Date: 21-07-2021
Location: ಗಾಂಧೀ ಭವನ, ಬೆಂಗಳೂರು
ಭ್ರಷ್ಟಾಚಾರವೇ ತುಂಬಿರುವ ರಾಜಕಾರಣದಲ್ಲಿ ಅಪರೂಪ ಎನ್ನಬಹುದಾದ ಕಳಂಕರಹಿತ ರಾಜಕಾರಣಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಖ್ಯಾತ ಸಂಶೋಧಕ ಡಾ. ಹಂಪ ನಾಗರಾಜಯ್ಯ ಅವರು ಹೇಳಿದರು.
ಬೆಂಗಳೂರಿನ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಹಾಗೂ ಗಾಂಧೀ ಶಾಂತಿ ಪ್ರತಿಷ್ಠಾನ ಮತ್ತು ಕಲಬುರಗಿಯ ಕುಟುಂಬ ಪ್ರಕಾಶನ ಸಂಯುಕ್ತಾಶ್ರಯದೊಂದಿಗೆ ಪ್ರೊ.ಎಚ್.ಟಿ ಪೋತೆ ಅವರ ‘ಬಾಬಾಸಾಹೇಬರೆಡೆಗೆ’ ( ಶ್ರೀ ಮಲ್ಲಿಖಾರ್ಜುನ ಖರ್ಗೆಜೀ ಅವರ ಜೀವನಕಥನ ಕೃತಿ) ಬಿಡುಗಡೆ ಹಾಗೂ ವಿಶೇಷೋಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿ. ಬಹುವರ್ಷಗಳಿಂದ ರಾಜಕಾರಣದಲ್ಲಿದ್ದರೂ ಕಳಂಕರಹಿತರಾಗಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷದ ಮುಖಂಡರೊಂದಿಗೆ ಸಮಾನ ಅಂತರ ಇಟ್ಟುಕೊಂಡಿದ್ದು, ಅಧಿಕಾರ ಇರಲಿ; ಬಿಡಲಿ, ಎಲ್ಲರಿಗೂ ಆಪ್ತರಾಗಿರುವುದು ಅವರ ವ್ಯಕ್ತಿತ್ವದ ಘನತೆಯನ್ನು ತೋರುತ್ತದೆ ಎಂದು ಹೇಳಿದರು.
ಅಗ್ಗದ ಹೇಳಿಕೆಗಳನ್ನು ನೀಡುವ ನಾಯಕರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೋಲಿಸಲಾಗದು. ಅವರದು ತುಂಬಾ ಗಂಭೀರ ವ್ಯಕ್ತಿತ್ವ, ಟೀಕಿಸಬೇಕೆಂತಲೂ ಅವರು ಮಾತನಾಡುವುದಿಲ್ಲ. ತಮ್ಮದೇ ಪಕ್ಷವು ಆಡಳಿತದಲ್ಲಿದ್ದರೆ ಅದರ ಸಾಧಕ-ಬಾಧಕಗಳನ್ನು ಹೇಳುವ ಧೈರ್ಯ ತೋರುವ ಮೂಲಕ ತಮ್ಮ ಪಕ್ಷ ಮಾತ್ರವಲ್ಲ ವಿರೋಧ ಪಕ್ಷದ ಸದಸ್ಯರಲ್ಲೂ ಗೌರವ ಭಾವನೆ ಉಳಿಸಿಕೊಂಡು ಬಂದವರು. ಇಂತಹ ವ್ಯಕ್ತಿತ್ವವನ್ನು ‘ಬಾಬಾಸಾಹೇಬರೆಡೆಗೆ’ ಕೃತಿಯು ಒಳಗೊಂಡಿದೆ ಎಂದು ಪ್ರಶಂಸಿಸಿದರು.
ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಅವರು ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಗಾಂಧಿ ಶಾಂತಿ ಪ್ರತಿಷ್ಠಾನ ಉಪಾಧ್ಯಕ್ಷ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ,ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ,ಮುಖ್ಯ ಅತಿಥಿಗಳಾಗಿದ್ದರು.
ಸುಳ್ಳಿನ ಸಾಮ್ರಾಜ್ಯದ ಮೇಲೆ ಅಧಿಕಾರ:
ಕವಿ ಹಾಗೂ ಸಂಸ್ಕೃತಿ ಚಿಂತಕ ಡಾ ಮೂಡ್ನಾಕೂಡು ಚಿನ್ನಸ್ವಾಮಿ ಅವರು ‘ಪ್ರಸ್ತುತ ಭಾರತ: ಗಾಂಧೀ ಮತ್ತು ಬಿ ಆರ್.ಅಂಬೇಡ್ಕರ್’ ವಿಷಯವಾಗಿ ಉಪನ್ಯಾಸ ನೀಡಿ ‘ ಪ್ರಜಾಪ್ರಭುತ್ವದ ನೆಪದಲ್ಲಿ ಇಂದು ದೇಶವನ್ನು ಆಳುತ್ತಿರುವವರು-ಬಂಡವಾಳಶಾಹಿಗಳು ಹಾಗೂ ಜಾತಿವಾದಿಗಳು. ಅವರ ಕೋಮುವಾದ ಹಾಗೂ ಸುಳ್ಳು ಹೇಳುವ ಮೂಲಕ ಜನರ ಆಲೋಚನೆಗಳನ್ನು ದಿಕ್ಕು ತಪ್ಪಿಸುವುದು ಆಡಳಿತಾರೂಢ ಸರ್ಕಾರದ ಉದ್ದೇಶವಾಗಿದೆ. ಸುಳ್ಳಿನ ಸಾಮ್ರಾಜ್ಯವೇ ಮೆರೆಯುತ್ತಿದೆ. ಇದಕ್ಕೆ ಮಾಧ್ಯಮಗಳು ಸಹ ಹೊರತಲ್ಲ ಎಂದು ಗಂಭೀರವಾಗಿ ಆರೋಪಿಸಿದರು. ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಜೀರಿಗೆ ಲೋಕೇಶ್, ಕರತಿಯ ಲೇಖಕ ಡಾ. ಎಚ್.ಟಿ. ಪೋತೆ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...
ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...
ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...
©2024 Book Brahma Private Limited.