Date: 11-01-2021
Location: ಬೆಂಗಳೂರು
ಬದುಕಿನಲ್ಲಿ ಅನೇಕ ಏಳು-ಬೀಳು, ವ್ಯಥೆಗಳನ್ನು ಕಂಡರೂ ಅವುಗಳನ್ನು ‘ಗಿರಿಜಾ ಪರಸಂಗ’ ಕೃತಿಯಲ್ಲಿ ದಾಖಲಿಸಿಲ್ಲ. ಅದು ಲೇಖಕಿ ಹಾಗೂ ಕಲಾವಿದೆ ಗಿರಿಜಾ ಲೋಕೇಶ್ ಅವರ ಹೆಗ್ಗಳಿಕೆ ಎಂದು ಸಾಹಿತಿ ವಿಜಯಮ್ಮ ಅಭಿಪ್ರಾಯಪಟ್ಟರು.
ಕಲಾವಿದೆ ಗಿರಿಜಾ ಲೋಕೇಶ್ ಅವರು ಬದುಕಿನಲ್ಲಿ ಹೇಳಿಕೊಳ್ಳುವಷ್ಟು ಸುಖಿಯಾಗಿರಲಿಲ್ಲ. ಆದರೆ, ದುಃಖಕ್ಕೆ ಮರುಗಲಿಲ್ಲ. ನೋವುಗಳನ್ನು ಸಮರ್ಥವಾಗಿ ಸವಾಲುಗಳನ್ನು ಎದುರಿಸುವ ಸಂದೇಶವೇ ಅವರ ಆತ್ಮಕಥೆ ‘ಗಿರಿಜಾ ಪರಸಂಗ’ದಲ್ಲಿದೆ. ಎಂದು ಪ್ರಶಂಸಿಸಿದರು.
ಬೆಂಗಳೂರಿನ ಸುಚಿತ್ರಾ ಫಿಲ್ಮ ಸೊಸೈಟಿಯಲ್ಲಿ ಆಯೋಜಿಸಿದ್ದ ಕಲಾವಿದೆ ಗಿರಿಜಾ ಲೋಕೇಶ್ ಅವರ ಆತ್ಮಕಥೆ ‘ಗಿರಿಜಾ ಪರಸಂಗ’ ಕೃತಿ ಲೋಕಾರ್ಪಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಕಲಾವಿದ, ಚಲನಚಿತ್ರ ನಟ ಲೋಕೇಶ್ ಅವರು ಮೌಢ್ಯ ಆಚರಣೆಗಳ ವಿರೋಧಿಗಳು. ಅವರ ಕನ್ನಡದ ಮಾತು ‘ಶೋಕಿ’ ಆಗಿರಲಿಲ್ಲ. ನೈಜ ಕನ್ನಡಾಭಿಮಾನಿಗಳಾಗಿದ್ದರು. ತೆಲುಗು-ತಮಿಳು ಭಾಷೆಯ ಅನೇಕ ನೃತ್ಯಗೀತೆಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದು, ತಮ್ಮ ಮಗಳು ಪೂಜಾ ಲೋಕೇಶ್ ಅವರ ನೃತ್ಯ ಕನ್ನಡದ್ದೇ ಆಗಿರಬೇಕು ಎಂಬ ಅಭಿಮಾನ ಅವರಲ್ಲಿತ್ತು ಎಂದು ಹೇಳಿದರು.
ಗಿರಿಜಾ ಲೋಕೇಶ್ ಸಹ ನೋವುಂಡ ಕಲಾವಿದೆ. ತಮ್ಮ ನಲಿವುಗಳನ್ನಷ್ಟೇ ಅವರು ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ದುಃಖಗಳಿದ್ದರೂ ಅವುಗಳಿಗೆ ಪ್ರಾಮುಖ್ಯತೆ ನೀಡಿಲ್ಲದೇ ಇರುವುದು ಅವರ ಹೆಗ್ಗಳಿಕೆ ಎಂದು ಅಭಿಪ್ರಾಯಪಟ್ಟರು.
ಪ್ಲೆಟೊನಿಕ್ ಪ್ರೀತಿ: ಚಲನಚಿತ್ರ ನಿರ್ದೇಶಕ ಲಕ್ಷ್ಮೀನಾರಾಯಣ್ ಅವರು ನಟಿ ಕಲ್ಪನಾ ಅವರನ್ನು ಇಷ್ಟಪಡುತ್ತಿದ್ದರು ಎಂಬ ಗಾಸಿಫ್ ಇದೆ. ಆದರೆ, ಅವರು ಗಿರಿಜಾ ಹಾಗೂ ಪ್ರಮೀಳಾ ಜೋಯಿಷ್ ಅವರನ್ನು ಇಷ್ಟಪಡುತ್ತಿದ್ದರು. ಆದರೆ, ಅವರು ಎಂದಿಗೂ ಈ ಕುರಿತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿಲ್ಲ. ಅದು ಒಂದು ರೀತಿಯಲ್ಲಿ ಪ್ಲೆಟೊನಿಕ್ ಪ್ರೀತಿ ಎಂದು ಬಣ್ಣಿಸಿದರು.
ಆರ್ಥಿಕ ಮುಗ್ಗಟ್ಟಿಗಾಗಿ ಬಣ್ಣ ಹಚ್ಚಿದೆ: ನಟಿ ಹಾಗೂ ಲೇಖಕಿ ಗಿರಿಜಾ ಲೋಕೇಶ್ ಮಾತನಾಡಿ ‘ಕುಟುಂಬದಲ್ಲಿ ಆರ್ಥಿಕ ಮುಗ್ಗಟ್ಟಿತ್ತು. ಅದರ ನಿವಾರಣೆಗಾಗಿ ಬಣ್ಣ ಹಚ್ಚಿದೆ. ಅನೇಕ ಕಡೆ ನಾಟಕದವರೆಂದರೆ ಕೀಳಾಗಿ ಕಾಣುತ್ತಿದ್ದರು. ಆದರೆ, ಉತ್ತರ ಕರ್ನಾಟಕ ಜನತೆ ನಮ್ಮ ಕಲೆಯನ್ನು ಗೌರವಿಸಿದರು. ಹಾಗೆ ಬಂದ ಸವಾಲುಗಳಿಗೆ, ಕಷ್ಟಗಳಿಗೆ ಮರುಗದೆ, ಸಂಕಟ ಪಡದೇ ಸಂತಸದಿಂದಲೇ ಸ್ವೀಕರಿಸಿದೆ. ಲೋಕೇಶ್ ಅವರೊಂದಿಗಿನ ಸಂಸಾರಿಕ ಬದುಕು ಸರಾಗವಾಗೇ ಇತ್ತು ಎಂದು ತಾವು ಬಣ್ಣದ ಬದುಕಿನೊಂದಿಗೆ ಸವೆಸಿದ ದಾರಿಯನ್ನು ಸ್ಮರಿಸಿದರು.
ಪತ್ರಕರ್ತ ಜೋಗಿ ಮಾತನಾಡಿ ‘ವ್ಯಕ್ತಿ ಸಂಕದಲ್ಲಿದ್ದೇನೆಂದು ಹೇಳುವಾಗ ಅಂತರಂಗದಲ್ಲಿ ಸಂತೋಷದ ಚಿಲುಮೆ ಇರಬಹುದು. ಹಾಗೆ ಸುಖದಿಂದ ಇದ್ದೇನೆ ಎನ್ನುವಾಗ ಮನವು ದುಃಖದಿಂದ ನರಳುತ್ತಿರವ ಎರಡೂ ಸಾಧ್ಯತೆಗಳಿವೆ. ಗಿರಿಜಾ ಲೋಕೇಶ್ ಅವರು ತಮ್ಮ ‘ಗಿರಿಜಾ ಪರಸಂಗ’ದಲ್ಲಿ ಕಣ್ಣದುಂಬಿ ಒಂದು ಹನಿಯೂ ಜಾರದಂತೆ ದಾಖಲಿಸಿದ್ದಾರೆ. ಚಿಕ್ಕ ಚಿಕ್ಕ ಘಟನೆಗಳನ್ನು ಮಲ್ಲಿಗೆ ಹೂವಿಂದ ಕಟ್ಟಿದಂತೆ ಈ ಕೃತಿಯು ಓದಿಗೆ ಉತ್ತಮ ಪ್ರೇರಣೆ ನೀಡುತ್ತದೆ’ ಎಂದರು.
‘ಮನೆಯೆ ವಿಶ್ವವಾಗುವ ಅಪೂರ್ವವಾದ ಕುಟುಂಬ ಲೋಕೇಶ್ ಅವರದ್ದು, ಹಗಲಿನಲ್ಲಿ ಬಡವಿಯ ಪಾತ್ರದಲ್ಲಿ, ರಾತ್ರಿಯಲ್ಲಿ ರಾಜಕುಮಾರಿಯ ಬಣ್ಣ ಹಚ್ಚುತ್ತಿದ್ದವರು ಗಿರಿಜಾ ಲೋಕೇಶ್ ಎಂದು ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ನಟಿ ಜಯಮಾಲಾ, ಗಿರಿಜಾ ಲೋಕೇಶ್ ರ ಪುತ್ರ ಸೃಜನ್ ಲೋಕೇಶ್, ಕವಿ ಎಚ್. ಎಸ್. ವೆಂಕಟೇಶಮೂರ್ತಿ, ಮುಖ್ಯಮಂತ್ರಿ ಚಂದ್ರು, ನಟರಾದ ಅಶೋಕ್, ಸುದೀಪ್, ನಟಿ ಪ್ರಿಯಾಂಕ ಉಪೇಂದ್ರ, ಅಪರ್ಣ ವಸ್ತಾರೆ ಸೇರಿದಂತೆ ತಾರಾ ಬಳಗ ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...
ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...
©2024 Book Brahma Private Limited.