ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ

Date: 01-10-2022

Location: ಬೆಂಗಳೂರು


ಸರಕಾರಿ ನೌಕರಿಗೆ ಸೇರಿ ಮದುವೆ, ಮಕ್ಕಳಾದ ಮೇಲೆಯೇ ನನಗೆ ಹುಟ್ಟು ಹಬ್ಬಗಳ ಅಷ್ಟಿಷ್ಟು ಪರಿಚಯವಾದುದು ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಹುಟ್ಟಿದ ದಿನವೇ ಗೊತ್ತಿಲ್ಲದ ಎಷ್ಟೋ ಜನರ ಹುಟ್ಟಿದ ದಿನ‌ ನಮೂದಿಸಲಾಗುವ ಬಗೆ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಹುಟ್ಟಿದಹಬ್ಬ ಇಲ್ಲವೇ ಹುಟ್ಟುಹಬ್ಬ ಎಂಬುದು ಹಳೆಯ ಗೂಸ್ಲು ಭಾಷೆಯಂತಾಗಿದೆ. ಅದನ್ನೇ 'ಹುಟ್ದಬ್ಬ' ಎಂದು ಅಪ್ಡೇಟ್ ಫಾರ್ಮಿನ ಶಾರ್ಟೆಸ್ಟ್ ಮತ್ತು ಲೇಟೆಸ್ಟ್ ಧ್ವನಿಯಲ್ಲಿ ಹೇಳಿದರೆ ಅದಕ್ಕೆ ಸಿಗುವ ಕಿಮ್ಮತ್ತೇ ವಂಡರ್ಫುಲ್. ಅಷ್ಟು ಮಾತ್ರವಲ್ಲದೇ ಅದು ವರ್ತಮಾನದ ತೀವ್ರ ನಾಗರಿಕತೆಯ ಶುಭಾಶಯ ಕೋರಿಕೆ ‌ಭಾಷಾಭಿವ್ಯಕ್ತಿ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಈ ಬಗೆಯ ಹತ್ತು ಹಲವು ಪರಿಭಾಷೆಗಳ ಬೆಡಗು ಬಿನ್ನಾಣಗಳ ಅಬ್ಬರ. ಅವುಗಳ ತರಹೇವಾರಿ ಕ್ರಿಯೆ, ಪ್ರತಿಕ್ರಿಯೆ ಮತ್ತು ಪ್ರೀತಿಕ್ರಿಯೆಗಳ ಮಹಾಪೂರ. ಅವುಗಳ ಕುರಿತು ವಿಚಿತ್ರ ಚರ್ಚೆ, ಸುಧೆಭರಿತ ಸಂವಾದಗಳನ್ನೇ ಏರ್ಪಡಿಸುವಷ್ಟು ಮಹತ್ತು. ಅಂತಹ ಯಥೇಚ್ಛ ವಸ್ತು ವಿನ್ಯಾಸಗಳೇ ವಾಟ್ಸ್ಯಾಪ್ ಯುನಿವರ್ಸಿಟಿಗಳಲ್ಲಿ ದೈತ್ಯಾಕಾರವಾಗಿ ಬೆಳೆದು ನಿಂತಿವೆ. ಅದೊಂದು ಬಗೆಯ ಸಂಮೋಹನ ಮತ್ತು ಚೋಲು ಸಂವೇದನೆಗಳ ಸಂಸ್ಕೃತಿಯಾಗಿ ಬೆಳೆದಿದೆ.

ಆದರೆ ವಿಷಯಾಸಕ್ತಿಯುಳ್ಳ ಕೆಲವರು ಯಾರ್ಯಾರದೋ ಬರ್ಥಡೇಗಳನ್ನು ಸಾಮಾಜಿಕ ಜಾಲತಾಣಗಳಲ್ಲೇ ಆಚರಿಸಿ ಸಂಭ್ರಮಿಸುತ್ತಾರೆ. ಇಂಥದನ್ನು ಆಗಾಗ ನಾನು ಕೊಂಚ ಸಂಕೋಚದಿಂದಲೇ ಛೇಡಿಸುತ್ತಿರುತ್ತೇನೆ. ಅದಕ್ಕೆ ಕೌಂಟರ್ ಎಂಬಂತೆ ಕಲಬುರ್ಗಿಯಲ್ಲಿರುವ ವಿಶ್ವವಿದ್ಯಾಲಯದ ಹಾಡುನಟಿಯೊಬ್ಬಳು ಥಟ್ಟಂತ ಪ್ರತಿಕ್ರಿಯಿಸುತ್ತಾಳೆ. " ಸಾಮಾಜಿಕ ಜಾಲತಾಣಗಳಲ್ಲೇ ನಿಶ್ಚಯ ಕಾರಣ, ಮದುವೆಗಳನ್ನೇ ಮಾಡುತ್ತಿರುವಾಗ ಇದೇನು ಮಹಾ. ಅದ್ಯಾಕೆ ಆಚರಿಸಬಾರದು ನೀವು ಕವಿಗಳು ನಿಮ್ಮ ಪುಸ್ತಕಗಳನ್ನೇ ಆನ್ ಲೈನ್ ಮೂಲಕ ಬಿಡುಗಡೆ ಮಾಡುತ್ತೀರಿ, ಇನ್ನೂ ಏನೇನೋ ಪಟ್ಟಂಗ ಹೊಡಿತೀರಿ. ನಮ್ಮ ಹುಡುಗ ಹುಡುಗಿಯರು ಆನ್ ಲೈನ್ ಮೂಲಕ ಫಸ್ಟ್ ನೈಟ್ ಆಚರಿಸಿಕೊಂಡಂತೆ ನೀನ್ಯಾಕೆ ಛೇಡಿಸುತ್ತೀಯೆಂದು " ನನ್ನನ್ನು ಆಗಾಗ ಕಿಚಾಯಿಸುತ್ತಾಳೆ. ಅವಳ ಅಗ್ರೆಸ್ಸಿವ್ ಪ್ರತಿರೋಧದ ಮಾತುಗಳಿಗೆ ನಾನು ದೂಸರಾ ಮಾತಾಡಲ್ಲ. ಏಕೆಂದರೆ ಅವಳು ಮಹಾ ಜಗಳಗಂಟಿ ಮತ್ತು ಅರ್ಧಸತ್ಯದ ಅಭಿಸಾರಿಕೆ.

ಅಷ್ಟಕ್ಕೂ ನನಗೆ ಹುಟ್ಟುಹಬ್ಬಗಳ ಸುಮಧುರ ಸಂಬಂಧಗಳಿಗಿಂತ ದುರ್ಬರ ದುರಿತಕಾಲಗಳದ್ದೇ ದಟ್ಟ ಪರಿಚಯ. ಉಣ್ಣಲು ಹುಗ್ಗಿ ಹೋಳಿಗೆಯ ಮಾತು ದೂರದ್ದು. ನನ್ನವ್ವ ನೆಲ್ಲಕ್ಕಿ ಅನ್ನ ಮಾಡುತ್ತಿದ್ದುದು ಉಗಾದಿ ದೀವಳಿಗೆ ಹಬ್ಬಕ್ಕೆ. ಹೆಚ್ಚೆಂದರೆ ಪರ ಊರಿಂದ ಬೀಗರು ಬಂದಾಗ, ಇಲ್ಲವೇ ಯಾವುದಾದರೂ ಅಮವಾಸ್ಯೆಯಂದು. ಹಾಗೆ ನಮ್ಮನೆಯಲ್ಲಿ ಅನ್ನ ಮಾಡಿದ ದಿವಸ ನನ್ನ ಸಹಪಾಠಿಗಳಾದ ಮಲ್ಲಪ್ಪ ಪೂಜಾರಿ, ಜೆಂಬೇರಾಳ ಮಡೆಣ್ಣ, ಬಾಷಾ ಅವರ ಮುಂದೆಲ್ಲ " ಇವತ್ತು ನಮ್ಮವ್ವ ನೆಲ್ಲಕ್ಕಿ ಅನ್ನ ಮಾಡಿದ್ದಾಳೆ "ಎಂದು ಜಂಭದಿಂದ ಕೊಚ್ಚಿಕೊಂಡು ಹೇಳುತ್ತಿದ್ದೆ.

ಯಾಕೆಂದ್ರೇ ಅವರ ಮನೆಗಳಲ್ಲಿ ಅಕಸ್ಮಾತ್ತಾಗಿ ಅನ್ನ ಮಾಡುತ್ತಿದ್ದರೂ ಅದು ನೆಲ್ಲಕ್ಕಿ ಅನ್ನವಾಗಿರಲೂ ಸಾಧ್ಯವೇ ಆಗಿರುತ್ತಿರಲಿಲ್ಲ. ಹೆಚ್ಚೆಂದರೆ ಅದು ನವಣಿ ಅಕ್ಕಿ ಅನ್ನ ಆಗಿರುತ್ತಿತ್ತು. ಈ ಅನ್ನದ ಪ್ರಸ್ತಾಪ ಯಾಕೆಂದರೆ ಅಕ್ಕಿಯ ಅನ್ನವೆಂಬುದು ನಮಗೆ ಅದೇನೋ ಪಂಚಾಮೃತ ಅಂತಾರಲ್ಲ ಅದನ್ನು ಉಂಡಷ್ಟೇ ಸಂಪ್ರೀತಿ. ಹೀಗಾಗಿ ಬಿಳಿ ಅಕ್ಕಿ ಅನ್ನವೆಂಬುದು ನಮಗೆ ಹಬ್ಬ ಹುಣ್ಣಿಮೆ ಜಾತ್ರೆಗಳಲ್ಲಿ ಉಣ್ಣಲು ಸಿಗುವ ಮೃಷ್ಟಾನ್ನದ ಸಂಭ್ರಮ. ಸಿದ್ರಾಮಯ್ಯ ಮತ್ತು ಮೋದಿ ಇಬ್ರಾಣೆಗೂ ಕೇಕು ಪೀಕುಗಳೆಂಬ ಅದ್ದೂರಿ ಹ್ಯಾಪಿ ಬರ್ಥಡೇ ಪಾರ್ಟಿಗಳ ಪರಿಚಯ ಖಂಡಿತಾ ನನಗಿಲ್ಲ.

ಅಬ್ಬಬ್ಬಾ ನಮ್ಮ ಡಾವಣಗೇರಿಯಲ್ಲೇ ಸಿದ್ರಾಮೋತ್ಸವ ಎಂಬ ಭಯಂಕರ ಬರ್ಥಡೇ ಜಾತ್ರೆ ಕಂಡು ನಾನಂತೂ ಕಕ್ಕಾಬಿಕ್ಕಿ ಆಗಿಬಿಟ್ಟೆ. ಯಾಕೆಂದರೆ ಅದು ದುಗ್ಗಮ್ಮನ ಜಾತ್ರೆಯನ್ನೇ ನಿವಾಳಿಸಿ ಬಿಟ್ಟಿತ್ತು. ಅದಾದ ಮೇಲೆ ನಮ್ಮ ಡಾವಣಗೇರಿ ಧಣಿ ಮಲ್ಲಣ್ಣನ ಹುಟ್ದಬ್ಬ ಸಹಿತ ಭಲೇ ಭಲೇ ಅನ್ನುವಂಗೆ ಆಗೋಯ್ತು. ಸಿನೆಮಾ ತಾರೆಗಳ ಹುಟ್ಟುಹಬ್ಬಗಳ ಹುಚ್ಚಾಟಗಳ ಬಗ್ಗೆ ಇನ್ನೊಮ್ಮೆ ಬರೆಯುವೆ. ಅಂದ್ಹಾಂಗ ಮೊನ್ನೆ ಸೆ. ೧೭ ರಂದು ಮೋದಿ ಹುಟ್ದಬ್ಬಕ್ಕೆಂದು ನಮೀಬಿಯಾದಿಂದ ಕೋಟಿ ಕೋಟಿ ಖರ್ಚಿನ ಎಂಟು ಚೀತಾಗಳು ವಿಮಾನಗಳ ಮೂಲಕ ಭಾರತಕ್ಕೆ ರಾಜವೈಭವದಿಂದ ಬಂದಿಳಿದವು. ಮೋದಿ ಹುಟ್ಟಿದ ಹಬ್ಬದ ನೆಪದಲ್ಲಿ ಕಣ್ಮರೆಯಾಗುತ್ತಿದ್ದ ಜೀವಸಂಕುಲದ ಆಗಮನ ಖುಷಿಯ ವಿಷಯ.

ಇಂತಹ ಸೆಲೆಬ್ರಿಟಿ ಹುಟ್ಟುಹಬ್ಬಗಳ ನಡುವೆ ನನ್ನಂತಹ ಕೊಟ್ಯಂತರ ಮಂದಿಗೆ ಹುಟ್ಟಿದ ದಿನದ ನೆನಪೇ ಇರುವುದಿಲ್ಲ. ನಮಗೆಲ್ಲ ಆಗ ಶಾಲೆಗಳಲ್ಲಿ ಮಾಸ್ತರರು ಬರೆದ ತಾರೀಖುಗಳೇ ನಮಗೆ ಹುಟ್ಟಿದ ದಿನಾಂಕಗಳು. ಅಂತೆಯೇ ಶಾಲೆಗಳ ಆರಂಭದ ಜೂನ್ ಒಂದನೇ ತಾರೀಖುಗಳಂದೇ ಎಲ್ಲಕಡೆಗೂ ನನ್ನ ವಾರಗೆಯವರ ಹುಟ್ಟಿದ ತಾರೀಖುಗಳು ಸಾಮೂಹಿಕವಾಗಿ ಹುಟ್ಟಿಕೊಂಡಿವೆ. ಹೀಗಿರುವಾಗ ನನ್ನ ಅಪ್ಪ ಅಮ್ಮಗಳಂಥವರ ಹುಟ್ಟಿದ ದಿನಗಳು ಒತ್ತಟ್ಟಿಗಿರಲಿ, ಅವರು ನಮ್ಮನ್ನು ಹೆತ್ತ ದಿನಗಳ ಹುಡುಕಾಟದ ಕಥನಗಳೇ ಕುತೂಹಲದಾಯಕ. ಅದಕ್ಕೆ ಹೊರತಾಗದ ರೊಟ್ಟಿಬುತ್ತಿ ನಿಮಗಾಗಿ ಇಲ್ಲಿದೆ.
‌ * * ‌‌‌ *
ಇನ್ನೇನು ನಸುಕು ಹರಿದು, ಹೊತ್ತು ಹೊಂಟರೆ ಮಾನೌಮಿ ಅಮಾಸಿ ಇತ್ತು. ಅದು ಆಯಿತವಾರ ಅಮಾಸಿ. ಅದೇ ಅಮಾಸಿ ದಿನ ನೀನು ಹುಟ್ಟಿದ್ದು., ಎಂದು ಅವ್ವ ನಾನು ಹುಟ್ಟಿದ ಅಂದಿನ ಅಮವಾಸ್ಯೆಯ ವಾರ, ಗಳಿಗೆ, ತೇದಿಗಳನ್ನು ಸುಡುವ ಸತ್ಯಗಳಂತೆ ಕರಾರುವಾಕ್ಕಾಗಿ ಹೇಳುತ್ತಿದ್ದಳು. ಹಾಗೆ ಹೇಳುವಾಗ ಅವಳ ಮುಖ, ಮೈ ಮನದ ತುಂಬೆಲ್ಲ ಹಚ್ಚಹಸಿರಿನ ಜವಾರಿಖುಷಿ ಅರಳಿ ಪರಿಮಳಿಸುತಿತ್ತು. ಅದು ಅವಳ ಸಟಪಟ ಖುಷಿಯಾಗಿರುತ್ತಿರಲಿಲ್ಲ. ಹಂಡೆ ಹಾಲು ಕುಡಿದಂತಹ ಖಂಡುಗ ಖಂಡುಗ ಖುಷಿ‌. ಚುಕ್ಕಿಯೊಳಗಣ ಕನಸುಗಳು ಕುಣಿದಾಡಿದ ವಿಸ್ಮಯದ ಖುಷಿಯ ಪರಾಕಾಷ್ಠೆ ಅದಾಗಿರುತ್ತಿತ್ತು.

ಅದು ಬಿಟ್ಟರೆ ನಮ್ಮೂರಿನ ಗಾಂವಟಿ ಸಾಲಿಯ ಕಡಕಲ್ಲ ರಾಮಚಂದ್ರಾಯ ಮಾಸ್ತರ, ದೌತಿ ಗುಳ್ಳಿಯಲ್ಲಿ ಅದ್ದಿ ಬರೆದಿಟ್ಟ ಟಾಕು ಲೆಕ್ಕಣಿಕೆ ರೆಕಾರ್ಡ್ಸ್. ಅವು ಆ ಕಾಲದ ನಮ್ಮೂರ ಗೂಗಲ್ ಜಗತ್ತಿನ ಇ - ಮೇಲ್ ದಾಖಲೆಗಳು. ಊರಲ್ಲಿ ಯಾರೇ ಹುಟ್ಟಲಿ, ಯಾರೇ ಸಾಯಲಿ ರಾಮಚಂದ್ರಾಯ ಮಾಸ್ತರ ಬರೆದಿಟ್ಟುಕೊಳ್ಳುತ್ತಿದ್ದ ವಾರ, ತಾರೀಖು, ನಕ್ಷತ್ರ, ರಾಶಿಗಳನ್ನು ಸರ್ಕಾರಿ ಸರ್ಟಿಫಿಕೇಟ್ ತರಹ ನಮ್ಮೂರಲ್ಲಿ ಎಲ್ಲರೂ ಅವನ್ನೇ ಉಲ್ಲೇಖಿಸುತ್ತಿದ್ದರು. ಸರಕಾರಿ ಶಾಲೆಗೆ ಸೇರಿಸಲು ಅವು ಅಧಿಕೃತ ದಾಖಲೆಗಳಂತೆ ಬಳಕೆಯಾಗುತ್ತಿದ್ದವು. ಅನಕ್ಷರಸ್ಥರಾದ ನನ್ನ ಅಪ್ಪ ಅವ್ವ ಕೂಡಾ ರಾಮಚಂದ್ರಾಯ ಮಾಸ್ತರ ಬರೆದುಕೊಟ್ಟ ದೌತಿಗುಳ್ಳಿ ಲೆಕ್ಕಣಿಕೆ ಸರ್ಟಿಫಿಕೇಟ್ ಗಳನ್ನೇ ಅವಲಂಬಿಸಿದ್ದರು.

ಮಲ್ಲಣ್ಣಾ, ನೀನು ಮೂರು ತಿಂಗಳ ಕೂಸಿದ್ದಿ. ಗವೀ ಭೀಮಾಶಂಕರ ಅವಧೂತರು ಇಚ್ಛಾಮರಣ ಸ್ವೀಕರಿಸುತ್ತಾರೆಂಬ ದೇಹತ್ಯಾಗದ ಸದ್ಗತಿ ಸಂಗತಿ ಸುತ್ಮುತ್ತ ನಾಕಿಪ್ಪತ್ತು ಹಳ್ಳಿಗಳಿಗೂ ಸುದ್ದಿ ಆಗಿತ್ತು.

ನಿಮ್ಮಪ್ಪ- ನಾನು, ಇಬ್ಬರೂ ಸೇರಿ ಭೀಮಾಶಂಕರ ಅವಧೂತರ ದರ್ಶನ ಪಡೆಯಲು ಮೂರು ತಿಂಗಳ ಕೂಸು ನಿನ್ನನ್ನೂ ಎತ್ಕೊಂಡು ಸಾಧು ಮುತ್ಯಾನ ಗವಿಕಡೆ ಹೋದಿವಿ. ಗವಿ ಮುಂದಿನ ಪೌಳಿ ತುಂಬೆಲ್ಲಾ ಜನ ಅಂದ್ರೇ ಜನಾ...ಜಾತ್ರಿ. ಇಂಗ್ರೇಜಿ ನಾಡಿನ ಕಡೆಯ ದೂರದ ಬಿಜಾಪುರ, ಬಾಗಲಕೋಟಿ, ಸೊಲ್ಲಾಪುರ ಅಲ್ಲದೇ ಅಂಕಲಕೋಟಿ ಕಡೀಂದ್ಲೂ ಹಿಂಡು ಹಿಂಡಾಗಿ ಭಕ್ತರು ಬಂದಿದ್ರು. ನಮ್ಮ ಕಣ್ಮುಂದೆ ಭೀಮಾಶಂಕರರು ಸಡಗರದಿಂದ ಬದುಕಿದ್ದಾಗಲೇ ಸದ್ಗತಿ ಸಂಭ್ರಮದ ಸಮಾರಾಧನೆ ಅದಾಗಿತ್ತು.

ಸತ್ಪುರುಷ ಭೀಮಾಶಂಕರ ಸಂತರು ತಾವು ಜೀವಂತವಿದ್ದಾಗಲೇ ಗಚ್ಚಿನ ನೆಲಗವಿಯೊಳಗೆ ತಮ್ಮ ಸಮಾಧಿ ತಾವೇ ಕಟ್ಟಿಕೊಂಡರು. ಖುದ್ದು ಸಮಾಧಿ ಸ್ಥಿತಿಯಲ್ಲಿ ಕುಂತು ಧೇನಸ್ಥ ಕಾಯದ ಅಳತೆ ಮಾಡಿಕೊಂಡು ಸ್ವತಃ ತನ್ನ ಸಮಾಧಿ ತಾನೇ ಸಿದ್ದಪಡಿಸಿಕೊಂಡಿದ್ದ ಅವರದೇ ಸಿದ್ದಸಮಾಧಿ ಅದು. ಅದರ ಮುಂದೆ ನೆಲದ ಮೇಲೆ ಕುಂಚಿಗೆ ಹಾಸಿ ಅದರ ಮೇಲೆ ನಿನ್ನನ್ನು ಮಲಗಿಸಿದೆವು.

ನಾಲ್ಕು ನೀಲಾಂಜನಗಳ ತಣ್ಣನೆಯ ಬೆಳಕು, ಗವಿಯೊಳಗಿರುವ ಮಂದಗತ್ತಲೆ ಕಳೆದಿತ್ತು. ಒಂದೇ ಒಂದು ಸಣ್ಣಕೂದಲು ಬಿದ್ರೂ ಅದರ ಸಪ್ಪಳ ಕೇಳಿಸಬೇಕು, ಅಷ್ಟು ನಿಶ್ಚಿಂತ ಶಾಂತ ವಾತಾವರಣ ಅಲ್ಲಿತ್ತು. ಗವಿಯ ಒಳಗೂ ಹೊರಗೂ ಧ್ಯಾನ ಶಪಥದ ಏಕಾಂತ. ಮಹಾಂತ ಮಡಿವಾಳರ ನಿರಂತರ ಜಪದ ಮಳೆ. ನೂರಾರು ಏಕತಾರಿಗಳ ನಾದ ನಿನಾದ. ಲಯಬದ್ಧ ಚಪ್ಪಳಿಗೆ ತಾಳಗಳ ಕರ್ಪೂರದಾರತಿ. ಕಡ್ಡಿಬತ್ತಿ ಮಂಗಳಾರತಿಯ ಕಾರುಣ್ಯನಿಧಿ ಪದಗಳು. ಹೊರಗಿನ ಅಂತಹ ನಿನಾದದ ನಡುವೆಯೂ ಗವಿಯೊಳಗಿನ ಭೀಮಾಶಂಕರರು ಧೇನಸ್ಥರು.

(ಹೌದು ಈಗಲೂ ನಮ್ಮೂರ ಭೀಮಾಶಂಕರ ಗವಿಯೊಳಗ ಹೋಗಿ ಕುಂತರೆ ಧ್ಯಾನನಿಧಿಯ ಬ್ರಹ್ಮಾಂಡದ ಪ್ರಶಾಂತತೆ ಮನಗಾಣಬಹುದು. ಅದೊಂದು ಅವರ್ಣನೀಯ ಮನೋಸ್ಥಿತಿ. ಶಾಂತ ಚಿತ್ತದಿಂದ ಕುಂತು ಅನುಭವಿಸುವ ಧ್ಯಾನ ಸಾಕ್ಷಾತ್ಕಾರವದು. ಕೆಲವು ವರ್ಷಗಳ ಕೆಳಗೆ ಸನ್ಮಿತ್ರ ರಹಮತ್ ತರೀಕೆರೆ ನಮ್ಮೂರಿಗೆ ಬಂದಾಗ, ಮಹಾರಾಜ ಭೀಮಾಶಂಕರ ಅವಧೂತರ ಆ ಗವಿಯೊಳಗ ಕರಕೊಂಡು ಹೋಗಿ ಕೂಡಿಸಿದ್ದೆ. ಆಸಾಮಿ ಅಲ್ಲೇ ತಳವೂರಿದ. ಬೇಗ ಎದ್ದೇಳಲಿಲ್ಲ. ತಾಸುಗಟ್ಟಲೇ ನಿವಾಂತ ಕುಂತಿದ್ದರು.)

ಧ್ಯಾನ ಮುಗಿಸಿ ಸಾವಕಾಶವಾಗಿ ಕಣ್ತೆರೆದ ಭೀಮಾಶಂಕರರ ಮಾರೀಮ್ಯಾಲ ದೈವತ್ವದ ಲಕ್ಷಣ ಲಕಲಕ ಅಂತ ಹೊಳಿತಿತ್ತು. ನಿನ್ನನ್ನು ಎತ್ತಿಕೊಂಡ ಅವರು, ಕ್ಷಣಹೊತ್ತು ತಮ್ಮ ತೊಡೆಮೇಲೆ ಮಲಗಿಸಿಕೊಂಡರು. ಥಳ ಥಳ ಹೊಳೆವ ನೀಲಾಂಜನಗಳ ತಂಬೆಳಕ ಮರೆಯಲ್ಲಿ ನಿಂತಿದ್ದ ಕನ್ಯಾಶಿಷ್ಯೆ ಲಕ್ಷ್ಮೀಬಾಯಿಯನ್ನು ಕೈಸನ್ನೆ ಮಾಡಿ ಕರೆದು, ಅವಧೂತರು ಆಕೆ ಕಿವಿಯಲ್ಲಿ ಅದೇನೋ ಪಿಸುದನಿಯಲಿ ಹೇಳಿದರು.

ಆಶ್ರಮದ ಅಂಗಳದಲ್ಲಿ ಒಡಾಡಿಕೊಂಡಿದ್ದ ಉಡುಗಿ ಮಡಿಗಳನುಟ್ಟು, ಮಗ್ಗಿ ಕುಪ್ಪಸ ತೊಟ್ಟ ಇನ್ನೊಬ್ಬ ಕನ್ಯಾಶಿಷ್ಯೆ ಕೆಂಪುವಸ್ತ್ರದಲ್ಲಿ ಅದೇನೋ ಮುಚ್ಚಿ ತಂದಳು. ಆಮೇಲೆ ಅವಧೂತರು ನಿನ್ನ ಕೊರಳಿಗೆ ಕೆಂಪುವಸ್ತ್ರದಲ್ಲಿದ್ದ ಏಕಮುಖಿ ರುದ್ರಾಕ್ಷಿ ಕಟ್ಟಿದರು. ಗಂಭೀರಾಗಿ ಬಾಳುಕಂದಾ ಅಂತ ನನ್ನ ತಲೆ ಮೇಲೆ ಹಸ್ತ ಇಟ್ಟು ಹರಸಿದ್ದನ್ನು ಅವ್ವ ಆಗಾಗ ಹೇಳುತ್ತಿದ್ದಳು. ಅಂದು ಭೀಮಾಶಂಕರರು, ನಾನು ಹುಟ್ಟಿದ ಆದಿತ್ಯವಾರದ ದಿವಸ ಲೆಕ್ಕ ಹಾಕಿದಾಗ ಅದು ಕಾಕತಾಳೀಯ ಎಂಬಂತೆ ಅಕ್ಟೋಬರ್ ಎರಡು ಆಗಿತ್ತು. ಅದುವೇ ಕಡಕಲ್ಲ ರಾಮಚಂದ್ರಾಯ ಗಾಂವಟಿ ಸಾಲೀಮಾಸ್ತರ ಕೂಡಾ ಬರೆದಿಟ್ಟ ನಾನು ಹುಟ್ಟಿದ ತಾರೀಖು.

ಅವ್ವಗೆ ಅದು ಗಾಂಧೀ ಜಯಂತಿ ಅನ್ನುವ ಕಲ್ಪನೆ ಕೂಡಾ ಇಲ್ಲ. ಅಷ್ಟಕ್ಕೂ ನಾನು ಹುಟ್ಟಿದ ದಿನಾಂಕವನ್ನು ಎಲ್ಲೂ ಉಲ್ಲೇಖಿಸದ ಅವ್ವ 'ಆಯಿತವಾರ, ಮಾನೌಮಿ ಅಮಾಸಿ ದಿನ, ಹೊತ್ತ ಹೊಂಡೋ ಮುಂದ' ಎಂದು ಗಟ್ಟಿ ದನಿಯಲ್ಲಿ ಹೇಳುವುದನ್ನು ಮಾತ್ರ ಯಾವತ್ತೂ ಮರೆಯುತ್ತಿರಲಿಲ್ಲ.

ಸರಕಾರಿ ನೌಕರಿಗೆ ಸೇರಿ ಮದುವೆ, ಮಕ್ಕಳಾದ ಮೇಲೆಯೇ ನನಗೆ ಹುಟ್ಟು ಹಬ್ಬಗಳ ಅಷ್ಟಿಷ್ಟು ಪರಿಚಯವಾದುದು. ಅದೂ ನನ್ನ ಮಕ್ಕಳ ಹುಟ್ಟುಹಬ್ಬಗಳ ಆಚರಣೆಯಿಂದಾಗಿ. ಕೇಕ್ ಕಟ್ ಮಾಡಿ ಇಂಗ್ಲಿಷಿನಲ್ಲಿ ಹ್ಯಾಪಿ ಬರ್ತಡೇ ಅಂತ ರಾಗ ಎಳೆದು ಹೇಳುವುದು ಗೊತ್ತೇ ಇರಲಿಲ್ಲ. ನನ್ನವ್ವಗಂತೂ ಅವುಗಳ ಚಿಟಿಕೆಯಷ್ಟು ನಾತವೇ ಬಡಿದಿರಲಿಲ್ಲ. ಪಿಲಾಕಿ (ಪ್ಲೇಗ್) ಬಂದು ಮನೆ ಮಠಗಳಿಗೂ ಬಾಗಿಲಿಟ್ಟಿತ್ತು. ಆಕೆಗೆ ಅಂತಹ ಪಾರಮ್ಯದ ದುರಿತಕಾಲಗಳ ದ್ಯಾಸವಿರುತಿತ್ತು. ಅವಳ ಅಂತಃಕರಣ ಅಂತಹದಕ್ಕೇ ಹೆಚ್ಚು ಮಿಡಿಯುತ್ತಿತ್ತು.

ಆಗ ಎತ್ತಿನ ಗಾಡಿಗಳಲ್ಲಿ ಹೆಣಗಳನ್ನು ತಗೊಂಡ್ಹೋಗಿ ಒಂದೇಒಂದು ದೊಡ್ಡ ಗೋರಿ ತೋಡಿ ಸಾಮೂಹಿಕ ದಫನ್ ಮಾಡುವುದನ್ನು ಹೇಳುತ್ತಿದ್ದಳು. ಅದೇ ಮುಜೇತಿ ತಮ್ಮ ಲಗ್ನವಾದುದನ್ನು ಸಹಿತ ಹೇಳಲು ಮರೀತಿರಲಿಲ್ಲ. ತನ್ನನ್ನು ಹೆತ್ತತಾಯಿ ಸಾವಂತ್ರೀ, ತನ್ನಪ್ಪ ಜಾಲಿಬೆಂಚಿಯ ಸಾಹೇಬಗೌಡರ ಬದುಕಿನ ಕಾಲಮಾನಗಳನ್ನು ಕೂಡ ಅವ್ವ ಹಾಗೆ ತಳಕು ಹಾಕಿ ಹೇಳುತ್ತಿದ್ದಳು. ರಜಾಕಾರರ ಸಪಾಟಿಯಷ್ಟೊತ್ತಿಗೆ ತನ್ನರ್ಧ ಆಯುಷ್ಯೇ ಕಳೆದಿತ್ತು. ಹೀಗೆ ಹುಟ್ಟು, ವಯಸ್ಸಿನ ಸಂಗತಿಗಳನ್ನು ಸಂದರ್ಭೋಚಿತವಾಗಿ ಗುರುತಿಸುತ್ತಿದ್ದಳು.

ಆದರೆ ಸಣ್ಣಾಂವಿದ್ದಾಗಿಂದಲೂ ನನಗೆ ಗಾಂಧೀ ಜಯಂತಿಯ ಪರಿಚಯವಿತ್ತು. ವರ್ಷ ವರ್ಷವೂ ಆಚರಿಸುವ, ಮಿಗಿಲಾಗಿ ಆದಿನ ನಮ್ಮ ಸಾಲಿಯ ಸೂಟಿಯ ಖುಷಿಯ ವಿಷಯ. ಹೀಗಾಗಿ ಅದರ ಪಕ್ಕಾ ಪರಿಚಯ. 'ಅಂದಹಾಗೆ ಭೀಮಾಶಂಕರ ಅವಧೂತರು ಹೇಳಿದಂತೆ ಅಕ್ಟೋಬರ್ ಎರಡು, ನಾನು ಹುಟ್ಟಿದ ದಿನ'. ಅದು ಹಡೆದವ್ವ ಕೊಟ್ಟ ಬರ್ಥ್ ಸರ್ಟಿಫಿಕೆಟ್.

ಅದೇನು ಆದಿನ ನನಗೆ ಹಬ್ಬದ ದಿನವಾಗಿ ಯಾವತ್ತೂ ಅನಿಸಿಲ್ಲ. ಯಾಕೆಂದರೆ ಕೇಕ್ ಕಟ್ ಮಾಡಿ ಹ್ಯಾಪಿ ಬರ್ತಡೇ ಅಂತ ಹುಟ್ಟುಹಬ್ಬ ಆಚರಣೆ ಮಾಡುವ ಪರಿಪಾಟ ಮೊದಲಿಂದಲೂ ನನಗಿಲ್ಲ. ಅಂದಹಾಗೆ ಅರವತ್ತೇಳರ ಏರು ಹರೆಯಕ್ಕೆ ಕಾಲಿಟ್ಟ ಖುಷಿಯಲ್ಲಿದ್ದೇನೆ.

-ಮಲ್ಲಿಕಾರ್ಜುನ ಕಡಕೋಳ
93410 10712

ಈ ಅಂಕಣದ ಹಿಂದಿನ ಬರಹಗಳು
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...