ಗಾಂಧಾರಿಯ ಭಾವ ಸಂಘರ್ಷ ’ಮಿಂಚದ ಮಿಂಚು’


ಪಾಂಡವ ಪಂಚಕರಿಂದ ಕೌರವಾದಿಗಳ ಹನನದ ಪಶ್ಚಾತ್ ಕಂಪನವೇ "ಗಾಂಧಾರಿ ಶಾಪ" ಎಂಬ ಪ್ರಸಂಗ. ಕೃಷ್ಣಾವಾತಾರದ ಪರಿಸಮಾಪ್ತಿಗೆ ಗಾಂಧಾರಿಯ ಶಾಪವೇ ಹೇತುವಾಯಿತು ಎಂಬ ಮಾತಿದೆ.  ಈ ಕಥೆಯ ಎಳೆಯನ್ನೇ ತಿರುಳಾಗಿಸಿಕೊಂಡು ರೂಪುಗೊಂಡದ್ದು "ಮಿಂಚದ ಮಿಂಚು" ಎಂಬ ಮಿನಿ ಕಾದಂಬರಿ ಎನ್ನುತ್ತಾರೆ ಚಿಂತಕರು ಡಾ.ಜಗದೀಶ್ ಶೆಟ್ಟಿ ಅವರು ದಿವ್ಯಾ ಶ್ರೀಧರ್ ರಾವ್ ಅವರ ‘ಮಿಂಚದ ಮಿಂಚು’ ಎಂಬ ಹೊಸ ಕಿರು ಕಾದಂಬರಿಯಲ್ಲಿ ಬರೆದ ಮುನ್ನುಡಿ ಹಾಗೂ ಇಟಗಿ ಮಹಾಬಲೇಶ್ವರ ಭಟ್ ಅವರ ಬೆನ್ನುಡಿಯ ಮಾತುಗಳು ಕೃತಿ ಬಿಡುಗಡೆಗೂ ಮುನ್ನ..

ಮುನ್ನುಡಿ
ದಿವ್ಯಾ ಶ್ರೀಧರ್ ರಾವ್ ಸದಾ ಕ್ರಿಯಾಶೀಲರಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತಮ್ಮನ್ನು  ತೊಡಗಿಸಿಕೊಂಡವರು. ಮದುವೆಯಾದ ನಂತರ ಸಂಸಾರ ನಿರ್ವಹಣೆ, ವೃತ್ತಿ ಮತ್ತು ಇನ್ನಿತರ ಕಾರಣಗಳಿಂದ ಸಮಾಜದ ಸೂಕ್ಷ್ಮಗಳಿಗೆ ಮಹಿಳೆಯರು ಸ್ಪಂದಿಸುವುದು ಬಲು ಅಪರೂಪ. ಆದರೆ ಈ ಎಲ್ಲ ಅಡೆತಡೆ- ಪ್ರತಿಕೂಲ ಸನ್ನಿವೇಶಗಳನ್ನು ಮೀರಿ ಸ್ತ್ರೀ ಸಂವೇದನೆಯನ್ನು ಅಳವಡಿಸಿಕೊಂಡು ಅನುದಿನವು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯನ್ನು ಮಾಡುತ್ತಿರುವ ಬೆರಳೆಣಿಕೆಯ ಸಾಹಿತಿಗಳಲ್ಲಿ ದಿವ್ಯಾ ಶ್ರೀಧರ್ ರಾವ್ ರವರು ಒಬ್ಬರು. 

ಸುಸಂಸ್ಕೃತ ಕೌಟುಂಬಿಕ ಮತ್ತು ಶಿಕ್ಷಣದ ಹಿನ್ನೆಲೆಯು ಇವರ ಸಾಹಿತ್ಯ ಯಾನದ ಆದಿ ಮೆಟ್ಟಿಲುಗಳು. ಕಾಲೇಜು ಶಿಕ್ಷಣ ಮುಗಿದ ನಂತರ ಬದುಕಿನಲ್ಲಿ ಆಗಾಗ ಬಂದ ಅನಿರೀಕ್ಷಿತ ಮತ್ತು ಪ್ರತಿಕೂಲ ಸನ್ನಿವೇಶಗಳನ್ನು ಮೀರಿ ನಿಂತು ದಿಟ್ಟ ಮಹಿಳೆಯಾಗಿ  ಕಳೆದ ಒಂದು ದಶಕದಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ದಿವ್ಯಾ ಮಾಡಿರುವ ಸಾಧನೆಯನ್ನು ಕಂಡು ನಾವೆಲ್ಲ ಆಶ್ಚರ್ಯ ಚಕಿತರಾಗಿದ್ದೇವೆ, ಜೊತೆಗೆ ನಮ್ಮ ಪಕ್ಕದೂರಿನ ಹೆಣ್ಣುಮಗಳೊಬ್ಬಳು ಸಾಹಿತ್ಯಾಸಕ್ತರು ಗಮನವಿಟ್ಟು ಓದುವ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ ಎಂಬ ವಿಷಯಕವಾಗಿ ಹೆಮ್ಮೆ ಪಟ್ಟಿದ್ದೇವೆ.

ಆರಂಭದಲ್ಲಿ ನಾಡಿನ ಗಂಡುಕಲೆ ಎಂದು ಪರಿಗಣಿತವಾದ ಯಕ್ಷಗಾನದಲ್ಲಿ ತೀರಾ ಅಪರೂಪವೆಂಬಂತೆ ಹೆಣ್ಣು ಮಗಳಾಗಿ "ಕರ್ಣ ವೃಷಾಲಿ" ಎಂಬ ಪ್ರಸಂಗ ರಚಿಸಿದ ಹಿರಿಮೆ ದಿವ್ಯಾರವರದ್ದು. ಬಾಹ್ಯ ಪ್ರಭಾವಗಳಿಂದ ಆಧಾರಿತವಾದ ಸಾಮಾಜಿಕ ಪ್ರಸಂಗಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಇಂತಹ ವಿಲಕ್ಷಣ ಅನುಕರಣೆಯ ಭರಾಟೆಯ ನಡುವೆ ಪುರಾಣ ಸಾಹಿತ್ಯದಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಂಡು, ಅದಕ್ಕೆ ನವರೂಪ ವಿಚಾರಧಾರೆಗಳನ್ನು ಪೋಣಿಸಿಕೊಂಡು ವಿಭಿನ್ನ ರೀತಿಯಲ್ಲಿ ಪ್ರಸಂಗವನ್ನು ಬರೆದ ಹಿರಿಮೆ ದಿವ್ಯಾ ಶ್ರೀಧರ್ ರಾವ್ ಅವರಿಗೆ ಸಲ್ಲುತ್ತದೆ. ತದನಂತರ ಅವರು ಬರೆದ "ಆ ನೀಲಿ ಕಂಗಳ ಹುಡುಗಿ" ಎನ್ನುವ ಪುಸ್ತಕ ಸಾಹಿತ್ಯ ವಲಯದಲ್ಲಿ ವ್ಯಾಪಕ ಪ್ರಶಂಸೆ ಮತ್ತು ಪುರಸ್ಕಾರಗಳಿಗೆ ಪಾತ್ರವಾಗಿತ್ತು. ವೇಶ್ಯೆಯೊಬ್ಬಳ ಜೀವನ ಚರಿತ್ರೆಯನ್ನು ಕಥಾವಸ್ತುವಾಗಿ ಅವರು ಬರೆದ ಇನ್ನೊಂದು ಕೃತಿ "ಮೌನ ಧ್ವನಿಸಿತು" ಎಂಬುದು ಅವರ ಸಾಹಿತ್ಯ ಕ್ಷೇತ್ರದ ಇನ್ನೊಂದು ಮೈಲುಗಲ್ಲು. 

ಇನ್ನೂ ಪ್ರಸ್ತುತ ಈ ಕಾದಂಬರಿಯ ಕುರಿತಂತೆ ಹೇಳುವುದಿದ್ದರೇ, ದಿವ್ಯಾರವರು "ಮಿಂಚದ ಮಿಂಚು" ಎಂಬ ಈ ಕಾದಂಬರಿಯ ಮುಖೇನ ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ,  ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ. ಪುರಾಣಪ್ರಿಯರಾದವರಿಗೆ "ಗಾಂಧಾರಿ "ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲವಿದೆ. ಅವರ ಕುತೂಹಲಕ್ಕೆ ತಣ್ಣೀರೆರಚದೇ ಅದ್ಭುತವಾಗಿ "ಮಿಂಚದ ಮಿಂಚು " ಮೂಡಿ ಬಂದಿದೆ.
ಸಾಮಾನ್ಯವಾಗಿ ಗಾಂಧಾರಿ ಮಹಾಭಾರತದಲ್ಲಿ ದುರಂತ ನಾಯಕಿಯಾಗಿ, ನಿಸ್ಸಹಾಯಕ ಮತ್ತು ಹತಾಶ ವ್ಯಕ್ತಿತ್ವದವಳಾಗಿ ಕಾಣಸಿಗುತ್ತಾಳೆ. ಅದನ್ನು ದಿವ್ಯಾ ತೆರಿದಿರಿಸಿದ ಬಗೆ ಅನನ್ಯ.

ಪಾಂಡವ ಪಂಚಕರಿಂದ ಕೌರವಾದಿಗಳ ಹನನದ ಪಶ್ಚಾತ್ ಕಂಪನವೇ "ಗಾಂಧಾರಿ ಶಾಪ" ಎಂಬ ಪ್ರಸಂಗ. ಕೃಷ್ಣಾವಾತಾರದ ಪರಿಸಮಾಪ್ತಿಗೆ ಗಾಂಧಾರಿಯ ಶಾಪವೇ ಹೇತುವಾಯಿತು ಎಂಬ ಮಾತಿದೆ.  ಈ ಕಥೆಯ ಎಳೆಯನ್ನೇ ತಿರುಳಾಗಿಸಿಕೊಂಡು ರೂಪುಗೊಂಡದ್ದು "ಮಿಂಚದ ಮಿಂಚು" ಎಂಬ ಮಿನಿ ಕಾದಂಬರಿ.

ಕೃಷ್ಣನಿಗೆ ಶಪಿಸಿದ ಬಳಿಕ ಉದ್ಭವಿಸುವ ಗಾಂಧಾರಿಯ ಮನದ ತುಮುಲಗಳು, ಅವುಗಳನ್ನು ಕುಂತಿಯೊಂದಿಗೆ ಹಂಚಿಕೊಳ್ಳುತ್ತಾ ಸಾಗುವ ಬಗೆಯಲ್ಲಿ ಗಾಂಧಾರಿಯ ಜೀವನದ ಸಮಗ್ರ ಚಿತ್ರಣವು ಓದುಗರಿಗೆ ಲಭ್ಯ ವಾಗುತ್ತದೆ. 
ಸ್ತ್ರೀ ಸಂವೇದನೆಯನ್ನು ತನ್ನ ಎಂದಿನ ಸರಳ ಸುಂದರ ಶೈಲಿಯೊಂದಿಗೆ ದಿವ್ಯಾ ಕಟ್ಟಿಕೊಡುವ ಬಗೆ ಅನನ್ಯ, ಅನುಪಮವಾದುದು.

ಗಾಂಧಾರಿಯ ಬಾಲ್ಯ, ಬಾಲ್ಯದಲ್ಲಿ ಆಕೆಗೆ ಕತ್ತಲೆಯ ಕುರಿತಾಗಿ ಇದ್ದ ಅಪರಿಮಿತ ಭಯ, ನೀನು ಗಾಂಧಾರದ ಮಿಂಚು ಎಂದು ಅಣ್ಣ ಶಕುನಿಯಿಂದ ಹೇಳಿಸಿಕೊಂಡದ್ದೂ, ಕಣ್ಣಿದ್ದೂ ತನ್ನ ಗಂಡನಿಗಿರದ ಸೌಭಾಗ್ಯ ತನಗೆ ಬೇಡವೆಂದು ಕಣ್ಣಿಗೆ ಬಟ್ಟೆ ಕೊಂಡು ಕುರುಡಳಾಗುವ ಆಕೆಯ ನಿರ್ಧಾರ, ಮಕ್ಕಳಿಗೆ  ಸಿಗಬೇಕಾದ ಪ್ರೀತಿ ಸಿಗದೇ ಹೋದಾಗ ಅವರು ಎಲ್ಲಿ ಪ್ರೀತಿ ಸಿಗುತ್ತದೊ ಎಂದು ಅರಸಿ ಅಲ್ಲಿ ಸಾಗುತ್ತಾರೆ ಎಂದು ಹೇಳುತ್ತಾ ಶಕುನಿಯಿಂದಾಗಿ ನನ್ನ ಮಗ ದಾರಿ ತಪ್ಪಿದ ಎಂದು ರೋಧಿಸುವ ಬಗೆ, ಕೃಷ್ಣನಿಂದ ಒದಗಲ್ಪಟ್ಟ ಅಕ್ಷಯಾಂಬರದಿಂದ ತನ್ನ ಮಗನಿಗೆ ಸೋಲಾದರೂ, ಮಗನ ಸೋಲನ್ನು ಸಂಭ್ರಮಿಸುವ ಪ್ರಥಮ ತಾಯಿ ತಾನು ಎಂದು ಹೇಳುವ ಗಾಂಧಾರಿಯ ಜೀವನ ಚರಿತ್ರೆಯನ್ನು ಎಳೆಎಳೆಯಾಗಿ ತೆರಿದಿರಿಸುತ್ತಾ  ದಿವ್ಯಾ ತಾನೋರ್ವ ಮಾಗಿದ ಕತೆಗಾರ್ತಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.
"ಪುತ್ರ ಶೋಕಂ ನಿರಂತರಂ" ಎಂಬಂತೆ ಪ್ರಾಯಪ್ರಬುದ್ದರಾದ ಮಕ್ಕಳು ಕಣ್ಣೆದುರೇ ಸತ್ತಾಗ ಮಾತೆಯಾದವಳು ಪಡುವ ನೋವು ವರ್ಣಿಸಲಸಾಧ್ಯವಾದದ್ದು. 

ಗಾಂಧಾರಿ ನೂರು ಮಕ್ಕಳ ಸಾವಿನ ಶೋಕಸಾಗರದಲ್ಲಿ ಮುಳುಗಿ ಜಗತ್ತಿನ ಯಾವ ತಾಯಿಯೂ ಅನುಭವಿಸದ ನೋವನ್ನು ಅನುಭವಿಸಿದವಳು.  ಹೆಣ್ಣೊಬ್ಬಳಿಗೆ ಹೆರಿಗೆಯ ನೋವೇ ಮಹಾಯಾತನೆಯಂತೆ. ಆದರೆ ಗಾಂಧಾರಿ ಸರಣಿಯಾಗಿ ಸರಣಿಯಾಗಿ ಮಕ್ಕಳ ಸಾವಿನ ನೋವನ್ನು ಅನುಭವಿಸಿ ಜರ್ಜರಿತಳಾದವಳು. ಮಕ್ಕಳ ಶವಗಳ ಮುಂದೆ ಕಣ್ಣೀರು ಕರಗಿಸಿಕೊಂಡವಳು. ರಾಜಕುಮಾರಿಯಾಗಿ, ಮಡದಿಯಾಗಿ, ರಾಣಿಯಾಗಿ, ತಾಯಿಯಾಗಿ ಒಂದು ದಿನವೂ ಸುಖ ಕಾಣದ ನತದೃಷ್ಟೆ ಗಾಂಧಾರಿ. ಇಂತಹ ಪಾತ್ರದ ಒಳಮನಸ್ಸನ್ನು ಹೊರಜಗತ್ತಿಗೆ ತೋರಿಸುವ ಉತ್ತಮ ಪ್ರಯತ್ನವನ್ನು ಲೇಖಕಿ ದಿವ್ಯಾ ಶ್ರೀಧರ್ ರಾವ್ "ಮಿಂಚದ ಮಿಂಚು" ಎಂಬ ಕಾದಂಬರಿಯ ಮೂಲಕ ಮಾಡಿದ್ದಾರೆ. 

ಓದಲೇಬೇಕಾದ ಪುಸ್ತಕವಿದು. ದಿವ್ಯಾರವರ ಸಾಹಿತ್ಯದ ಸರಾಗ ಸುಲಲಿತ ಪಯಣಕ್ಕೆ ಶುಭ ಹಾರೈಸುತ್ತಾ ಮುನ್ನುಡಿ ಬರೆಯುವ ಮಹಾ ಅವಕಾಶ ಕೊಟ್ಟಿದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.

- ಡಾ.ಜಗದೀಶ್ ಶೆಟ್ಟಿ

---

ಭಾರತೀಯ ಕಾವ್ಯ ಇತಿಹಾಸಗಳ ಪಾತ್ರಗಳು ನಿತ್ಯ ಮಾತನಾಡುವ ವ್ಯಕ್ತಿಗಳೇ ಹೌದು. ಓದಿಗೊಮ್ಮೆ ಅರ್ಥ ವ್ಯಾಪ್ತಿ ವಿಸ್ತಾರಗೊಳ್ಳುತ್ತ ವಿಶಿಷ್ಠವಾದ ಆಯಾಮಗಳನ್ನು ಹೊಂದಿರುತ್ತವೆ ಎನ್ನುವುದು ಸರ್ವವೇದ್ಯ. ನಮ್ಮ ನಮ್ಮ ಅನುಭವ ಸಾಮರ್ಥ್ಯ ಹಾಗೂ ಆಲೋಚನಾ ಲಹರಿಗಳನ್ನು ಹೊಂದಿಕೊಂಡು ಬೇರೆ ಬೇರೆ ಮಗ್ಗುಲುಗಳಲ್ಲಿ ತೆರೆದುಕೊಳ್ಳುತ್ತವೆ. ಯಾವ ಮುಖದಿಂದ ನೋಡಿದರೂ ಸದಾ ಮಾತನಾಡುವ ಪ್ರತಿಮೆಗಳು ಎಂಬುದು ನಿತ್ಯಸತ್ಯ. ಹಾಗಾಗಿಯೇ ಮರು ವ್ಯಾಖ್ಯಾನಗಳು ಹಾಗೂ ಭಿನ್ನ ನೋಟಗಳಿಂದ ಪುನಃ ಪುನಃ ಮೈದಳೆಯುತ್ತ ನಮ್ಮ ನಡುವೆ ಹಾಸು ಹೊಕ್ಕಾಗಿವೆ. ರಾಮಾಯಣಕ್ಕಿಂತಲೂ ಮಹಾಭಾರತದ ಪಾತ್ರಗಳು ವರ್ಣಮಯ ಸಂಕೀರ್ಣತೆಯಿಂದ ಕಂಗೊಳಿಸುತ್ತವೆ. ಅದರಲ್ಲೂ ಸ್ತ್ರೀ ಪಾತ್ರಗಳು ತನ್ನದೇ ಆದ ಭಾವಪೂರ್ಣವೆನಿಸುವ ವಿಸ್ತಾರ ಆಕೃತಿಯನ್ನು ತಳೆದು, ಚಿಂತನೆಯ ಸೆಳೆಕಿಗೆ ದೊರಕುತ್ತವೆ.

ಗಾಂಧಾರಿಯೂ ಇದಕ್ಕೆ ಹೊರತಲ್ಲ. ವ್ಯಾಸ ಪ್ರಣೀತ ಗಾಂಧಾರಿಯೊಬ್ಬಳು ಪ್ರತ್ಯೇಕ ಶಿಲ್ಪವೇ ಸರಿ. ಗಂಡನಾಗುವವನಿಗಿಲ್ಲದ ದೃಷ್ಟಿ ತನಗೂ ಬೇಡವೆಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಳು. ಈ ವಿಷಯಕ್ಕೆ ಸಂಬಂಧಿಸಿ ಕನ್ನಡದ ಹಲವಾರು ಸಾಹಿತಿಗಳು ಭಿನ್ನವಗಿ ಚಿತ್ರಿಸಿದ್ದಾರೆ. ಈ ಪುಟ್ಟ ಕಾದಂಬರಿಯಲ್ಲಿ ಪತಿವ್ರತಾ ಮೌಲ್ಯವನ್ನು ಅಳವಡಿಸಿಕೊಂಡಳೆಂದೇ ಕಾಣಿಸಿದ್ದಾರೆ. ಕುರುಡ ಗಂಡನಿಗೆ ತಾನು ಕಣ್ಣಾಗ ಬೇಕಾದವಳು ತಾನೂ ಕುರುಡಿಯಾದದ್ದು ಅಪಕ್ವ ನಿರ್ಧಾರ. ಮಿಂಚಾಗದೆ, ಬೆಳಕಾಗದೆ  ತಾನೂ ಕುರುಡಿಯಾಗಿ ಗಂಡನಿಗೂ, ಮಕ್ಕಳಿಗೂ ಬಾಳ್ವೆಯ ದೀಪವಾಗದೆ ಇದ್ದುದು ಗಾಂಧಾರಿಯ ಹಳವಂಡ. ಒಂದಂತೂ ನಿಜ ಘಟನೆಯೊಂದಕ್ಕೆ ಪ್ರತಿಕ್ರಿಯಿಸುವುದು ನಮ್ಮ ಪ್ರಜ್ಞಾಪರಿಧಿಗೆ ಮೀರಿದ್ದಾಗಿರುತ್ತದೆ ತಾಟಸ್ಥ್ಯ ಕೂಡ. ನಂತರ ಮುಚ್ಚಿಕೊಳ್ಳಲು ಮನಸ್ಸು ಹಪಹಪಿಸುತ್ತದೆ. ನಾನಂದು ಅಸಹಾಯಕಿ ಎಂಬ ಗಾಂಧಾರಿಯ ಗೋಳೂ ಇದೇ ತೆರನದ್ದು.

ಶ್ರೀಮತಿ ದಿವ್ಯಾ ಶ್ರೀಧರರ ರಾವ್ ಅವರು ‘ಗಾಂಧಾರಿ’ಯ ಮನವನ್ನು ತೆರೆದಿಡುತ್ತ ಒಂದು ಭಿನ್ನ ಪಾತ್ರವಾಗಿ ಕಡೆದಿದ್ದಾರೆ. ಮಹಾಭಾರತದ ಸಾಮಾನ್ಯ ಓದುಗನಿಗೆ ಗಾಂಧಾರಿಯ ಕುರಿತು ‘ಮೃದು ಧೋರಣೆ’ಯನ್ನು ತಾಳುವ ಸಾಧ್ಯತೆಯೇನಿಲ್ಲ. ಹೆಚ್ಚೆಂದರೆ ತಟಸ್ಥಭಾವವಿದ್ದೀತು. ಅತಿ ಯೆನಿಸದೆ ಒಂದು ಹದವನ್ನು ಇಟ್ಟುಕೊಂಡೇ ಗಾಂಧಾರಿಯ ಕುರಿತು ಸಹಾನುಭೂತಿ ತಳೆಯುವಂತೆ ಮಾಡುವಲ್ಲಿ ದಿವ್ಯಾರವರ ಶ್ರಮ ಸಾರ್ಥಕವಾಗಿದೆ. ಪೌರಾಣಿಕದ ಹತ್ತಿರಕ್ಕೆ ಹೊಂದುವ ಭಾಷೆಯ ಸೊಗಡು ಗಮನಾರ್ಹ. 

ಲೋಕದಲ್ಲಿ ಎಷ್ಟು ವ್ಯಕ್ತಿಗಳೋ ಅಷ್ಟು ವಿಭಿನ್ನ ಮನಸ್ಸುಗಳು ಇದು ಕಾಲ ದೇಶಗಳನ್ನು ಮೀರಿದ ವಾಸ್ತವ. ಪಾತ್ರಗಳ ಒಳಹೊಕ್ಕು ಮನಸ್ಸನ್ನು ತೆರೆದಿಡುವ ಕ್ರಮವು ತಾಳಮದ್ದಳೆಯನ್ನು ಪ್ರೀತಿಸುವ ಎಲ್ಲರಿಗೂ ಆಪ್ಯಾಯಮಾನವೆ. ಹಾಗಾಗಿ ಇನ್ನಷ್ಟು ಪುರಾಣ ಪ್ರಸಿದ್ಧ ಪಾತ್ರಗಳು ಶ್ರೀಮತಿ ದಿವ್ಯಾ ಅವರ ಮೂಲಕ ಮೂಡಿಬರಲಿ ಎಂದು ಆಶಿಸುತ್ತ ವಿರಮಿಸುವೆ.

- ಇಟಗಿ ಮಹಾಬಲೇಶ್ವರ ಭಟ್, ಯಕ್ಷಗಾನ ಕಲಾವಿದರು, ಪ್ರಸಂಗಕರ್ತರು

MORE FEATURES

ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ: ಡಿ.ಜಿ. ಮಲ್ಲಿಕಾರ್ಜುನ

17-04-2024 ಬೆಂಗಳೂರು

“ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ. ಸೃಜನಶೀಲ ಮನಸ್ಥಿತಿ, ಕಲಾವಿದನೊಬ್ಬನ ಕಣೋಟ ಇದ್ದರಷ್ಟೇ ಉತ್ತಮ ಛಾಯಾಚಿತ್ರಗ...

ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳಿಂದ ಮನೆಮಾತಾದ ತರಾಸು ಅವರ ಕುರಿತ ಒಳನೋಟ

17-04-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳಿಂದ ಮನೆಮಾತಾದ ತರಾಸು ಅವರ ಕುರಿ...

ಮಕ್ಕಳು ದೊಡ್ಡವರಾಗುತ್ತಿದ್ದಂತೆ ಹೆತ್ತವರು ಅಪ್ರಸ್ತುತರಾಗುತ್ತಾರೆ

17-04-2024 ಬೆಂಗಳೂರು

"ಪ್ರತಿನಿತ್ಯದ ಕಿರಿಕಿರಿಯಿಂದ ದೂರವಾಗಲು ಮಕ್ಕಳು ಉದ್ಯೋಗದ ನೆಪ ಹೇಳಿ ದೂರ ಉಳಿಯುವುದು ಸಾಮಾನ್ಯವಾದರೆ, ಜೋಗಿಯವರ ...