Date: 04-11-2019
Location: ವಾಡಿಯ ಸಭಾಂಗಣ
ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಐದು ಕೃತಿಗಳು ಲೋಕಾರ್ಪಣೆಗೊಂಡಿವೆ. ರಘುನಾಥ ಚ.ಹ ಅವರ 'ಬೆಳ್ಳಿತೊರೆ', ಸಂತೋಷ್ ಕುಮಾರ್ ಮೆಹೆಂದಳೆ ಅವರ 'ಎಂಟೆಬೆ', ಸೇರಿದಂತೆ 'ಬಸವರಾಜ ವಿಲಾಸ', 'ಅಬ್ರಾಹ್ಮಣ', 'ಇತಿಹಾಸದ ಮೊಗಸಾಲೆಯಲ್ಲಿ’ ಕೃತಿಗಳನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು “ಜನಪ್ರಿಯ ಕೃತಿ, ಕಾದಂಬರಿ ಹಾಗೂ ಸಿನಿಮಾ ಬಗ್ಗೆ ತಿರಸ್ಕಾರ, ಪೂರ್ವಾಗ್ರಹ ಪೀಡಿತ ಮನಸ್ಥಿತಿ ತಾಳದೆ ಪ್ರೀತಿಯಿಂದ ಒಪ್ಪಿಕೊಳ್ಳುವ ಪ್ರವೃತ್ತಿ ರೂಢಿಸಿಕೊಳ್ಳುವುದು ಅತ್ಯವಶ್ಯಕ ಎಂದರು. ಲೇಖನಗಳು, ಕಾದಂಬರಿಗಳು ಇಂದು ಓದುಗರಿಂದ ತಿರಸ್ಕರಿಸಲ್ಪಟ್ಟಿದೆ. ಇದೊಂದು ವಿಪರ್ಯಾಸ, ಯಾವುದೇ ಲೇಖನ, ಕಾದಂಬರಿಗಳನ್ನು ಸತತವಾಗಿ ಅಧ್ಯಯನ ಮಾಡಿ ವಿಮರ್ಶೆ ಮಾಡಿದ ನಂತರ ಆ ಕೃತಿಯ ಬಗ್ಗೆ ಮಾತನಾಡುವುದು ಒಳ್ಳೆಯದು. ಪೂರ್ವಾಗ್ರಹಪೀಡಿತ, ತಿರಸ್ಕಾರ ಮನೋಭಾವವೇ ಹೆಚ್ಚಾಗಿರುವ ಇಂದಿನ ದಿನಮಾನಗಳಲ್ಲಿ ಪ್ರೀತಿಯಿಂದ ಒಪ್ಪಿ ಅಪ್ಪಿಕೊಳ್ಳುವ ಸಂಸ್ಕೃತಿ ಕಾಣದಾಗಿದೆ. ಹಾಗಾಗಿ ಕನ್ನಡ ಸಾಹಿತ್ಯ, ಸಿನಿಮಾ ಸೇರಿದಂತೆ ಅನೇಕ ಕಲೆಗಳು ನಶಿಸುವ ಹಂತಕ್ಕೆ ತಲುಪಿವೆ” ಎಂದು ವಿಷಾದ ವ್ಯಕ್ತಪಡಿಸಿದರು. “ಕೃತಿಗಳು, ಸಿನಿಮಾ, ಧಾರವಾಹಿಗಳು ಜನರ ಮನಸ್ಸು ಹಾಗೂ ಹೃದಯಕ್ಕೆ ತಟ್ಟುವಂತಹ ಅಂಶಗಳನ್ನು ಹೊಂದಿರಬೇಕು. ಸಾಮಾಜಿಕ, ಆರ್ಥಿಕ, ಐತಿಹಾಸಿಕ ಹಾಗೂ ಈ ಸಮಸ್ಯೆಗಳ ಹೂರಣವನ್ನು ಬಿಂಬಿಸುವ ಚಿತ್ರಗಳು ಸಹಜವಾಗಿ ಜನಪ್ರಿಯತೆ ಗಳಿಸುತ್ತವೆ” ಎಂದರು.
ಖ್ಯಾತ ಲೇಖಕ ಜೋಗಿಯವರು ಮಾತನಾಡಿ “ಸಣ್ಣ ಕತೆಗಳ ಒಟ್ಟು ಸ್ವರೂಪವು ಓದುಗನ ಸಂವೇದನೆಯನ್ನು ಅನಾವಣಗೊಳಿಸುವಂತಿರಬೇಕು. ಇಂದು ಸಣ್ಣಕತೆಗಳ ಸ್ಥಾನವನ್ನು ಅಮೇಜಾನ್ ಪ್ರೈಂ, ನೆಟ್ಪ್ಲಿಕ್ಸ್ನ ಎಪಿಸೋಡ್, ಸಿನಿಮಾಗಳು ಆಕ್ರಮಿಸಿಕೊಂಡಿವೆ. ಓದುವ ಕಷ್ಟವನ್ನು ಕೊಡದ ಸಣ್ಣ ಸಿನೆಮಾಗಳು ಬಹಳ ಬೇಗ ಆಕರ್ಷಿತವಾಗುತ್ತಾ ಸಾಹಿತ್ಯ ಪ್ರಕಾರದ ಓದಗರಿಗೆ ಅಡ್ಡಿಯಾಗಿದೆ. ನೋಡುವುದರ ಕಲ್ಪನೆಗಿಂತ ಓದಿನ ಕಲ್ಪನೆ ವಿಸ್ತಾರವಾದದ್ದು” ಎಂದು ಅಭಿಪ್ರಾಯಪಟ್ಟರು. “ಅಂತರ್ಗತವಾದ ಅನುಭಾವ, ವಿಚಾರಗಳನ್ನು ಹೇಳಲು ಸಾಹಿತ್ಯದಿಂದ ಮಾತ್ರ ಸಾಧ್ಯವಿದ್ದು ಸಿನೆಮಾಗಳಿಂದ ಸಾಧ್ಯವಿಲ್ಲ” ಎಂದರು ಲೇಖಕ ವಿಕಾಸ್ ನೇಗಿಲೋಣಿ. ಕಾರ್ಯಕ್ರಮದಲ್ಲಿ ಲೇಖಕರಾದ ಚ. ಹ. ರಘುನಾಥ, ಸಂತೋಷ್ ಕುಮಾರ್ ಮೆಹೆಂದಳೆ, ಪುಟ್ಟಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.