Date: 17-04-2021
Location: ಬೆಂಗಳೂರು
ಆಯಾ ಕಾಲಘಟ್ಟದ ವಸ್ತುಸ್ಥಿತಿಯನ್ನೇ ಮಹಿಳಾ ಸಾಹಿತಿಗಳು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಲೇಖಕಿ ಡಾ. ಪದ್ಮಿನಿ ನಾಗರಾಜ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ್ ಪರಿಷನ್ಮಂದಿರದಲ್ಲಿ ಶನಿವಾರ ಜರುಗಿದ ಮಹಿಳಾ ಸಾಹಿತ್ಯ ಸಂಪುಟಗಳ ಕುರಿತ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಅವರು ‘ಕಥಾ ಸಂಪುಟ’ ಕುರಿತು ವಿಷಯ ಮಂಡಿಸಿದರು.
ಮಹಿಳಾ ಸಾಹಿತ್ಯ ಎಂದರೆ ಬರೀ ಅಡುಗೆ ಮನೆ ಸಾಹಿತ್ಯ ಎನ್ನಲಾಗುತ್ತಿದೆ. ಆದರೆ, ಆಯಾ ಕಾಲಘಟ್ಟದ ಮಹಿಳಾ ಸಾಹಿತ್ಯವನ್ನು ಪರಿಗಣಿಸಿದರೆ; ಅದು ವಸ್ತುಸ್ಥಿತಿಯನ್ನು ಬಿಂಬಿಸುವ ಕೆಲಸ ಮಾಡಿದೆ. ಸರಸ್ವತಿಬಾಯಿ ರಾಜವಾಡೆ ಅವರ ‘ಅವಳ ಉದ್ಧಾರ’ ಕಥೆಯು ವಿಧವೆ-ವಿಧುರ ಜೀವನ ಪದ್ಧತಿಯನ್ನು ಬಿಂಬಿಸಿದರೆ, ಶ್ಯಾಮಲಾದೇವಿ ಬೆಳಗಾಂವ್ಕರ್ ಅವರು ದಲಿತರ ತಳ ಸಮುದಾಯದ ಮಹಿಳೆಯರ ದುಃಖ-ಕಷ್ಟ ಹಾಗೂ ನಿಸ್ಸಹಾಯಕತೆಯ ಚಿತ್ರಣ ನೀಡಿದ್ದಾರೆ. ತ್ರಿವೇಣಿ ಅವರು ವಸ್ತುಸ್ಥಿತಿಯನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾರೆ. ಕೊಡಗಿನ ಗೌರಮ್ಮ ಅವರು ಜಾತಿ-ಮದುವೆ-ಅಂತರ್ ಜಾತಿಯ ವಿವಾಹ, ಪ್ರೀತಿಯ ಗಟ್ಟಿತನ ಇತ್ಯಾದಿ ಕುರಿತ ಸಮರ್ಥ ನಿರ್ಧಾರಗಳಿವೆ. ವೈದೇಹಿ, ಎಚ್.ಎಸ್. ಪಾರ್ವತಿ, ಬಾನು ಮುಷ್ತಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬರೆಯುತ್ತಿರುವ ಲೇಖಕಿಯರ ಸಾಹಿತ್ಯವೂ ಸಹ ವಸ್ತುಸ್ಥಿತಿಯನ್ನು ಬಿಂಬಿಸುತ್ತದೆ. ಮಹಿಳಾ ಸಾಹಿತ್ಯವು ಎಂದಿಗೂ ಸಮಾಜದಿಂದ ವಿಮುಖವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಕಥಾ ಸಂಪುಟದಲ್ಲಿ 37 ಕಥೆಗಳು: ಮಹಿಳಾ ಸಾಹಿತ್ಯ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಒಟ್ಟು 8 ಬೃಹತ್ ಸಂಪುಟಗಳ ಪೈಕಿ ಕಥಾ ಸಂಪುಟವೂ ಒಂದು. ಹಳೆಯ ಕಾಲದ ಲೇಖಕಿಯರೂ ಸೇರಿದಂತೆ ಇತ್ತೀಚೆಗೆ ಬರೆಯುತ್ತಿರುವ ಲೇಖಕಿಯರ ಒಟ್ಟು 37 ಕಥೆಗಳನ್ನು ಸಂಕಲಿಸಲಾಗಿದೆ. ಭಾಷೆ, ಶೈಲಿ, ವಸ್ತು, ತಂತ್ರ ಹೀಗೆ ವೈವಿಧ್ಯಮಯವಾದ ಆಯಾಮಗಳಲ್ಲಿ ನೋಡಿದಾಗಲೂ ಗುಣಮಟ್ಟದಿಂದ ಉತ್ತಮವಾಗಿವೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮನು ಬಳಿಗಾರ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಕಸಾಪ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ ವಂದಿಸಿದರು.
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...
ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...
©2024 Book Brahma Private Limited.