ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು

Date: 28-01-2023

Location: ಬೆಂಗಳೂರು


''ಕರಾವಳಿ ನೆಲದ ಜನರ ಯಕ್ಷಗಾನದ ಕಡುಪ್ರೀತಿಗೆ ತಾಯ್ತನದ ಒಲುಮೆ ಸಿದ್ಧಿಸಿದೆ. ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಸರ್ವರೂ ಉಲ್ಲೇಖಿಸಿದ ಇಂತಹದೇ ಮಾತುಗಳು. ಕರಾವಳಿಯ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎರಡು ಪ್ರಭೇದಗಳ ಸಮನ್ವಯ ಪ್ರೇಮ ಮತ್ತು ಸಾಮರಸ್ಯ ನಾವೆಲ್ಲರೂ ಕಲಿಯಬೇಕಾದ ಮಾದರಿ ಪಾಠವೂ ಆಗಬೇಕಿದೆ'' ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ‘ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು’ ಕುರಿತು ಲೇಖನವನ್ನು ಬರೆದಿದ್ದಾರೆ.

ಮೂಡಲಪಾಯ ಯಕ್ಷಗಾನ : ಇತ್ತೀಚಿನ ಬೆಳವಣಿಗೆಗಳು ಈ ವಿಷಯ ಕುರಿತು ಮೊನ್ನೆ ಜನವರಿ ೨೪ ರಂದು ದಿನಪೂರ್ತಿ ವಿಚಾರ ಸಂಕಿರಣ ಜರುಗಿತು. ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜರುಗಿದ ಈ ವಿಚಾರ ಸಂಕಿರಣ ಹಲವು ಮಹತ್ವದ ಸಾಂಸ್ಕೃತಿಕ ಆಯಾಮಗಳನ್ನು ಪಡೆದುಕೊಂಡಿತ್ತು. ಹಲವು ಶತಮಾನಗಳಷ್ಟು ಹಳತಾದ ಪ್ರಾಚೀನ ಕಲೆ ಮೂಡಲಪಾಯ ಬಯಲಾಟ ನಿರ್ಲಕ್ಷ್ಯಕ್ಕೀಡಾಗಿದೆ. ಅದೇ ಪಡುವಲಪಾಯದ ಕರಾವಳಿಯ ಯಕ್ಷಗಾನ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಂಡಿರುವುದು ನಾವೆಲ್ಲರೂ ಒಪ್ಪಲೇಬೇಕಾದ ಸಾಂಸ್ಕೃತಿಕ ಹೆಗ್ಗಳಿಕೆ. ಅದೊಂದು ಸಂಸ್ಕೃತಿಯ ಉದ್ಯಮದಂತೆ ಬೆಳೆದು ನಿಂತಿದೆ.

ಕರಾವಳಿ ಪ್ರದೇಶದಲ್ಲಿ ಮೂರುಸಾವಿರಕ್ಕೂ ಹೆಚ್ಚು ಯಕ್ಷಗಾನದ ವೃತ್ತಿಪರ ತಂಡಗಳಿವೆ. ಹತ್ತು ವರ್ಷಕ್ಕಾಗುವಷ್ಟು ಆಟಗಳ ಮುಂಗಡ ಆರ್ಡರ್ ಗಳು ಆ ತಂಡಗಳ ಕೈಯಲ್ಲಿ ಸಮೃದ್ಧವಾಗಿವೆ. ಇದೆಲ್ಲಾ ಕೇವಲ ಒಂದು ಶತಮಾನ ಅಂತರದ ಪವಾಡಸದೃಶ ಬೆಳವಣಿಗೆ. ಕರಾವಳಿಯ ಯಕ್ಷಗಾನಕ್ಕೆ ಅಂತಹದ್ದೊಂದು ವಿಶ್ವಮಾನ್ಯತೆ ದಕ್ಕಲು ಮತ್ತು ಬೃಹತ್ತಾಗಿ ಲೋಕಾದ್ಯಂತ ಬೆಳೆದು ರಷ್ಯಾದ ಬ್ಯಾಲೆದ ಎತ್ತರಕ್ಕೇರಲು ಕಾರಣರಾದವರು ಶಿವರಾಮ ಕಾರಂತರು ಮತ್ತು ಕರಾವಳಿಯ ಸಮಸ್ತ ವಿದ್ಯಾವಂತರು. ಕಾರಂತರ ಕಾಲದ ಅಲ್ಲಿನ ಎಲ್ಲಜನರ ಜಾತ್ಯತೀತ ನಿಲುವು ಮತ್ತು ಸಾಂಸ್ಕೃತಿಕ ಬದ್ಧತೆ. ಆದರೆ ಪ್ರಸಕ್ತ ವಿದ್ಯಮಾನಗಳೇ ಬೇರೆ. ಯಕ್ಷಗಾನಕ್ಕೂ ಕೋಮುದಳ್ಳುರಿಯ ಸೋಂಕು ತಗುಲ ತೊಡಗಿದೆಯೆಂಬ ಆತಂಕ ಕೆಲವರದು.

ಅದೇನೇ ಇರಲಿ ವರ್ತಮಾನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಕಾರ್ಕಳದ ವಿ. ಸುನಿಲಕುಮಾರವರೆಗೂ ಪ್ರಾದೇಶಿಕ ಪ್ರೀತಿ ಹರಿದು ಬಂದಿದೆ. ಅಂತೆಯೇ ಅವರು ಕಾರ್ಕಳಕ್ಕೆ ಯಕ್ಷ ರಂಗಾಯಣ ತಂದುಕೊಂಡರು. ಕೋಟಿ ಚನ್ನಯ ಥೀಮ್ ಪಾರ್ಕ್ ತಂದುಕೊಂಡರು. ಅದೊಂದು ರೀತಿಯ ಸಾಂಸ್ಕೃತಿಕ ರಾಜಕಾರಣವೆಂದರೂ ಅಡ್ಡಿಯೇನಿಲ್ಲ. ತಮ್ಮ ನೆಲದ ಅವರ ಸಾಂಸ್ಕೃತಿಕ ಪ್ರೀತಿ ನಿಜಕ್ಕೂ ಶ್ಲಾಘನೀಯ. ಘಟ್ಟದ ಈಚೆಯ ಬಯಲುಸೀಮೆಯ ಯಾವೊಬ್ಬ ರಾಜಕಾರಣಿಗೂ ಅಂತಹ ಸಾಂಸ್ಕೃತಿಕ ಬದ್ಧತೆಗಳಿಲ್ಲ. ನಮಗೆ ಸಾಂಸ್ಕೃತಿಕ ನಾಯಕತ್ವದ ತೀವ್ರ ಕೊರತೆ. ಅಂತೆಯೇ ಅವತ್ತಿನ ಸಮಾರೋಪ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಯ್. ಆರ್. ಎಸ್. ಅಧಿಕಾರಿ ಜಯರಾಮ ರಾಯಪುರ ಮಾತಾಡಿ ಬಯಲು ಸೀಮೆಯ ಈ ಎಲ್ಲ ಕೊರತೆಗಳನ್ನು ನೀಗಿಸಲು ಮಂಡ್ಯದ ಕರ್ನಾಟಕ ಸಂಘದ ಜಯಪ್ರಕಾಶ್ ಗೌಡ ಸಾಂಸ್ಕೃತಿಕ ನಾಯಕತ್ವ ವಹಿಸಿಕೊಳ್ಳಲು ಮುಂದಾಗಬೇಕೆಂಬ ಒತ್ತಾಸೆ ವ್ಯಕ್ತ ಪಡಿಸಿದರು.

ಕರಾವಳಿ ನೆಲದ ಜನರ ಯಕ್ಷಗಾನದ ಕಡುಪ್ರೀತಿಗೆ ತಾಯ್ತನದ ಒಲುಮೆ ಸಿದ್ಧಿಸಿದೆ. ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಸರ್ವರೂ ಉಲ್ಲೇಖಿಸಿದ ಇಂತಹದೇ ಮಾತುಗಳು. ಕರಾವಳಿಯ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎರಡು ಪ್ರಭೇದಗಳ ಸಮನ್ವಯ ಪ್ರೇಮ ಮತ್ತು ಸಾಮರಸ್ಯ ನಾವೆಲ್ಲರೂ ಕಲಿಯಬೇಕಾದ ಮಾದರಿ ಪಾಠವೂ ಆಗಬೇಕಿದೆ.

ಮೂಡಲಪಾಯ, ದೊಡ್ಡಾಟ, ಅಟ್ಟದಾಟ, ತೋಂಗ, ಕೇಳಿಕೆ ಇವೆಲ್ಲವೂ ಒಂದೇ ತಾಯಿಯ ಮಕ್ಕಳ ಹೆಸರುಗಳು. ಈ ಮಕ್ಕಳ ಗುಣ ಸ್ವರೂಪಗಳಲ್ಲಿ ಅಪೂರ್ವ ಸಾಮ್ಯತೆಗಳಿವೆ. ಕಲಬುರ್ಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕಾರವಾರದ ಅರ್ಧಭಾಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ದೊಡ್ಡಾಟದ ಪ್ರಾದೇಶಿಕ ವಂಶವಾಹಿನಿಯಲ್ಲಿ ಸಣ್ಣ ಪುಟ್ಟ ಫರಕುಗಳು ಸಹಜ. ಹದಿನೇಳನೆಯ ಶತಮಾನದ ಆರಂಭದಲ್ಲಿ ಶಹಾಪುರದ ರಸ್ತಾಪುರ ಭೀಮಕವಿ ದೊಡ್ಡಾಟದ ಆರು ಬಯಲಾಟ ಕೃತಿಗಳನ್ನು ರಚಿಸಿದ ದಾಖಲೆಗಳಿವೆ. ಬಹುಶಃ ಆಗ ಯಕ್ಷಗಾನದ ಅಸ್ಮಿತೆಯೇ ಇರಲಿಲ್ಲ.? ಕರಾವಳಿಯ ಇವತ್ತಿನ ಮೂರು ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಉಳಿದೆಲ್ಲವೂ ಮೂಡಲಪಾಯ ದೊಡ್ಡಾಟದ ಆಡುಂಬೊಲ. ಹೆಚ್ಚೆಂದರೆ ಹಾಡುಗಾರಿಕೆಯಲ್ಲಿ ಕಪ್ಪೆರಡು ಅಥವಾ ನಾಲ್ಕು, ಭಾಗವತ ಅರ್ಥಾತ್ ಕಥೆಗಾರ, ಮುಖವೀಣೆ ಅರ್ಥಾತ್ ಶಹನಾಯ್ ಕೂಚಿನಲ್ಲೂ ಕೂದಲೆಳೆಯಷ್ಟೇ ವ್ಯತ್ಯಾಸ. ಈ ವ್ಯತ್ಯಾಸಗಳ ನಡುವೆ ಸಮನ್ವಿತ ಸಮನ್ವಯತೆಯ ಅಗತ್ಯವಿದೆ. ಅದು ಹಚ್ಚಿಟ್ಟ ಕರ್ಪೂರ. ಅಲ್ಲಿ ಇದ್ದಿಲು ಇಲ್ಲವೇ ಇಲ್ಲಣ ಹುಡುಕಲಾಗದು.

ದಕ್ಷಿಣ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ 'ಮೂಡಲಪಾಯ ಯಕ್ಷಗಾನ' ಹೆಸರಲ್ಲಿ ಅದು ಹೆಚ್ಚು ಪ್ರಚಲಿತ. ಮುಖ್ಯವಾಗಿ ಕರಾವಳಿಯ ಮೂರು ಜಿಲ್ಲೆಯ ಯಕ್ಷಗಾನಕ್ಕೆ ಅಕಾಡೆಮಿ ಸ್ಥಾಪನೆಯಾಗಿರುವುದು ಸ್ವಾಗತಾರ್ಹ. ಹಾಗೆಯೇ ಹೆಚ್ಚು ಜಿಲ್ಲೆಗಳಲ್ಲಿ ತನ್ನ ಪಾರಮ್ಯ ಮೆರೆದಿರುವ ಮೂಡಲಪಾಯ ಯಕ್ಷಗಾನಕ್ಕೆ ಅಕಾಡೆಮಿ ಸ್ಥಾಪನೆ ಆಗ ಬೇಕಿರುವುದು ನ್ಯಾಯೋಚಿತ. ಈ ಸಂದರ್ಭದಲ್ಲಿ ಹಿರಿಯ ವಿಮರ್ಶಕರಾದ ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಯಕ್ಷಕವಿ ಕೆಂಪಣ್ಣಗೌಡರ ಕುರಿತಾದ ಸಂಶೋಧನಾ ಕೃತಿ ಪ್ರಕಟಿಸುವ ಮೂಲಕ ಮೂಡಲಪಾಯದ ಪ್ರಾಚೀನತೆ ಮತ್ತು ಚಾರಿತ್ರಿಕ ಮಹತ್ವ ಪಡೆದುಕೊಂಡಿದೆ. ಹಿ. ಚಿ. ಬೋರಲಿಂಗಯ್ಯನವರು ಕರಾವಳಿ ಯಕ್ಷಗಾನದ ಮುನ್ನೋಟಗಳು ಮೂಡಲಪಾಯಕ್ಕೆ ಮಾದರಿಯಾಗಬೇಕಾದ ಸೂಕ್ಷ್ಮತೆಯ ಒಳನೋಟಗಳನ್ನು ಸಮಾರೋಪ ನುಡಿಗಳಲ್ಲಿ ಬಿಂಬಿಸಿದರು.

ವಿದ್ವಾಂಸರುಗಳಾದ ಕೆ. ಆರ್. ಸಂಧ್ಯಾರೆಡ್ಡಿ, ದೇವೇಂದ್ರ ಬೆಳಿಯೂರು, ಪಿ. ಚಂದ್ರಿಕಾ, ಸಂಧ್ಯಾ ಹೆಗಡೆ, ಚೇತನಾ, ವಿದ್ಯಾರಶ್ಮಿ ಪೆಲತ್ತಡ್ಕ, ಚಿಕ್ಕಣ್ಣ ಯಣ್ಣೆಕಟ್ಟೆ, ರವಿ ಮಡೋಡಿ, ನರಸೇಗೌಡ, ಕೆಂಪಮ್ಮ, ಗೋವಿಂದರಾಜು, ಪೋಲಿಸ್ ಪಾಟೀಲ, ಕೃಷ್ಣಮೂರ್ತಿ, ರಂಗ ಜಿಜ್ಞಾಸುಗಳಾದ ಮಲ್ಲಿಕಾರ್ಜುನ ಕಡಕೋಳ, ಸಿ.ಕೆ. ರಾಮೇಗೌಡ ಅನೇಕ ಭಾಗವತರು ಭಾಗವಹಿಸಿದ್ದರು. ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು, ಅಭಿನವ ಪ್ರಕಾಶನ, ಯಕ್ಷಗಾನ ಅಕಾಡೆಮಿ, ಕನ್ನಡ ಜನಶಕ್ತಿ ಕೇಂದ್ರಗಳ ಸಹಯೋಗದ ಈ ಕಾರ್ಯಕ್ರಮವನ್ನು ಶಶಿಧರ ಬಾರಿಘಾಟ್ ಮತ್ತು ನ. ರವಿಕುಮಾರ ನಡೆಸಿಕೊಟ್ಟರು.

ಕನ್ನಡ ಸಾಹಿತ್ಯ ಚರಿತ್ರೆಕಾರರು ಮೂಡಲಪಾಯದಂತಹ ಜನಪದ ಸಂಸ್ಕೃತಿ ಪ್ರಕಾರವನ್ನು ಕಡೆಗಣ್ಣಿನಿಂದ ಕಂಡಿದ್ದಾರೆ ಎಂಬುದನ್ನು ನರಹಳ್ಳಿಯವರು ವಿಚಾರ ಸಂಕಿರಣದ ತಮ್ಮ ಉದ್ಘಾಟನಾ ಭಾಷಣದಲ್ಲಿ ವಿವರಿಸಿದರು. ಅದೇ ಪ್ರಕಾರ ಕರ್ನಾಟಕದ ತುಂಬೆಲ್ಲಾ ವ್ಯಾಪಕವಾಗಿರುವ ತತ್ವಪದಗಳು ಮತ್ತು ವೃತ್ತಿರಂಗಭೂಮಿಗೂ ಅದೇ ಗತಿಯಾಗಿದೆ. ನಮ್ಮ ಕಾವ್ಯ ಮೀಮಾಂಸಕರು ನಿರ್ಲಕ್ಷ್ಯ ವಹಿಸಿದರೇನಂತೆ ಲೋಕ ಮೀಮಾಂಸಕರಲ್ಲಿ ಈ ಎಲ್ಲಾ ಕಲಾ ಪ್ರಕಾರಗಳು ಗುರುತರ ಸ್ಥಾನ ಗಳಿಸಿವೆ. ಪ್ರಜಾಪ್ರಭುತ್ವದಲ್ಲಿ ಜನಮಾನಸದ ವಿಮರ್ಶೆಗೂ ಕಿಮ್ಮತ್ತಿದೆ. ಸರಕಾರ ಇಂತಹ ಕಿಮ್ಮತ್ತಿನ ನಾಲಗೆಗಳಿಗೂ ಕಿವಿಯಾಗಬೇಕು.

ಈಗ್ಗೆ ಮೂವತ್ತಾರು ವರುಷಗಳ (1983) ಹಿಂದೆ ಅಂದಿನ ಚಿತ್ರದುರ್ಗ ಜಿಲ್ಲೆ ದಾವಣಗೆರೆ ಬಳಿಯ ಕೊಂಡಜ್ಜಿ ಗ್ರಾಮದಲ್ಲಿ ನಾನು ಮತ್ತು ಟಿ. ಬಿ. ಸೊಲಬಕ್ಕನವರ, ಮಲ್ಲಿಕಾರ್ಜುನ ಜಾದವ ಸೇರಿ ಹತ್ತು ದಿನಗಳ ಕಾಲದ ದೊಡ್ಡಾಟೋತ್ಸವ ಏರ್ಪಡಿಸಿದ್ದೆವು. ಆಗ ನಾವು ಛಾಪಿಸಿದ ಉದ್ದನೆಯ ಆಮಂತ್ರಣವೇ ದೊಡ್ಡಾಟದ ಪ್ರತೀಕವಾಗಿತ್ತು. ಪ್ರತಿ ದಿನವೂ ದೊಡ್ಡಾಟ ಕುರಿತು ವಿಚಾರ ಸಂಕಿರಣ, ಹತ್ತು ಮಂದಿ ಹಿರಿಯ ಕಲಾವಿದರಿಗೆ ಸನ್ಮಾನ. ಸಂಜೆಗೆ ದೊಡ್ಡಾಟ ಪ್ರದರ್ಶನ. ಹಾಗೆ ಹತ್ತು ದಿನಗಳಲ್ಲಿ ನೂರು ಮಂದಿ ದೊಡ್ಡಾಟದ ಹಿರಿಯ ಕಲಾವಿದರನ್ನು ಗೌರವಿಸಿದ ಸಂತಸ ನಮ್ಮದು.

ಕೊಂಡಜ್ಜಿ ಗ್ರಾಮದಲ್ಲೇ ಐವತ್ತಕ್ಕೂ ಹೆಚ್ಚು ಮಂದಿ ಕಲಾವಿದರಿದ್ದರು. ಅದರಲ್ಲೂ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದ ಅಜ್ಜಪ್ಪನಂತೂ ಹಲವು ಅನನ್ಯತೆಗಳ ಕಲಾವಿದ. ಆತ ಸ್ತ್ರೀ ಕುಣಿತದ ಮಹಾ ಮೇಧಾವಿ, ದೊಡ್ಡಾಟದ ಕಥೆಗಾರ, ಮದ್ದಲೆಗಾರನೂ ಹೌದು. ಇಂದಿಗೂ ನಮ್ಮ ನಡುವಿನ ಕೊಂಡಜ್ಜಿ ಗ್ರಾಮದ ಪಾಪಣ್ಣ ದೊಡ್ಡಾಟದ ಅಪರೂಪದ ಪ್ರತಿಭೆ. ಇವರು ಸ್ತ್ರೀ ಪಾತ್ರದಾರಿ ಮತ್ತು ಮದ್ದಲೆ ನುಡಿಸುವಲ್ಲಿ ಪರಿಣಿತರು. ಉಡುಪಿಯ ಜಾನಪದ ಸಂಶೋಧನಾ ಕೇಂದ್ರವು ಅಜ್ಜಪ್ಪನವರನ್ನು ಕರೆದು ವಾರಕಾಲ ಪ್ರಾತ್ಯಕ್ಷಿಕೆಗಳನ್ನೇ ಏರ್ಪಡಿಸಿತ್ತು. ಆಗ ಮದ್ದಲೆ ನುಡಿಸಿದ್ದು ಪಾಪಣ್ಣ. ಕೊಂಡಜ್ಜಿಯ ದೊಡ್ಡಾಟ ಉತ್ಸವದಲ್ಲಿ ಒಂದು ರಾತ್ರಿ ಮಹಿಳಾ ತಂಡದ ರಂಗಪ್ರಯೋಗವಿತ್ತು. ನನಗೆ ನೆನಪಿರುವಂತೆ ಅದು ಕರಿಭಂಟನ ಕಾಳಗವೇ ಆಗಿತ್ತು.

ಅದಾದ ಕೆಲವು ತಿಂಗಳ ತರುವಾಯ ರಾಜ್ಯಮಟ್ಟದಲ್ಲಿ ಸೊಲಬಕ್ಕನವರ ಸಾರಥ್ಯದಲ್ಲಿ ಕರ್ನಾಟಕ ದೊಡ್ಡಾಟ ಟ್ರಸ್ಟ್ ಸ್ಥಾಪನೆ ಮತ್ತು ಅದರ ಹೋರಾಟದ ಚಟುವಟಿಕೆಗಳ ಮುಂದುವರಿಕೆ. ಮೂವತ್ತಾರು ವರ್ಷಗಳ ಹಿಂದಿನ ಶ್ರಮದ ಪ್ರತಿಫಲವೇ ಈಗ ಬಾಗಲಕೋಟೆಯಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ಬಯಲಾಟ ಅಕಾಡೆಮಿ. ಬಯಲಾಟ ಅಕಾಡೆಮಿ ಸ್ಥಾಪನೆಯಾಗಿ ಹತತ್ರ ಹತ್ತು ವರ್ಷಗಳು ಕಳೆಯುತ್ತಾ ಬಂದಿವೆ. ದೊಡ್ಡಾಟದ ಸ್ಥಿತಿಮಾತ್ರ ಮುಂಚೆ ಹೇಗಿತ್ತೋ ಈಗಲೂ ಹಾಗೇ ಇದೆ. ಬಯಲಾಟ ಅಕಾಡೆಮಿ ಪ್ರಶಸ್ತಿಗಳನ್ನು ನೀಡುವುದು ಬಿಟ್ಟರೆ ಬೇರಾವ ಸೃಜನಾತ್ಮಕ ಕೆಲಸಗಳನ್ನು ಮಾಡಿಲ್ಲ.

ಅಷ್ಟಕ್ಕೂ ಸರಕಾರದ ಅಕಾಡೆಮಿಗಳಿಂದ ಯಾವುದೇ ಕಲೆಯು ಅಭಿವೃದ್ಧಿ ಮತ್ತು ಔನ್ನತ್ಯ ಹೊಂದಬಲ್ಲದೆಂಬುದು ಸುಳ್ಳು ಎಂಬುದಕ್ಕೆ ಬಹುಪಾಲು ಅಕಾಡೆಮಿಗಳೇ ಸಾಕ್ಷಿ. ಅದಕ್ಕೆ ಬದಲು ಜಯಪ್ರಕಾಶ ಗೌಡರ ಸಾರಥ್ಯದ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು ತನ್ನ ಸ್ವಂತ ಶ್ರಮದ ಮೇಲೆ ಮಾಡುತ್ತಿರುವ ಕೆಲಸಕ್ಕಿರುವ ಕಳಕಳಿ ಸರಕಾರದ ಅಕಾಡೆಮಿಗಳಿಗೆ ಖಂಡಿತಾ ಇರುವುದಿಲ್ಲ. ಆದರೆ ಬೆನ್ನ ಹಿಂದಿನ ಬೆಳಕಿನಿಂತೆ
ವಿಠಲಮೂರ್ತಿ ಹಾಗೂ ಈಗಿನ ಜಯರಾಮ ರಾಯಪುರ ಅವರಂತಹ ಜನಸಂಸ್ಕೃತಿ ಪರ ಉನ್ನತ ಅಧಿಕಾರಿಗಳು ದೊರಕುವುದು ಅಪರೂಪ. ಸಮಾರೋಪದ ನಂತರ ಪುಟ್ಟಸ್ವಾಮಿ ಮತ್ತು ಅಜಯ್ ತಂಡದ "ದೇವಿಮಹಾತ್ಮೆ" ಮೂಡಲಪಾಯದ ಪ್ರಾತ್ಯಕ್ಷಿಕೆ ಇತ್ತು.
ಮಲ್ಲಿಕಾರ್ಜುನ ಕಡಕೋಳ
‌‌‌ 9341010712

ಈ ಅಂಕಣದ ಹಿಂದಿನ ಬರಹಗಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...