು ಒಂದಷ್ಟು ಐತಿಹಾಸಿಕ ವಿಷಯಗಳನ್ನು ವಿವರಿಸುತ್ತಾ ಹೋಗುವಾಗ ಗಂಭೀರತೆಯನ್ನು ಅತ್ಯಂತ ಸರಳೀಕರಿಸಿ ಸುಲಲಿತವಾಗಿ ಹೇಳುತ್ತಾ ಸಾಗಿದ್ದಾರೆ. ಆರಂಭದಲ್ಲಿಯೇ ವಡ್ಡಿಸೇನನನ್ನು ಹಿಡಿದು ವಿಷಯವನ್ನು ಹೇಳುತ್ತಾ ಸಾಗಿದ್ದಾರೆ. ಹಾಗಂತ ವಡ್ಡಿಸೇನ ಸಹಜ ಶೈಲಿಯಲ್ಲಿ ಪರಿಸರದ ವರ್ಣನೆ ಮಾಡುವುದಿಲ್ಲ. ಸ್ವತಃ ಕೃತಿಕಾರರು ಮಾಡುವುದು ನಮಗೆ ಅವನೇ ವರ್ಣಿಸಿದಂತೆ ಭಾಸವಾಗುತ್ತದೆ.

ಇಲ್ಲಿ ಇನ್ನೊಂದು ನನ್ನನ್ನು ಕಟ್ಟಿ ಹಿಡಿಯಿತು; ವಡ್ಡಿಸೇನ ಎನ್ನುವ ಹೆಸರನ್ನು ಬಳಸಿಕೊಂಡಿರುವುದು. ವಡ್ಡಿ, ವದ್ಧಿ ಮುಂತಾದ ಪದಪ್ರಯೋಗ ಮೊದಲು ಬಳಕೆಗೆ ತಂದದ್ದು ಕದಂಬರು. ಧಾರವಾಡ ಜಿಲ್ಲೆಯ ನಿರ್ಗುಂದದ ಹಳೆವಾಸನ ಶಾಸನದಲ್ಲಿ ಪ್ರಾಯಶಃ ಮೊದಲ ವಡ್ಡಿಯ ಉಲ್ಲೇಖ ಬರುತ್ತದೆ. ಅಂದರೆ ವಡ್ಡಿಯೇ ವರ್ಧಕಿಯಾಗಿ ಮುಂದೆ ಕನ್ನಡದ ಬಡಗಿಯಾಗುತ್ತಾನೆ. ಇಡೀ ಕಥಾಗತವನ್ನು ಇದೇ ವಡ್ಡಿಯಲ್ಲಿ ಹಿಡಿದಿಟ್ಟಿದ್ದಾರೆ. ಕದಂಬರ ಮಯೂರ ಶರ್ಮನ ಕಾಲಕ್ಕಾಗಲೇ ಬೌದ್ಧದರ್ಮದ ಕೊಂಡಿ ಕಳಚಿಕೊಂಡು ಜೈನಧರ್ಮೀಯರಿಗೆ ರಾಜಧರ್ಮ ಬೋಧಿಸಿದ ಮಯೂರ ಶರ್ಮ ರಾಜಧರ್ಮದಲ್ಲಿ ಹಿಂಸೆಯ ವ್ಯಾಖ್ಯೆಗೆ ಅರ್ಥವಿಲ್ಲವೆಂದು ಜೈನರನ್ನು ದೂರೀಕರಿಸಿದ್ದ. ಹಾಗಂತ ನಂತರದ ರಾಜರು ಜೈನ ಮತ್ತು ಬೌದ್ಧ ಸ್ಮರಣೆಯನ್ನು ಮಾಡಿದ್ದಿದೆ. ಇಲ್ಲಿ ಡಾ. ನವೀನ್ ಅವರು ತಮ್ಮ ಬರವಣಿಗೆಯಲ್ಲಿ ಪ್ರಾಕೃತದ ಛಾಯೆ ಮೂಡಿಸಿ ಕದಂಬ ಮತ್ತು ಅವರಿಗೂ ಪೂರ್ವದ ಶಾತಕರ್ಣಿಗಳ ಕೊಂಡಿ ಬೆಸೆದಂತೆ ಭಾಸವಾಗುತ್ತದೆ.

ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಆಕಾಲಕ್ಕೆ ಕೊಂಡೊಯ್ಯುವ ಕಲೆ ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾಗಿ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಫುಟವಾಗುವುದು ಮಧ್ಯದಲ್ಲಿ. ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಂದೆ ಇದು ಸಿಗಲಾರದೇನೋ ಎನ್ನುವ ಭಾವನೆ ಕೆದುಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ. ನಾಲಂದಾದ ಅನ್ವೇಷಣೆಗೂ ಮೊದಲು ನಾಲಂದಾ ಹೀಗಿತ್ತು ಎನ್ನುವುದು ನವದ್ವೀಪದಂಥಹ ಅಪ್ಪಟ ವೈದಿಕ ನಗರಿಗಳು. ಅದನ್ನೂ ಮುಂದೆ ನವೀನರು ಬರೆಯಬಹುದೆನ್ನುವ ನಿರೀಕ್ಷೆ ಇದೆ.

ವೈಜಯಂತೀ ಪುರವೆಂದು ಕರೆಸಿಕೊಂಡ ಬನವಾಸಿ ಆಗಾಗ ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತ ಬಂದಿದೆ ಆದರೆ ಬನವಾಸಿ ಹೆಸರೇ ಕನ್ನಡದ ಕಂಪನ್ನು ಸೂಸುವ ಹೆಸರು ಅನ್ನಿಸಿ ಬಿಡುತ್ತದೆ. ಬನವಾಸಿ ಅಂದಾಕ್ಷಣ ಕನ್ನಡದ ನೆನಪಾಗಿಯೇ ಆಗುತ್ತದೆ. ಅದಕ್ಕೆ ಕೇವಲ ಕದಂಬರು ಮಾತ್ರವೇ ಕಾರಣರು ಅಂತ ನಾನು ಭಾವಿಸುತ್ತಿಲ್ಲ. ಕದಂಬರು ಇದ್ದಲ್ಲೆಲ್ಲಾ ಬನವಾಸಿಯನ್ನು ನೆನಪಿಸಿಕೊಂಡದ್ದಂತೂ ಹೌದು. ದಕ್ಷಿಣದ ಭಾಷೆಗೆ ಸ್ವಾತಂತ್ರ ದೊರಕಿಸಿಕೊಟ್ಟ ಕದಂಬರು ಕನ್ನಡದ ಜೊತೆಗೆ ಸಂಸ್ಕತವನ್ನು ಪೋಷಿಸಿಕೊಂಡು ಬಂದರು. ಬನವಾಸಿ ಕದಂಬರ ಕಾಲದ ನಂತರ ಹೊಗಳಿಸಿಕೊಂಡದ್ದು ಬಾದಾಮಿ ಚಳುಕ್ಯರ ಕಾಲದಲ್ಲಿ. ಬನವಾಸಿಯನ್ನು ಅದೆಷ್ಟು ಆಪ್ಯಾಯಮಾನವಾಗಿ ಕರೆದರು ಅಂದರೆ "ವರದಾ ತುಂಗ ತರಂಗ" ಎಂದು ಚಾಳುಕ್ಯರ ಎರಡನೇ ಪುಲಕೇಶಿಯ ಕುರಿತಾದ ಐಹೊಳೆಯ ಮೇಗುಟಿಯ ರವಿಕೀರ್ತಿಯ ಶಾಸನದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿ ಬನವಾಸಿಯ ಕದಂಬರ ವರ್ಣನೆ ಬರುವಾಗ ರವಿಕೀರ್ತಿಯ ಪದ ಪ್ರಯೋಗವಂತೂ ಅಸದೃಶ. "ವರದಾ ತುಂಗ ತರಂಗ ವಿಲಸದ್ವಂಸಾವಳೀಮೇಖಲಾ ವನವಾಸೀ ಮವಮೃದ್ನತಸ್ಸುರಪುರ-ಪ್ರಸ್ಪರ್ಧಿನೀಂ ಸಂಪದಾ " ಎಂದು ಕದಂಬರ ಪ್ರದೇಶದ ವರ್ಣನೆ ಮಾಡುತ್ತಾನೆ. ಇಂಥಹ ಒಂದೆರಡು ಶಾಸನಗಳು ಸಿಕ್ಕಿದರೆ ಕಥಾಗತದಂತಹ ಇನ್ನಷ್ಟು ರಸ ಭಕ್ಷಗಳು ಈ ಕೃತಿಕಾರರಿಂದ ಸಿಗುವುದಂತೂ ಸ್ಪಷ್ಟ. ಪ್ರಾಯಶಃ ಹರಿಷೇಣನ ಶಾಸನ ಮತ್ತು ವತ್ಸಭಟ್ಟಿಯ ಶಾಸನವಿಟ್ಟುಕೊಂಡು ಮುಂದೆ ಉದ್ಗಂಥವೊಂದನ್ನು ಇದೇ ಕೃತಿಕಾರರು ಕನ್ನಡದಲ್ಲಿ ರಚಿಸಿದರೆ ನಾವು ಧನ್ಯರು.

ಈ ಕಥಾಗತ ಭಾವನೆಗಳೊಂದಿಗೆ ಬಾಂಧವ್ಯ ಬೆಸೆಯುತ್ತದೆ. ಭಾವನೆಗಳನ್ನು ತಡಕಾಡುತ್ತದೆ. ವಿಜಯನಗರದ ಕಡೆ ಬಂದಾಗ ವಿಷಾದವೂ ಬಾಧಿಸುತ್ತದೆ. ಈ ಕೃತಿ ನನ್ನನೆಷ್ಟು ಬಾಧಿಸಿತೆಂದರೆ ಮೂರನೇ ಸಲ ಓದಿಸುವಷ್ಟು. ಕಥಾಗತದಲ್ಲಿ ತಥಾಗತನೂ ಹಾಸುಹೊಕ್ಕಾಗಿ ಬಂದು ಬುದ್ಧಿಗೆ ಚುರುಕನ್ನು ಮುಟ್ಟಿಸುತ್ತಾನೆ. ನವೀನ್ ಭಟ್ಟ(ಗಂಗೋತ್ರಿ)ಯವರಿಂದ ಇಂಥಹದ್ದೇ ಇನ್ನೂ ಹೆಚ್ಚಿನ ಕೃತಿಗಳು ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿರುವೆ. ಸಮುದ್ರಗುಪ್ತನನ್ನು ತಡಕಾಡಿದರೆ ನಮ್ಮ ಭಾಗ್ಯವದು.

- ಸದ್ಯೋಜಾತ ಭಟ್ಟ

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...