ಎಂದೆಂದಿಗೂ ಶಿವಾಪುರ, ಎಂದೆಂದಿಗೂ ಕಂಬಾರ!


ಹಿರಿಯ ಸಾಹಿತಿ, ಪದ್ಮಭೂಷಣ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರ ಹೊಸ ಕವನ ಸಂಕಲನ ಎಂದೆಂದಿಗೂ ಶಿವಾಪುರ . ಅಂಕಿತ ಪುಸ್ತಕ ಪ್ರಕಾಶನದ ಈ ಕೃತಿಗೆ ಲೇಖಕಿ, ಅನುವಾದಕಿ ಕೃಷ್ಣಾ ಮನವಳ್ಳಿ ಅವರು ಬರೆದ ಮೊದಲ ಮಾತು ಇಲ್ಲಿದೆ.

ಈ ದಿನ ನಾನು ಕೇಳಿದ ಬಹಳ ಸಂತೋಷದ ಸುದ್ದಿ–ಕಂಬಾರರಿಗೆ ಉನ್ನತ ರಾಷ್ಟ್ರಗೌರವವಾದ ‘ಪದ್ಮಭೂಷಣ’ ಪ್ರಶಸ್ತಿ ದೊರೆತಿರುವುದು. ಅವರ ಹೊಸ ಕವನ ಸಂಕಲನ ‘ಎಂದೆಂದಿಗೂ ಶಿವಾಪುರ’ಕ್ಕೆ ನಾನು ಮೊದಲ ಮಾತು ಬರೆಯಲು ಹೊರಟಾಗ ಈ ಸುದ್ದಿ ಕೇಳಿದೆ. ಇದಕ್ಕಿಂತ ಸುಸಮಯ ಯಾವುದಿದ್ದೀತು? ಎಂದೆಂದಿಗೂ ಶಿವಾಪುರ, ಎಂದೆಂದಿಗೂ ಕಂಬಾರ!

ಈ ಕವನ ಸಂಕಲನ ಕಂಬಾರರ ಇಡೀ ಬರಹ ಸಮಗ್ರಕ್ಕೆ, ಅದರಲ್ಲಡಗಿರುವ ಅದಮ್ಯ ಸೃಷ್ಟಿಚೇತನ, ಅದರ ನವಿರಾದ ಪದರಗಳು, ಮತ್ತದರ ಹಿಂದಿನ ಅಗಾಧ ಚೆಲುವಿನ ರಹಸ್ಯಕ್ಕೆ ಬೆಳಕು ಚೆಲ್ಲುವಂತಹದ್ದು, ಕಂಬಾರರ ಬರವಣಿಗೆಯ ಸತ್ಯ – ಜಾನಪದದ ಲಯ, ಭಾಷೆಯ ಸೊಗಡು ಹಾಗೂ ಒಂದು ಇಡೀ ಸಮುದಾಯದ ಅರಿವನ್ನು ಎತ್ತಿ ಹಿಡಿಯುವ ರೀತಿ ಇವುಗಳಲ್ಲಡಗಿದೆ.

ಕಂಬಾರರ ಬರವಣಿಗೆಯನ್ನು ಹತ್ತಿರದಿಂದ ಕಂಡು, ಅದರ ಆಳವಾದ ನೋಟಗಳು, ಜನಪರ ಮೌಲ್ಯಗಳನ್ನು ಮೆಚ್ಚುವ ಓದುಗಳು ನಾನು. ಅವರ ಮೊದಲ ಕೃತಿ ‘ಹೇಳತೇನ ಕೇಳ’ದಿಂದ ಶುರುವಾಗಿ ಈತನಕದ ಬರಹಗಳ ಎಷ್ಟೋ ಮಜಲುಗಳು ಹಾಗೂ ಆಯಾಮಗಳನ್ನು ಒಳಗೂಡಿಕೊಂಡು ಹುಟ್ಟಿರುವ ಸಂಕಲನ ‘ಎಂದೆಂದಿಗೂ ಶಿವಾಪುರ’. ಇಲ್ಲಿ ಮಿಥ್ ಹಾಗೂ ಒಂದು ಸಮಷ್ಟಿ ಅಥವಾ ಜನಾಂಗದ ನೆನಪುಗಳು ಮತ್ತು ಪ್ರಜ್ಞೆಯ ಮೂಲಕ ಬದುಕನ್ನು ರೂಪಿಸುವ ಪಾಠ ಇದೆ.

ಆದರೆ, ಕಂಬಾರರ ವೈಶಿಷ್ಟ್ಯಈ ಜಾನಪದ ನೆಲೆಯಿಂದಲೇ ನಮ್ಮ ಈಗಿನ ಸಮಕಾಲೀನ ಪ್ರಪಂಚದ ತಲ್ಲಣಗಳಿಗೆ ಸ್ಪಂದಿಸುವುದು. ಅವರ ಬರಹ ರಾಷ್ಟ್ರೀಯ ಹಾಗೂ ಗ್ಲೋಬಲ್ ಸಂದರ್ಭಗಳನ್ನೂ ಒಳಗೂಡಿಸಿಕೊಳ್ಳುತ್ತದೆ. ನವವಸಾಹತುಶಾಹಿ ದುಃಸ್ವಪ್ನ ಗಳನ್ನು ಕಂಡು, ಅದರಾಚೆಗಿನದೇನನ್ನೋ ಒಡನುಡಿಯುವ ಶಿವಾಪುರ ಒಂದು microcosm ! ಇಲ್ಲಿ ಮನುಷ್ಯರು – ದೇವರುಗಳು ಎಲ್ಲಾ ಬದಿಬದಿಯಲ್ಲಿ ಕಾಣಸಿಗುತ್ತಾರೆ.

ಕಾಲಪ್ರವಾಹ ಹರಿಯುತ್ತಿರುವಂತೆ, ಹೊಸ ತಿರುವುಗಳು, ಹೊರಗಿನ ಬದಲಾವಣೆಗಳು ಎಲ್ಲವನ್ನೂ ಹೊತ್ತು ಸಾಗುವ ಪುಟ್ಟ ಜಗತ್ತು ಈ ಶಿವಾಪುರ. ನಮ್ಮ Thirdworld ನ ‘ಪುಟ್ಟ ಜಗತ್ತು’ (ಆಂಟಿಗ – ಅಮೇರಿಕಾದ ಪ್ರಸಿದ್ಧ ಬರಹಗಾರ್ತಿ ಜಮೈಕಾ ಕಿನಾ ಕೇಡ್ ಬಳಸುವ ಸಾದಾ ‘ಪುಟ್ಟ ಜಾಗ’) ಈ ಶಿವಾಪುರ. ನವವಸಾಹತುಶಾಹಿ, ನಗರೀಕೃತ ಹಾಗೂ ಹೊರದೇಶಗಳಿಂದ ಬಂದ ವಿಧ್ವಂಸಕ ಶಕ್ತಿಗಳ ಆಕ್ರಮಣಕ್ಕೆ ತುತ್ತಾಗುವ ಸನ್ನಿವೇಶ ಕೂಡ ಇಲ್ಲಿ ಕಾಣಬರುತ್ತದೆ.

ಹೀಗೆ, ಕಂಬಾರರು ವಿವಿಧ ಸ್ತರಗಳ, ವಿಭಿನ್ನ ಸಂದರ್ಭಗಳ ಹಿನ್ನೆಲೆಯಲ್ಲಿ ಶಿವಾಪುರವನ್ನು ರೂಪಿಸುತ್ತಾರೆ. ಬದಲಾವಣೆಯನ್ನೂ ‘ಒಡಲುಗೊಳ್ಳುವ’ ಶಿವಾಪುರ ಕೊನೆಗೆ ಅದೇ ಮೂಲ ನೆಲೆಯಾಗಿ, ಸೃಷ್ಟಿಯ ಸೆಲೆಯಾಗಿ ನಿಲ್ಲುತ್ತದೆ. ಮಿಥ್ ಕಥನದಲ್ಲಿ ಶಿವಾಪುರ ದೇವರಲೋಕದಿಂದ ಹುಟ್ಟಿದ್ದು. ಹಲವಾರು ಬಾರಿ ಕಂಬಾರರು ‘ಇತಿಹಾಸದ ಕಾಲ’ (historical time) ಅನ್ನುವ ಕಲ್ಪನೆ ಬ್ರಿಟಿಷರಿಂದ ನಮಗೆ ಬಂದದ್ದು ಎಂದೂ ಪ್ರಸ್ತಾಪಿಸಿದ್ದಾರೆ. ಇತಿಹಾಸದ ಕಲ್ಪನೆ ಹಾಗೂ ಪ್ರಜ್ಞೆ ಐರೋಪ್ಯ ನೆಲೆಯದು.

ಕ್ರೌರ್ಯ, ಹಿಂಸೆ, ಮನುಷ್ಯ-ಮನುಷ್ಯನ ನಡುವಿನ ಸೆಣೆಸಾಟಗಳು, ದಬ್ಬಾಳಿಕೆ, ನಿಸರ್ಗ ಹಾಗೂ ಹೆಣ್ಣಿನ ಮೇಲಿನ ದೌರ್ಜನ್ಯಗಳು ಇವೆಲ್ಲಾ ಈ patriarchal ಎನ್ನಬಹುದಾದ ಕಾಲಪ್ರಜ್ಞೆ – ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವಂತಹವು. ಆದರೆ ಕಂಬಾರರು ಪ್ರೀತಿ, ಬಾಂಧವ್ಯ, ಸಾಮಾಜಿಕ ಸಂಬಂಧಗಳು, ಒಂದಾಗಿ ಒಟ್ಟಾಗಿ ಬಾಳುವ ಮನೋಭಾವಗಳನ್ನು ಮಿಥ್ ದರ್ಶನದಲ್ಲಿ ಕಾಣುತ್ತಾರೆ.

ಮಿಥ್ ಇನ್ನೂ ಪ್ರಸ್ತುತ

ಈ ಮಿಥ್ ದೃಷ್ಟಿಯಲ್ಲಿ ಕಾಣುವ ಶಿವಾಪುರಕ್ಕೆ ಹೊರಪ್ರಪಂಚದ ಅರಿವೂ, ಶಕ್ತಿಗಳನ್ನು ಮೀರಿ ತಾನೇ ಪುನಃಶ್ಚೇತನ ಪಡೆದುಕೊಳ್ಳುವಂತಹ ಸಾಮರ್ಥ್ಯವೂ ಇದೆ. ಹೀಗಾಗಿ ಕಂಬಾರರಿಗೆ ಬದುಕು ಪ್ರಪಂಚದ ದರ್ಶನ ಮಾಡಿಸುವ ಚೇತನದ ತಾಣವಾಗುತ್ತದೆ. ಪಂಡಿತ ರಾಜೀವ ತಾರಾನಾಥರು ಹೇಳುವಂತೆ ‘ಈ ದೇಶದಲ್ಲಿ ಮಿಥ್ ಇನ್ನೂ ಪ್ರಸ್ರುತ, ಸಹಜ ಹಾಗೂ ವಾಸ್ತವ, ಇದರಿಂದಲೇ ಕಂಬಾರರು ಭಾರತೀಯ ಸಾಹಿತ್ಯದಲ್ಲಿ ಇಂದಿಗೂ ಪ್ರಮುಖವಾಗುತ್ತಾರೆ.’

ನನ್ನ ಜೊತೆ ಕಂಬಾರರು ನಡೆಸಿದ ಸಂದರ್ಶನದಲ್ಲಿ ಹೀಗೆನ್ನುತ್ತಾರೆ : ‘ನಾನು ಬೆಳೆದು ಬಂದ ಜಾನಪದ ಸಮುದಾಯಗಳಲ್ಲಿನ ಮಿಥ್‌ಗಳು, ಕಥನಗಳು, ಕತೆಗಳು, ಜನ ಮತ್ತು ಬದುಕಿನ ಶೈಲಿ – ಇವೆಲ್ಲಾ ನನಗೆ ಆ ಜಾಗ, ಆ ನೆಲ, ಆ ನೆಲೆಗಳೊಡನೆ ಹತ್ತಿರತನ ತಂದುಕೊಟ್ಟಿವೆ. ಹಾಗೆಂದ ಮಾತ್ರಕ್ಕೆ , ನನ್ನ ಬರವಣಿಗೆಯಲ್ಲಿನ ಶಿವಾಪುರ ಹೊರ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಬೆಳವಣಿಗೆಗಳಿಂದ ಹೊರತಾಗಿದೆ ಎಂದಲ್ಲ. ನನ್ನ ಶಿವಾಪುರಕ್ಕೆ ಈ ಎಲ್ಲಾ ವಿದ್ಯಮಾನಗಳ ಅರಿವಿದೆ. ಅವುಗಳನ್ನು ಒಳಗೊಂಡು, ತನ್ನದೇ ಆದ, ನಿರಂತರವಾದ ಬದುಕು-ಬಾಂಧವ್ಯಗಳನ್ನು ಉಳಿಸಿಕೊಳ್ಳುವಂಥದ್ದು ಶಿವಾಪುರ. ಈ ಶಿವಾಪುರ ಇಡೀ ಪ್ರಪಂಚವನ್ನು ನನಗೆ ತೋರುವ ಕನ್ನಡಿ.’ ಕಂಬಾರರ ಈ ಸಂಕಲನ ಅವರ ಬರವಣಿಗೆಯ ಔನ್ನತ್ಯದ ತುದಿಯಲ್ಲಿದ್ದು,

ಅವರ ಎಂಭತ್ತೈದು ವರ್ಷಗಳ ಪಕ್ವತೆ ಹಾಗೂ ತುಂಬು ಜೀವನವನ್ನು ಬಿಂಬಿಸುವ ಕೃತಿ.

ಕನ್ನಡಕ್ಕೆ ಇದು ಅಪರೂಪದ ಕೊಡುಗೆ. ಇಲ್ಲಿನ ಪದ್ಯಗಳು ವೈಯಕ್ತಿಕ, ಸಾಮಾಜಿಕ ಹಾಗೂ ರಾಜಕೀಯ ಸ್ತರಗಳನ್ನು ಪ್ರತಿಬಿಂಬಿಸುತ್ತವೆ. ಇವುಗಳಲ್ಲಿ ಕಾಣುವ ಮೌಲ್ಯಗಳು, ಅನುಭವ, ಜಾನಪದದ ಸಮೃದ್ಧ ಜೀವನದರ್ಶನ ಅದ್ಭುತವಾದದ್ದು, ಈ ಭಾಷೆ, ಈ ಮಿಥ್ ದರ್ಶನ ಅನುವಾದಕರಿಗೆ ಸವಾಲಾಗುವಂತಹವು. ನಾನೀಗ ಈ ಸಂಕಲನವನ್ನು ಅನುವಾದಿಸಲು ಎದುರು ನೋಡುತ್ತಿದ್ದೇನೆ.

ಎಂದೆಂದಿಗೂ ಶಿವಾಪುರ ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...