Nadavargal; ಇಲ್ಲಿರುವ ಎಲ್ಲ ಬರಹಗಳೂ ಸಾಂದರ್ಭಿಕವಾದಂಥವು


“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ ಬರೆಯಬಹುದು ಎಂಬ ಅಚ್ಚರಿ ಮನಸ್ಸಿನಲ್ಲಿ ಮೂಡಿತು. ಅವರೆಲ್ಲರ ಚಿತ್ರಗಳು ಮೂಡಿಬಂದವು,” ಎನ್ನುತ್ತಾರೆ ಅಗ್ರಹಾರ ಕೃಷ್ಣಮೂರ್ತಿ ಅವರು ತಮ್ಮ ನಾಡವರ್ಗಳ್‌ ಕೃತಿಗೆ ಬರೆದ ಲೇಖಕರ ಮಾತು..

ಇಲ್ಲಿರುವ ಎಲ್ಲ ಬರಹಗಳೂ ಸಾಂದರ್ಭಿಕವಾದಂಥವು. ನೆನಪಿನ ಗ್ರಂಥ, ಗೌರವ ಗ್ರಂಥ ಸಂಪಾದಿಸಿದ ಮಿತ್ರರು ಕೇಳಿದಾಗ ಬರೆದುಕೊಟ್ಟಂಥವು. ಕೆಲವು ಲೇಖಕರಿಗೆ ಪುರಸ್ಕಾರಗಳ ಘೋಷಣೆಯಾದಾಗ ಪತ್ರಿಕೆಗಳ ಸಂಪಾದಕರು ಕೇಳಿದಾಗ ಬರೆದುಕೊಟ್ಟಂಥವು. ಇಲ್ಲಿರುವ ಪ್ರತಿಯೊಬ್ಬರ ಜೊತೆಯಲ್ಲೂ ನನಗೆ ವೈಯಕ್ತಿಕ ಸಂಬಂಧವಿತ್ತು ಮತ್ತು ಈಗಲೂ ಇದೆ. ದೇವರಾಜ ಅರಸರನ್ನು ಮಾತ್ರ ನಾನು ಹತ್ತಿರದಿಂದ ಕಂಡಿದ್ದರೂ ಎಂದೂ ಅವರೊಡನೆ ಮಾತು ಸಾಧ್ಯವಾಗಿರಲ್ಲ. ಉಳಿದವರೆಲ್ಲರ ಜೊತೆ ಕೆಲವೇ ತಾಸುಗಳು, ದಿನಗಳು, ತಿಂಗಳುಗಳ ಸಾಪೇಕ್ಷತೆಯಲ್ಲಿ ಸಂಪರ್ಕ. ಇನ್ನು ಕೆಲವರ ಜೊತೆಯಲ್ಲಂತೂ ಅವರ ಪರಿಚಯವಾದಾಗಿನಿಂದ ಇಲ್ಲಿಯವರೆಗೂ ಉಳಿದು ಬಂದಂಥದ್ದು.

ವ್ಯಕ್ತಿಚಿತ್ರ ಬರವಣಿಗೆ ಸಾಹಿತ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನೇ ಪಡೆದಿದೆ. ಕನ್ನಡದಲ್ಲಿ ನವರತ್ನ ರಾಮರಾಯರು, ಎ.ಎನ್. ಮೂರ್ತಿರಾಯರು, ಪ್ರಭುಶಂಕರ, ಲಂಕೇಶ್ ಮುಂತಾದವರು ಈ ಪ್ರಕಾರವನ್ನು ಸಮೃದ್ಧಗೊಳಿಸಿದ್ದಾರೆ. ಡಿವಿಜಿಯವರಂತೂ ತಮ್ಮ 'ಜ್ಞಾಪಕ ಚಿತ್ರಶಾಲೆ'ಯ ಸಂಪುಟಗಳ ಮೂಲಕ ತಮ್ಮ ಸಂಪರ್ಕಕ್ಕೆ ಬಂದಿದ್ದ, ಬಾರದಿದ್ದ ಮಹಾನುಭಾವರ ಬಗ್ಗೆ ಮನೋಜ್ಞವಾಗಿ ಬರೆದಿದ್ದಾರೆ.

ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ ಬರೆಯಬಹುದು ಎಂಬ ಅಚ್ಚರಿ ಮನಸ್ಸಿನಲ್ಲಿ ಮೂಡಿತು. ಅವರೆಲ್ಲರ ಚಿತ್ರಗಳು ಮೂಡಿಬಂದವು. ಮುಂದೆ ಎಂದಾದರೂ ಬರೆದೇನು. ಈ ಬರಹಗಳಲ್ಲಿ ಇತರ ವ್ಯಕ್ತಿತ್ವಗಳನ್ನು ಕಂಡರಿಸುವುದಕ್ಕಿಂತ ಹೆಚ್ಚಾಗಿ ನನ್ನ ಬದುಕಿನ ವಿವರಗಳೇ ಮುನ್ನೆಲೆಗೆ ಬಂದಂತೆ ಕಾಣಿಸಬಹುದು!

ಜೀರುಂಡೆ ಪುಸ್ತಕ ಪ್ರಕಾಶನದ ಮಿತ್ರ ಧನಂಜಯ್ ಕ್ಷಿಪ್ರವಾಗಿ ಈ ಕೃತಿಯನ್ನು ಹೊರತಂದು ತಾವು ಆಯ್ಕೆ ಮಾಡಿಕೊಂಡಿರುವ ವೃತ್ತಿಯ 'ವೃತ್ತಿಪಾರಮ್ಯ'ವನ್ನು ಪ್ರಕಟಿಸಿದ್ದಾರೆ. ಈಗಷ್ಟೇ ಅವರು ಪ್ರಕಾಶಗೊಳಿಸಿದ ಪ್ರಪ್ರಥಮ ಅನುವಾದ ಕೃತಿಗೆ ಕುವೆಂಪು ಭಾಷಾ ಭಾರತಿಯ ಪುರಸ್ಕಾರ ಘೋಷಣೆಯಾಗಿರುವುದು ಸಂತೋಷದ ಸಂಗತಿ. ಪುಟವಿನ್ಯಾಸ ಮಾಡಿದ ಮಾಲಾ ಎಂ, ಅಂದವಾಗಿ ಮುಖಪುಟ ವಿನ್ಯಾಸ ಮಾಡಿರುವ ಮಹಾಂತೇಶ್ ಅವರಿಗೂ, ಈ ಕೃತಿಯನ್ನು ಸಿದ್ದಗೊಳಿಸುವ ಹಂತದಲ್ಲಿ ಜೊತೆಗೂಡಿದವರು ಗೆಳೆಯರಾದ ನರಸಿಂಹಮೂರ್ತಿ ಹಳೇಹಟ್ಟಿ, ಬಸವರಾಜು ಮೇಗಲಕೇರಿ, ಡಾ. ಎಂ.ಎಸ್. ಆಶಾದೇವಿಯವರು ನೀಡಿದ ಸಲಹೆಗಳು ತುಂಬಾ ಉಪಯುಕ್ತವಾಗಿದೆ. ಮಗ ರವಿ ಅಗ್ರಹಾರ ಓದಿ ನನಗೆ ಉತ್ಸಾಹ ತುಂಬಿದ್ದಾನೆ.

ಬಾಳಗೆಳತಿ ಕಲಾ ಎಂದಿನಂತೆ ನನ್ನನ್ನು ಕಾಪಾಡುತ್ತಿದ್ದಾರೆ. ಎಲ್ಲರಿಗೂ ಪ್ರೀತಿಪೂರ್ವಕ ವಂದನೆಗಳು. ನನ್ನ ಓದುಗರ ಪ್ರೀತಿಯೇ ನನಗೆ ಮಹತ್ವದು.

 

MORE FEATURES

ಓದು ಪೀಳಿಗೆಯಿಂದ ಪೀಳಿಗೆಗೆ ಸಾಗುವ ಪರಿ ಅನನ್ಯವಾದುದು

17-01-2025 ಬೆಂಗಳೂರು

"ತಂದೆ ತಾಯಿಯರ ಗೌರವಕ್ಕಾಗಿ ಜನರ ಸಮಾನತೆಯ ಸಿದ್ಧಿಗಾಗಿ ರಾಜ್ಯ ಬಿಟ್ಟು ಹೊರಟ ಗೌತಮ ಸಿದ್ಧಿ ಪಡೆದು ಬುದ್ಧನಾಗುವ ಪ...

ಮಹಾಭಾರತದ ಕಥೆ ಶುರು ಆಗುವುದು ಎಲ್ಲಿಂದ?

17-01-2025 ಬೆಂಗಳೂರು

"ಯುದ್ಧವೆಲ್ಲಾ ಮುಗಿದ ನಂತರ ಯುಧಿಷ್ಠಿರ ಮಾತ್ರ ಸ್ವರ್ಗಕ್ಕೆ ಹೋಗಿ ಅಲ್ಲಿ ದುರ್ಯೋಧನನ್ನು ಕಂಡು ಕಕ್ಕಾಬಿಕ್ಕಿಯಾಗು...

Swapnada Hole; ಕನಸಿನಲ್ಲಿ ಕಲ್ಕುಟಿಕನನ್ನು ನೆನದು ಆತಂಕಗೊಂಡಿದ್ದುಂಟು..

17-01-2025 ಬೆಂಗಳೂರು

“ಚರಿತ್ರೆಯಲ್ಲಿ ದ್ವಂದ್ವಾತ್ಮಕವಾಗಿ ಮೂಡಿಬಂದ ಸಾಮಾಜಿಕ ಸಂಬಂಧಗಳು, ದೈವದ ಪರಿಕಲ್ಪನೆ, ಕಾಮದ ಪ್ರಾಢಾಳಿಕೆ ಇವುಗಳ...