Date: 22-01-2021
Location: ಬೆಂಗಳೂರು
ಕಥಾ ಸಾಹಿತ್ಯ ಬರಹದಿಂದ ಹೊಸ ಹೊಸ ಸಾಧ್ಯತೆಗಳು ವಿಸ್ತಾರ ಪಡೆಯುತ್ತವೆ ಎಂದು ಪತ್ರಕರ್ತ ಹಾಗೂ ಕಥೆಗಾರ ಜೋಗಿ ಅಭಿಪ್ರಾಯಪಟ್ಟರು.
ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಫೇಸ್ಬುಕ್ ಲೈವ್ನಲ್ಲಿ ಇ - ಬುಕ್, ಆಡಿಯೋ ಬುಕ್ ಹಾಗೂ ಮುದ್ರಿತ ರೂಪದ ಹಾಗೂ ಲೇಖಕ ಅಜಿತ ಹರೀಶಿ ಅವರ `ಮೂಚಿಮ್ಮ’ ಕತಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಪ್ರತಿಯೊಬ್ಬರು ಕವಿತೆ ಬರೆಯುವ ಮೂಲಕ ಸಾಹಿತ್ಯ ಪ್ರವೇಶಿಸುತ್ತಾರೆ. ಅದರಂತೆ ಕಥೆ ಬರೆಯಲು ಆರಂಭಿಸಿದರೆ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ‘ಹತ್ತು ವರ್ಷದ ಹಿಂದೆ ಅಂತಾರಾಷ್ಟ್ರೀಯ ಹಾಗೂ ಭಾರತೀಯ ಸಾಹಿತ್ಯರಂಗವನ್ನು ಗಮನಿಸಿದಾಗ ಸಣ್ಣಕತೆಗಳಿಗೆ ಪ್ರಾಮುಖ್ಯತೆ ಕಡಿಮೆ ಇರುತ್ತಿತ್ತು. ಸಣ್ಣಕತೆಗಳನ್ನು ಮುಖ್ಯವಾಗಿ ಸಾಹಿತ್ಯ ಪತ್ರಿಕೆಗಳಲ್ಲಿ ಅಥವಾ ದೀಪಾವಳಿ ಇಲ್ಲವೇ ಯುಗಾದಿ ವಿಶೇಷಾಂಕಗಳಲ್ಲಿ ಮಾತ್ರ ಕಾಣಬಹುದಿತ್ತು. ಓದುಗರ ಸಂಖ್ಯೆಯು ಹೆಚ್ಚಿರಲಿಲ್ಲ. ಆದರೆ ಈಗ ಕಥೆಗಾರರ ಸಂಖ್ಯೆ ಹೆಚ್ಚುತ್ತಿದೆ. ಉತ್ತರ ಕರ್ನಾಟಕದ ಅನೇಕ ಲೇಖಕರು ಮೌಲಿಕ ಕತೆಗಳನ್ನು ಬರೆಯುತ್ತಿದ್ದಾರೆ ಎಂದು ಹೇಳಿದರು.
‘ತನ್ನ ಸ್ನೇಹ ಬಳಗವನ್ನು ವಿಸ್ತರಿಸಿಕೊಂಡಿರುವ ಅಜಿತ್ ಅವರು ತಮ್ಮ ಬರಹಗಳಿಂದ, ಕತೆಗಳಿಂದ ಯುವ ತಲೆಮಾರನ್ನು ಪ್ರಭಾವಿಸುತ್ತಿದ್ದಾರೆ. ಅದು ಅವರ ವಸ್ತುನಿಷ್ಟತೆಗೆ ಸಾಕ್ಷಿಯಾಗಿದೆ. ವೈದ್ಯರಾಗಿ ವ್ಯಕ್ತಿಯ ಖಾಯಿಲೆಯನ್ನು ಕೂಡಲೆ ಕಂಡುಹಿಡಿಯುವಂತೆ ಕತೆಯನ್ನು ಹೆಣೆಯುವ ಸೂಕ್ಷವಾಗಿ ಗ್ರಹಿಸುವ ಶಕ್ತಿ ಅವರಲ್ಲಿದೆ’ ಎಂದು ಪ್ರಶಂಸಿಸಿದರು.
ಕೃತಿಕಾರ ಅಜಿತ ಹರೀಶಿ ಮಾತನಾಡಿ ‘ನಾನೊಬ್ಬ ಆಕ್ಸಿಡೆಂಟಲ್ ಬರಹಗಾರ. ಏಕೆಂದರೆ ಓದುವುದೆಂದರೆ ನನಗೆ ಬಹಳ ಖುಷಿಯ ವಿಷಯ. ಓದಿನ ಸುಖದ ಪಯಣದಲ್ಲಿ ನನ್ನದೇ ಭಾವನೆ, ತುಡಿತ ಹಾಗೂ ವೈದ್ಯ ವೃತ್ತಿಯ- ಹಳ್ಳಿಯ ಪರಿಸರ ಅನುಭವ ಲೋಕವನ್ನು ಅಭಿವ್ಯಕ್ತಿಸಲು ಕತೆಗಳನ್ನು ಬರೆಯಲು ಆರಂಭಿಸಿದೆ. ಹಾಗೆಯೇ ಹಲವು ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು ಲೇಖನಿ ಹಿಡಿದೆ’ ಎಂದು ತಮ್ಮ ಬರವಣಿಗೆಯ ಹಾದಿಯನ್ನು ತೆರೆದಿಟ್ಟರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಹಾಗೂ ಮೈಲ್ಯಾಂಗ್ ಬುಕ್ಸ್ ಸಂಸ್ಥಾಪಕ ಪವಮಾನ್ ಅಥಣಿ ಸೇರಿದಂತೆ ಸಾಹಿತ್ಯಾಸಕ್ತರಿದ್ದರು.
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...
ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...
©2024 Book Brahma Private Limited.