ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಶಾಂಭವಿದೇವಿ

Date: 15-02-2023

Location: ಬೆಂಗಳೂರು


ಶಿವಶರಣೆಯರನ್ನು ಜನಪದರು ಕೂಡ ಕೊಂಡಾಡುವ ಹಲವು ಉದಾಹರಣೆಗಳನ್ನು ಲೇಖಕಿ ವಿಜಯಶ್ರೀ ಸಬರದ ಗಮನಿಸುತ್ತಾರೆ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಕಾರ್ತಿಯರ ಇತಿವೃತ್ತಗಳಲ್ಲಿ ಶಿವರಶರಣೆಯರಾದ ಶಾಂಭವಿದೇವಿ ಹಾಗೂ ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿಯ ಕುರಿತು ಬರೆದಿದ್ದಾರೆ...

ಶಾಂಭವಿದೇವಿ: 

ಶಾಂಭವಿದೇವಿ ರೇವಣಸಿದ್ಧೇಶ್ವರನ ಧರ್ಮಪತ್ನಿಯರಲ್ಲಿ ಒಬ್ಬಳೆಂದು, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಪ್ರಸ್ತಾಪಿಸಲ್ಪಟ್ಟಿದೆ - (ಸಂಪುಟ-4, ಭಾಗ-1, ಪುಟ-763, 1977). ಶಾಂಭವಿದೇವಿ ಸಿಂಹವಿಕ್ರಮ ಚೋಳರಾಜನ ಮಗಳಾಗಿದ್ದಳೆಂದು ತಿಳಿದುಬರುತ್ತದೆ."ಮುಕ್ತಿ ಕಂಠಾಭರಣ" ಕೃತಿಯಲ್ಲಿ ಈಕೆಯ ನಾಲ್ಕು ವಚನಗಳು ಪ್ರಕಟವಾಗಿವೆ. "ಶಾಂಭವೀ ಲಿಂಗ" ಎಂಬುದು ಈಕೆಯ ವಚನಾಂಕಿತವಾಗಿದೆ. ಕವಿಚರಿತೆಕಾರರ ಪ್ರಕಾರ ರೇವಣಸಿದ್ಧೇಶ್ವರ ಕ್ರಿ.ಶ.1150 ರಲ್ಲಿದ್ದನಾದುದರಿಂದ ಈಕೆಯ ಕಾಲವೂ ಇದೇ ಆಗಿದೆ. ರೇವಣಸಿದ್ಧೇಶ್ವರ ಮತ್ತು ಅವನ ಧರ್ಮಪತ್ನಿಯರು ತ್ರಿಪುರಾಂತಕ ಕೆರೆಯ ನಿರ್ಮಾಣದಲ್ಲಿ ತೊಡಗಿದ್ದಾಗ ಶಾಂಭವಿದೇವಿಯೂ ಅದರಲ್ಲಿ ಭಾಗಿಯಾಗಿದ್ದಳೆಂದು ತಿಳಿದುಬರುತ್ತದೆ. ಶಾಂಭವಿಯು ಅಲಮಪ್ರಭುವಿನೊಂದಿಗೆ ಸಂವಾದ ಮಾಡಿದ್ದಳೆಂಬುದು ಆಕೆಯ ವಚನಗಳಿಂದ ತಿಳಿದು ಬರುತ್ತದೆ.

ಶಾಂಭವಿ ಆಧ್ಲ್ಯಾತ್ಮ ಮಾರ್ಗದಲ್ಲಿ ದೊಡ್ಡ ಸಾಧನೆ ಮಾಡಿದ್ದಳು. ಯೋಗದಲ್ಲಿಯೂ ಈಕೆ ಪರಿಣಿತಿ ಹೊಂದಿದ್ದಳೆಂಬುದು ಗೊತ್ತಾಗುತ್ತದೆ. ರೇವಣಸಿದ್ಧ, ಬಸವೇಶ್ವರರ ಹಿರಿಯ ಸಮಕಾಲೀನನಾಗಿದ್ದನೆಂಬುದು ಸ್ಪಷ್ಟವಿದೆ. ಕೊಂಡಗುಳಿ ಕೇಶಿರಾಜ, ಹಾವಿನಹಾಳ ಕಲ್ಲಯ್ಯ ಈ ಮೊದಲಾದ ಶರಣರ ಸಮಕಾಲೀನನಾಗಿದ್ದ ರೇವಣಸಿದ್ಧನ ಚರಿತ್ರೆ ಅನೇಕ ಪುರಾಣಕಾವ್ಯಗಳಲ್ಲಿ ದಾಖಲಾಗಿದೆ. ರೇವಣಸಿದ್ಧ ಮತ್ತು ಆತನ ಮಗ ರುದ್ರಮುನಿಯನ್ನು ಕುರಿತಂತೆ ಹರಿಹರ ಮೊದಲಾದ ಕವಿಗಳು ಕಾವ್ಯ ರಚಿಸಿದ್ದಾರೆ. ಕವಿಬೊಮ್ಮರಸನು "ರೇವಣಸಿದ್ಧೇಶ್ವರ ಪುರಾಣ" ಕಾವ್ಯ ರಚಿಸಿದ್ದಾನೆ. ಚೆನ್ನಬಸವ ಕವಿಯ "ರೇವಣಸಿದ್ದೇಶ್ವರ ಕಾವ್ಯ" ಎಂಬ ಕೃತಿಯಲ್ಲಿ, ರೇವಣಸಿದ್ಧೇಶ್ವರನ ಬಗೆಗೆ ಮತ್ತು ಆತನ ಪತ್ನಿಯರ ಬಗೆಗೆ ವಿವರಗಳು ಸಿಗುತ್ತವೆ. ಹೀಗೆ ಶಾಂಭವಿದೇವಿ ರೇವಣಸಿದ್ಧೇಶ್ವರನೆಂಬ ಆಚಾರ್ಯ ಪುರುಷನ ಪತ್ನಿಯಾಗಿದ್ದಳೆಂಬುದು ಸ್ಪಷ್ಟವಾಗಿದೆ.

ಶಾಂಭವಿ ತನ್ನ ವಚನಗಳಲ್ಲಿ ಅಲ್ಲಮಪ್ರಭುವನ್ನು ಸಂಬೋಧಿಸಿ ಮಾತನಾಡಿದ್ದಾಳೆ. ಆಕೆಯ ಹೃದಯದಲ್ಲಿ ಪ್ರಭು ಶೂನ್ಯಪೀಠದಲ್ಲಿದ್ದುದನ್ನು ಆ ಶೂನ್ಯಪೀಠದಲ್ಲಿ ನಿರಂಜನ ಪ್ರಭುವಾದುದನ್ನು ಹೇಳಿದ್ದಾಳೆ. ಆಕೆಯ ಕೈಯಲ್ಲಿ ಪ್ರಭುವೇ ಶಿವಲಿಂಗದ ಕುರುಹಾಗಿ, ನಂತರ ಉಭಯಲಿಂಗಗಳು ಕೂಡಿ ಮಹಾಲಿಂಗವಾಯಿತೆಂದು ತಿಳಿಸಿದ್ದಾಳೆ. ಗುರುಮನೆಯ ವಾರ್ತೆ ಅರಮನೆಯವರಿಗೆ ತಿಳಿದಿರುವುದಿಲ್ಲ, ಅರಮನೆಯ ವಾರ್ತೆಯನ್ನು ಅರೆಮರುಳರು ಬಲ್ಲರೆ? ಎಂದು ಪ್ರಶ್ನಿಸಿದ್ದಾಳೆ. ಶಾಂಭವಿಗೆ ಗುರುಮನೆ- ಅರಮನೆಗಳ ಪರಿಚಯವಿತ್ತು. ಈ ಅನುಭವದ ಹಿನ್ನಲೆಯಲ್ಲಿ ಅವಳು ಕೇಳಿರುವ ಪ್ರಶ್ನೆಗಳು ಕುತೂಹಲಕಾರಿಯಾಗಿವೆ. ಶಾಂಭವಿಯ ಪತಿ ರೇವಣಸಿದ್ಧನೂ ವಚನಗಳನ್ನು ರಚಿಸಿದ್ದು ಮುಕ್ತಿಕಂಠಾಭರಣ ದಲ್ಲಿ ಆತನ ಒಂದು ವಚನ ಪ್ರಕಟವಾಗಿದೆ. ಆ ವಚನದಲ್ಲಿ ಕಲ್ಯಾಣಪುರವನ್ನು ಉಲ್ಲೇಖಿಸಿದ್ದಾನೆ. ತನ್ನ ಪತ್ನಿಯರೊಂದಿಗೆ ರೇವಣಸಿದ್ಧ ಕಲ್ಯಾಣಕ್ಕೆ ಬಂದುದು ಅನೇಕ ಪುರಾಣಕಾವ್ಯಗಳಲ್ಲಿ ಪ್ರಕಟವಾಗಿದೆ. ಶಾಂಭವಿದೇವಿ ಕೂಡಾ ಇದೇ ಸಂದರ್ಭದಲ್ಲಿ ಕಲ್ಯಾಣಕ್ಕೆ ಬಂದಿರಬೇಕು. ಅವಳ ಮೇಲೆ ಪ್ರಭುವಿನ ಪ್ರಭಾವ ದಟ್ಟವಾಗಿದೆ.

"ಈ ಲಿಂಗ ಮೂರು ಕೋಣೆಯ ದಾಟಲು ಸಮರ್ಥ ದಾಂಟಿ ಪುನರಪಿ ಬರಲು ಸಮರ್ಥ
ಈ ಲಿಂಗ ಉತ್ತರಕೋಣೆಯಲ್ಲಿ ತತ್ತರಿಸುವುದಲ್ಲದೆ ಆ ಕೋಣೆ ಕತ್ತರಿಸಿ ದಾಂಟಿಲ್ಲ ಕಾಣಾ
ಶಾಂಭವೀಲಿಂಗ ಅಲ್ಲಮ ಪ್ರಭುವೇ!"
ಮುಕ್ತಿ ಕಂಠಾಭರಣ, ಪುಟ-104, 1971
ಇಲ್ಲಿ "ಲಿಂಗ" ಎಂಬ ಪದ ಕಾಲದ ಸಂಕೇತವಾಗಿ ಬಳಕೆಯಾಗಿದೆ.

ಭೂತ, ವರ್ತಮಾನ, ಭವಿಷತ್ ಕೋಣೆಗಳನ್ನು ಈ ಲಿಂಗವೆಂಬ ಕಾಲ ದಾಟುತ್ತದೆ. ಆದರೆ ಮುಂದಿನ ಕಾಲಘಟ್ಟವನ್ನು ಅದೇ ಉತ್ತರ ಕೋಣೆಯನ್ನು ದಾಟುವುದಕ್ಕಾಗುವುದಿಲ್ಲವೆಂದು ಹೇಳಿದ್ದಾಳೆ ಈ ವಚನದಲ್ಲಿ ಬೆಡಗಿನ ಶೈಲಿಯಿದೆ. ಈಕೆ ಮಹತ್ವದ ವಚನಕಾರ್ತಿಯಾಗಿದ್ದಳೆಂಬುದು ಸ್ಪಷ್ಟವಾಗುತ್ತದೆ.

ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ:
ಕುಂಬಾರ ಗುಂಡಯ್ಯ ಮಹಾಶಿವಭಕ್ತ, ಆತನ ಪತ್ನಿಯೇ ಕೇತಲದೇವಿ. ಇವರ ಕಾಲ ಕ್ರಿ.ಶ.1160. ಈ ದಂಪತಿಗಳ ಊರು, ಬೀದರ ಜಿಲ್ಲೆಯ ಭಾಲ್ಕಿಯಾಗಿತ್ತು. ಭಾಲ್ಕಿಯಲ್ಲಿ ಕುಂಭೇಶ್ವರ ದೇವಾಲಯವಿದೆ. ಈ ದೇವಾಲಯವು ಕುಂಬಾರ ಓಣಿಯಲ್ಲಿದೆ. "ಕುಂಬೇಶ್ವರಾ" ಎಂಬುದೇ ಕೇತಲದೇವಿಯ ವಚನಾಂಕಿತವಾಗಿರುವುದರಿಂದ, ಭಾಲ್ಕಿಯ ಕುಂಭೇಶ್ವರ ದೇವಾಲಯದ ಮಹತ್ವ ಗೊತ್ತಾಗುತ್ತದೆ.

"ಭುವನಕೋಶ"ದಲ್ಲಿ ಕೇತಲದೇವಿಯ ವಿವರಗಳು ದೊರೆಯುತ್ತವೆ. ಈಕೆಗೆ ಸಂಬಂಧಿಸಿದ ಪವಡಕತೆಯೊಂದು ಅಲ್ಲಿ ವಿವರಿಸಲ್ಪಟ್ಟಿದೆ. ಕೇತಲದೇವಿ ನಿತ್ಯವೂ ಲಿಂಗಕ್ಕೆ ಪಾವಾಡವನ್ನು ಹಾಕುವ ನಿಯಮ ಹೊಂದಿದ್ದಳೆಂದೂ, ಒಂದುದಿನ ಅದು ಸಿಗದೇ ಹೋದಾಗ, ತನ್ನ ಎದೆಯ ಚರ್ಮವನ್ನೇ ತೆಗೆದು ಪಾವುಡ ಮಾಡಿ ಶಿವಲಿಂಗಕ್ಕೆ ಧರಿಸಲು, ಶಿವನು ಇವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದನೆಂಬ ಕತೆಯಿದೆ. ಈ ಪವಾಡಕತೆಯ ಸತ್ಯಾಸತ್ಯತೆ ಏನೇ ಇರಲಿ, ಕೇತಲದೇವಿ ಮಾತ್ರ ಮಹತ್ವದ ಶರಣೆಯಾಗಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಜನಪದ ಕಾವ್ಯದಲ್ಲಿ ಈ ದಂಪತಿಗಳನ್ನು ಕುರಿತಂತೆ ಅನೇಕ ತ್ರಿಪದಿಗಳು ಪ್ರಕಟವಾಗಿವೆ. ಡಾ.ಬಿ.ಎಸ್.ಗದ್ದಗಿಮಠ ಅವರ "ಕನ್ನಡ ಜಾನಪದ ಗೀತೆಗಳು" ಕೃತಿಯಲ್ಲಿ ಈ ತ್ರಿಪದಿಗಳನ್ನು ನೋಡಬಹುದಾಗಿದೆ.

"ಕುಂಬಾರ ಗುಂಡಯ್ಯನ ಮಡದಿ ಕಡಗದ ಕೈಯಾಕಿ
ಕೊಡದ ಮ್ಯಾಲೇನು ಬರದಾಳ| ಕಲಬುರಗಿ
ಶರಣಬಸವನ ಚಿತ್ರ ಬರದಾಳ||"
"ಮಡದಿ ಕೇತಲದೇವಿ ಒಡನಾಡಿ ಗಂಡನಿಗೆ ಎಡೆಬಿಡದೆ ಸೇವೆ ಮಾಡುತಲಿ| ಬತ್ತಿಯೊಳು
ಬಿಡದೇರಿ ಎಣ್ಣೆಯುರಿದಂತೆ||"
- ಕನ್ನಡ ಜಾನಪದ ಗೀತೆಗಳು, ಪು-305, ಕ.ವಿ.ವ, ಧಾರವಾಡ, 1963

ಈ ಎರಡು ತ್ರಿಪದಿಗಳನ್ನು ಗಮನಿಸಿದಾಗ ಕೇತಲದೇವಿಯ ವ್ಯಕ್ತಿತ್ವವನ್ನು ಜನಪದರು ಕಂಡ ರೀತಿ ಸ್ಪಷ್ಟವಾಗುತ್ತದೆ. ಕೈಯಲ್ಲಿ ಕಡಗ ಹಾಕಿಕೊಂಡು, ಟೊಂಕದ ಮೇಲೆ ಕೊಡ ಹೊತ್ತುಕೊಂಡು ಪತಿ ಗುಂಡಯ್ಯ ತುಳಿಯುವ ಮಣ್ಣಿಗೆ ನೀರನ್ನು ತಂದು ಹಾಕುತ್ತಿದ್ದಳು. ಗುಂಡಯ್ಯ ಮಣ್ಣನ್ನು ತುಳಿದು ಹದಮಾಡಿ ಮಡಕೆಗಳನ್ನು ಮಾಡುತ್ತಿದ್ದ. ಈ ಮಡಕೆ ಕಾಯಕ ಮಾಡುತ್ತಿದ್ದ ಈ ದಂಪತಿಗಳು ಪವಾಡಕತೆಯ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಗಂಡನ ನೆರಳಾಗಿದ್ದ ಕೇತಲದೇವಿಯನ್ನು ಜನಪದರು ಒಡನಾಡಿಯೆಂದು ಕರೆದಿದ್ದಾರೆ. ಎಡೆಬಿಡದೆ ಕಾಯಕದಲ್ಲಿ ನಿರತಳಾಗಿದ್ದ ಕೇತಲೆ ಎಣ್ಣೆಯಲ್ಲಿ ಉರಿಯುತ್ತಿದ್ದ ಬತ್ತಿಯಂತಿದ್ದಳೆಂದು ಜನಪದರು ಈಕೆಯ ಮಹಾವ್ಯಕ್ತಿತ್ವವನ್ನು ಮೂರು ಸಾಲುಗಳ ತ್ರಿಪದಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಈಕೆಯ ಕುಂಭದ ಗತಿಗೆ ಶಿವನೇ ಕೈಲಾಸದಿಂದಿಳಿದು ಓಡೋಡಿ ಬಂದು ಕುಣಿಯುತ್ತಿದ್ದನೆಂದು ಪವಾಡಕತೆಗಳು ಹೇಳುತ್ತವೆ.

ಕೇತಲದೇವಿಯ ಎರಡು ವಚನಗಳು ಪ್ರಕಟವಾಗಿವೆ. ಕುಂಭೇಶ್ವರಾ, ಕುಂಭೇಶ್ವರಲಿಂಗ ಎಂಬ ಅಂಕಿತಗಳಲ್ಲಿ ಈ ವಚನಗಳಿವೆ. "ಲಿಂಗವಂತ" ಎಂಬ ಪದ ಈಕೆಯ ವಚನದಲ್ಲಿ ಬಳಕೆಯಾಗಿದೆ. ಲಿಂಗವಂತರ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಾಗ ಸಂದೇಹವಿಲ್ಲದಂತಿರಬೇಕೆಂದು ಕೇತಲದೇವಿ ತನ್ನ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

"ಭಿಕ್ಷಲಿಂಗಾರ್ಪಿತಂ ಗತ್ವಾ| ಭಕ್ತಸ್ಯ ಮಂದಿರಂ ತಥಾ|
ಜಾತಿ ಜನ್ಮರಜೋಚ್ಛಿಷ್ಯಂ| ಪ್ರೇತಸ್ಯ ವಿವರ್ಜಿತ:||" (ವ-773)
ಎಂಬಂತಹ ಸಂಸ್ಕøತ ಶ್ಲೋಕವೊಂದು ಈಕೆಯ ವಚನದಲ್ಲಿ ಉಲ್ಲೇಖವಾಗಿದೆ. ಕೇತಲದೇವಿ ಕಾಯಕನಿಷ್ಠೆ ಉಳ್ಳವಳಾಗಿರುವುದರ ಜತೆಗೆ ಪಂಡಿತಳೂ ಆಗಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕಾಣದೇ ಇರುವುದನ್ನು ಕಂಡದ್ದನ್ನು ಒಂದೇ ಸಮವೆಂದು ಅರಿಯಬೇಕೆಂದು ಈಕೆ ತನ್ನ ವಚನದಲ್ಲಿ ಹೇಳಿದ್ದಾಳೆ.

"ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ"
- ಸ.ವ.ಸಂ.5, ವ-772, 1993

ಈ ವಚನದಲ್ಲಿ ತನ್ನ ವೃತ್ತಿಪ್ರತಿಮೆಯ ಮೂಲಕ ಕೇತಲದೇವಿ ಮಾತನಾಡಿದ್ದಾಳೆ. ಮಣ್ಣನ್ನು ಸರಿಯಾಗಿ ತುಳಿದು ಹದ ಮಾಡದೆ, ಅದು ಮಡಕೆಯಾಗದು ಎಂಬ ಮಾತನ್ನು ತನ್ನ ವೃತ್ತಿ ಅನುಭವದ ಹಿನ್ನಲೆಯಲ್ಲಿ ಹೇಳುತ್ತ, ವ್ರತಹೀನನನ್ನು ಬೆರೆಯಬಾರದೆಂದು, ಬೆರೆತಡೆ ನರಕತಪ್ಪದೆಂದು ಸ್ಪಷ್ಟಪಡಿಸಿದ್ದಾಳೆ. ಕುಂಬಾರ ಗುಂಡಯ್ಯನದ್ದೆಂದು ಹೇಳುವ ಉಬ್ಬು ಶಿಲ್ಪವೊಂದು ಭಾಲ್ಕಿಯಲ್ಲಿ ದೊರೆತಿದ್ದು ಈ ದಂಪತಿಗಳು ಭಾಲ್ಕಿಯಲ್ಲಿಯೇ ಲಿಂಗೈಕ್ಯರಾಗಿರಬಹುದಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು
ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

 

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...