ನವ್ಯ ಕಾವ್ಯದ ಕಟ್ಟಾಣಿಕೆ

Date: 17-01-2021

Location: .


ಹಿರಿಯ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ವಿಶ್ಲೇಷಿಸುವ ವಿಭಿನ್ನ ಅಂಕಣ ‘ನೀರು ನೆರಳು’. ಪ್ರತೀ ತಿಂಗಳು ಪ್ರಕಟವಾಗುವ ಅಂಕಣದಲ್ಲಿ ಈ ಬಾರಿ ನವ್ಯ ಕಾವ್ಯದ ಕುರಿತು ಉದಾಹರಣೆಯೊಂದಿಗೆ ಸವಿವರವಾಗಿ ವಿಶ್ಲೇಷಿಸಿದ್ದು ಹಾಗೂ ಕಮ್ಮಟಾರ್ಥಿಗಳು ಬರೆದು ಕಳಿಸಿರುವ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದನ್ನು ಇಲ್ಲಿ ನೀಡಲಾಗಿದೆ.

ಕವಿತೆಯ ಬಗ್ಗೆ ಯೋಚಿಸುವಾಗ ಕವಿತೆಯನ್ನು ಹೇಗೆ ಬರೆದಿದ್ದಾರೆ ಎಂದು ನೋಡುವುದಕ್ಕಿಂತ ಕವಿತೆಯಲ್ಲಿ ಏನನ್ನು ಬರೆಯಾಲಾಗಿದೆ ಎಂದು ಕಂಟೆಂಟ್ ಅನಾಲಿಸಿಸ್ ಮಾಡುವ ಕಡೆಗೇ ನಮ್ಮ ವಿಮರ್ಶೆ ಹೆಚ್ಚಿನ ಗಮನ ಹರಿಸಿದೆ. ಆದರೆ ನಾವು ಇವತ್ತು ಕೆಲವು ನವ್ಯ ಕವಿತೆಗಳನ್ನು ಪ್ರಾತಿನಿಧಿಕವಾಗಿ ಇಟ್ಟುಕೊಂಡು, ಅವನ್ನು ಓದುತ್ತ; ಅವುಗಳು ಹೇಗೆ ಬರೆಯಲ್ಪಟ್ಟಿವೆ ಎಂಬ ನೆಲೆಯಲ್ಲಿ ಮೇಕಿಂಗ್ ಕುರಿತು ಒಂದಿಷ್ಟು ಚರ್ಚಿಸೋಣ. ಅದಕ್ಕೆ ಮೊದಲು ಕೆಲವು ಮಾತು;
ಹಲವು ಕಾಲಗಳಲ್ಲಿ ಹಲವು ರೀತಿಯ, ಹಲವು ತತ್ವನಂಬಿಕೆ ಕಾವ್ಯಗಳು ಕನ್ನಡದಲ್ಲಿ ರಚನೆಯಾಗಿವೆ. ಇಂತಹ ಭಿನ್ನ ಮಾದರಿಯ ರಚನೆಗಳನ್ನು ನಾವು ಏತಕ್ಕೆ ಅಭ್ಯಾಸ ಮಾಡಬೇಕೆಂದರೆ; ಇವೆಲ್ಲವುಗಳಿಗಿಂತ ಭಿನ್ನವಾಗಿ, ಹೊಸತಾಗಿ ಬರೆಯಲಿಕ್ಕೆ. ಬರವಣಿಗೆಯ ಹೊಸತನ ಹಿಂದಿನವುಗಳನ್ನು ನೋಡಿದ ಮಾತ್ರಕ್ಕೆ ಸಿದ್ಧಿಸುವುದಿಲ್ಲ. ಜಗತ್ತನ್ನು ನೋಡುವ ನಮ್ಮ ಗ್ರಹಿಕೆ, ಅದನ್ನು ಬದಲಿಸಬಹುದಾದ ನಮ್ಮ ಕಾಣ್ಕೆ ಮತ್ತು ನಾವು ಉದ್ದೇಶಿಸುವ ನಮ್ಮ ಟಾರ್ಗೆಟ್ ಓದುಗರು ಇವೆಲ್ಲವೂ ನಮ್ಮ ಬರವಣಿಗೆಗೆ ಹೊಸತನ ನೀಡಬಲ್ಲವು. ಬರೆಯುವುದು ಜನ ಬದುಕಲಿಕ್ಕೆ; ನಾನು ಇನ್ನಷ್ಟು ಭಿನ್ನವಾಗಿ ಈ ಲೋಕವನ್ನು ತಿಳಿಯಲಿಕ್ಕೆ; ಈ ಲೋಕವನ್ನು ಕಿಂಚಿತ್ತಾದರೂ ಬೆಳಗಲಿಕ್ಕೆ, ಬದಲಿಸಲಿಕ್ಕೆ ಎಂದು ಯೋಚಿಸುವುದಾದರೆ ನಮ್ಮ ಕಾವ್ಯಕ್ಕೆ ಹೆಚ್ಚು ಅರ್ಥವಂತಿಕೆ ಬರುತ್ತದೆ. ಹೇಗೆ ಬರೆಯಬೇಕು ಎಂಬ ಪ್ರಶ್ನೆಗೂ ಸರಿಯಾದ ದಾರಿಗಳು ಹೊಳೆಯುತ್ತವೆ. ನಾವು ಇರುವ ದಾರಿಗಳನ್ನು ತುಳಿಯಬಾರದು; ದಾರಿಗಳನ್ನು ನಡೆದು ನಿರ್ಮಿಸಲು ಯತ್ನಿಸಬೇಕು. ನಡೆದರೆ ದಾರಿ ಸಿಗುತ್ತವೆ.
ನವ್ಯ ಅನ್ನುವುದು ಒಂದು ಮನೋಧರ್ಮ. ಅದೊಂದು ಕನ್ನಡ ಕವಿತಾ ಬರವಣಿಗೆಯ ಕ್ರಮ. 1950 ರಿಂದ 1970ರ ಕಾಲ ಅಂದಾಜು ನವ್ಯ ಕಾವ್ಯದ ಕಾಲ ಎಂದು ನಮ್ಮ ಚರಿತ್ರೆಕಾರರು ಗುರ್ತಿಸಿದ್ದಾರೆ. ಆದರೆ ಅದು ಚಳವಳಿಯೂ ಅಲ್ಲ; ಕಾಲಘಟ್ಟವೂ ಅಲ್ಲ. ನವ್ಯ ಎನ್ನುವುದು 1950ಕ್ಕೂ ಹಿಂದೆ ಮತ್ತು 1970ರ ಆನಂತರವೂ, ಇಂದಿಗೂ ಬರವಣಿಗೆಗೆ ಬಳಕೆ ಆಗುತ್ತಿರುವ ಒಂದು ಕಾವ್ಯ ಸಂವೇದನೆ ಮತ್ತು ಶೈಲಿ. ನವ್ಯದಲ್ಲಿ ಅಡಿಗರನ್ನು ಬಿಟ್ಟರೆ ರಾಮಚಂದ್ರ ಶರ್ಮರು ಈ ಇಬ್ಬರೇ ಕವಿಗಳು ಎಂಬ ನಂಬಿಕೆಯೊಂದು ಚಾಲ್ತಿಯಲ್ಲಿದೆ. ಆದರೆ ಹಾಗೇನೂ ಇಲ್ಲ. ಅವರಲ್ಲದೆ ಹಲವರು ನವ್ಯ ಧಾಟಿಯ ಕವಿತೆಗಳನ್ನು ಬರೆದಿದ್ದಾರೆ; ಪ್ರಯೋಗಿಸಿದ್ದಾರೆ ಕುವೆಂಪು, ಬೇಂದ್ರೆ ಇವರು ನವ್ಯತಂತ್ರ ಬಳಸಿ ಕೆಲವೊಂದು ಕವಿತೆಗಳನ್ನು ಪ್ರಯೋಗಿಸಿದ್ದಾರೆ. ಆಡಿಗರ ಮತ್ತು ಶರ್ಮರ ಪ್ರಯೋಗಗಳನ್ನು ಕಂಡು, ಮೆಚ್ಚಿ ಇವರ ಟೀಕೆಗಳನ್ನು ಕಂಡು ಪ್ರತಿಕ್ರಿಯಿಸಿ ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ ಇವರೂ ನವ್ಯಧಾಟಿಯ ಪದ್ಯಗಳನ್ನು ಬರೆದಿದ್ದಾರೆ. ಅಡಿಗರ ಸಮಕಾಲೀನರೂ ನಂತರದ ಪೀಳಿಗೆಯವರೂ ಆದ ಯರ್ಮುಂಜ ರಾಮಚಂದ್ರ, ಎಚ್.ಎಸ್. ಬಿಳಿಗಿರಿ, ಬಿ.ಎಚ್.ಶ್ರೀಧರ, ಪಾ.ವೆಂ. ಆಚಾರ್‍ಯ, ವಿ.ಜಿ. ಭಟ್ಟ. ಎ.ಕೆ. ರಾಮಾನುಜನ್, ಎಚ್.ಎಂ.ಚೆನ್ನಯ್ಯ, ಯು.ಆರ್.ಅನಂತಮೂರ್ತಿ, ಕೆ.ವಿ.ತಿರುಮಲೇಶ್, ಪಿ.ಲಂಕೇಶ್, ಚಂದ್ರಶೇಖರ ಪಾಟೀಲ, ಚಂದ್ರಶೇಖರ ಕಂಬಾರ, ಸಿದ್ದಲಿಂಗ ಪಟ್ಟಣಶೆಟ್ಟಿ, ಕ.ವೆಂ.ರಾಜಗೋಪಾಲ, ವೀ.ಚಿಕ್ಕವೀರಯ್ಯ, ಎಚ್.ಎಸ್. ಶಿವಪ್ರಕಾಶ್, ಎಸ್.ಜಿ. ಸಿದ್ಧರಾಮಯ್ಯ ಮೊದಲಾದವರೂ ನವ್ಯಧಾಟಿಯ ಕವಿತೆಗಳನ್ನು ರಚಿಸಿದ್ದಾರೆ. ಇದರಲ್ಲಿ ಬಹುಪಾಲು ಎಲ್ಲರೂ ನವ್ಯವಲ್ಲದ ಇತರ ಧಾಟಿಯ ಪ್ರಯೋಗಗಳನ್ನು ಮತ್ತು ಶಿಥಿಲ ಪ್ರಯೋಗಗಳನ್ನು ಕೂಡ ಮಾಡಿದ್ದಾರೆ. ಇವರ ನಂತರದ ಪೀಳಿಗೆಯವರಾದ ಚಂದ್ರಶೇಖರ ತಾಳ್ಯ, ಲಕ್ಷ್ಮೀಪತಿ ಕೋಲಾರ, ಆನಂದ ಝಂಜರವಾಡ, ಸ.ಉಷಾ, ಎಚ್.ಎಲ್.ಪುಷ್ಪಾ, ಎಸ್.ವಿ.ಪ್ರಭಾವತಿ, ಕೆ.ಪಿ. ಸುರೇಶ, ಪಿ.ಚಂದ್ರಿಕಾ, ಜಿ.ಕೆ.ರವೀಂದ್ರಕುಮಾರ್, ಡಿ.ಎಸ್.ರಾಮಸ್ವಾಮಿ ಹೀಗೆ ಹಲವರು ನವ್ಯ ಶೈಲಿಯ ಭಿನ್ನ ಭಿನ್ನ ಪದ್ಯಗಳನ್ನು ಬರೆದಿದ್ದಾರೆ.
ವಸ್ತು ಪ್ರತಿರೂಪಗಳ ಬಳಕೆ, ಪ್ರತಿಮೆಗಳ ಬಳಕೆ, ರೂಪಕಗಳ ಬಳಕೆ, ಭಿನ್ನ ಭಿನ್ನ ತಂತ್ರಗಳ ಪ್ರಯೋಗ, ಬಿಗಿಯಾದ ಬಂಧವುಳ್ಳ ರಚನೆ, ಕೇಂದ್ರಪ್ರಜ್ಞೆಯೊಂದರ ಬಳಕೆ, ಸಾವಯುವ ಸಮಗ್ರೀಕರಣ ಶಿಲ್ಪದ ನಿರ್ಮಾಣ, ಬುದ್ದಿ ಪ್ರಧಾನತೆ, ಲೈಂಗಿಕತೆ, ರಾಜಕೀಯ ನೀಲುವುಗಳ ಕಾವ್ಯಾತ್ಮಕ ಅಭಿವ್ಯಕ್ತಿ, ಬಹು ಅರ್ಥಗಳ ಸಾಧ್ಯತೆ, ಮಂಡನಾಕ್ರಮದಲ್ಲಿನ ಸಂಕೀರ್ಣತೆ, ವಿಡಂಬನಾತ್ಮಕ ನಿರೂಪಣಾಕ್ರಮ, ಅನಾಥ ಪ್ರಜ್ಞೆ, ವ್ಯಕ್ತಿ ಕೇಂದ್ರಿತ ರಚನೆ, ಪುರಾಣಪ್ರತೀಕ-ಚರಿತ್ರೆಪ್ರತೀಕಗಳ ಬಳಕೆ, ವಿಷಾದ-ಅನುಮಾನ ಪ್ರವೃತ್ತಿ, ವೈರುಧ್ಯ-ವೈದೃಶ್ಯಗಳ ಬಳಕೆ, ಗದ್ಯಾತ್ಮಕ-ಗಪದ್ಯಲಯ, ಅಸಂಗತತೆ ಹೀಗೆ ನವ್ಯಕಾವ್ಯದ ಹತ್ತಾರು ಲಕ್ಷಣಗಳನ್ನು ನಮ್ಮ ವಿಮರ್ಶಾಲಾಕ್ಷಣಿಕರು ಈಗಾಗಲೇ ಗುರ್ತಿಸಿದ್ದಾರೆ. ಬೆಡಗಿನ ವಚನಗಳಿಗೆ ತಮ್ಮದೇ ವ್ಯಾಖ್ಯಾನಗಳನ್ನು ಬರೆಯುವಂತೆ ಅರ್ಥಚರ್ಚೆಗಳನ್ನು ನಡೆಸಿದ್ದಾರೆ. ಹೀಗೆ ಈ ಬಗ್ಗೆ ಹೇಳಿದರೆ ನಿಮಗೆ ಬರಿದೇ ಗಾಳಿಯಲ್ಲಿ ಮಾತು ಚೆಲ್ಲಿದಂತೆ ಅನ್ನಿಸಬಹುದು. ಬರೀ ಶಾಬ್ದಿಕ ವ್ಯಾಯಾಮ ಅನ್ನಿಸಬಹುದು. ಅದಕ್ಕಾಗಿಯೇ ಇಲ್ಲಿ ಕೆಲವು ಆಯ್ದ ಪದ್ಯಗಳನ್ನು ಮುಂದೆ ವಾಚಿಸಲಿದ್ದೇನೆ.
ನೋಡಿ ನಿಮ್ಮೆದುರು ವಾಚನಕ್ಕೆ ಇರುವ ಆಯ್ದ ಪದ್ಯಗಳು ನವ್ಯದ ಇಡಿ ಚಿತ್ರವನ್ನು ನೀಡಲಾರವು. ಜೀವಶಾಸ್ತ್ರದಲ್ಲಿ ಬಯಾಪ್ಸಿ ಎನ್ನುವ ಮಾತೊಂದಿದೆ. ಬಯಾಪ್ಸಿ ಅಂದರೆ ಅಂಗಾಂಶದ ವಿಶ್ಲೇಷಣೆ. ಒಂದು ಅಂಗಾಂಶದ ಅಭ್ಯಾಸದಿಂದ ಇಡೀ ದೇಹದ ಲಕ್ಷಣಗಳನ್ನು ತಿಳಿಯುವ ಕೆಲಸ ಅದು. ಹಾಗೆ ಈ ಕೆಲವೇ ಉದಾಹರಣೆಗಳನ್ನು ಇಟ್ಟುಕೊಂಡು ನವ್ಯಕಾವ್ಯ ಬರೆವಣಿಗೆ ಕ್ರಮದ ವಿಶ್ಲೇಷಣೆಯನ್ನು ನಾವೀಗ ಮಾಡೋಣ. ಜೀವಶಾಸ್ತ್ರದಲ್ಲಿ ಬಯಾಪ್ಸಿ ಮಾಡಿದಂತೆ ಕಾವ್ಯಶಾಸ್ತ್ರದಲ್ಲಿ ಬಯಾಪ್ಸಿ ಸಕ್ಸಸ್ ಆಗುವುದಿಲ್ಲ. ಇಲ್ಲೇನಿದ್ದರೂ ಒಂದೊಂದು ಉದಾಹರಣೆ ಒಂದೊಂದು ಕೈಮರ ಇದ್ದ ಹಾಗಷ್ಟೆ. ಪಥಬಿಂದುವೇ ಪಥವೂ ಅಲ್ಲ, ಊರೂ ಅಲ್ಲ. ಆದರೂ ಇದನ್ನು ಮಾಡೋಣ.
ಸ್ನೆಹಿತರೇ, ಪದ್ಯ ಅಂದರೆ ಏನು? ಅದನ್ನು ಹೇಗೆ ಬರೆಯಬೇಕು? ಅದರ ಕೆಲಸ, ಪರಿಣಾಮ, ಫಲ ಏನು? ಈ ಬಗ್ಗೆ ಸೈದ್ದಾಂತಿಕವಾಗಿ ನಮ್ಮಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಕಾವ್ಯತತ್ವ-ಸಾಹಿತ್ಯ ಮೀಮಾಂಸೆಯ ಬರವಣಿಗೆ ಸಾಕಷ್ಟು ಬಂದಿದೆ. ಅದೆಲ್ಲ ಶಾಸ್ತ್ರದ ತಿಳಿವಳಿಕೆ ಅಷ್ಟೆ. ಪದ್ಯದ ಬಗ್ಗೆ ಪದ್ಯ ಬರೆದಿರುವುದೂ ನಮ್ಮಲ್ಲಿ ಸಾಕಷ್ಟಿದೆ. ನವ್ಯರೂ ಬರೆದಿದ್ದಾರೆ. ಥಿಯರಿ ನಮ್ಮವರು ಏನೇ ಹೇಳಲಿ, ಪ್ರಾಕ್ಟೀಸಿನಲ್ಲಿ ಅವರು ಏನು, ಹೇಗೆ ಬರೆದಿದ್ದಾರೆ ಎಂಬುದನ್ನು ನೋಡುವುದೇ ಇವತ್ತಿನ ನಮ್ಮ ತುರ್ತು. ಕವಿತೆಯನ್ನು ಓದುವಾಗ ನೀವೆಲ್ಲರೂ ಅಲ್ಲಿನ ರಾಚನಿಕತೆ, ತಂತ್ರ, ಪದ ಪ್ರಯೋಗ ಭಾಷಾಬಳಕೆ, ಈ ನೆಲೆಯಲ್ಲಿ ನಿಮಗೆ ಕೊಟ್ಟಿರುವ ಪದ್ಯಗಳ ಬಗ್ಗೆ ಯೋಚಿಸಿ. ಹೇಗೆ ಬರೆದಿದ್ದಾರೆ ಎಂಬುದನ್ನು ತಿಳಿಯಲು ಯತ್ನಿಸಿ. ಆಗ ಪದ್ಯ ಬರೆವಣಿಗೆಯ ಕೀಲಿಕೈಗಳು ಯಾವುವು ಎಂಬುದು ಅಜಮಾಸಾದರೂ ನಿಮಗೆ ತಿಳಿಯುತ್ತದೆ. ಪದ್ಯ ಹೇಗೆ ಬರೆಯಬೇಕು ಎಂಬ ವಿಚಾರಗಳನ್ನು ಹೇಗೆ ಬರೆದಿದ್ದಾರೆ ಎಂದು ನೋಡಿ, ಅದನ್ನೇ ಅಂದರೆ ಆಚಾರವನ್ನೆ ತಾತ್ವೀಕರಿಸಲು ಪ್ರಯತ್ನಿಸಿದರೆ ನಿಮಗೆ ಈ ದೃಷ್ಟಿಯಲ್ಲಿ ಹೆಚ್ಚಿನ ಪ್ರಯೋಜನ ಆದೀತು.
ಸ್ನೆಹಿತರೇ, ಕವಿಯಾದವನಿಗೆ ತನ್ನದೇ ಭಾಷೆ, ನುಡಿಗಟ್ಟು, ಅನುಭವ, ಕಾಳಜಿ, ದಾರ್ಶನಿಕತೆ, ತತ್ವಜ್ಞಾನ ಇರಬೇಕಾಗುತ್ತದೆ. ಇವಿಷ್ಟೇ ಇದ್ದರೆ ಸಾಲದು; ಅದನ್ನು ನಿರೂಪಣೆ ಮಾಡಲು ತನ್ನದೇ ಆದ ಹೊಸ ಛಂದಸ್ಸು, ಚೌಕಟ್ಟು, ಮಟ್ಟು, ನುಡಿ-ನುಡಿಗಟ್ಟು, ತಂತ್ರಗಳನ್ನು ಕವಿ ಶೋಧಿಸಿಕೊಳ್ಳಬೇಕಾಗುತ್ತದೆ. ಇದುವರೆಗೆ ಪರಂಪರೆಗಳಲ್ಲಿ ಇಲ್ಲದ ತಾಜಾತನವಾಗಿ, ಹೊಸ ದನಿಯಾಗಿ ತನ್ನ ಕಾವ್ಯವನ್ನು ಕವಿ ಕಟ್ಟಬೇಕಾಗುತ್ತದೆ. ಸಮುದಾಯದ ದನಿಯಾಗಿ, ಕಾಲದ ದನಿಯಾಗಿ, ಸ್ಥಳದ ದನಿಯಾಗಿ ಬರೆಯಬೇಕಾಗುತ್ತದೆ. ತನ್ನ ಸುತ್ತಲಿನ ಓದುಗರ ಆಲೋಚನಾ ಕ್ರಮವನ್ನು ರೂಪಿಸುವ ವಸ್ತುಪ್ರತಿರೂಪ, ಛಂದಸ್ಸು, ಮತ್ತು ಕಾವ್ಯದ ಸಾಮಾಜಿಕ ಬಳಕೆ ಈ ಮೂರೂ ನೆಲೆಯಲ್ಲಿ ಕವಿತೆ ಹೊಸತು ಆದಾಗ ಅದೇ ಸ್ವಂತಿಕೆ. ಅದೇ ಅನನ್ಯತೆ. ಎಚ್ಚರದ ಕುಶಲಕರ್ಮದಿಂದ ರಚಿಸಿದ ರಚನೆಯಾದರೂ ಸರಿ, ಸ್ವತಃಸಂಭವಿ ಆದರೂ ಸರಿ: ಸಮಾಜದ ಎಚ್ಚರವನ್ನು ಬಡಿದೆಬ್ಬಿಸುವ ಸಂಕಲ್ಪದಿಂದ ವರ್ತಮಾನಕ್ಕೆ ಸ್ಪಂದಿಸುವುದೇ ಸ್ವಂತಿಕೆ. ಸ್ವಂತಿಕೆ ಸಮುದಾಯಿಕ ಆದುದು ಕೂಡ. ಅದು ಕಾಲಿಕ ಮತ್ತು ಸ್ಥಳೀಕ ಆದುದು ಕೂಡ.
ಸಮಾಜ ನಿರಂತರ ಚಲನಶೀಲವಾದುದು: ಅಂತಹ ಕಡೆ ಕಾವ್ಯದ ಹೊಸತನ ಅದರ ವಸ್ತು, ಅನುಭವಗಳಲ್ಲಿ ಮಾತ್ರವಲ್ಲ; ರೂಪ, ಅಭಿವ್ಯಕ್ತಿ ಕ್ರಮ-ಛಂದಸ್ಸು-ಅನುಸಂಧಾನಗಳಲ್ಲು ಇರಬೇಕು. ಕಾವ್ಯದ ಅನುಸಂಧಾನದ ನೆಲೆಗಳನ್ನು ವಿಸ್ತರಿಸುವ, ಹೊಸದಾಗಿ ಕಟ್ಟಿಕೊಳ್ಳುವ ಹೊಣೆ ಕೇವಲ ಹೊರಗಿನದು ಮಾತ್ರವಲ್ಲ. ಅದು ಕವಿ, ಕಾವ್ಯದ್ದೂ ಹೌದು. ಸಮುದಾಯದೊಂದಿಗೆ ಕಾವ್ಯ ಬರೆಯದಿದ್ದರೆ, ಹುಟ್ಟದಿದ್ದರೆ; ಹುಟ್ಟಿ, ಬೆರೆದು, ಬಳಕೆಯಾಗಿ ಬೆಳೆಯದಿದ್ದರೆ ಅದು ಹೊಸತಾಗಲು, ಅನನ್ಯವಾಗಲು ಸಾಧ್ಯವಿಲ್ಲ. ಆದರೆ ಗೆಳೆಯರೇ ಈ ಹೊಣೆಯನ್ನು ನಮ್ಮ ಕಾವ್ಯ ಭಾವಿಸುತ್ತಿಲ್ಲ, ನಿಭಾಯಿಸುತ್ತಿಲ್ಲ, ಜೀವಿಸುತ್ತಿಲ್ಲ, ನವ್ಯವೂ ಭಾವಿಸಲಿಲ್ಲ, ನಿಭಾಯಿಸಲಿಲ್ಲ. ನಮ್ಮ ಹಲವು ಕಾವ್ಯ ಸಂವೇದನೆಗಳು ಈಸೊಟೆರಿಕ್ ಆಗ್ತಾ ಇವೆ! ನವ್ಯವಂತೂ ಟೋಟಲಿ ಈಸೋಟಿರೆಕ್. ಇರಲಿ; ಈಗ ಪದ್ಯಗಳನ್ನು ಓದುತ್ತ ಅವುಗಳ ಕಟ್ಟಾಣಿಕೆಯನ್ನು ಚರ್‍ಚೆಗೆ ಎತ್ತಿಕೊಳ್ಳೋಣ:
ಭಾಗ ಒಂದು - ಕವಿತೆಗಳ ಓದು ಮತ್ತು ಕಟ್ಟಾಣಿಕೆಯ ಚರ್‍ಚೆ
ಮೊದಲಿಗೆ ನಿಮ್ಮೆದುರು ಅಡಿಗರ ಭೂಮಿಗೀತವನ್ನು ಓದುತ್ತೇನೆ ಇಡೀ ಪದ್ಯ ಓದುವುದಿಲ್ಲ; ಅದರ ಕೆಲವು ಆಯ್ದ ಭಾಗಗಳನ್ನು ಓದುತ್ತೇನೆ ಕೇಳಿ; (ಭೂಮಿಗೀತ-ಕೇಳುಪಠ್ಯ)
ನೋಡಿ; ಹುಟ್ಟು, ಎಳಹರಯ ಎಂದು ಈ ಪದ್ಯದಲ್ಲಿ ಎರಡು ಹಂತಗಳಿವೆ. ಆದರೆ ಈ ಪದ್ಯ ನಾಲ್ಕು ಭಾಗಗಳಲ್ಲಿ ಬರೆಯಲ್ಪಟ್ಟಿದೆ. ಇಲ್ಲಿ ಒಟ್ಟು 129 ಸಾಲುಗಳಿವೆ. ಹಂತಗಳಾಗಿ, ಭಾಗಗಳಾಗಿ ವಿಂಗಡಿಸಿಕೊಂಡು ಈ ಪದ್ಯ ಬರೆಯಲಾಗಿದೆ. ಹೀಗೆ ಖಂಡಗಳಾಗಿ; ಕಂಡಿಕೆಗಳಾಗಿ ಕಾವ್ಯ ಬರೆಯುವುದೂ ಒಂದು ತಂತ್ರ. ಈ ಮೂಲಕ ಏಕತಾನವನ್ನು ಮುರಿಯುವುದು, ಹಿಂಚಲನೆ-ಮುಂಚಲನೆಗೆ ಓದುಗರಿಗೆ ಅನುಕೂಲ ಮಾಡಿಕೊಡುವುದು ಇಲ್ಲಿನ ಉದ್ದೇಶ. ಇಲ್ಲಿ ಮೌರಿ, ಅಜಸ್ರಧಾರೆ, ಜಾಳಿಸು, ಕುಂಗ, ತೋಟಿ, ಕಂಕಟರು, ಷಾಃಪಸಂದು... ಹೀಗೆ ನಿತ್ಯ ಜನಬಳಕೆಯಲ್ಲಿ ಇಲ್ಲದ ಹಲವಾರು ಶಬ್ದಗಳನ್ನು ಪ್ರಯೋಗಿಸಲಾಗಿದೆ. ಇಂಥವುಗಳ ಅರ್ಥಕ್ಕೆ ಕೆಲವರಿಗೆ ನಿಘಂಟು ಬೇಕಾಗಬಹುದು. ಇನ್ನು ಇಲ್ಲಿ ಅಡಿಕೆಗೊನೆ ಗಿಲಕಿ, ಮಾಂಸದ ಹಾಡು, ಜಾಮೂನು ನಾದ, ಕುರುಡಾಡು, ಹೆಂಡಹೊಂಡ, ಆಟಂಬಾಂಬುಕಾಳು, ಮಾರಕಕ್ರಿಮಿಪೈರು, ಹೊಟ್ಟೆಚರಂಡಿ, ಗಾಳಿದರಬಾರು ಹೆರಿಗೆಮನೆಮಸಣ, ವಸ್ತ್ರವಿಲಾಸ, ತೊಗಲುಬಾವಲಿ, ಜೋಲುತೊಗಟೆ, ಆಕಾಶಪಂಜರ, ಬಾಲಲೀಲೆಯ ಚಟ್ಟ, ಬೆಳಕುಮಂತ್ರ, ಗಾಳಿಬೀದಿ ಹೀಗೆ ಹಲವಾರು ಪದಕೂಟಗಳನ್ನು ಬಳಸಲಾಗಿದೆ. ಇಂಥವುಗಳು ಎರಡು ಭಿನ್ನ ಪದಗಳನ್ನು ಒಟ್ಟಿಗೆ ಇರಿಸಿ ಕವಿಯೇ ರಚಿಸಿಕೊಂಡಿರುವ ಹೊಸ ಪದಗಳು, ಪದಕೂಟಗಳು. ವಿಶಿಷ್ಟಾರ್ಥಗಳನ್ನು ಹೊರಡಿಸಲು ಕವಿ ಹೀಗೆ ತನ್ನದೇ ಹೊಸದಾಗಿ ಪದಗಳನ್ನು ಸೃಷ್ಟಿಸಬೇಕಾಗುತ್ತದೆ. ಈ ರೀತಿಯಲ್ಲಿ ಕವಿಯಾದವನು ತನ್ನದೇ ಡಿಕ್ಶನ್ ಕೂಡ ನಿರ್ಮಿಸಬೇಕಾಗುತ್ತದೆ. ಕವಿತೆ ಹೊಸತಾಗುವುದು ಹೀಗೆ ತನ್ನದೇ ಡಿಕ್ಶನ್ ರೂಪಿಸಿಕೊಂಡಾಗ. ಇದು ಕವಿಯಾದವನು ಭಾಷೆಗೆ ನೀಡುವ ತನ್ನದೆ ಕಾಣಿಕೆ.
ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ; ದಾರಿ ಸಾಗುವುದೆಂತೋ ನೋಡಬೇಕು.
‘ಎಣ್ಣೆ ತೀರುತ್ತಲಿರೆ, ಒಡಕು ಹಣತೆಯ ಮುಂದೆ ಬತ್ತಿ ಹೊಸೆತ’
‘ಬಿದಿರು ಮೇಣೆಯ ಮೇಲೆ ಕುಳಿತು ಸಾಗುವ ವೇಳೆ ಹೊರಬರಳು ಅವಳಿಗಿನ್ನೊಂದು ಹೆರಿಗೆ’
‘ಬಿಟ್ಟರೋ ಕಾಡಲ್ಲಿ ಕಣ್ಣುಕಟ್ಟಿ; ಸುತ್ತಲೂ ಬಿಗಿದಿಟ್ಟು ಮುಳ್ಳುತಂತಿ
ಕುಡಿಯಲುಪ್ಪಿನ ನೀರು ತಿನಲು ಬೆಂಕಿಯ ಚೂರು; ಕುಣಿಯಲೆಂದೇ ಬೇಡಿ ಕಾಲ ತೊಡವು’
ಇಂತಹ ಹಲವಾರು ದೃಶ್ಯಚಿತ್ರಗಳನ್ನು ಇಲ್ಲಿ ನಿರೂಪಿಸಲಾಗಿದೆ ಹೀಗೆ ನಿರೂಪಿಸುವ ಮೂಲಕ ಲೋಕದ ಸ್ಥಿತಿಯನ್ನು; ವ್ಯಕ್ತಿಯ ಸ್ಥಿತಿಯನ್ನೂ, ಓದುಗರಿಗೆ ಮನದಟ್ಟು ಮಾಡಲು ಯತ್ನಿಸಲಾಗಿದೆ. ಕವಿತೆ ಬರೆಯುವಾಗ ಬರಿದೇ ಸಾಮಾನ್ಯ ಸಂಗತಿಗಳನ್ನು ನಿರೂಪಿಸಿದರೆ ಸಾಲದು. ವಿಸಂಗತಿ, ವಿಪರ್‍ಯಾಸಗಳನ್ನು ಹೇಳುವಾಗ ಇಂತಹ ದೃಶ್ಯಚಿತ್ರಗಳ ಮೂಲಕವೇ ಹೇಳಬೇಕು ಎನ್ನುವುದು ಒಂದು ತಂತ್ರ. ಶಬ್ದಗಳು ಓದುಗನಲ್ಲಿ ಒಂದು ಹೊಸ ದೃಶ್ಯಾನುಭವ ನೀಡಲು ತೊಡಗಿದಾಗ ಕವಿತೆ ನೀಡುವ ಲೋಕಾನುಭವ ಶಾಕಿಂಗ್ ಆಗಿರುತ್ತದೆ. ಇಂಥದ್ದು ಲೋಕಾಸಾಮಾನ್ಯ ಅಲ್ಲ. ಲೋಕವಿಶಿಷ್ಟ. ಕವನವು ತನ್ನ ಇಡೀ ಕಥನದ ಮೂಲಕ ಹೇಳುವುದನ್ನು ಇಂತಹ ಪದಗುಚ್ಚಗಳು ಒಂದು ಚಿಕ್ಕ ಚಿತ್ರದ ಮೂಲಕ ಹೇಳುತ್ತವೆ. ಇಂಥ ಚಿತ್ರಗಳು ವಿಸಂಗತಿ ಉಳ್ಳ ಬರಿದೆ ದೃಶ್ಯಚಿತ್ರಗಳಲ್ಲ. ಇವು ದೃಶ್ಯಪ್ರತಿಮೆಗಳು. ಕವಿಯಾದವನು ಓದುಗನೊಂದಿಗೆ ಸಂವಹನ ನಡೆಸುವಾಗ ಇಂತಹ ಲೋಕಭಿನ್ನವಾದ, ವಿಶಿಷ್ಟವಾದ ಹೊಸ ಹೊಸ ಶಾಕಿಂಗ್ ದೃಶ್ಯಚಿತ್ರಗಳನ್ನು ನಿರ್ಮಿಸಿ ನೀಡಬೇಕಾಗುತ್ತದೆ. ದೃಶ್ಯಚಿತ್ರಗಳ ಸರಣಿಯ ಮೂಲಕವೇ ಓದುಗರ ಕಲ್ಪನಾ ಸಾಮರ್ಥ್ಯ, ಭಾವನಾ ಸಾಮಾರ್ಥ್ಯ, ಗ್ರಹಿಕಾ ಸಾಮರ್ಥ್ಯಗಳನ್ನು ಉದ್ದೀಪಿಸಬೇಕಾಗುತ್ತದೆ. ಕವಿಗಳಾಗಬೇಕೆನ್ನುವವರು ಓದುಗರೊಂದಿಗೆ ಹಾಗೆ ಅವರಿಗೇ ಬೇಕಾದ ಭಾವನಾಸ್ಥಳ, ಚಿಂತನಾಸ್ಥಳ, ಕಲ್ಪನಾಸ್ಥಳಗಳನ್ನು ತುಂಬಿಕೊಳ್ಳುವ ಅವಕಾಶಗಳನ್ನು ನಿರ್ಮಿಸಿಕೊಡಬೇಕಾಗುತ್ತದೆ. ಎಲ್ಲವನ್ನೂ ವಾಚ್ಯವಾಗಿ ಸುರಿಯುತ್ತ ಹೋದರೆ ಅದು ಕವಿತೆ ಆಗುವುದಿಲ್ಲ. ಭಾಷಾಣ ಆಗುತ್ತದಷ್ಟೆ. ಕವಿತೆಯಲ್ಲಿ ಓದುಗನ ಪಾತ್ರ ಏನು? ಆ ಬಗ್ಗೆ ಕವಿಗೆ ಎಚ್ಚರ ಇರಬೇಕಾಗುತ್ತದೆ. ಹಾಗಾದಾಗ ಕವಿತೆ ಕವಿಯ ಕೈಯಲ್ಲಿ ಬರಿ ಎಲುಬಿನ ಹಂದರ ಮಾತ್ರವಾಗಿ ಮೈತಾಳಿ ಓದುಗನಲ್ಲಿ ಅದು ರಕ್ತಮಾಂಸ, ಜೀವಗಳನ್ನು ಪಡೆಯುತ್ತದೆ. ಹೀಗೆ ನೋಡಿದರೆ ಎಲ್ಲ ಕವಿತೆಗಳೂ ಕವಿಯಿಂದ ಬರೆಯಲ್ಪಟ್ಟಾಗ ಅವು ಅರೆ ಬರಹೆಗಳಷ್ಟೇ. ಅವು ಪ್ರತಿಯೊಬ್ಬ ಓದುಗನಲ್ಲೂ, ಪ್ರತಿಯೊಂದು ಓದಿನಲ್ಲೂ ತುಂಬಿಕೊಳ್ಳುತ್ತವೆ; ವಿಸ್ತರಣೆಯಾಗುತ್ತವೆ; ಬೆಳೆಯುತ್ತವೆ. ಇಲ್ಲಿನ ಸಾಲುಗಳನ್ನು ನೋಡಿ;
‘ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ
ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರಪ್ರಯೋಗದಲ್ಲಿ ಪಾರಂಗತ’
‘ಹಕ್ಕಿ ಕೊರಳನು ಹಿಚುಕಿ ಲಾಲಿ ಹಾಡಿದಳು
ಸಸಿಕೊರಳ ಕೊಯ್ದು ತಿಂಡಿಯನು ತಿನಿಸಿದಳು’.
ಇಲ್ಲಿ ವೈದೃಶ್ಯಗಳನ್ನು ನಿರ್ಮಿಸಲಾಗಿದೆ. ಹಾಗೆ ನಿರ್ಮಿಸುವ ಮೂಲಕ ಸಾದೃಶ್ಯಗಳು ಹೇಳುವುದಕ್ಕಿಂತ ಭಿನ್ನವಾದ ಸಂಗತಿಗಳನ್ನು ಹೇಳಲು ಯತ್ನಿಸಲಾಗಿದೆ. ಜಾತಕರ್ಮ-ಅಪರಪ್ರಯೋಗ, ಲಾಲಿಹಾಡುವುದು-ಕೊರಳ ಹಿಚುಕುವುದು ಹೀಗೆ ವೈದೃಶ್ಯಗಳ ಮೂಲಕ ಇಲ್ಲಿ ಕವಿತೆ ತಾನು ಹೇಳಬೇಕಾದುದನ್ನು ಹೇಳುತ್ತಿದೆ. ಅಂದರೆ ಇವು ವೈರುಧ್ಯಗಳಲ್ಲ, ವೈದೃಶ್ಯಗಳು, ಕಾಂಟ್ರಾಸ್ಟುಗಳು. ವೈದೃಶ್ಯಗಳನ್ನು ಒಟ್ಟಿಗೆ ಬೆಸೆಯುವುದೂ ಕೂಡ ಒಂದು ಕಾವ್ಯ ಕಟ್ಟಾಣಿಕೆಯ ಕ್ರಮ. ಈ ಹಿಂದೆ ನೀಡಿರುವ ಉದಾಹರಣೆಗಳೂ ಇದೇ ರೀತಿಯ ವೈದೃಶ್ಯಗಳೇ. 14ನೇ ಸಾಲಿನಲ್ಲಿ ’ನಂದಬಟ್ಟಲನೆತ್ತಿ ತುಟಿಗಿಟ್ಟು ನರ್ತಿಸಿತು ಅಂದುಗೆಯನಾಡಿಸುತ ಬಂದ ಭೃಂಗ’ ಎನ್ನಲಾಗಿದೆ. ನಾವು ಬಟ್ಟಲನ್ನೆತ್ತಿ ತುಟಿಗಿಟ್ಟು ನರ್ತಿಸುವುದನ್ನು ಕಲ್ಪಿಸಿಕೊಳ್ಳುವುದೇ ಕ್ಲಬ್ಬು-ಪಾರ್ಟಿಗಳಲ್ಲಿ. ಆದರೆ ಇಲ್ಲಿ ದುಂಬಿಯೊಂದು ನಂದಬಟ್ಟಲು ಹೂವಿನ ಮಧು ಹೀರುವ ಚಿತ್ರವಿದೆ. ಭೃಂಗವೂ ಜೀವವೇ, ಮಾನವನೂ ಒಂದು ರೀತಿ ಮತ್ತಿಗೆ ಎಡತಾಕುವ ದುಂಬಿಯೇ. ಹೀಗೆ ಭಿನ್ನ ಜೀವಾನುಭವಗಳನ್ನು ಕಲಸುವ ಮೂಲಕವೂ ಕವಿಯಾದವನು ತನ್ನ ವಿಚಾರಗಳನ್ನು ದಾಟಿಸಬೇಕಾಗುತ್ತದೆ. ನೋಡಿ: 38ನೇ ಸಾಲಿನಲ್ಲಿ ’ಕಣ್ಣು ಬಿಟ್ಟರೆ ಬಣ್ಣ ಬಣ್ಣ ಗೊಗ್ಗರು ಗಲಭೆ; ಕಿವಿ ತುಂಬ ಹಸುರು’ ಅನ್ನುವ ಅನುಭವ ಚಿತ್ರ ಬರುತ್ತದೆ. ನಾವು ಸಾಮಾನ್ಯವಾಗಿ ಕಣ್ಣು ಬಿಟ್ಟರೆ ಬಣ್ಣ ಬಣ್ಣ ಕಾಣುತ್ತೇವೆ ಸರಿ. ಆದರೆ ಇದೇನಿದು ಕಣ್ಣು ಬಿಟ್ಟರೆ ಗೊಗ್ಗರು, ಗಲಭೆ, ಕಿವಿತುಂಬ ಹಸುರು? ಕಣ್ಣಿಗೆ ಹಸುರು ಎಂದರೆ ಕಿವಿತುಂಬ ಗೊಗ್ಗರು ಅಂದರೆ ಆಗ ಅದು ಲೋಕಾಸಾಮಾನ್ಯವಾದ ಹೇಳಿಕೆ. ಆದರೆ ಇಲ್ಲಿ ಕವಿತೆ ಇಂದ್ರಿಯಾನುಭವಗಳನ್ನು ಅದಲಿ ಬದಲಿ ಮಾಡುತ್ತಿದೆ. ಕಣ್ಣಿಗೆ ಆಗುವ ಅನುಭವ ಕಿವಿಗೂ, ಕಿವಿಗೆ ಆಗುವ ಅನುಭವ ಕಣ್ಣಿಗೂ ಆಗುತ್ತಿದೆ. ಜೀವಾನುಭವಗಳ ಪಲ್ಲಟದಂತೆಯೇ, ಇಂದ್ರಿಯಾನುಭವಗಳ ಪಲ್ಲಟವೂ ಇಲ್ಲಿ ಜರುಗುತ್ತಿದೆ. ಇದೂ ಕೂಡ ಕವಿತೆಯ ಭಿನ್ನ ಕಟ್ಟಾಣಿಕೆಯ ಕ್ರಮ. ಒಂದನ್ನು ಇನ್ನೊಂದರ ಜೊತೆಗೆ ಪಲ್ಲಟಿಸಿಟ್ಟು ಭಿನ್ನ ಅನುಭವವನ್ನು ನೀಡಲು ಯತ್ನಿಸುವ ಕಾವ್ಯತಂತ್ರವಿದು. ಪ್ರಾಕ್ಟೀಸಿಂಗ್ ಪೊಯೆಟ್ಟುಗಳು ಇದನ್ನೆಲ್ಲ ಗಮನಿಸಬೇಕು. ಅನುಕರಿಸಲಿಕ್ಕೆ ಅಲ್ಲ. ಇಂತಹ ಭಿನ್ನ ಹೊಸ ತಂತ್ರಗಳನ್ನು ಕಂಡುಕೊಳ್ಳಲಿಕ್ಕೆ.
ಭೂಮಿಗೀತದ ನೆಪದಲ್ಲಿ ಕವಿತೆಯ ಮೇಕಿಂಗ್ ಬಗ್ಗೆ ಇಷ್ಟು ಸಾಕು. ಇಲ್ಲದಿದ್ದರೆ ಇಡೀ ಅವಧಿ ಈ ಒಂದು ಕವಿತೆ ಬಗ್ಗೆನೆ ಮಾತಾಡಬೇಕಾಗುತ್ತದೆ. ಮುಂದೆ ಹೋಗೋಣ; ಈಗ ಎ.ಕೆ.ರಾಮಾನುಜನ್ ಅವರ ಪಿತ್ರಾರ್ಜಿತ ಕವಿತೆ ಓದೋಣ. (ಪಿತ್ರಾರ್ಜಿತ-ಕೇಳುಪಠ್ಯ)
ಕಬ್ಬಿಣದ ಕೀಲಿಯನ್ನು ಪಿತ್ರಾರ್ಜಿತ ಆಸ್ತಿ; ಅದನ್ನು ಭದ್ರವಾಗಿಡಬೇಕು ಎಂಬ ಮಾತು ಇಲ್ಲಿ ಬರುತ್ತದೆ. ಪಿಡುಸು ರೋಗ ಬಂದಾಗಲೂ ಈ ಕೀಲಿಕೈ ಉಪಯೋಗಕ್ಕೆ ಬರುತ್ತದೆ ಎಂಬುದು ಇಲ್ಲಿ ಚರಿತ್ರೆಯು ಹೇಗೆಲ್ಲ ವರ್ತಮಾನದಲ್ಲಿ ಬಳಕೆ ಆಗಬಲ್ಲುದು ಎಂಬುದನ್ನು ಹೇಳುವ ಪ್ರತೀಕ. ಪರಂಪರೆ ರೋಗವೂ ಹೌದು; ರೋಗಕ್ಕೆ ಔಷಧಿಯೂ ಹೌದು! ಪಿತ್ರಾರ್ಜಿತ ಆಸ್ತಿಯಾಗಿ ಬರಿದೇ ಆಸ್ತಿಗಳು ಮಾತ್ರ ಬರುವುದಿಲ್ಲ; ಚರಿತ್ರೆಯ ಎಲ್ಲ ನಮ್ಮ ತಪ್ಪುನೆಪ್ಪುಗಳೂ ಪಿತ್ರಾರ್ಜಿತಗಳೇ; ವರ್ತಮಾನದ ನಮ್ಮೆಲ್ಲ ಕಷ್ಟ ಸುಖಗಳೂ ಚರಿತ್ರೆಯ ಸಂಪಾದನೆಯೇ; ನಮ್ಮ ಪಿತೃ, ಪಿತಾಮಹ ಪೀಳಿಗೆ ಮಾಡಿದ ಸಾಧನೆ ಮತ್ತು ಕಂಡ ಸೋಲುಗಳೆಲ್ಲ ಬೇರೆ ಬೇರೆ ರೂಪದಲ್ಲಿ ಇಂದು ಬಂದು ನಮ್ಮನ್ನು ಕಾಡಬಹುದು; ಹಾಗಾಗಿ ಪಿತ್ರಾರ್ಜಿತವನ್ನೆಲ್ಲ ಸ್ವಯಾರ್ಜಿತ ಮಾಡಿಕೊಳ್ಳುವಾಗ ನಾವು ವಿವೇಕಿಗಳಾಗಿ ವರ್ತಿಸಬೇಕು; ಯಾವುದು ಉಪಯುಕ್ತವೋ ಅದನ್ನು ಮಾತ್ರ ನಮ್ಮ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳಿಗೆ ದಾಟಿಸಬೇಕು ಎಂಬಿತ್ಯಾದಿ ಧ್ವನಿ ಪರಂಪರೆಯನ್ನು ಈ ಕವಿತೆ ಪ್ರತಿಮೆ-ಪ್ರತೀಕಗಳ ಮೂಲಕವೇ ಹೊರಡಿಸುತ್ತದೆ. ಇಲ್ಲಿ ಕವಿ ತನ್ನದೇ ಒಳನೋಟ ಒಂದನ್ನು, ದರ್‍ಶನ ಒಂದನ್ನು ಪ್ರತೀಕ ಮಾದರಿಯಲ್ಲಿ ಮಂಡಿಸುವ ಕ್ರಮ ಅನುಸರಿಸುತ್ತಿದ್ದಾನೆ.
ಈ ಪ್ರತಿಮೆ, ಪ್ರತೀಕಗಳ ಕತೆ ಹೇಗಪ್ಪ ಅಂದರೆ; ಓದುವವನು ಹೆಚ್ಚು ಕ್ರಿಯಾಶೀಲನೂ, ಕಲ್ಪನಾಶೀಲನೂ, ಪ್ರಜ್ಞಾವಂತನೂ ಆಗಿದ್ದಾಗ ಈ ಪ್ರತಿಮೆ, ಪ್ರತೀಕಗಳೂ ಕ್ರಿಯಾಶಾಲಿ, ಕಲ್ಪನಾಶಾಲಿ, ಪ್ರಜ್ಞಾಶಾಲಿ ಆಗುತ್ತವೆ. ಓದು ನಿಜವಾಗಿಯೂ ಜಡ ಆದರೆ ಪ್ರತೀಕಗಳ ಒಟ್ಟಿಲು ಕವಿತೆ ಕೂಡ ಜಡವಾಗುತ್ತದೆ. (ಒಟ್ಟಿಲು ಅಂದರೆ ಒಟ್ಲು, ಸಸಿಮಡಿ) ಸಸಿಮಡಿ ಹೇಗೆ ಗೊತ್ತ? ರೈತ ಕಾಪಾಡಿಕೊಂಡರೆ, ಬೇರೆಡೆ ನಾಟಿ ಮಾಡಿ ಬೆಳೆಸಿದರೆ ಅವು ಬೆಳೆದು ಫಲ ಕೊಡ್ತವೆ. ಇಲ್ಲದಿದ್ದರೆ ಕಮರಿಹೋಗ್ತವೆ. ಇದು ಎಲ್ಲ ನವ್ಯ ಕವಿತೆಗಳಿಗೂ ಅನ್ವಯಿಸುವ ಮಾತು. ಕನ್ನಡ ನವ್ಯ ಕವಿತೆ ಕಾವ್ಯದ ಸಸಿಮಡಿ. ಕಾವ್ಯದ ಒಟ್ಲು. ರಂಜನೆಯ ದಾರಿಯನ್ನು ಬಿಟ್ಟು ಲೋಕವಿಮರ್ಶೆಯ ದಾರಿಯನ್ನು ರೂಪಕ, ಪ್ರತಿಮಾ ಮಾರ್ಗದಲ್ಲಿ ಕವಿ ಹಿಡಿದಾಗ ಹೀಗಾಗುವುದು ಸಹಜ.
ಮಹಮದ್ ಘೋರಿ, ಕುತ್ಬ್ ಉದ್ದೀನ್ ಐಬಕ್, ಪಂಜಾಬ್ ಮೇಲ್, ಲಾಹೋರ್ ಬಸ್ ಹೀಗೆ ಚರಿತ್ರೆಯ ಹಲವು ಉಲ್ಲೇಖಗಳು ಪಿತ್ರಾರ್‍ಜಿತ ಕವಿತೆಯಲ್ಲಿ ಇವೆ. ಚರಿತ್ರೆಯ ಪಾತ್ರ, ಪ್ರಸಂಗ, ಘಟನೆಗಳನ್ನು ಇಲ್ಲವೆ ಪುರಾಣದ ಪಾತ್ರ-ಪ್ರಸಂಗಗಳನ್ನು ಪ್ರತೀಕವಾಗಿ ಬಳಸಿ ವರ್ತಮಾನದ ತಲ್ಲಣಗಳನ್ನು ಮಂಡಿಸುವುದು ನಮ್ಮಲ್ಲಿ ಬಹಳ ಪ್ರಸಿದ್ದವಾದ ಒಂದು ಕಾವ್ಯತಂತ್ರ. ಇಲ್ಲೂ ಈ ತಂತ್ರವನ್ನು ಬಳಸಲಾಗಿದೆ. ಚರಿತ್ರೆಯ ಪುರಾಣದ ಉಲ್ಲೇಖಗಳು ನಾವು ಈ ಮೊದಲು ಓದಿದ ಭೂಮಿಗೀತ ಪದ್ಯದಲ್ಲು ಸಾಕಷ್ಟು ಬಂದಿವೆ. ಅರಗಿನ ಅರಮನೆ, ರಾಧೇಯನ ಕುಂತಿ, ದೃತರಾಷ್ಟ್ರನ ಅಪ್ಪುಗೆ, ಅಗಸ್ತ್ಯಾಧರದ ತರುಸು, ಉತ್ಥಾನಪಾದ-ಸುರುಚಿ-ಧೃವ, ತಿರುಪತಿ ತಿಮ್ಮಪ್ಪ, ವಿಶ್ವಾಮಿತ್ರ-ತ್ರಿಶಂಕು ಹೀಗೆ ಹಲವು ಪ್ರತೀಕಗಳು ಅಲ್ಲಿ ಬಂದಿವೆ. ಇವೆಲ್ಲವುಗಳೂ ತಮ್ಮದೇ ಚಾರಿತ್ರಿಕ-ಪೌರಾಣಿಕ ಭಾವಕೋಶ-ಸಾಂಕೇತಿಕತೆಗಳನ್ನು ಹೊತ್ತು ಸಾಗುವ ಸಾಧನಗಳಾಗಿವೆ. ಅವು ಅರ್ಥಸಂವಹನದ ಸಾಧ್ಯತೆಗಳನ್ನು ಓದುಗರಿಗೆ ಒದಗಿಸುತ್ತವೆ. ಇವು ಕೆಲವೊಮ್ಮೆ ಅರ್ಥಸಾಧ್ಯತೆಗಳನ್ನು ಹಿಗ್ಗಿಸಲೂಬಹುದು, ಕುಗ್ಗಿಸಲೂಬಹುದು. ಆದರೆ ಓದುಗ ಈ ಚರಿತ್ರೆ ಪುರಾಣಗಳನ್ನು ತಿಳಿದಿಲ್ಲದಿದ್ದರೆ; ತಿಳಿಯಬೇಕಾಗುತ್ತದೆ. ಒಂದು ವೇಳೆ ತಿಳಿಯದೆ ಇದ್ದರೆ ಅಷ್ಟರ ಮಟ್ಟಿಗೆ ಅದು ಸಂವಹನಕ್ಕೆ ತೊಡಕು. ಕವಿತೆ ಬರೆದ ಕೂಡಲೆ ಬರೆದದ್ದು ಮುಗಿಯುವುದಿಲ್ಲ. ಕವಿತೆ ಕವಿಕರ್ಮ ಮಾತ್ರವಲ್ಲ. ಓದೂ ಕವಿಕರ್ಮವೇ.
ಈಗ ಇನ್ನೊಬ್ಬ ನವ್ಯಕವಿ ಎಚ್.ಎಂ.ಚೆನ್ನಯ್ಯನವರ ಆಮೆ ಮತ್ತು ಸ ಉಷಾ ಅವರ ತೊಗಲುಗೊಂಬೆಯ ಆತ್ಮಕತೆ ಪದ್ಯಗಳನ್ನು ಓದೋಣ. (ಆಮೆ ಕೇಳುಪಠ್ಯ)
ನೋಡಿ: ಎಚ್.ಎಂ.ಚೆನ್ನಯ್ಯನವರು ತಮ್ಮ ಈ ಆಮೆ ಪದ್ಯದಲ್ಲಿ ಸ್ವಗತ ತಂತ್ರವನ್ನು ಬಳಸಿದ್ದಾರೆ. ಪರಕಾಯ ಪ್ರವೇಶ ಮಾಡಿದ ಸ್ವಗತ ತಂತ್ರವಿದು. ಕವಿ-ಕವಿತೆಯ ನಿರೂಪಕ ತಾನೇ ಒಂದು ಪಕ್ಷಿಯಾಗಿ, ಪ್ರಾಣಿಯಾಗಿ, ಮರವಾಗಿ, ನದಿಯಾಗಿ, ಬಂಡೆಗಲ್ಲಾಗಿ ಇರುವಂತೆ ಭಾವಿಸಿಕೊಂಡು ಆ ಪ್ರಾಣಿಪಕ್ಷಿ, ಮರ, ನದಿ, ಬಂಡೆಗಳು ತಾವೇ ಸ್ವತಃ ಮಾತಾಡುವ ಹಾಗೆ; ಅವುಗಳೇ ತಮ್ಮ ಆತ್ಮಕಥನ ಅಥವಾ ಸ್ವಾನುಭವಗಳನ್ನು ನಿರೂಪಣೆ ಮಾಡುವ ಹಾಗೆ ಈ ಕವಿತೆಯನ್ನು ಬರೆಯಲಾಗಿದೆ. ಇದು ತಾನೇ ಒಂದು ಪ್ರಾಣಿ ಆಗಿಬಿಡುವ ರೂಪಾಂತರ ಸ್ಥಿತಿಯ ಪ್ರತೀಕವೂ ಹೌದು. ಪರಕಾಯ ಪ್ರವೇಶದ ಸಾಧ್ಯತೆಯೂ ಹೌದು. ಒಟ್ಟು ವ್ಯಕ್ತಿಯ ಅಸಹಾಯಕ, ಪರಾಧೀನ, ಬಂಧಿತ, ಮೂಕ, ಅನಿವಾರ್‍ಯ ಸ್ಥಿತಿಗಳನ್ನು ಅಭಿವ್ಯಕ್ತಿಸುವ ರೂಪಕಕ್ರಮವೂ ಹೌದು. ಪ್ರಾಣಿ-ಪಕ್ಷಿಗಳನ್ನು ಆನಂದಕ್ಕಾಗಿ ಪಂಜರದಲ್ಲೋ, ಪ್ರಾಣಿಸಂಗ್ರಹಾಲಯದಲ್ಲೋ ಬಂಧಿಸಿಡುವ ಮಾನವ ವರ್ತನೆಯನ್ನು ವಿಡಂಭಿಸುವ ಮಾರ್ಗವೂ ಹೌದು. ಇಡಿ ಲೋಕವೆ ಕೆಲವು ಅಧೀನ ಸಮುದಾಯಗಳನ್ನು ಹಾಗೆ ಪಂಜರದ ಕೊಳಕು ಕೊಳದಲ್ಲಿಟ್ಟ ಆಮೆಯಂತೆ; ರಂಜನೆಯ ಸರಕಿನಂತೆ ಬಳಸುವ ಕ್ರಿಯೆಯ ಪ್ರತಿಮೆಯಾಗಿ ಇಲ್ಲಿ ಆಮೆಯನ್ನು ಬಳಸಲಾಗಿದೆ. (ಬರಿ ಚರಿತ್ರೆ ಪುರಾಣಗಳಿಂದ ಎತ್ತಿ ತರುವುದನ್ನು ಬಿಟ್ಟು) ಕವಿಯಾದವನು ಹೀಗೆ ಲೋಕವಿಮರ್ಶೆಗೆ ತನ್ನದೇ ಆದ ವಸ್ತು ಪ್ರತಿರೂಪ, ಸ್ಥಿತಿಪ್ರತೀಕ, ಪ್ರತಿಮೆಗಳನ್ನು ಕಲ್ಪಿಸಿಕೊಂಡು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಪ್ರಾಕ್ಟೀಸಿಂಗ್ ಪೊಯೆಟ್ಟುಗಳಾದ ನಾವು ಹೀಗೆ ನಮ್ಮದೇ ಲೋಕಸ್ಥಿತಿ, ಲೋಕಜ್ಞಾನ, ಲೋಕದೃಷ್ಟಿಗಳ ಮಂಡನೆಗೆ ಹೀಗೆ ಹೊಸ ಸ್ಥಿತಿಪ್ರತೀಕ, ವಸ್ತುಪ್ರತಿರೂಪ, ಪ್ರಾಣಿರೂಪಕಗಳನ್ನು ಸೃಷ್ಟಿಸಿಕೊಳ್ಳುವುದನ್ನು ಕಲಿಯಬೇಕಾಗುತ್ತದೆ.
(ತೊಗಲುಗೊಂಬೆಯ ಆತ್ಮಕಥೆ ಕೇಳುಪಠ್ಯ) ಸ.ಉಷಾ ಅವರ ತೊಗಲುಗೊಂಬೆಯ ಆತ್ಮಕಥೆ ಇದೇ ರೀತಿಯ ತಂತ್ರದ ಮೂಲಕ ರಚನೆ ಆಗಿರುವ ಒಂದು ಸ್ವಗತ. ಇಲ್ಲಿ ಇನ್ನೊಬ್ಬರ ಕೈಗೊಂಬೆಯಾಗಿ, ಸೆರೆಯಾಳಾಗಿ, ಅವರು ಆಡಿಸಿದಂತೆ ಆಡಬೇಕಾಗಿರುವ ಸೂತ್ರದ ಗೊಂಬೆಯಾಗಿ, ದನಿಯಿದ್ದೂ ತನ್ನದೇ ದನಿಯಿಲ್ಲದ ಪರಾವಲಂಬಿಯಾಗಿ ಇರುವ ಒಂದು ಹೆಣ್ಣಿನ ಸ್ಥಿತಿಯನ್ನು; ಆ ಮೂಲಕ ಪ್ರತಿಯೊಂದೂ ಹೆಣ್ಣಿನ ಸ್ಥಿತಿಯನ್ನು ಹೇಳುವ ಪ್ರತಿಮೆಯಾಗಿ ತೊಗಲುಗೊಂಬೆಯನ್ನು ಬಳಸಲಾಗಿದೆ. ಆಮೆ ಮತ್ತು ತೊಗಲುಗೊಂಬೆ ಎರಡೂ ವ್ಯಷ್ಟಿ ನೆಲೆಯಿಂದ ಸಮುದಾಯದ ನೆಲೆಗೆ ಇಲ್ಲಿ ಜಿಗಿತವನ್ನು ಪಡೆಯುತ್ತವೆ. ಹಾಗೆ ವಯುಕ್ತಿಕ ಅನುಭವವು; ಆತ್ಮಕಥನವು; ವ್ಯಕ್ತಿಕೇಂದ್ರಿತ ನೆಲೆಯು ಸಮುದಾಯದ ಸಂಗತಿಯಾಗಿ, ಲೋಕಚರಿತವಾಗಿ ಜಿಗಿತ ಪಡೆಯಬಲ್ಲ ಪ್ರತಿಮೆ, ರೂಪಕಗಳನ್ನು ಕವಿಗಳು ಹೊಸ, ಹೊಸತಾಗಿ ಹುಡುಕಬೇಕಾಗುತ್ತದೆ. ಪ್ರಾಕ್ಟೀಸಿಂಗ್ ಪೊಯೆಟ್ಟುಗಳು ಹೀಗೆ ಹೊಸ ಬಗೆಯ ಕವಿತೆ ಕಟ್ಟುವ ಕ್ರಮಗಳನ್ನು ಹುಡುಕಬೇಕಾಗುತ್ತದೆ. ನಾನೊಂದು ಮರವಾಗಿದ್ದರೆ; ನಾನು ಗೋವು ಹೀಗೆ ಕವಿ ತನ್ನನ್ನು ಅನ್ಯವಾಗಿ ಕಲ್ಪಿಸಿಕೊಳ್ಳುವ ಮೂಲಕ ತನ್ನ ಮತ್ತು ತನ್ನ ಸಮುದಾಯವು ಲೋಕದೊಂದಿಗೆ ಹೊಂದಿರುವ ಸಂಬಂಧವನ್ನು ನಿರೂಪಣೆ ಮಾಡುವ ಹಲವು ಕವಿತೆಗಳು ಕನ್ನಡದಲ್ಲಿ ರಚನೆಯಾಗಿವೆ. ಇಂತಹ ಕಡೆ ತನ್ನದೆ ದನಿಯಿಲ್ಲದ ತೊಗಲುಗೊಂಬೆ, ಇನ್ನೊಬ್ಬರ ಕೈಗೊಂಬೆ ಆಗಿ ಇರಬೇಕಾದ ಮತ್ತು ಹಾಗಿರುವುದು ಸರಿಯಲ್ಲ ಎಂಬ ಎಚ್ಚರವು ಮೂಡಿದರು ಏನೂ ಮಾಡಲು ಆಗದ ಅಸಹಾಯಕ ಸ್ಥಿತಿಯಲ್ಲಿ ಇರಬೇಕಾದ ಸಂಗತಿಯ ಪ್ರತೀಕವೊಂದನ್ನು ಕವಿ ಹುಡುಕಿಕೊಂಡಿದ್ದಾರೆ. ಪ್ರಾಕ್ಟೀಶನರ್‍ಸ್ ಯಾವತ್ತೂ ಇಂತಹ ಹೊಸ ಹೊಸ ಪ್ರತೀಕಗಳನ್ನು ಹುಡುಕಿಕೊಳ್ಳಬೇಕು.
ಈ ಆಮೆ ಮತ್ತು ತೊಗಲುಗೊಂಬೆ ಕವನಗಳ ಜೊತೆ ನೋಡಬೇಕಾದ ಇನ್ನೊಂದು ಕವನವೆಂದರೆ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಔರಂಗಜೇಬ: ಇದರ ಆಯ್ದ ಭಾಗಗಳನ್ನು ಮೊದಲು ಓದಿಬಿಡೋಣ. (ಔರಂಗಜೇಬ ಕೇಳುಪಠ್ಯ)

ನಾನು ತಳ ಊರಿರದ ಔರಂಗಜೇಬ ಎಂದೇ ಈ ಪದ್ಯ ಆರಂಭ ಆಗುತ್ತದೆ. ಈ ಪದ್ಯ ರಾಮಾನುಜನ್ ಅವರ ಪಿತ್ರಾರ್ಜಿತ ಪದ್ಯವನ್ನೂ ನೆನಪಿಗೆ ತರುತ್ತದೆ. ನಾನು ಮತ್ತು ಅವನು, ಇಂದು ಮತ್ತು ನಾಳೆಗಳು ಒಂದೇ ಆದಂತಹ ಸ್ಥಿತಿಯಲ್ಲಿ ಔರಂಗಜೇಬ ಮತ್ತು ಇಂದಿನ ಪ್ರತಿಯೊಬ್ಬ ಓದುಗನೂ ಒಂದೇ ಆಗುವ ಹಾಗೆ ಈ ಪದ್ಯ ಬರೆಯಲ್ಪಟ್ಟಿದೆ. ಜೊತೆಗೆ ಪದ್ಯ ಮುಗಿಯುವುದೂ ನಾನು ತಳ ಊರಿರದ ಔರಂಗಜೇಬ ಅಂತಲೇ. ಔರಂಗಜೇಬನ ಸ್ವಗತ ಒಂದನ್ನು ನಿರೂಪಿಸುವ ಧಾಟಿಯಲ್ಲಿರುವ ಈ ಪದ್ಯ ವರ್ತಮಾನದ ತಿಕ್ಕಲುತನವನ್ನು ಚರಿತ್ರೆಯ ಪಾತ್ರಪ್ರತೀಕದ ಮೂಲಕವೇ ಹೇಳುತ್ತದೆ. ಕಾಲಾತೀತ, ಸ್ಥಳಾತೀತ ಮನಸ್ಥಿತಿಯೊಂದರ ರೂಪಕವಾಗಿಯೂ ಕವಿತೆ ಮೈತಾಳುತ್ತದೆ. ರೂಪಕಗಳ ಸರಮಾಲೆಯಾಗಿ ಇರದೆ ಇಡಿಯಾದ ಒಂದು ರೂಪಕವಾಗಿ ಕವಿತೆ ಕಾಣುತ್ತದೆ. ಹೌದು ಕೆಲವು ಕವಿತೆಗಳು ಇಡಿ ಇಡಿಯಾಗಿ ಪ್ರಬಂಧರೂಪಕದ ರೀತಿಯಲ್ಲಿ ಸಾರ್ವಕಾಲಿಕ ಪ್ರತಿಮೆಯಾಗಿ ನಿಲ್ಲುತ್ತವೆ. ಕವಿತೆಯ ಕಟ್ಟಾಣಿಕೆಯ ಬಗ್ಗೆ ಕುತೂಹಲ ಉಳ್ಳವರು ಇಂತಹ ತಂತ್ರವನ್ನೂ ಗಮನಿಸಬೇಕು.
. (ಗೆಲಿಲಿಯೋ ಮತ್ತು ಫೆವಿಕಾಲ್ ಕೇಳುಪಠ್ಯ)

ಎಚ್.ಎಲ್. ಪುಷ್ಪ ಅವರ ಕವಿತೆ ನೋಡಿ ಗೆಲಿಲಿಯೋ ಮತ್ತು ಫೆವಿಕಾಲ್ ಒಂದು ಚಿಕ್ಕ ಕವಿತೆ. ಇಲ್ಲಿ ಚರಿತ್ರೆಯ ವ್ಯಕ್ತಿಪ್ರತೀಕವನ್ನೆ ಬಳಸಲಾಗಿದೆಯಾದರೂ ಇದು ಔರಂಗಜೇಬ ಪದ್ಯದ ರೀತಿ ಸ್ವಗತದ ಧಾಟಿಯಲ್ಲಿ ಬರೆಯಲ್ಪಟ್ಟ ಪದ್ಯವಲ್ಲ. ಎರಡರ ಹೋಲಿಕೆಯ ತಂತ್ರವನ್ನಿಲ್ಲಿ ಬಳಸಲಾಗಿದೆ. ಔರಂಗಜೇಬ ಪದ್ಯದಲ್ಲಿ ಚರಿತ್ರೆ ಮತ್ತು ವರ್ತಮಾನಗಳು ಕಲಸಿಕೊಂಡರೆ ಈ ಗೆಲಿಲಿಯೋ ಪದ್ಯದಲ್ಲಿ ಇವೆರಡೂ ಕಲಸಿಕೊಳ್ಳುವುದಿಲ್ಲ; ಪ್ರತ್ಯೇಕವಾಗಿಯೇ ಇರುತ್ತವೆ ಮತ್ತು ತುಲನೆಗೆ ಒಳಪಡುತ್ತವೆ. ’ಡಿಸ್ಕೌಂಟ್ ಸೇಲ್‌ನಲ್ಲಿ ಕೊಂಡ ಅಂದದ ಮನೆ ಕಳಚಿ ಬೀಳುತ್ತಿದೆ ಕಣ್ಣೆದುರೇ, ಹುಡುಕುತ್ತಿದ್ದೇನೆ ಫೆವಿಕಾಲ್’ ಎಂಬ ಮಾತು ಬಂದ ಕೂಡಲೆ ಕವಿತೆ ಚರಿತ್ರೆ ಮತ್ತು ವರ್ತಮಾನದ ವಾಸ್ತವಗಳ ತುಲನೆಗೆ ನಮ್ಮನ್ನು ತೊಡಗಿಸುತ್ತದೆ. ಅನೇಕ ಬಗೆಯ ಬದಲಾವಣೆಗಳು ಅಂದಿನಿಂದ ಇಂದಿನವರೆಗೆ ಜರುಗಿವೆಯಾದರೂ ಆದಿಮವಾದ ಮೌಡ್ಯ; ಯಾಜಮಾನ್ಯಗಳು ಹೊಸ ಹೊಸ ರೀತಿಯಲ್ಲಿ ಹುಟ್ಟುತ್ತಿರುವುದನ್ನು ಜ್ಞಾನ-ಸಂಬಂಧ-ನಾಗರೀಕತೆಗಳ ನಡುವಣ ಒಡಕುಗಳಿಗೆ ಉತ್ತರ ಸಿಗದ ಸ್ಥಿತಿಯನ್ನೂ ಕವಿತೆ ಗೆಲಿಲಿಯೋ ಮತ್ತು ಫೆವಿಕಾಲ್ ಎಂಬ ಎರಡೇ ಶಬ್ದಗಳಲ್ಲಿ ಹಿಡಿದಿಡಲು ಯತ್ನಿಸುತ್ತದೆ. ನೋಡಿ ಇಲ್ಲಿ ಕವಿತೆಗೆ ಹೇಗೆ ಹೆಸರಿಡಬೇಕು ಎಂಬುದೂ ಕೂಡ ಮುಖ್ಯವೇ. ಕೆಲವರಿಗೆ ಕವಿತೆಗೆ ಸರಿಯಾದ ಹೆಸರಿಡುವುದಕ್ಕೇ ಬರುವುದಿಲ್ಲ. ತಲೆಬರಹಕ್ಕೂ ಒಡಲಿಗೂ ಸಂಬಂಧವೇ ಕೆಲವೊಮ್ಮೆ ಇರುವುದಿಲ್ಲ. ಕವಿತೆಯ ಒಟ್ಟು ಪ್ರಾಣವನ್ನು ಹಿಡಿದಿಡುವಂತೆ ತಲೆಬರಹ ಇರಬೇಕು. ಹಾಗಲ್ಲದಿದ್ದರೆ ಇಡಿ ಕವಿತೆಯ ಒಡಲನ್ನು ಭಿನ್ನವಾಗಿ ನೋಡುವ ಕೈಮಾರ್‍ಗದಂತೆ ಆದರೂ ತಲೆಬರಹ ಇರಬೇಕು.
ಈಗ ರಾಮಚಂದ್ರಶರ್‍ಮರ ಹೇಸರಗತ್ತೆ ಪದ್ಯ ನೋಡೋಣ: (ಹೇಸರಗತ್ತೆ ಕೇಳುಪಠ್ಯ)
ನೋಡಿ ಈ ಹೇಸರಗತ್ತೆ ಎಂಬ ಹೆಸರೇ ಒಂದು ಪ್ರಾಣಿರೂಪಕ. ಈ ಮುಂಚೆ ನಾವು ಚೆನ್ನಯ್ಯನವರ ಆಮೆ ಪದ್ಯ ನೋಡಿದೆವಲ್ಲ; ಇದೂ ಕೂಡ ಅದೇ ರೀತಿಯ ತಂತ್ರ. ಶರ್‍ಮರ ಪಾಂಡುಮಾದ್ರಿ ಪುರಾಣ ಪ್ರಸಂಗ-ಪುರಾಣ ಪಾತ್ರ ನಿರೂಪಣೆಯ ಮೂಲಕ ವರ್ತಮಾನವನ್ನು ವ್ಯಾಖ್ಯಾನಿಸುವ ಮತ್ತು ಪುರಾಣವನ್ನು ವರ್ತಮಾನೀಕರಿಸುವ ತಂತ್ರ ಬಳಸಿದರೆ ಈ ಹೇಸರಗತ್ತೆ ’ಕತ್ತೆದುಡಿಮೆ’ಯನ್ನೆ ಒಂದು ಸಂಕೇತದಂತೆ ಬಳಸಿರುವ ಪದ್ಯ. ಗಾರ್ಡನ್ ಆಫ್ ಈಡನ್ನಿನ ಚಿತ್ರ ಇಲ್ಲಿ ಬರುತ್ತದೆ, ವೀರ್‍ಯವರ್ಧಕವೆಂದು ನಂಬಿ ಉಪಯೋಗಿಸುವ ಪುಡಿ ಕಂತಾರಿಡೀಸ್‌ನ ಉಲ್ಲೇಖ, ಇಥಿಯೋಪಿಯಾದ ಕ್ಯಾಲೆಂಡರಿನ ಮೊದಲ ತಿಂಗಳು ಮಸ್ಕರಂ ಉಲ್ಲೇಖ, ಅಲ್ಲಿನ ಬೆಟ್ಟ-ಗುಡ್ಡಗಳ ಉಲ್ಲೇಖ, ಲಂಡನ್ನಿನ ನಗರ ಬದುಕಿನ ಉಲ್ಲೇಖ ಹೀಗೆ ಹಲವು ಉಲ್ಲೇಖಗಳು ಇಲ್ಲಿ ಬರುತ್ತವೆ. ಅಲ್ಲದೆ ನೆನಪು ಹೇಸರಗತ್ತೆ, ಚಪ್ಪಾಳೆ ತಟ್ಟುವ ಭೂತ, ಬೆಟ್ಟಗಳ ಇಕ್ಕಟ್ಟು ಇಳಿಜಾರು, ನಗರದ ಮಧ್ಯೆ ಇರುವ ಆರು-ಎಂಟರ ಕೋಣೆಹುತ್ತ ಹೀಗೆ ಹಲವಾರು ವಿವರಗಳೂ ಇಲ್ಲಿ ಬರುತ್ತವೆ. ಸ್ವಂತ-ಅನ್ಯ; ಸ್ಥಳೀಯತೆ-ಪರಕೀಯತೆಗಳು; ಭೂತ-ವರ್ತಮಾನ-ಭವಿಷ್ಯತ್ತುಗಳು ಕಲಸಿಕೊಂಡ ಸ್ಥಿತಿಯ ಪ್ರತೀಕವಾಗಿ ಇಲ್ಲಿನ ಎಲ್ಲ ಚಿತ್ರಗಳಿವೆ. ಇಲ್ಲಿ ಅತ್ತ ಲಾಯದ ಕುದುರೆಯೂ ಅಲ್ಲದ, ಇತ್ತ ಅಲಾಯದ ಕತ್ತೆಯೂ ಅಲ್ಲದ ಪರಿಸ್ಥಿತಿಯನ್ನು ಹೇಳಬೇಕಾಗಿದೆ. ಹಾಗಾಗಿ ಕವಿತೆಯಲ್ಲಿ ಇಂಥ ಸ್ಥಿತಿಯನ್ನು ಓದುಗರಲ್ಲಿ ಸಂವಹನಿಸುವ ಹಲವು ಚಿತ್ರಗಳನ್ನು ನೀಡಲಾಗಿದೆ. ಏನನ್ನು ಹೇಳಬೇಕೋ ಅದನ್ನು ವಾಚ್ಯವಾಗಿ ಹೇಳದೆ ಸೂಚ್ಯವಾಗಿ ಸಂಕೇತಗಳ ಮೂಲಕ, ನುಡಿಚಿತ್ರಗಳ ಮೂಲಕ ಸೂಚಿಸುವ ಕ್ರಮವನ್ನಿಲ್ಲಿ ಅನುಸರಿಸಲಾಗಿದೆ.
ಗುಟ್ಟಾದ ಹಳ್ಳ ತಿಟ್ಟುಗಳಲ್ಲಿ ಜುಮ್ಮೆನಿಸುವಂಥ ಹೊಳೆಬೆರಳ ಚೇಷ್ಟೆ; ಹಾವಿನಾಲಿಂಗನದ ಕಾವಿನೊತ್ತಾಯ, ಕಲಿಯಬೇಕಾದ್ದೆಲ್ಲ ಕಲಿತಿದ್ದು ಸೇಬಿನ ಗಿಡದ ಬುಡದ ಹುಲ್ಲಿನ ಮೇಲೆ, ತರುಡೊಡೆದ ತೀಟೆ, ಸಡಿಲವಾಗದ ತೊಡೆಯ ಗೋರಿ ಮೌನ ಹೀಗೆ ಹಲವು ಕಾಮದ ಸಾಂಕೇತಿಕ ವಿವರಗಳು ಇಲ್ಲಿ ಬರುತ್ತವೆ. ಇವೆಲ್ಲವೂ ಇಕ್ಕಟ್ಟು ಇಳಿಜಾರುಗಳ ಶ್ರಮದ ಹೊರೆ; ಮತ್ತು ಸುಖದ ದಾರಿ ಎರಡನ್ನೂ ಒಟ್ಟಿಗೆ ಇರಿಸುವ ಕೆಲಸ ಮಾಡುತ್ತವೆ. ಹಾಗೆ ಇರಿಸುತ್ತಲೇ ಈ ಲೋಕ ಕತ್ತೆಯೂ ಅಲ್ಲದ ಕುದುರೆಯೂ ಅಲ್ಲದ, ಸುಖವೂ ಹೌದಾದ ದುಃಖವೂ ಹೌದಾದ; ಇದು ಹೀಗೆ ಎಂದು ನಿಖರ ಹೇಳಲಾಗದ ಸಂಗತಿ ಎಂಬ ದರ್ಶನದ ಕಡೆಗೆ ಓದುಗನನ್ನು ಒಯ್ಯುತ್ತದೆ. ಪರಿಶ್ರಮವಿಲ್ಲದೆ ಸುಖವುಂಟೆ? ನೋಡಿ ಕವಿಯಾದವರು ಹೀಗೆ ಏನು ಹೇಳಬೇಕಾಗಿದೆಯೋ ಅದನ್ನು ಹೇಳುವುದಕ್ಕೆ ರೂಪಕಗಳನ್ನು ಹುಡುಕಬೇಕಾಗುತ್ತದೆ; ನುಡಿಗಟ್ಟುಗಳನ್ನು ಸೃಷ್ಟಿಸಬೇಕಾಗುತ್ತದೆ. ಭಾಷಾ ಮಡಿಮೈಲಿಗೆಗಳನ್ನು ಬಿಡಬೇಕಾಗುತ್ತದೆ. ತರಡು-ತೀಟೆ ಅಂತೆಲ್ಲ ಬರೆಯುವುದು ಇಕ್ಕಟ್ಟಲ್ಲ ಎಂದು ತಿಳಿಯಬೇಕಾಗುತ್ತದೆ. ಭಾಷೆ ಬಳಸುವುದಕ್ಕೆ ಬರಿ ಔಚಿತ್ಯ ಇದ್ದರೆ ಸಾಲದು, ಧೈರ್‍ಯ ಮತ್ತು ಸಾಂದರ್ಭಿಕ ಅಗತ್ಯದ ಅರಿವು ಕೂಡ ಇರಬೇಕಾಗುತ್ತದೆ. ಇದು ಕನ್ನಡ ನವ್ಯದ ಒಂದು ಕಾವ್ಯ ಜಾಯಮಾನ.
ಇದೇ ಹಿನ್ನೆಯಲ್ಲಿ ಯು.ಆರ್. ಅನಂತಮೂರ್ತಿಯವರ ವ್ಯವಸ್ಥೆಯ ಪುರುಷ ಮತ್ತು ಸುಡುಗಾಡು ಸಿದ್ದೇಶ; ಲಕ್ಷ್ಮೀಪತಿ ಕೋಲಾರ ಅವರ ನವಿಲುಕಿನ್ನರಿ ಈ ಎರಡೂ ಪದ್ಯಗಳನ್ನೂ ಒಟ್ಟಿಗೇ ನೋಡಬಹುದು: (ವ್ಯವಸ್ಥೆಯ ಪುರುಷ ಮತ್ತು ಸುಡುಗಾಡು ಸಿದ್ದೇಶ ಕೇಳುಪಠ್ಯ)
ನೋಡಿ ಇಲ್ಲಿ ಇವೆರಡಕ್ಕೂ ಬಹಳ ಚೆನ್ನಾಗಿ ಹೆಸರನ್ನೂ ಇಡಲಾಗಿದೆ. ಕಂಟೆಂಟು ಮತ್ತು ಮೆಥೆಡ್ಡು ಎರಡೂ ಒಂದೇ ಆಗಿಬಿಡುವ ಮಾದರಿಯಾಗಿ ಅನಂತಮೂರ್ತಿಯವರ ಪದ್ಯವನ್ನು ನೋಡಲು ಸಾಧ್ಯವಿದೆ. ನೋಡಿ ’ವ್ಯವಸ್ಥೆಯ ಪುರುಷ ಮತ್ತು ಸುಡುಗಾಡು ಸಿದ್ದೇಶ’ ಪದ್ಯದಲ್ಲಿ ರಾಜಬೀದಿ ಮತ್ತು ಒಳದಾರಿ ಹೀಗೆ ಅಲ್ಲಿ ಇಲ್ಲಿ ಎಂಬ ಎರಡು ಸ್ಥಿತಿಗಳ ತೌಲನಿಕ ನಿರೂಪಣೆ ಇದೆ. ಇರುವ ಮತ್ತು ಇಲ್ಲದ, ಶ್ರೀಮಂತ-ಬಡವ, ದೇಸಿ-ಮಾರ್ಗ, ಶಿಷ್ಟ-ಜಾನಪದ, ನಗರ-ಗ್ರಾಮ, ರಾಷ್ಟ್ರೀಯ-ಸ್ಥಳೀಯ ಹೀಗೆ ಲೋಕವನ್ನು ಎರಡು ಬೈನರಿ ವರ್ಗವಾಗಿ ನೋಡುವ ದೃಷ್ಟಿ ಇದೆ. ಈ ದೃಷ್ಟಿಯನ್ನು ಸರಿಯಾಗಿ ಪ್ರತಿನಿಧಿಸಲು ಎರಡು ಗಂಡು ಪಾತ್ರಗಳನ್ನು ಕಲ್ಪಿಸಿ ವ್ಯವಸ್ಥೆಯ ಪುರುಷ ಮತ್ತು ಸುಡುಗಾಡು ಸಿದ್ದೇಶ ಹೀಗೆ ಬಳಸಲಾಗಿದೆ. ಕವಿಯಾದವನು ಪ್ರಖರ ಚಿಂತಕನೂ ದಾರ್ಶನಿಕನೂ ಆದಾಗ ಆತ ತನ್ನ ದರ್ಶನವನ್ನು ಪ್ರವಚನವಾಗಿಸದೆ ಕವಿತೆ ಮಾಡಲು ತಕ್ಕ ಪ್ರತೀಕಗಳನ್ನು, ತಂತ್ರಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅದನ್ನು ಅನಂತಮೂರ್ತಿ ಇಲ್ಲಿ ಎರಡು ಪುರುಷ ಪಾತ್ರಗಳ ಸೃಷ್ಟಿಯ ಮೂಲಕ ಯಶಸ್ವಿಯಾಗಿ ಮಾಡಿದ್ದಾರೆ. ಎರಡೂ ಪಾತ್ರಗಳು ಇಲ್ಲಿ ಎರಡು ಭಿನ್ನ ಸಂಸ್ಕೃತಿಗಳ ಪ್ರತಿನಿಧಿಗಳಾಗಿ, ಲೋಕವನ್ನು ವ್ಯಾಖ್ಯಾನಿಸುತ್ತವೆ. ವ್ಯವಸ್ಥೆಯ ಪುರುಷ ಪ್ರಧಾನ ಧಾರೆಯನ್ನು ಪ್ರತಿನಿಧಿಸಿದರೆ ಸಿದ್ಧೇಶ ಅಲಕ್ಷಿತ ಧಾರೆಯನ್ನು ಪ್ರತಿನಿಧಿಸುತ್ತಾನೆ. ಈ ಎರಡರ ತೌಲನಿಕ ಮಂಡನೆ ಈ ಕವಿತೆಯಲ್ಲಿದೆ.
(ನವಿಲುಕಿನ್ನರಿ ಕೇಳುಪಠ್ಯ)

ಆದರೆ ಲಕ್ಷ್ಮೀಪತಿಯ ಪದ್ಯ ಈ ರೀತಿಯದ್ದಲ್ಲವಾದರೂ ಅಲ್ಲೂ ಶೋಷಕ-ಶೋಷಿತ, ತಳ ಸಮುದಾಯ ಮತ್ತು ಅನ್ಯ ಹೀಗೆ ಜಗತ್ತನ್ನು ಬೈನರಿಯಾಗಿ ನೋಡುವ ದೃಷ್ಟಿಯಿದೆ. ಅನಂತಮೂರ್ತಿ ತಮ್ಮ ಪುರುಷಪಾತ್ರಗಳ ಮೂಲಕ ವ್ಯವಸ್ಥೆಯ ಎರಡು ಹೋಳುಗಳ ಸಂಕೇತವಾಗಿ ಗಂಡನ್ನು ಬಳಸುತ್ತಲೇ ’ಪ್ರಳಯ ತಾಂಡವದಲ್ಲಿ ತನ್ನರ್ದ ಹೆಣ್ಣಾಗಿ ಬಿಡುವ’ ಸುಡುಗಾಡು ಸಿದ್ದೇಶನ ಸಾಧ್ಯತೆಯನ್ನು ಸೂಚಿಸುತ್ತಾರೆ. ಅನಂತಮೂರ್ತಿಯವರ ಕವಿತೆಯ ನಿರೂಪಕ ಅಲ್ಲಿ ಮತ್ತು ಇಲ್ಲಿ ಎರಡರ ಜೊತೆಗೂ ಮಾನಸಿಕ ದೂರ ಕಾಯ್ದುಕೊಂಡ ಮೂರನೇ ವ್ಯಕ್ತಿಯ ಹಾಗೆ ಇದ್ದರೆ ಲಕ್ಷ್ಮೀಪತಿಯವರ ಕವಿತೆಯ ನಿರೂಪಕ ತಳಸಮುದಾಯದೊಂದಿಗೇ ತನ್ನನ್ನು ಗುರ್ತಿಸಿಕೊಂಡ ವ್ಯಕ್ತಿಯಾಗಿದ್ದಾನೆ. ಇಲ್ಲಿ ಓದುಗನಿಗೆ ಅನಂತಮೂರ್ತಿಯವರ ಕವಿತೆಯಲ್ಲಿ ಮೆದುಳೂ ಲಕ್ಷ್ಮೀಪತಿಯವರ ಕವಿತೆಯಲ್ಲಿ ಹೃದಯವೂ ಎದ್ದು ಕಂಡರೆ ಅಚ್ಚರಿಯಿಲ್ಲ. ಕವಿತೆ ಬರೆಯುವ ಕವಿಗಳು ಮೆದುಳಿನ ಮೂಲಕ ಬರೆಯಬೇಕೋ, ಹೃದಯದ ಮೂಲಕ ಬರೆಯಬೇಕೋ ಎಂಬುದೂ ಒಂದು ಮುಖ್ಯವಾದ ಪ್ರಶ್ನೆ. ಆದರೆ ಹೃದಯವಿಲ್ಲದ ಮೆದುಳೂ ಮೆದುಳಿಲ್ಲದ ಹೃದಯವೂ ಎರಡೂ ಅನುಪಯುಕ್ತ ಮತ್ತು ಅಪಾಯಕಾರಿ ಎಂಬುದನ್ನು ನಾವು ತಿಳಿದಿರಬೇಕಾಗುತ್ತದೆ. ಮೆದುಳು ಮತ್ತು ಹೃದಯಗಳ ಎದುರು ಕಿವಿ ಕೂಡ ಮುಖ್ಯವೇ. ಕವಿತೆಯಲ್ಲಿ ಲಯಕೆಡದಂತೆ ಪದಬಳಕೆ ಮಾಡುವ ಬಗೆಗೂ ಕವಿ ಆದವನಿಗೆ ಗಮನ ಇರಬೇಕಾಗುತ್ತದೆ.
ಎಸ್.ವಿ.ಪ್ರಭಾವತಿಯವರ ಬೋನ್ಸಾಯ್ ಗಿಡಗಳು ಪದ್ಯವನ್ನು ಈಗ ನೋಡೋಣ; (ಬೋನ್ಸಾಯ್ ಗಿಡಗಳು ಕೇಳುಪಠ್ಯ)
ಎರಡೂ ಕಡೆ ಇಲ್ಲಿ ಬಳಕೆ ಆಗಿರುವ ಕಾವ್ಯತಂತ್ರ ಒಂದೇ, ಆದರೆ ವಿವರಗಳು ಮಾತ್ರ ಬೇರೆ ಬೇರೆ. ಬೋನ್ಸಾಯಿ ಗಿಡಗಳು ಇಡೀ ಸ್ತ್ರೀಕುಲದ ಒಂದು ರೂಪಕ ಆಗಬಹುದಾದ ಸಾಧ್ಯತೆ ಇದ್ದ; ಆದರೆ ಆ ಸಾಧ್ಯತೆಯನ್ನು ಕೈಚೆಲ್ಲಿರುವ ಕವನ. ನೋಡಿ; ನಾವೆಲ್ಲರೂ ಬೋನ್ಸಾಯಿಗಿಡಗಳೇ ಎಂಬ ಸಾಲು ಮೊದಲ ಪ್ಯಾರಾಗ್ರಾಫಲ್ಲೆ ಬಂದು; ಓದುಗನಿಗೆ ಒಂದು ಅಂತಿಮ ತೀರ್ಪು ಸಿಕ್ಕಿಬಿಡುತ್ತದೆ. ಆನಂತರ ಬರುವ ಏನೆಲ್ಲವೂ ಓಹೋ ಇಷ್ಟೇನಾ ಅನ್ನಿಸಿಬಿಡುತ್ತದೆ. ನಾವು ಬಳಸುವ ಯಾವುದೋ ಒಂದು ಸಾಲು ಇಡೀ ಕವಿತೆಯ ರೂಪಕ ಸಾಧ್ಯತೆಯನ್ನು ಕೆಡಿಸಿಬಿಡಬಹುದು ಎಂಬುದಕ್ಕೆ ಇದು ಉದಾಹರಣೆ. ಇನ್ನು ಈ ಪದ್ಯದ ಕೊನೆ ಎರಡು ಸಾಲುಗಳನ್ನು ನೋಡಿ; ’ನಾವು ಕೊಟ್ಟಿದ್ದನ್ನೇ ಅವರು ಓದಬೇಕು; ಅದೇ ಈ ಬೋನ್ಸಾಯಿ ಗಿಡದ ಝೋಕು’. ಹೀಗೆ ಕವಿತೆ ಮುಗಿಯುತ್ತದೆ. ಬೋನ್ಸಾಯಿ ಗಿಡದ ಝೋಕು ಎಂಬ ಪ್ರಾಸದ ಪದ ಪ್ರಾಸಕ್ಕಾಗಿ ಪ್ರಾಸ ಬಳಸಿದಂತೆ ಇದೆ. ಕೆಲವು ಕವಿಗಳು ತಿಣುಕಿ ತಿಣುಕಿ ಪ್ರಾಸ ತರುತ್ತಾರೆ. ಹಾಗೆ ತರಲು ಪದಗಳನ್ನು ಕಷ್ಟಪಟ್ಟು ಹುಡುಕುತ್ತಾರೆ. ಕವಿತೆಗೆ ಇರಬೇಕಾದ ಲಯ, ಪ್ರಾಸ, ನಾದ ಇವೆಲ್ಲವೂ ಬಲವಂತಕ್ಕೆ ಕೃತಕವಾಗಿ ಅನಗತ್ಯ ಬಳಸಿದ ಥರ ಬರಬಾರದು. ಹೇಗೆ ಪದ್ಯ ಬರೆಯಬಾರದು ಎಂಬುದನ್ನು ಪದ್ಯ ಬರೆಯುವವರು ಮೊದಲು ಕಲಿಯಬೇಕು. ನೋಡಿ ಪ್ರಾಕ್ಟೀಶನರ್‍ಸ್ ಯಾವಾಗಲೂ ಒಂದು ಒಳ್ಳೆಪದ್ಯ ಒಂದು ಕೆಟ್ಟಪದ್ಯ ಎರಡನ್ನು ಒಟ್ಟೊಟ್ಟಿಗೇ ಓದಬೇಕು. ಆಗ ನಮಗೆ ಪದ್ಯದ ಒಳ್ಳೆ ಹತಾರಗಳು ಯಾವುವು, ಕೆಟ್ಟ ಪದ್ಯದ ದೌರ್ಬಲ್ಯಗಳು ಯಾವುವು ಎಂಬುದು ನಮ್ಮ ಕಾಮನ್ ಸೆನ್ಸಿಗೇ ತಿಳಿಯುತ್ತದೆ.
ಬನ್ನಿ ಈಗ ಕೆ.ವಿ.ತಿರುಮಲೇಶರ ಹೊಸದೇವರ ಬರುವಿಗಾಗಿ ಮತ್ತು ವೀಚಿ ಅವರ ಮಿಂಚಿನಂತೆ ಬರಬಹುದೇ ಈ ಎರಡೂ ಪದ್ಯಗಳನ್ನು ಒಟ್ಟಿಗೇ ನೋಡೋಣ. (ಹೊಸದೇವರ ಬರವಿಗಾಗಿ ಕೇಳುಪಠ್ಯ)

ಸತ್ತವರ ದೇವತೆಯಾಗಿ ಓಸಿರಿಸ್ ಪ್ರಸ್ತಾಪ ತಿರುಮಲೇಶರ ಪದ್ಯದಲ್ಲಿ ಬಂದರೆ, ಪುರುಷ ಪ್ರತೀಕವಾದ ಹರ್ಕೀನಿಯಸ್ ಪ್ರಸ್ತಾಪ ವೀಚಿಯವರ ಪದ್ಯದಲ್ಲಿದೆ. ತಿರುಮಲೇಶರು ಹಲವು ರೀತಿಯ ಸಂವೇದನೆ-ಧಾಟಿ-ಚೌಕಟ್ಟುಗಳಿರುವ ಪದ್ಯಗಳನ್ನು ಬರೆದಿದ್ದಾರೆ. ಆದರೆ ವೀಚಿ ಹಾಗಲ್ಲ; ಅವರು ತಮ್ಮದೇ ಆದ ಗ್ರಾಮ್ಯನವ್ಯ ಧಾಟಿಗೆ ತಮ್ಮನ್ನು ತೆತ್ತುಕೊಂಡವರು. ತಿರುಮಲೇಶರ ಕವಿತೆಯಲ್ಲಿ ಪುರಾಣ-ಚರಿತ್ರೆಗಳ ವಕ್ರತೆಗಳು ಸ್ವರ್ಣಗೋಪುರಗಳಾಗಿ ವರ್ತಮಾನಕ್ಕೆ ವಕ್ಕರಿಸುವ ಬಗ್ಗೆ ತಿರಸ್ಕಾರವಿದೆ. ಹಾಗೆಯೇ ಯಾರಾದರೂ ಅವತಾರಕ್ಕಾಗಿ ಅಪೇಕ್ಷೆಪಡುವುದರ ಬಗ್ಗೆ ತಿರಸ್ಕಾರವಿದೆ. ವೀಚಿಯವರಲ್ಲೂ ಈ ರೀತಿಯ ತಿರಸ್ಕಾರ ಇದೆಯಾದರೂ ಇಲ್ಲಿ ಅವತಾರದ ಅಪೇಕ್ಷೆಯಿದೆ. ಕವಿತೆಯಲ್ಲಿ ದರ್ಶನವೊಂದು; ವೈಚಾರಿಕತೆಯೊಂದು ಕಾವ್ಯ ರೂಪಿಯಾಗಿ ಮೈತಳೆಯುವ ಮತ್ತು ಮೈತಳೆಯದೆ ಇರುವ ಬಗೆಯನ್ನು ತಿಳಿಯಲು ಇಂತಹ ಪದ್ಯಗಳ ನಿಕಟ ಓದನ್ನು ನಡೆಸಬೇಕು. (ಮಿಂಚಿನಂತೆ ಬರಬಹುದೇ ಕೇಳುಪಠ್ಯ)

ಎರಡೂ ಪದ್ಯಗಳೂ ನಾಲ್ಕು ಚಿಕ್ಕ ಚಿಕ್ಕ ಪ್ಯಾರಾಗ್ರಾಫ್‌ಗಳಾಗಿ ಬರೆಯಲ್ಪಟ್ಟಿವೆ. ತಿರುಮಲೇಶರ ಹೊಸದೇವರ ಬರುವಿಗಾಗಿ ಪದ್ಯದಲ್ಲಿ ಒಂದು ತತ್ವಜ್ಞಾನೀಯವಾದ ಮಂಡನೆ ಭಾರತೀಯ ಮತ್ತು ಗ್ರೀಕ್ ಪುರಾಣ ಪಾತ್ರಗಳ ಮೂಲಕ ಹರಳುಗಟ್ಟುತ್ತದೆ. ಆದರೆ ವೀಚಿಯವರ ಮಿಂಚಿನಂತೆ ಬರಬಹುದೆ ಪದ್ಯದಲ್ಲಿ ಒಂದು ಪ್ಯಾರಾಗ್ರಾಫ್‌ಗೂ ಇನ್ನೊಂದು ಪ್ಯಾರಾಗ್ರಾಫ್‌ಗು ಅನೋನ್ಯ ಸಂಬಂಧ ಏರ್ಪಡುವುದಿಲ್ಲ. ಬಿಡಿಸಿಟ್ಟ ನಾಲ್ಕು ಭಿನ್ನ ಚಿತ್ರಗಳ ಹಾಗಾದರೂ ವೀಚಿಯವರ ಪದ್ಯ ಇದೆಯಾ ಅಂದರೆ ಹಾಗೂ ಇಲ್ಲ. ಈ ಪದ್ಯದಲ್ಲಿ ಅಂತಹ ನಿರ್ದಿಷ್ಟವಾದ ದರ್ಶನವೂ ಇಲ್ಲ. ಒಳ್ಳೆಯ ಕಾಲ ಬರಬಹುದೇ? ಒಳ್ಳೆಯ ಕಾಲ ಬರಬೇಕು ಎಂಬ ಒಂದೇ ಮಾತು ಈ ಪದ್ಯದ ತಾತ್ವಿಕತೆಯಂತೆ ಕಾಣುತ್ತದೆ. ಅದಕ್ಕೆ ಕಿಮಿರ ಮಾಯಾಮೃಗದ ಕಾಟ, ಬಕಾಸುರ ರಾಜ್ಯದ ದ್ವೇಷ, ಸಾಲ್ಮನ್ ಮೀನಿನ ಪಯಣ, ಹರ್ಕೀನಿಯಸನ ಗಂಡುತನ ಹೀಗೆ ನಾಲ್ಕು ಪ್ರತಿಮೆಗಳು ಈ ಪದ್ಯದಲ್ಲಿ ಬಂದರೂ ಪ್ರತಿಮೆಗಳು ಇಲ್ಲಿ ಓದುಗನಿಗೆ ಯಾವ ನಿರ್ದಿಷ್ಟ ವೈಚಾರಿಕತೆಗೂ-ದರ್ಶನಕ್ಕೂ-ಅನುಭವಕ್ಕೂ ಆಸ್ಪದ ಕೊಡುವುದಿಲ್ಲ. ಈ ಮಾತು ಎರಡು ಕವಿತೆಗಳ ಹೋಲಿಕೆಯಿಂದ ಹೇಳಿದ ಮಾತಲ್ಲ ಇದೊಂದೇ ಪದ್ಯವನ್ನು ಪ್ರತ್ಯೇಕ ಓದಿದಾಗಲೂ ಇಲ್ಲಿನ ರಾಚನಿಕತೆ; ಕಂಟೆಂಟ್ ಮತ್ತು ಕಟ್ಟಾಣಿಕೆಗಳ ನಡುವೆ ಹೊಂದಾಣಿಕೆಯಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಯಾರೇ ಆಗಲು ಪದ್ಯ ಬರೆಯುವಾಗ ತಮ್ಮ ಕಂಟೆಂಟ್ ಮತ್ತು ಅದರ ರಾಚನಿಕತೆಗಳ ನಡುವೆ ಸಮನ್ವಯ ಸಾದಿಸುವುದನ್ನು ಮರೆಯಬಾರದು.
ಈಗ ಸಿಂಧೂ ನದಿಯ ದಂಡೆಯ ಮೇಲೆ ಮತ್ತು ಪ್ಯಾಂಜಿಯಾ ಪದ್ಯಗಳನ್ನು ನೋಡೋಣ: (ಸಿಂಧೂ ನದಿಯ ದಂಡೆಯ ಮೇಲೆ ಕೇಳುಪಠ್ಯ)

ಇವೆರಡೂ ಚರಿತ್ರೆ ಪ್ರತೀಕಗಳನ್ನು ಬಳಸುವ ಭಿನ್ನವಾದ ಭೂಮಿಗೀತಗಳೇ ಆಗಿವೆ. ಎರಡೂ ದೀರ್ಘವಾದ ಪದ್ಯಗಳೇ. ಚಂದ್ರಶೇಖರ ತಾಳ್ಯರ ಸಿಂಧೂನದಿ ದಂಡೆ 143 ಸಾಲುಗಳಲ್ಲಿ ಹರಿದಿದ್ದರೆ. ಜಿ.ಕೆ.ರವೀಂದ್ರಕುಮಾರರ ಪ್ಯಾಂಜಿಯಾ 38 ಸಾಲುಗಳಲ್ಲಿ ಹರಡಿಕೊಂಡಿದೆ. ಆಧುನಿಕ ಪದ್ಯ ಗಾತ್ರದಲ್ಲಿ/ಸಾಲುಗಳಲ್ಲಿ ಎಷ್ಟು ದೊಡ್ಡದಿರಬೇಕು ಎಂಬುದು ಬರೆಯಲು ಹೊರಡುವವರಿಗೆ ಮೊದಲಿಗೆ ಕಾಡುವ ಒಂದು ಬೇಸಿಕ್ಕಾದ ಪ್ರಶ್ನೆ. ಹಾಗೆ ಅದಕ್ಕೆ ಯಾವ ನಿಯಮವೂ ಇಲ್ಲ. ಆದರೆ ಬ್ರೀವಿಟಿ ಆಧುನಿಕ ಕವಿತೆಯ ಒಂದು ದೊಡ್ಡ ಗುಣ. ಎಷ್ಟು ಕಡಿಮೆ ಮಾತುಗಳಲ್ಲಿ ಉದ್ದೇಶಿತ ವಿಚಾರ-ಭಾವ-ಅನುಭವ, ದರ್‍ಶನಗಳನ್ನು ಮಂಡಿಸಲು ಸಾಧ್ಯವೋ ಅಷ್ಟು ಕಡಿಮೆ ಮಾತುಗಳನ್ನು ಬಳಸಬೇಕು ಎಂಬ ಎಚ್ಚರ ಕವಿ ಆದವರಿಗೆ ಇರಬೇಕಾಗುತ್ತದೆ. ಕವಿತೆಯ ಕಂಟೆಂಟು ಎಷ್ಟು ಶಬ್ದಗಳನ್ನು ಬಯಸುತ್ತದೋ ಅಷ್ಟೇ ಶಬ್ದಗಳನ್ನು ಕವಿ ಬಳಸಬೇಕಾಗುತ್ತದೆ. ಅನಗತ್ಯ ಕವಿತೆ ಲಂಬಿಸಬಾರದು. ಹೆಜ್ಜೆ ಹೆಜ್ಜೆಗೂ ಶಬ್ದ ಶಬ್ದಕ್ಕು ಕವಿತೆ ಓದುಗನನ್ನು ಸೆಳೆದು ತನ್ನನ್ನು ಅನುಸರಿಸುವಂತೆ, ಮತ್ತೆ ಮತ್ತೆ ಓದಲು ಅಪೇಕ್ಷೆ ಹುಟ್ಟುವಂತೆ ಬರೆಯಲ್ಪಡಬೇಕು. ಓದಿದ ಕೂಡಲೆ ಕಾಡುವ ರೂಪಕ, ಚಿತ್ರ ಕವಿತೆಯಲ್ಲಿ ಸಿಗಬೇಕು. ನಾವು ಲೋಕದಲ್ಲಿ ಸಾಧಾರಣವಾಗಿ ಬಳಸುವ-ಎದುರಾಗುವ ಉಕ್ತಿಮಾರ್ಗಕ್ಕಿಂತ ಭಿನ್ನವಾದ ಉಕ್ತಿಬಳಕೆ ಕವಿತೆಯಲ್ಲಿ ಇರಬೇಕು. ಹಾಗಿದ್ದಾಗ ಕವಿತೆ ಓದುಗನಿಗೆ ಅವನ ಅನುಭವಕ್ಕಿಂತ ಭಿನ್ನವಾದ ಲೋಕಾನುಭವ ನೀಡಬಲ್ಲುದು. ಓದುಗನ ಲೋಕದ ಬಗೆಗಿನ ಜ್ಞಾನ, ಲೋಕಗ್ರಹಿಕೆಯ ದೃಷ್ಟಿಗಳನ್ನು ಹೊಸತುಗೊಳಿಸಬಲ್ಲದು. (ಪ್ಯಾಂಜಿಯಾ ಕೇಳುಪಠ್ಯ)
ನೋಡಿ ಈ ಪ್ಯಾಂಜಿಯಾ ಕವಿತೆ ಒಂದು ಚಿಕ್ಕ ವಿವರಣೆಯೊಂದಿಗೆ ಆರಂಭ ಆಗುತ್ತದೆ. ’ಹಿಂದೊಮ್ಮೆ ಇಡೀ ಜಗತ್ತು ಬೆಸೆದುಕೊಂಡಿತ್ತು. ಖಂಡಗಳು ಬೇರೆ ಬೇರೆಯಾಗಿರಲಿಲ್ಲ. ಆ ಸಮಸ್ತ ಭೂಮಿಯ ಹೆಸರೇ ಪ್ಯಾಂಜಿಯಾ’ ಅಂತ. ಹೀಗೆ ಟಿಪ್ಪಣಿ, ಅಡಿಟಿಪ್ಪಣಿ, ಪ್ರವೇಶಿಕೆಗಳನ್ನು ಪದ್ಯಗಳಿಗೆ ಕೊಡಬೇಕು ಅಂತೇನಿಲ್ಲ. ಕೆಲವರು ಕೊಡ್ತಾರೆ. ಕವಿಗೆ ಕೊಡಬೇಕು ಅನ್ನಿಸಿದರೆ ಕೊಡಬಹುದು. ಬೇಡ ಅನ್ನಿಸಿದರೆ ಬೇಡ. ಅದಕ್ಕೆ ಯಾವ ರೂಲ್ಸೂ ಇಲ್ಲ. ಆದರೆ ಒಂದು ಮಾತು ಇಲ್ಲಿ ನಾವು ಗಮನಿಸಬೇಕು. ನಿಮಗೆ ಸುಮಾರು ಜನರಿಗೆ ಪ್ಯಾಂಜಿಯಾ ಅನ್ನುವ ಪದವೇ, ಕಲ್ಪನೆಯೇ ಗೊತ್ತಿರಲಿಲ್ಲವೆನೋ; ಈಗ ಗೊತ್ತಾಗಿರಬಹುದು. ಹೀಗೆ ಕಾವ್ಯ ಸಾಹಿತ್ಯ ನಮಗೆ ತಿಳಿದಿಲ್ಲದ ಲೋಕಸಂಗತಿಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತದೆ. ಕವಿಯಾಗಲು ಯತ್ನಿಸುವವರು ಹಾಗೆ ಅಪರೂಪದ ಸಂಗತಿಗಳನ್ನು ಕಾವ್ಯ ಮಾಡುವುದರ ಕಡೆಗೂ ಗಮನ ಕೊಡಬೇಕಾಗುತ್ತದೆ.
ಏಳು ಭಾಗಗಳಲ್ಲಿ ಈ ಪದ್ಯ ಬರೆಯಲ್ಪಟ್ಟಿದೆ. ಈ ಮುಂಚೆ ನಾವು ಓದಿದ ಮಿಂಚಿನಂತೆ ಬರಬಹುದೇ? ಹೊಸದೇವರ ಬರುವಿಗಾಗಿ ಇಂತಹ ಪದ್ಯಗಳ ರೀತಿಯ ಕಟ್ಟಾಣಿಕೆಯ ಮನೋಧರ್ಮ ಇಲ್ಲಿದೆ. ಆದರೆ ಇಡೀ ಪದ್ಯ ನೋಡಿ ಇದು ಪ್ರತಿಮೆ-ಪ್ರತೀಕ-ವಸ್ತುಪ್ರತಿರೂಪಗಳ ಒಟ್ಟುವಿಕೆ ಅಲ್ಲ. ಇದೊಂದು ಸರಾಗವಾಗಿ ಭಾಗದಿಂದ ಭಾಗಕ್ಕೆ ತಾನು ಹೇಳಬೇಕಾದ ವಿಚಾರವನ್ನು ಬೆಳಸಿಕೊಂಡು ಹೋಗುವ ಕವಿತೆ. ಈ ಕವಿತೆಯಲ್ಲಿ ಎಲ್ಲೂ ಸುಳಿಗಳು, ಯುಟರ್ನುಗಳು, ತಿರುವುಮುರುವುಗಳಿಲ್ಲ. ಇದೊಂದು ಹೆದ್ದಾರಿ ರೀತಿಯ ಕವಿತೆ. ಏನನ್ನು ಹೇಳಬೇಕಿದೆಯೋ ಅದನ್ನು ನೇರ ಹೇಳುತ್ತ ಹೋಗುವ ಕವಿತೆ. ನವ್ಯ ಧಾಟಿಯ ರಚನೆಗಳಲ್ಲಿ ಹೀಗೆ ಅಲ್ಲೊಂದು ಇಲ್ಲೊಂದು ಅಪುರೂಪಕ್ಕೆಂಬಂತೆ ಖಚಿತ ನಿರೂಪಣೆಗಳು ಕಾಣುತ್ತವೆ. ಇಲ್ಲಿ ಅರ್ಥ ಮತ್ತು ಆಶಯದ ಚಾಂಚಲ್ಯ, ಅಮೂರ್ತತೆ ಇರುವುದಿಲ್ಲ. ಅತಂಹ ಒಂದು ಪದ್ಯ ಇದು. ಹಾಗಾಗಿಯೆ ಭೂಮಿಗೀತಕ್ಕಿಂತ ಇದು ಬಿನ್ನ.
ಒಂಭತ್ತು ಭಾಗಗಳಲ್ಲಿ ಬರೆಯಲ್ಪಟ್ಟಿರುವ ಸಿಂಧೂ ನದಿ ದಂಡೆಯ ಮೇಲೆ ಕವಿತೆ ’ಓ ಶ್ರದ್ಧೆಯೇ ನಮ್ಮನ್ನು ಶ್ರದ್ಧಾವಂತರನ್ನಾಗಿ ಮಾಡು’ ಎಂಬ ಋಗ್ವೇದದ ಋಕ್ಕಿನ ಸಾಲಿನ ಉಲ್ಲೇಖದಿಂದ ಆರಂಭವಾಗುತ್ತದೆ. ಕವಿತೆಯ ಆಶಯಕ್ಕೆ ಪೂರಕವಾದ ಯಾವುದಾದರೂ ಒಂದು ಪ್ರಸಿದ್ಧ ಹೇಳಿಕೆಯನ್ನು ಕವಿತೆಯ ಆರಂಭಕ್ಕೆ ಹೀಗೆ ಕೋಟು ಮಾಡುವುದೂ ಒಂದು ರೂಢಿ. ಕೆಲವರು ಕನ್ನಡದ್ದೆ ಸಾಲು ಬರೆದರೆ ಕೆಲವರು ಇಂಗ್ಲಿಶ್, ಸಂಸ್ಕೃತ ಇತ್ಯಾದಿ ಬರೆಯುತ್ತಾರೆ. ಈ ಕವಿತೆಯ ಅರ್ಥ ಏನು ಅಂತ ಆಶಯ ಏನು ಅಂತ ನಾನು ಹೇಳುವುದಿಲ್ಲ. ಅರ್ಥ ಬೇಕಾದವರು ಹುಡುಕಿಕೊಳ್ಳಲಿ. ಯಾವಾಗಲೂ ನಾವು ಬರಿ ಅರ್ಥದ ಬಗ್ಗೇನೆ ಹೆಚ್ಚು ತಲೆ ಕೆರೆದುಕೊಳ್ಳುವ ಹಾಗೆ ನಮ್ಮ ಓದುಗಳು ನಮ್ಮನ್ನು ತಯಾರು ಮಾಡಿವೆ. ಆದರೂ ಒಂದು ಮಾತು ಹೇಳೆಲೇಬೇಕು: ಅಂದರೆ ಅದೂ ಕಟ್ಟಾಣಿಕೆಗೆ ಸಂಬಂಧಿಸಿದ ಮಾತೇ;
ಇಂತಹ ಕವಿತೆಗಳಲ್ಲಿ ಅರ್ಥ ಅನ್ನುವುದು ಇದಮಿತ್ಥಂ, ಇಂತಿಷ್ಟೆ ಎಬಂತೆ ಇರುವುದಿಲ್ಲ. ಒಟ್ಟಾರೆಯಾಗಿ ಈ ಕವಿತೆ ಏನು ಹೇಳ್ತದೆ ಅಂದ್ರೆ..... ಅಂತ ಹೇಳುವ ರೀತಿ ಅರ್ಥದ ಖಾಚಿತ್ಯ ಇಲ್ಲಿ ಇರುವುದಿಲ್ಲ. ಅರ್ಥ ಚಾಂಚಲ್ಯವೆ ಇಲ್ಲಿನ ಗುಣ. ಅಂದರೆ ಅರ್ಥ ಇಲ್ಲಿ ಖಚಿತ ಅಲ್ಲ. ಅದು ನಿರಂತರ ದ್ರವರೂಪಿ, ಚಲನಶೀಲರೂಪಿ. ಒಂದೊಂದು ಓದು, ಆಲೋಚನೆಗೂ ಅದು ಏನೇನೋ ಹೊಳೆಯಿಸುತ್ತಾ ಹೋಗುತ್ತದೆ. ಅದು ಒಂಥರಾ ಸಾರಾಂಶೀಕರಣದ ನಿರಾಕರಣೆ. ಒಂದು ಅರ್ಥದ ನಿರಾಕರಣೆ; ಬಹು ಅರ್ಥ ಸಾಧ್ಯತೆಗಳ ಕಡೆಗಿನ ಚಲನೆ. ಕೆಲವೊಮ್ಮೆ ನವ್ಯ ಧಾಟಿಯ ಕವಿತೆಯಲ್ಲಿ ಇದೇನಿದು ಏನೂ ಅರ್ಥ ಆಗ್ತಾ ಇಲ್ಲವಲ್ಲ ಅನ್ನಿಸಬಹುದು. ಕೆಲವೊಂದು ಶಬ್ದ, ಸಾಲುಗಳು ಇಡೀ ಕವಿತೆಯ ಗ್ರಹಿಕೆಗೆ ಸುಳಿವುಗಳನ್ನು ನೀಡಬಹುದು. ’ಸಿಂಧೂ ನದಿ ದಂಡೆಯ ಮೇಲೆ ಕುಂತವನ ಕಣ್ಣೊಳಗೆ ಹೂವರಳಿದ ಕೋಟೆಗಳು... ಎಲ್ಲಿ ಹೋದವು ಕನಸಿನ ಹಕ್ಕಿಗಳು...’ ಎಂಬ ಪದ್ಯದ ಕೊನೆಕೊನೆಯ ಸಾಲುಗಳನ್ನು ಓದುವಾಗ ನಮಗೆ ಇಡೀ ಪದ್ಯ ಸಿಂಧೂ ನದಿ ನಾಗರಿಕತೆಯ ಕಾಲದಿಂದ ಇವತ್ತಿನವರೆಗಿನ ನಾಗರೀಕತೆಯ ಹೆಜ್ಜೆ ಗುರುತುಗಳನ್ನು ಬೇರೆ ಬೇರೆ ಮಾತುಗಳಲ್ಲಿ ಹಿಡಿದು ಇಡುತ್ತಿದೆ ಅನ್ನಿಸುತ್ತದೆ. ಆದರೆ ಹಾಗೆ ಪದ್ಯದಲ್ಲಿ ಕಾಲವನ್ನು ನದಿ ಹರಿದಂತೆ ಸರಳರೇಖೆಯಂತೆಯೋ, ಬಿಂದು ಬಿಂದು ಕೂಡಿದ ಮುನ್ನಡೆಯಂತೆಯೋ ಗ್ರಹಿಸಬಹುದೋ ಎಂದರೆ ಇಲ್ಲ. ಅಂದರೆ ಇಲ್ಲಿನ ಮಂಡನಾಕ್ರಮ ಹಾಗೆ ಕ್ರಮಾಗತ ಆದುಗಲ್ಲ.
ನೋಡಿ ಕವಿಯ ಉದ್ದೇಶ, ಆಶಯ ಏನು ಎಂದು ಹುಡುಕುವುದಿದೆಯಲ್ಲ, ಅದೆಲ್ಲ ಪೊಳ್ಳು; ಓದು ನಮಗೆ ಏನನ್ನು ನೀಡುತ್ತದೆ ಎಂಬುದೇ ಮುಖ್ಯ. ಹಾಗಾದರೆ ಕವಿತೆಯ ಅರ್ಥ ಎಲ್ಲಿರುತ್ತದೆ? ಅದು ಎಲ್ಲೂ ಇರುವುದಿಲ್ಲ. ಒಂದೊಂದು ಓದಿಗೂ, ಒಂದೊಂದು ಕ್ಷಣಕ್ಕು ಆಗುತ್ತಿರುತ್ತದೆ. ಹಾಗೆ ಆಗುವುದೊಂದು ಮುಗಿಯದ ಪ್ರಕ್ರಿಯೆ. ಅಂಥ ಮುಗಿಯದ ಆಗುವಿಕೆಯ ಹಾಗೆ ಪದ್ಯ ಬರೆಯಬಹುದಾದ ಸಾಧ್ಯತೆಯ ಹುಡುಕಾಟವೇ ನವ್ಯದ ಧಾಟಿ. (ಇಲ್ಲಿ ಇನ್ನೂ ಹಲವಾರು ಪದ್ಯಗಳನ್ನು ಉದಾಹರಣೆಗೆ ಚರ್ಚೆ ಮಾಡಬಹುದು)

ಭಾಗ ಎರಡು-ಪ್ರಶ್ನೋತ್ತರ ಚರ್ಚೆ

ಕಮ್ಮಟಾರ್ಥಿಗಳು ಬರೆದು ಕಳಿಸಿರುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕೊಡಲಾಗಿದೆ. ಯಾವ ಪ್ರಶ್ನೆಗಳಲ್ಲೂ ಬರೆದವರ ಹೆಸರಿಲ್ಲ.

ಕವಿತೆ ಯಾಕೆ ಬರೀಬೇಕು? ಯಾರಿಗೋಸ್ಕರ ಬರೀಬೇಕು?
ಇದನ್ನು ಯಾರು ಬರೆದು ಕಳಿಸಿದರೋ! ಇರಲಿ; ಕವಿತೆ ಯಾಕೆ ಬರೀಬೇಕು ಅನ್ನೋದು ಬಹಳ ದೊಡ್ಡ ಪ್ರಶ್ನೆ. (ಇದನ್ನು ಆರಂಭದ ನನ್ನ ಪೀಠಿಕೆಯ ಮಾತುಗಳಲ್ಲೆ ಹೇಳಿದ್ದೀನಿ) ಇದನ್ನೆ ಬದಲಾಯಿಸಿ ಕೇಳೋದಾದರೆ ನಾನು ಬರೆಯದಿದ್ದರೆ ಏನು? ಎಂಬುದೂ ಅಷ್ಟೇ ಗಂಭೀರವಾದ ಪ್ರಶ್ನೆ. ಇವನ್ನ ತುಂಬಾ ಜನ ಕವಿಗಳು ಕೇಳಿಕೊಳ್ಳೋದೇ ಇಲ್ಲ. ಸುಮ್ನೆ ಬರೀತಾ ಇರತಾರೆ. ರೆಕಗ್ನಿಶನ್‌ಗಾಗಿ ಬರೆಯೋದು, ಕೀರ್ತಿಗಾಗಿ, ಮನ್ನಣೆಗಾಗಿ, ಹಣಕ್ಕಾಗಿ, ತನ್ನ ಆನಂದಕ್ಕಾಗಿ, ಇತರರ ರಂಜನೆಗಾಗಿ, ಕೆಲವು ಸಾಂದರ್ಭಿಕ ಒತ್ತಡಗಳಿಗಾಗಿ, ವಯಕ್ತಿಕವಾದ ಮಾನಸಿಕ ಒತ್ತಡಗಳ ಬಿಡುಗಡೆಗಾಗಿ, ಸ್ನೇಹಿತರ ಆಸೆ, ಆಕಾಂಕ್ಷೆಗಳನ್ನು ಪೂರೈಸಲಿಕ್ಕಾಗಿ, ಕೆಲವು ನಿರ್ದಿಷ್ಟ ಗುರಿಗಳಿಗಾಗಿ ಅಂದರೆ ಯಾವುದೋ ಕವಿಗೋಷ್ಠಿಯಲ್ಲಿ ಓದಲು, ಯಾರಿಗೋ ಪೈಪೋಟಿ ನೀಡಲು, ಯಾವುದೋ ನಾಟಕಕ್ಕೊ, ಚಿತ್ರಕ್ಕೊ ಬರೆಯುವುದು ಹೀಗೆ ನಾನಾ ಕಾರಣಕ್ಕಾಗಿ ಪದ್ಯ ಬರೀಬಹುದು. ಆದರೆ;
ಇವಕ್ಕಿಂತ ಭಿನ್ನವಾಗಿ ನಾನು ಈ ಲೋಕವನ್ನು ಭಿನ್ನವಾಗಿ ನೋಡಬಹುದಾದ ದೃಷ್ಟಿಗಳನ್ನು ಪಡೆಯಲು, ಇತರರು ಈ ಲೋಕವನ್ನು ಬೇರೆ ರೀತಿಯಲ್ಲಿ ನೋಡಬೇಕಾಗಿರುವುದನ್ನು ಹೇಳಲು, ಸಾಮಾಜಿಕ ನ್ಯಾಯವನ್ನು ಮಂಡಿಸಲಿಕ್ಕಾಗಿ, ನನ್ನದೇ ದೃಷ್ಟಿ ಧೋರಣೆಗಳನ್ನು ಮಂಡಿಸಲಿಕ್ಕಾಗಿ, ಸಾಮಾಜಿಕ ಬದಲಾವಣೆಯ ಒಂದು ಹತಾರವಾಗಿ, ಬರವಣಿಗೆ ಜಡವಾಗಿದೆ, ನಿಷ್ಕ್ರಿಯವಾಗಿದೆ ಅದನ್ನು ಬದಲಿಸಲು ಬರೆಯುತ್ತೇನೆ, ಟೈಮ್‌ಲೆಸ್ ಆದ ಸ್ಪೇಸ್‌ಲೆಸ್ ಆದ ಸೋಶಿಯಲ್ ಚೇಂಜ್ ಏಜೆನ್ಸಿ ಮತ್ತು ಸಮೂಹ ಸಂವಹನ ಮಾದ್ಯಮವಾದ ಕವಿತೆಯನ್ನು ನಾನು ಸಮಾಜಕ್ಕಾಗಿ ಬರೀತೀನಿ ಅಂತ ಬರೊಯೋದಾದರೆ ಆಗ ಸರಿ. ಸಮಾಜದ ಬಗ್ಗೆ ಅದರ ಬದಲಾವಣೆ ಬಗ್ಗೆ, ಕಾಳಜಿ ಇಲ್ಲದೆ ಇರೋಳು, ಸಾಮಾಜಿಕ ನ್ಯಾಯದ ಬಗೆಗಿನ ಕನ್ಸರ್ನ್ ಇಲ್ಲದೆ ಇರೋಳು, ಫಿಸಾಫಿಕಲ್ ವಿಶನ್ ಇಲ್ಲವದನು ಒಳ್ಳೆ ಕವಿಯಾಗಲು ಸಾಧ್ಯ ಇಲ್ಲ ಕಣ್ರಿ.

ಕವಿತೆ ಬರೆಯಲು ಒಂದು ನಿರ್ದಿಷ್ಟ ಮನಸ್ಥಿತಿ, ಸ್ಥಳ ಇರಬೇಕಾ? ಸ್ಪೂರ್ತಿ ಅಂತಾರಲ್ಲ ಅದು ಹೇಗಿರುತ್ತೆ?
ಸ್ಪೂರ್ತಿ ಅನ್ನೋದು ಒಂದು ಮನಸ್ಥಿತಿ ಅಷ್ಟೆ. ಕವಿತೆ ಹುಟ್ಟುವುದಕ್ಕೆ ಕೆಲವೊಮ್ಮೆ ನಮ್ಮ ಅಥವಾ ಬಾಹ್ಯ ಕೆಲವು ಘಟನೆ ಪ್ರೇರಣೆ ನೀಡಬಹುದು. ಅಲ್ಲದೆ ನಮ್ಮಲ್ಲಿ ಪದ್ಯ ಬರೆಯೋಕೆ ಏಕಾಂತ ಬೇಕು, ಒಂದು ನಿರ್ದಿಷ್ಟವಾದ ಮನಸ್ಥಿತಿ ಬೇಕು ಅಂತಾರೆ. ಸಂತೇಲೆಲ್ಲ ಬರೆಯೋಕೆ ಆಗಲ್ಲ ಅಂತಾರೆ. ಸ್ಪೂರ್ತಿತತ್ವ ಇರುವಂತೆಯೆ ನಮ್ಮಲ್ಲಿ ಶಿಲ್ಪ ತತ್ವ ಕೂಡ ಇದೆ. ಅಂದರೆ ಎಚ್ಚರದ ಸ್ಥಿತಿಯಲ್ಲಿ ಪದ್ಯ ಬರೆದು ತಿದ್ದಿ ತಿದ್ದಿ ಪ್ರಕಟಿಸಬೇಕು ಅಂತ. ಹೊನ್ನ ಕಾಯಿಸಿ ಬಡಿದು ಇಷ್ಟ ದೇವತಾ ವಿಗ್ರಹಕ್ಕೆ ಒಗ್ಗಿಸುವ ಅಸಲಿ ಕಸುಬು ಅಂತ ಅಡಿಗರು ಹೇಳ್ತಾರೆ. ಅಂದರೆ ಪದ್ಯವನ್ನು ಕವಿ ತನ್ನ ಕಾಣ್ಕೆಯ ಆಕಾರಕ್ಕೆ ಬರುವವರೆಗೆ ಮತ್ತೆ ಮತ್ತೆ ತಿದ್ದಿ ತೀಡಿ ಬರೀಬೇಕು ಅಂತ. ಪದ್ಯ ಬರೆಯುವುದನ್ನು ಹೆರಿಗೆಗೂ ಹೋಲಿಸ್ತಾರೆ. ಅಂದರೆ ತಾಯಿ ಒಂಬತ್ತು ತಿಂಗಳು ಕಾಯುವಂತೆ ಕವಿ ಪದ್ಯ ತನ್ನ ಮನಸ್ಸಿನಲ್ಲಿ ಹರಳುಗಟ್ಟಿಕೊಳ್ಳಲು ಕಾಯಬೇಕು, ಧ್ಯಾನಿಸಬೇಕು ಅಂತ. ಅವಸರಕ್ಕೆ ಹೆರಬಾರದು ಅಂತ. ಅದು ನಮ್ಮ ಮನಸ್ಸಿನ ಗರ್ಭದಲ್ಲಿ ಆಕಾರ ಪಡೆಯಲು ಕಾಲ ನೀಡಬೇಕು ಅಂತ.
ಶರ್‍ಮರು ’ಒಂದೊಂದು ಕವಿತೆಯೂ ಭರವಸೆಯ ವ್ಯವಸಾಯ, ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ’ ಅಂತಾರೆ. ಅಂದರೆ ಕಾವ್ಯ ಕಟ್ಟುವುದು ರೈತ ಬೇಸಾಯ ಮಾಡಿದ ಹಾಗೂ ಹೌದು. ಫಸಲು ಬರುವುದು ಅದು ಭಾಗ್ಯವೂ ಹೌದು ಅಂತಾರೆ. ಆಮೇಲೆ ನಾನೃಷಿ ಕೃತೇ ಕಾವ್ಯಂ ಅಂದರೆ ಋಷಿಯಲ್ಲದವನು ಕವಿಯಾಗಲಾರ ಅಂತ ಒಂದು ಮಾತಿದೆ. ನೋಡಿ ಕುವೆಂಪುಗೆ ನಾವು ರಸಋಷಿ ಅಂತೀವಿ. ಬೇಂದ್ರೆಗೆ ವರಕವಿ ಅಂತೀವಿ. ಈ ವರಕವಿ ಅನ್ನೋ ಕಲ್ಪನೇನ ನಾನು ಒಪ್ಪಲ್ಲ. ಕವಿಪ್ರತಿಭೆ ಅನ್ನೋದು ದೈವದತ್ತವಾಗಿ ಬರುತ್ತೆ, ರಕ್ತದಲ್ಲಿ ಬರುತ್ತೆ ಅನ್ನೋದೆಲ್ಲ ಅಪ್ಪಟ ಸುಳ್ಳು. ಜೀನ್ ಎಡಿಟಿಂಗ್ ಕಾಲದಲ್ಲಿ ಇವತ್ತು ನಾವಿದ್ದೀವಿ. ಹೀಗಿರುವಾಗ ಕೆಲವು ಜಾತಿಗಳಲ್ಲಿ ಮಾತ್ರ ಪ್ರತಿಭೆ ಹುಟ್ಟುತ್ತೆ, ಕೆಲವು ಗಾಡ್ ಗಿಫ್ಟ್ ಆಗಿ ಬರುತ್ತೆ ಅನ್ನೋದನ್ನೆಲ್ಲ ಒಪ್ಪೋಕಾಗಲ್ಲ. ಇದೆಲ್ಲ ಸೋಶಿಯಲ್ ಎಂಜಿನಿಯರಿಂಗ್ ಅಷ್ಟೆ.
ಕವಿತೆ ಬರೆಯೋದನ್ನು ಕಲಿತು ಬರೆಯೋಕೆ ಆಗುತ್ತಾ ಅಂದರೆ ಆಗಬಹುದು ಅನ್ನುವವನು ನಾನು. ಸ್ಪೂರ್ತಿ ಇರಬೇಕಾ ಅಂದರೆ ಹೌದು ಇರಬೇಕು. ಅದೊಂದು ಬಗೆಯ ಮನಸ್ಥಿತಿ. ಕವಿತೆ ಬರೆಯೋಕೆ ಏಕಾಂತ ಬೇಕಾ ಅಂದರೆ, ಏಕಾಕಿಯಾಗಿ ಕವಿತೆ ಬರೆಯಲು ಕೂರುವವನಿಗೆ ಏಕಾಂತ ಬೇಕು. ಅವನು ಗದ್ದಲದಲ್ಲಿ ಬರೆಯಲಾರ. ಒಂದು ಮೌನ, ಧ್ಯಾನ ಕೂಡ ಬೇಕಾಗುತ್ತೆ. ಆದರೆ ನಮ್ಮಲ್ಲಿ ಯಾವುದೋ ಜಾತ್ರೆಯಲ್ಲಿ, ಮೇಳದಲ್ಲಿ ಮೆರವಣಿಗೆಯಲ್ಲಿ ಹಾಡ್ತಾ ಹಾಡ್ತಾ ಕವಿತೆ ಕಟ್ಟುವುದೂ ಇದೆ. ಏಕಾಂತದಲ್ಲಿ ಮಾತ್ರವಲ್ಲ ಲೋಕಾಂತದಲ್ಲು ಕವಿತೆ ಹುಟ್ಟುತ್ತೆ. ಬಾರಲ್ಲಿ, ಗುಡಿಯಲ್ಲಿ, ಒಂಟಿ ರೂಮಲ್ಲಿ, ಬಸ್ಸಲ್ಲಿ, ಪಾರ್ಕಲ್ಲಿ ಕವಿತೆ ಎಲ್ಲಿ ಬೇಕಾದರು ಹುಟ್ಟಬಹುದು. ಸಂತೆಯಲ್ಲು ಏಕಾಂತ ಸಾಧಿಸುವುದಕ್ಕು ಕೆಲವರಿಗೆ ಸಾಧ್ಯ ಇದೆ. ಅಂಥವರಿಗೆ ಏಕಾಂತ ಲೋಕಾಂತಗಳ ಭೇದವಿಲ್ಲ.

ಬರೆಯಲು ವಸ್ತು ಹೇಗೆ ಆಯ್ಕೆ ಮಾಡಿಕೊಳ್ಳುವುದು?
ಅದಕ್ಕೊಂದು ನಿರ್ದಿಷ್ಟವಾದ ರೂಲ್ಸು ಅಂತ ಇಲ್ಲ. ನಿಮ್ಮನ್ನು ಕಾಡಿದ ಕಾಡುತ್ತಿರುವ ಯಾವುದೇ ನಿಮ್ಮ ವಯಕ್ತಿಕ, ಕೌಟುಂಬಿಕ, ಸಾಮಾಜಿಕ ವಸ್ತುಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಬಾಲ್ಯದ ಅನುಭವಗಳನ್ನು ಆಧರಿಸಿ ಬರೆಯಬಹುದು. ನಿಮ್ಮ ಸುತ್ತ ನಡೆಯುತ್ತಿರುವ ಅನ್ಯಾಯದ ಬಗ್ಗೆ ನಿಮಗೆ ನಿಮ್ಮದೇ ನಿಲುವು ಇದ್ದರೆ ಅದನ್ನು ಹೇಳಲು ಅದನ್ನೆ ವಸ್ತು ಆಗಿ ನೀವು ಆಯ್ಕೆ ಮಾಡಿಕೊಳ್ಳಬಹುದು... ಹೀಗೇ...

ಕವಿತೆಗೆ ರೆಡಿ ಚೌಕಟ್ಟುಗಳು, ಸ್ಕೆಲೆಟನ್ನುಗಳು ಇವೆಯಾ? ಅವುಗಳನ್ನು ನಾವು ಅಳವಡಿಸಿಕೊಳ್ಳಬಹುದಾ?
ಕವಿತೆಗೆ ರೆಡಿ ಚೌಕಟ್ಟುಗಳು ಇವೆ. ಈಗ ನೋಡಿ ಕತ್ತೆ ಮತ್ತು ಧರ್‍ಮ ಒಂದು ಕಥನಕವಿತೆ, ಆದರೆ ಅದು ಬರೆಯಲ್ಪಟ್ಟಿರುವುದು ತ್ರಿಪದಿ ಛಂದಸ್ಸಿನಲ್ಲಿ. ಇದೊಂದು ಚೌಕಟ್ಟು. ದ್ವಿಪದಿ, ಚೌಪದಿ, ಅಷ್ಟಷಟ್ಪದಿ ಇವೆಲ್ಲ ಅಂತಹ ಚೌಕಟ್ಟುಗಳು. ಆಧುನಿಕ ಗಪದ್ಯಗಳು ಹಲವಾರು ಚೌಕಟ್ಟುಗಳನ್ನು ಪ್ರಯೋಗಿಸಿವೆ. ಎಷ್ಟೋ ಚೌಕಟ್ಟುಗಳು ಪ್ರಯೋಗ ಆಗಿರುವುವನ್ನು ನಾವಿನ್ನೂ ನಿರ್ವಚನವೇ ಮಾಡಿಕೊಂಡಿಲ್ಲ. ನೋಡಿ ನಮ್ಮಲ್ಲಿ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಅಷ್ಟಷಟ್ಪದಿ, ರಗಳೆ, ಮಹಾಕಾವ್ಯ ಮಾತ್ರವಲ್ಲ ನಮ್ಮಲ್ಲಿ ಭಾವಗೀತೆ, ಶೋಕಗೀತೆ, ರುಬಾಯತ್, ಸವಾಲ್ ಜವಾಬ್, ಲಾವಣಿ, ಪ್ರಾರ್ಥನೆ, ಸ್ವಗತ ಮಾದರಿಯ ಪದ್ಯಗಳೂ ಇವೆ. ಹಾಯ್ಕು, ಶಾಯಿರಿ, ಗಜಲ್, ಚುಟುಕ ಇತ್ಯಾದಿ ಚೌಕಟ್ಟು, ಸ್ಕೆಲೆಟನ್ನುಗಳೂ ಇವೆ. ಇವು ಮತ್ತೆ ಮತ್ತೆ ನಮ್ಮಲ್ಲಿ ಪ್ರಯೋಗ ಆಗ್ತಾ ಇವೆ. ಹೊಸವು ಕೂಡ ಪ್ರಯೋಗ ಆಗ್ತಾ ಇವೆ.
ಕವಿಗೆ ಬರೆಯಲು ಹೊರಟಾಗ ನಾವು ಯಾವ ಛಂದಸ್ಸುಗಳನ್ನು ಬಳಸಬೇಕು ಎನ್ನುವುದೂ ಮುಖ್ಯವೇ. ಆದರೆ ಕವಿಯಾದವನು ತನ್ನದೇ ಚೌಕಟ್ಟುಗಳನ್ನು, ಛಂದಸ್ಸುಗಳನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಹೊಸತನ ಬರಿ ಕಂಟೆಂಟಲ್ಲಿ ಮಾತ್ರ ಇರಲ್ಲ. ಅದು ಚೌಕಟ್ಟಿಗೂ ಸಂಬಂಧಿಸಿದ ವಿಚಾರ ಅಂತ ನಾನು ಈಗಾಗಲೇ ಹೇಳಿದ್ದೀನಿ. ಬೇರೆಯವರು ಬಳಸಿರುವ ಚೌಕಟ್ಟುಗಳನ್ನು ನಾವು ಅಳವಡಿಸಿಕೊಳ್ಳಬಹುದಾ ಅಂದರೆ ಅದಕ್ಕೆ ಹಾಗೆ ಪೇಟೆಂಟ್ ಇಲ್ಲ. ಆದರೆ ಬೇರೆಯವರ ಚೌಕಟ್ಟುಗಳನ್ನು ನಾವು ನೋಡಬೇಕು, ಅವುಗಳಿಗಿಂತ ಭಿನ್ನವಾದ ಹೊಸ ಚೌಕಟ್ಟುಗಳನ್ನು ಕಟ್ಟಿಕೊಳ್ಳಬೇಕು. ಅನುಕರಿಸಿದರೆ ಜಡತ್ವ, ಏಕತಾನತೆ ಉಂಟಾಗುತ್ತದೆ.
ಇನ್ನೊಂದು ಮಾತು: ನೋಡಿ ಜನಪ್ರಿಯ ಚಿತ್ರಗೀತೆಗಳು ಇದಾವಲ್ಲ, ಅವುಗಳ ರಾಗ, ತಾಳ, ಲಯ, ಮಟ್ಟಿಗೆ ಅನುಗುಣವಾಗಿ ನಮ್ಮದೇ ಸಾಹಿತ್ಯ ತೊಡಿಸುವ ಕೆಲಸ ಕೂಡ ನಮ್ಮಲ್ಲಿ ಸಾಕಷ್ಟು ನಡೀತಾಯಿದೆ. ಉದಾಹರಣೆಗೆ ’ಬೆಳ್ಳಿರಥದಲೀ ಮೂಡಿ ಬಂದ ಕಿರಣಾ’ ಅಂತ ಒಂದು ಸಾಲಿದೆ ಅಂದರೆ ಅದನ್ನೆ ಅನುಸರಿಸಿ ಯಾರೋ ಒಬ್ಬರು ’ನನ್ನ ಎದೆಯಲೀ ನಿನ್ನ ನೆನಪ ತನನಾ’ ಅಂತ ಒಂದು ಸಾಲು ಕಟ್ಟಬಹುದು. ನಾನೊಂದು ತೀರಾ ನೀನೊಂದು ತೀರಾ’ ಅನ್ನೋ ಸಾಲನ್ನ ಯಾರೋ ಒಬ್ಬಾಕೆ ತಗೊಂಡು ’ನಾ ನೊಂದು ಲೋಕಾ ನೀ ನೊಂದು ಲೋಕಾ, ಮನಸು ಮನಸು ಧೋಕಾ’ ಅಂತ ಬರೀಬಹುದು. ಇಂಥ ರಚನೆಗಳಿಗೆ ನಮ್ಮಲ್ಲಿ ಲೆಕ್ಕವಿಲ್ಲ. ಆಧುನಿಕ ಕವಿತೆಗಳಲ್ಲು ಬಳಕೆ ಆಗಿರುವ ಮಟ್ಟು, ಲಯಗಳನ್ನ ಅನುಸರಿಸಿ ತಮ್ಮದೇ ಮಾತು ತುಂಬಿ ಬರೆಯುವುದು ಸಾಕಷ್ಟು ನಡೆದಿದೆ. ಕೆಲವು ನಮಗೆ ಗೊತ್ತಾಗ್ತವೆ. ಕೆಲವು ಗೊತ್ತಾಗಲ್ಲ. ಆದರೂ ಅದೆಲ್ಲ ಅನುಕರಣೆ ಅಷ್ಟೆ. ನಾವೆಲ್ಲ ಯೋಚನೆ ಮಾಡಬೇಕಾಗಿರೋದು ಅನುಕರಣೆ ಹೇಗೆ ಮಾಡಬೇಕು ಅಂತ ಅಲ್ಲ; ಸ್ವತಂತ್ರ ರಚನೆ ಹೇಗೆ ಮಾಡಬೇಕು ಅಂತ. ಸ್ವರಚಿತ ಅಂದರೆ ಅದು ಬರಿ ಅನುಭವ ಅಥವಾ ಕಂಟೆಂಟಿಗೆ ಸಂಬಂಧಿಸಿದ ಮಾತು ಅಲ್ಲ. ಅದು ಛಂದಸ್ಸು, ಚೌಕಟ್ಟು, ಧಾಟಿ, ಭಾಷೆ, ಲಯಗಳಿಗೆ ಸಂಬಂಧಿಸಿದ್ದು ಕೂಡ.

ಕವಿತೆಗೆ ರಾಗ ಇರಬೇಕಾ? ತಾಳ ಇರಬೇಕಾ? ಗದ್ಯದ ಥರ ಬರೆದರೂ ಅದು ಕವಿತೆ ಆಗುತ್ತದಾ? ಗದ್ಯ ಮತ್ತು ಪದ್ಯದ ವ್ಯತ್ಯಾಸಗಳನ್ನು ಸರಿಯಾಗಿ ಹೇಳಿ.
ನಮ್ಮಲ್ಲಿ ಗದ್ಯ ಪದ್ಯ ಗಪದ್ಯ ಹೀಗೆಲ್ಲ ಇವೆ. ಈವಾಗ ನಾವು ಮಾತಾಡಿದ್ದನ್ನೆ ಹಾಗೇ ಬರೆದರೆ ಅದು ಗದ್ಯ, ಅದನ್ನ ಮುರಿದು ಕೆಲವು ನಿರ್ದಿಷ್ಟವಾದ ಲಯಗಳಲ್ಲಿ ಹಿಡಿದಿಟ್ಟರೆ ಅದೇ ಪದ್ಯ. ರಾಗ ತಾಳ ಬದ್ಧವಾಗಿ ನಮ್ಮಲ್ಲಿ ಹಾಡುಗಳನ್ನು ಬರೆದಿರುವುದು ಉಂಟು. ಹಾಗಂತ ರಾಗ ತಾಳ ಇದ್ದರೆ ಮಾತ್ರ ಅದು ಕವಿತೆ ಅಂತಲ್ಲ. ನಮ್ಮಲ್ಲಿ ಚಿತ್ರಗೀತೆ, ಭಾವಗೀತೆ, ಹೋರಾಟದ ಹಾಡು, ದೇವರನಾಮ, ಆಚರಣೆಯ ಹಾಡುಗಳು ಹೀಗೆ ಹಾಡುಗಳಲ್ಲೆ ಹತ್ತು ಹಲವು ವಿಧಗಳು ಇದಾವೆ. ಹಾಗೆಯೆ ಗಪದ್ಯಗಳಲ್ಲು ಹತ್ತು ಹಲವು ರೀತಿಯ ಪ್ರಯೋಗಗಳು ಆಗಿದಾವೆ. ಅವನ್ನೆಲ್ಲ ನೋಡಿ, ನಿಮ್ಮ ರೀತಿಯನ್ನು ನೀವು ರೂಡಿಸಿಕೊಳ್ಳಿ.
ಗದ್ಯದ ಥರ ಬರೆದರೆ ಕವಿತೆ ಆಗಲ್ಲ. ಕೆಲವರು ಉದ್ದಕ್ಕೆ ಬರೆದರೆ ಗದ್ಯ, ಆ ಗದ್ಯವನ್ನೆ ಚಿಕ್ಕ ಚಿಕ್ಕ ಸಾಲಾಗಿ ಮುರಿದು ಬರೆದರೆ ಅದೆ ಕವಿತೆ ಆಗ್ತದೆ ಅಂತ ಭಾವಿಸಿದ್ದಾರೆ. ಅದು ತಪ್ಪು. ನಾನು ಸಂತೆಗೆ ಹೋಗುತ್ತೇನೆ ಅನ್ನುವುದು ಗದ್ಯದ ಕ್ರಮ. ಹೋಗುತ್ತೇನೆ ನಾನು ಸಂತೆಗೆ ಅನ್ನುವುದು ಪದ್ಯದ ಕ್ರಮ. ಕಾವ್ಯದಲ್ಲಿ ಗತಿ, ಲಯ ಮುಖ್ಯ. ಗದ್ಯಕ್ಕೆ ಪದ್ಯಕ್ಕೆ ಬೇರೆ ಬೇರೆ ಥರ ಗತಿ, ಲಯ ಇರ್‍ತವೆ. ಕತೆ, ಕಾದಂಬರಿ, ವಿಚಾರಪ್ರಬಂಧ ಇಂಥವು ಗದ್ಯದ ಮಾದರಿಗಳು. ಮೇಲೆ ಹೇಳಿದ ಕಾವ್ಯದ ಮಾದರಿಗಳು ಹಲವಾರು ಇವೆ. ಇಂತಹ ಹಲವಾರು ವ್ಯತ್ಯಾಸಗಳು ಗದ್ಯಪದ್ಯಗಳ ನಡುವೆ ಇವೆ. ಹಾಗೆ ನೋಡಿದರೆ ಒಂದು ಅತ್ಯುತ್ತಮ ಕಾವ್ಯದ ಕ್ರಮ ಅನ್ನುವುದು ಇಲ್ಲ.

ಪ್ರಥಮ ಬಾರಿಗೆ ಕವಿತೆ ಬರೆಯುವವರು ಹೇಗೆ ಬರೆಯಬೇಕು? ಯಾವ ವಿಚಾರಗಳಿಗೆ ಹೆಚ್ಚು ಗಮನ ಕೊಡಬೇಕು? ನಮ್ಮ ಕವಿತೆಯ ಮಾದರಿಯನ್ನಾಗಿ ಯಾರನ್ನು, ಯಾವನ್ನು ಇಟ್ಟುಕೊಳ್ಳಬೇಕು?
ಫಸ್ಟ್ ಟೈಮ್ ಕವಿತೆ ಬರೆಯಲು ಹೊರಡುವವರು ಮೊದಲು ತಮ್ಮ ಮನಸ್ಸಿನಲ್ಲೆ ಕವಿತೆ ಬರೆಯಬೇಕು. ಆಮೇಲೆ ಅದನ್ನು ಅಕ್ಷರಕ್ಕೆ ಇಳಿಸಲು ಚಿಂತಿಸಬೇಕು. ಬರೆದದ್ದೆಲ್ಲ ಕವಿತೆ ಆಗದೆ ಇರಬಹುದು. ಹೇಗೆ ಬರೀಬೇಕು ಎಂಬ ಬಗ್ಗೆ ಕೂಡ ಸ್ಪಷ್ಟತೆ ಇಲ್ಲದಿರಬಹುದು. ಹೇಗೆ ಬರೀಬೇಕು ಅಂದರೆ ತನ್ನ ಕವಿತೆಯ ವಿಚಾರ, ಅಂದಾಜು ಗಾತ್ರ ಮತ್ತು ಮಂಡನಾಕ್ರಮ ಈ ಬಗ್ಗೆ ಯೋಚಿಸಿ ಮನಸ್ಸಿನಲ್ಲೆ ಒಂದು ತಿಳುವಳಿಕೆಗೆ ಮೊದಲು ಕವಿ ಬರಬೇಕು. ಆಮೇಲೆ ಬರೀಬೇಕು. ಬರೆಯೋಕೆ ಆಗದೆ ಇದ್ದರೆ ಓರಲ್ಲಾಗಿಯೂ ಕಟ್ಟಿ ಹೇಳಬಹುದು. ನಮ್ಮ ಎಷ್ಟೋ ಜನ ಹಾಗೆ ಓರಲ್ಲಾಗೆ ಕಟ್ತಾರೆ. ಬರೆಯದೆ ಗೆಳೆಯರಿಗೆ ಹಾಗೆ ಹಾಗೇ ಬಾಯಲ್ಲೇ ಕವಿತೆ ಹೇಳಿ ಶಹಬ್ಬಾಸಗಿರಿ ಪಡೆಯವುದೂ ಉಂಟು. ಫಸ್ಟ್ ಟೈಮ್ ಕವಿತೆ ಬರೆಯುವವರು ಹೀಗೆ ಮೊದಲು ಮೌಖಿಕವಾಗಿ ಕಟ್ಟಿ ಆನಂತರ ಬರಹಕ್ಕೆ ಇಳಿಸುವುದು ಒಳ್ಳೆಯದು. ಹಾಗೆ ಮಾಡುವಾಗ ಸಾಕಷ್ಟು ಏನು ಕಟ್ಟಬೇಕು; ಹೇಗೆ ಕಟ್ಟಬೇಕು; ಯಾಕೆ ಕಟ್ಟಬೇಕು ಇತ್ಯಾದಿಗಳನ್ನು ಯೋಚಿಸುವುದು ಒಳ್ಳೆಯದು.
ಬಿಗಿನ್ನರ್‍ಸ್ ಸಾಮನ್ಯವಾಗಿ ಏನು ಮಾಡ್ತಾರೆ ಅಂದ್ರೆ ಅಣಕುವಾಡು ಬರೀತಾರೆ. ಹಕ್ಕಿ ಹಾರುತಿದೆ ನೋಡಿದಿರಾ ಅಂತ ಬೇಂದ್ರೆ ಬರೆದರೆ ಇನ್ನೊಬ್ಬರು ಕಾಗೆ ಹಾರುತಿದೆ ನೋಡಿದಿರಾ ಅಂತ ಬರೆಯಬಹುದು. ದೇವರು ರುಜು ಮಾಡಿದನು ಅಂತ ಕುವೆಂಪು ಬರೆದರೆ ಇನ್ನೊಬ್ಬರು ಜಾಫರು ರಜೆ ಹಾಕಿದನು ಅಂತಲೊ; ಖೈದಿಗೆ ಸಜೆ ಮಾಡಿದನು ಅಂತಲೊ ಬರೀಬಹುದು. ಆಮೇಲೆ ನಿಮ್ಮದೇ ಧಾಟಿ ನೀವು ಕಂಡುಕೊಳ್ಳಬೇಕಾಗ್ತದೆ. ಬೇರೆಯವರನ್ನು ನೋಡಿ ಬರೆಯೋದು ಯಾಕೆ ಅಂದರೆ ಅವರನ್ನ ಮೀರಿ ನಿಮ್ಮ ಥರ ನೀವು ಬರಿಯೋಕೆ. ಬರೀ ಇನ್ನೊಬ್ಬರನ್ನ ನೋಡಿ ಅವರ ಥರಾನೆ ಬರೀತಾ ಇದ್ರೆ ನೀವು ಎವರ್‌ಗ್ರೀನ್ ಬಿಗಿನರ್ ಆಗಿಯೇ ಇರ್‍ತೀರ ಅಷ್ಟೆ.
ಬಿಗಿನ್ನರ್‍ಸ್ ಯಾವಾಗಲೂ ಸಾಮಾನ್ಯವಾಗಿ ಪ್ರೀತಿ ಪ್ರೇಮ ಇತ್ಯಾದಿಗಳ ಬಗ್ಗೆ ಬರೀತಾರೆ. ಅವುಗಳ ಬಗ್ಗೆ ಬರೀಬಾರದು ಅಂತಲ್ಲ. ಅದೇ ಕಾವ್ಯದ ವಸ್ತುಲೋಕ ಅಲ್ಲ. ನಿಮ್ಮ ಮನೆ, ಕುಟುಂಬ ಪರಿವಾರ, ಊರು, ರಾಜ್ಯ, ದೇಶ, ಲೋಕ ಹೀಗೆ ನಿಮ್ಮ ದೃಷ್ಟಿ ಎಲ್ಲ ಕಡೆಗೂ ನಡೆಯುವ ವಿದ್ಯಮಾನಗಳನ್ನು ಗಮನಿಸಬೇಕು. ಅವುಗಳಲ್ಲಿ ಲೋಪ ಇವೆಯಾ ನೋಡಬೇಕು. ಉತ್ತಮ ಮಾದರಿ ನಡೆ ಇದೆಯಾ ನೋಡಬೇಕು. ಅವುಗಳನ್ನು ಆಯ್ದು ಬರೀಬೇಕು. ನೀವು ಯಾವ ಪ್ರಕಾರ, ರೀತಿ, ಧಾಟಿ ಬಳಸಬೇಕು ಎನ್ನುವುದನ್ನೂ ಚಿಂತಿಸಬೇಕು. ನಿರ್ಧರಿಸಬೇಕು.
ಇನ್ನು ನಿಮ್ಮ ಮಾದರಿಯನ್ನಾಗಿ ಯಾರನ್ನೂ ಇಟ್ಟುಕೊಳ್ಳಬಾರದು. ನಾವೆಲ್ಲ ಗೆಳೆಯರು ಪಿ.ಯು., ಬಿ.ಎ. ಮಾಡುವ ಕಾಲಕ್ಕೆ ಕ್ರೈಸ್ಟ್ ಕಾಲೇಜಿನ ಸ್ಪರ್‍ಧೆಗಳಿಗೆ ಕವಿತೆ ಕಳಿಸಿ ಆಯ್ಕೆ ಆಗಿದ್ವಿ. ಆಗೆಲ್ಲ ನಮಗೆ ಹೇಗೆ ಬರೆಯಬೇಕು; ಯಾರನ್ನು ಮಾದರಿಯಾಗಿ ಇರಿಸಿಕೊಳ್ಳಬೇಕು ಎಂಬ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ. ನಮಗೆ ನಮ್ಮ ನಮ್ಮ ಜನಪದ ಮಟ್ಟುಗಳು, ಚಿತ್ರಗೀತೆಗಳು, ಶಿಕ್ಷಣ ಪಠ್ಯಗಳಲ್ಲಿದ್ದ ಕವಿತೆಗಳೇ ಮಾದರಿ ಆಗಿದ್ದುವು. ಆದರೆ ಅವೆಲ್ಲ ಅನುಕರಿಸಬಾರದ ಮಾದರಿಗಳು ಅಂತ ಆವಾಗ ನಮಗೆ ಗೊತ್ತಿರಲಿಲ್ಲ. ಹಾಗಾಗಿ ನಮಗೆ ನಮ್ಮದೇ ಸ್ವಂತಿಕೆ ರೂಪಿಸಿಕೊಳ್ಳುವುದು ಬಹಳವೇ ತಡವಾಯಿತು.

ಕಾವ್ಯ ರಚನೆಯ ಸಿದ್ಧತೆ ಹೇಗೆ ಮಾಡಿಕೊಳ್ಳುವುದು? ಏನೂ ಗೊತ್ತಿಲ್ಲದೆ ಕವಿತೆ ಬರೆಯುವುದು ಹೇಗೆ?
ಮೊದಲಿಗೆ ಕವಿ ಮನಸ್ಥಿತಿ ನಿಮ್ಮಲ್ಲಿ ಇರಬೇಕು. ಭಾಷಾ ಜ್ಞಾನ ಇರಬೇಕು. ಯಾವುದಾದರೂ ಕಾವ್ಯವನ್ನು ಹೇಗೆ ಬರೆಯಬಹುದು ಎಂಬ ಬಗ್ಗೆ ಸ್ವಲ್ಪ ಚಿಂತಿಸಿ ಒಂದು ಐಡಿಯಾ ಪಡಕೊಂಡಿರಬೇಕು. ಅನುಭವವನ್ನು, ತಿಳುವಳಿಕೆಯನ್ನು ಕವಿತೆ ಮಾಡುವ ತಂತ್ರಗಳ ಬಗ್ಗೆ ಸ್ವಲ್ಪ ಯೋಚಿಸಿರಬೇಕು. ಹಾಡು ಬರೆಯಬೇಕಾ, ಗದ್ಯಾತ್ಮಕ ಕವಿತೆ ಬರೆಯಬೇಕಾ, ಚಿಕ್ಕ ಚಿಕ್ಕ ರಚನೆಯಾ, ಸುದೀರ್ಘ ರಚನೆಯಾ ಎಂಬ ಬಗ್ಗೆ ಯೋಚಿಸಿರಬೇಕು, ಇತ್ಯಾದಿ ಇತ್ಯಾದಿ...
ನೋಡ್ರೀ, ಏನ್ರೀ ಇದು! ಏನೂ ಗೊತ್ತಿಲ್ಲದ ಸ್ಥಿತಿ ಅನ್ನೋದು ಇರಲ್ಲ ಕಣ್ರಿ. ಎಲ್ಲರೂ ತಾಯಿ ಮಕ್ಕಳಾಗಿ ತೊಟ್ಟಿಲಲ್ಲಿ ಇರುವಾಗಲೇ ಶಿಶುಪ್ರಾಸಗಳನ್ನು ಕೇಳಿ ಬೆಳೆದಿರ್‍ತಾರೆ. ನೀವೆಲ್ಲ ಇಪ್ಪತ್ತಕ್ಕು ಹೆಚ್ಚು ವಯಸ್ಸಿನವರು ನಲವತ್ತಾಗಿರೋರೂ ಇದೀರ. ಇದುವರೆಗೆ ನೀವು ಒಂದಲ್ಲ ಒಂದು ಬಗೆಯ ಜನಪದ ಗೀತೆಗೊ, ಆಚರಣೆಯ ಹಾಡುಗಳಿಗೊ, ಚಿತ್ರಗೀತೆಗಳಿಗೊ, ಹರಿಕಥಾ ಹಾಡುಗಳಿಗೊ, ಪ್ರಾರ್ಥನೆಗೊ, ಶೈಕ್ಷಣಿಕ ಓದಿನಲ್ಲಿ ಹಲವಾರು ಬಗೆಯ ಆಧುನಿಕ ಕವಿತೆಗಳಿಗೊ ತೆರೆದುಕೊಂಡೇ ಇರ್‍ತೀರ. ಹಾಗಾಗಿ ನಿಮಗೆಲ್ಲ ಒಂದಲ್ಲ ಒಂದು ಕಾವ್ಯಕೋಶ ನಿಮ್ಮ ಮನಸ್ಸಿನಲ್ಲಿ ನಿರ್ಮಾಣ ಆಗಿರ್‍ತದೆ. ಒಂದಲ್ಲ ಒಂದು ಕಾವ್ಯಾನುಭವ ನಿಮಗೆ ಆಗಿರ್‍ತದೆ. ನಿಮಗೆ ನಿಮ್ಮದೇ ಮನೆ, ಊರು, ಓದು ಇವುಗಳಿಂದ ಬಂದಿರೋ ಭಾಷೆ ಇರ್‍ತವೆ. ಹಾಗಾಗಿ ಅವನ್ನೆ ಬಳಸಿ ಬರೆಯೋಕೆ ಯತ್ನಿಸಿ. ಆನಂತರ ನಿಮ್ಮದೇ ಶೈಲಿ ನೀವು ಕಂಡುಕೊಳ್ಳಬಹುದು.

ಈಗಾಗಲೇ ಇರುವ ಕನ್ನಡದ ಕವಿಗಳು ನಮ್ಮನ್ನು ಒಪ್ಪುವಂತೆ ಕವಿತೆ ಬರೆಯಲು ಏನು ಮಾಡಬೇಕು?
ಬೇರೆಯವರು ಒಪ್ತಾರೋ ಬಿಡ್ತಾರೋ ಆ ಬಗ್ಗೆ ಹೆಚ್ಚು ತಲೆ ಕೆಡಿಸ್ಕೋಬೇಡಿ, ನಿಮಗೆ ಪ್ರಾಮಾಣಿಕವಾಗಿ ಅನ್ನಿಸಿದ್ದನ್ನು ಬರೀತಾ ಹೋಗಿ ಅಷ್ಟೆ. ಮೊದಮೊದಲಿಗೆ ಬೇರೆಯವರು ಏನನ್ತಾರೊ ಅನ್ನೋ ಶಂಕೆ, ಗೊಂದಲ ಕಾಡುವುದು ಸಹಜ. ಬೇರೆಯವರು ಮೆಚ್ಚಲಿ ಅನ್ನಿಸುವುದು ಸಹಜ. ಆ ಬಗ್ಗೆ ಹೆಚ್ಚು ಚಿಂತಿಸಬೇಡಿ. ನೀವು ಅಂದುಕೊಂಡದ್ದನ್ನು ಹೇಳಲು ಆಗಿದೆಯಾ ಅನ್ನುವ ಬಗ್ಗೆ ಮೊದಲು ಹೆಚ್ಚು ಯೋಚಿಸಿ. ಮೊದಲಿಗೆ ವಿದ್ಯಾರ್ಥಿಗಳು ಕೆಲವರು ಇಲ್ಲಿ ಇದ್ದೀರ. ನಿಮ್ಮ ನಿಮ್ಮ ಮೇಷ್ಟ್ರುಗಳು ನಿಮ್ಮ ಪದ್ಯ ಮೆಚ್ಚಿಕೊಳ್ಳುವಂತೆ ಬರೀಬೇಕು ಅಂತ ತಲೆ ಕೆಡಿಸ್ಕೋಬೇಡಿ. ಅವರೆಲ್ಲ ಬಹುಪಾಲು ವಿಫಲ ಕವಿಗಳೆ ಆಗಿರ್‍ತಾರೆ. ಕೆಲವರಿಗಂತು ಮೀಮಾಂಸೆ ಗೊತ್ತಿರ್‍ತದೆ, ನಿಮ್ಮನ್ನ ರುಬ್ಬಿಹಾಕ್ತಾರೆ.

ಕವಿತೆ ಓಪನ್ ಎಂಡೆಡ್ ಆಗಿ ಇರಬೇಕಾ, ಕ್ಲೋಸಡ್ ಎಂಡೆಡ್ ಆಗಿ ಇರಬೇಕಾ?
ಯಾವ ಕವಿತೆಯೂ ಅಷ್ಟೆ ಯಾಕೆ ಯಾವ ಸಾಹಿತ್ಯ ಪ್ರಕಾರವೂ ಕ್ಲೋಸ್‌ಡ್ ಅಥವಾ ಡೆಡ್ ಎಂಡ್ ಆಗಿ ಇರಲು ಸಾಧ್ಯವಿಲ್ಲ. ಯಾವುದೇ ನುಡಿರಚನೆ ಸದಾ ಓಪನ್ ಎಂಡೆಡ್ ಆಗಿಯೆ ಇರುತ್ತದೆ. ನೀವು ಏನು ಬರೆದರೂ ಹೇಗೆ ಬರೆದರೂ ಅದು ಓಪನ್ ಎಂಡೆಡ್ಡೇ. ಕವಿತೆಯನ್ನು ಹೇಗೆ ಆರಂಭಿಸಬೇಕು, ಹೇಗೆ ಮುಗಿಸಬೇಕು ಅನ್ನುವುದೂ ಒಂದು ಕಾಮನ್‌ಸೆನ್ಸ್. ರೊಟ್ಟಿ ಎಲ್ಲಿಂದ ತಿನ್ನಲು ಆರಂಭಿಸಬೇಕು ಎಂಬಷ್ಟೆ ವಿಲಕ್ಷಣವಾದ ಪ್ರಶ್ನೆ ಇದು. ಅಸಂಖ್ಯ ಅನುಭವ ಮತ್ತು ಅಸಂಖ್ಯ ಆಲೋಚನಾಕ್ರಮಗಳು ಇರುವ ಹಾಗೆ ಅಸಂಖ್ಯ ಆದಿ ಅಂತ್ಯಗಳೂ ಇರುತ್ತವೆ. ಒಂದೊಂದು ರೆಡಿ ಚೌಕಟ್ಟಿಗೂ ಅದರದೇ ಆದ ಶರೀರಗಳು ಇರ್‍ತವೆ. ನಿಮ್ಮದೇ ಹೊಸ ಚೌಕಟ್ಟು ನೀವು ಸೃಷ್ಟಿಸಿದಾಗ ಅದರ ಶರೀರವನ್ನೂ ನೀವೇ ಸಿದ್ಧಪಡಿಸಬೇಕು.

ಯಾರೋ ಹೇಳಿದ ಘಟನೆಯನ್ನು ಬರೆಯಬಹುದೇ? ಸ್ವಾನುಭವವನ್ನೆ ಬರೆಯಬೇಕೇ?
ಕವಿ ಯಾರೋ ಹೇಳಿದ ಘಟನೆಯನ್ನು ಕೇಳಿ ತಿಳಿಯುವುದೂ ಅನುಭವವೆ. ನೋಡಿ ತಿಳಿಯುವುದೂ ಅನುಭವವೆ, ತಾನೇ ಜೀವನದಲ್ಲಿ ಅನುಭವಿಸಿದ್ದೂ ಅನುಭವವೆ. ಎಲ್ಲವನ್ನೂ ತಾನೆ ಅನುಭವಿಸಿರಬೇಕು ಅಂತಲ್ಲ. ಅನುಭವ ಅನ್ನೋದು ಎಲ್ಲ ಇಂದ್ರಿಯಾನುಭವಗಳನ್ನೂ ಮತ್ತು ಜ್ಞಾನ, ಅರಿವುಗಳನ್ನೂ ಒಳಗೊಂಡದ್ದು. ಅದನ್ನೆಲ್ಲ ಬಳಸಿಯೆ ಕವಿ ಕವಿತೆ ಕಟ್ಟಬೇಕು. ಅನುಭವ ಅಥವಾ ಸಾಮಾಜಿಕ ವಾಸ್ತವ ಮಾತ್ರ ಬಳಸಿದರೆ ಸಾಲದು; ಕವಿಯಾದವರು ಕಲ್ಪನೆಯನ್ನೂ ಯಥೇಚ್ಚವಾಗಿ ಮಾಡಿಕೊಳ್ಳಬೇಕಾಗುತ್ತದೆ. ಕಲ್ಪನೆಯನ್ನೆ ವಾಸ್ತವವಾಗಿ, ಮಾಂತ್ರಿಕ ವಾಸ್ತವ ಆಗಿ, ಮಾನವಾತೀತ ಆಗಿ ಹೀಗೆ ಹಲವಾರು ರೀತಿಯಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿದೆ. ಕವಿಗಳು ಸಾಮಾನ್ಯವಾಗಿ ಏನು ಮಾಡ್ತಾರೆ ಅಂದರೆ ಕೆಲವೊಮ್ಮೆ ತಮ್ಮ ತಮ್ಮ ಬಾಲ್ಯಕಾಲದ ಮೆಮರಿಗಳಿಗೆ ಹೋಗ್ತಾರೆ. ಅಲ್ಲಿಂದ ತಂದು ಬರೀತಾರೆ. ಕೆಲವರು ತಮ್ಮ ವರ್ತಮಾನದ ಬಿಕ್ಕಟ್ಟುಗಳನ್ನು ಕುರಿತು ಬರೀತಾರೆ. ಕೆಲವೊಮ್ಮೆ ತಮ್ಮ ತಂದೆ ತಾತ ಮುತ್ತಾತನ ಕಾಲಗಳ ಅನುಭವಗಳನ್ನೂ ಇಂದಿನ ವರ್ತಮಾನದ ಸಂಗತಿಗಳನ್ನೂ ಹೋಲಿಸಿ ಬರೀತಾರೆ. ಹಾಗೆ ಬರೆಯುವಾಗ ಓಹೋ ಆ ಹಳೆ ಕಾಲ ಚೆನ್ನಾಗಿತ್ತು; ಈ ಕಾಲ ಕೆಟ್ಟುಹೋಗಿದೆ ಅಂತಾನೂ ಬರೆಯಬಹುದು. ಸ್ವಾನುಭವ ಮಾತ್ರ ಬರೀಬೇಕು ಅಂತೇನಿಲ್ಲ. ಅಲ್ಲದೆ ವ್ಯಕ್ತಿಯ ಅನುಭವ ಸಮುದಾಯದ ಅನುಭವ ಆಗಿ ಜಿಗಿತ ಪಡೆಯುವದೂ ಆಗಬೇಕು.

ಪ್ರಾಸಗಳನ್ನು ಬಳಸಬೇಕಾ? ಅವುಗಳಿಗೆ ಎಷ್ಟು ಮಾನ್ಯತೆ ಕೊಡಬೇಕು?
ಅಯ್ಯೋ ನೋಡ್ರೀ ಪ್ರಾಸಗಳನ್ನು ಬಳಸಬೇಕಾ, ಬಳಸಿ. ಬಿಡಬೇಕಾ, ಬಿಡಿ. ಅದು ನಿಮ್ಮ ಮತ್ತು ನಿಮ್ಮ ಕವಿತೆಯ ಆಯ್ಕೆ. ಆದರೆ ಪ್ರಾಸಕ್ಕಾಗಿ ಪ್ರಾಸ, ಅನಗತ್ಯವಾಗಿ ಪ್ರಾಸ ಕವಿತೆಯಲ್ಲಿ ತರಬಾರದು. ಪ್ರಾಸವೇ ಪದ್ಯದ ಅರ್ಥ, ಭಾವ, ವಿಚಾರ ನಿರ್ಧರಿಸಬಾರದು. ಹಾಗಾದಾಗ ಅದು ಒಳ್ಳೆಯ ಕವಿತೆ ಆಗಲು ಸಾಧ್ಯವಿಲ್ಲ. ಪ್ರಾಸಗಳಿಗೆ ಅತಿಯಾದ ಮಾನ್ಯತೆ ಕೊಡುವ ಅಗತ್ಯವಿಲ್ಲ. ಪ್ರಾಸವಿಲ್ಲದೆ ಕವಿತೆ ಬರೆಯಬಹುದು. ಹಾಡು ಬರೆಯುವಾಗ ಪ್ರಾಸ ಇದ್ದರೆ ಚೆನ್ನ. ಪ್ರಾಸ ಇಲ್ಲದ ಹಾಡು ಬರೀತೀವಿ ಅಂದರೂ ಬರೀರಿ. ಅದೂ ಒಂದು ಹೊಸ ಪ್ರಯೋಗ ಆದೀತು.
ಮಾತ್ರೆ, ಗಣ, ಛಂದಸ್ಸು ಇವೆಲ್ಲ ಪದ್ಯದಲ್ಲಿ ಇರಬೇಕೇ? ಹೇಗಿರಬೇಕು? ಅವು ಗೊತ್ತಿಲ್ಲದೆ ಪದ್ಯ ಬರೆಯಬಾರದಂತೆ ಹೌದೇ? ಕವಿತೆಗೆ ಉತ್ತಮವಾದ ಛಂದಸ್ಸು ಯಾವುದು? ಮುಕ್ತಛಂದಸ್ಸು ಅಂತಾರಲ್ಲ ಹಾಗಂದರೆ ಏನು?
ಮಾತ್ರೆ, ಗಣ, ಛಂದಸ್ಸು ಇವೆಲ್ಲ ಪದ್ಯದಲ್ಲಿ ಇರಬೇಕು ಅಂತೇನಿಲ್ಲ. ಆದರೆ ನೀವು ಬರೆಯಲು ಭಾಷೆ ಬಳಸಿದ ಕೂಡಲೆ ಅಲ್ಲಿ ಮಾತ್ರೆ, ಗಣ, ಛಂದಸ್ಸು ಇದ್ದೇ ಇರ್‍ತವೆ. ಅವೆಲ್ಲ ಇಲ್ಲದ ಪದಗಳೆ ಇಲ್ಲ. ಆಧುನಿಕ ಕವಿತೆಗೆ ನಾವು ಶಾಸ್ತ್ರೀಯವಾಗಿ ನಿರ್ವಚಿಸಿಕೊಂಡ ಇಂಥದ್ದೇ ಛಂದಸ್ಸು ಅಂತ ಬಳಸಿಲ್ಲ. ಹತ್ತೆಂಟು ಛಂದಸ್ಸುಗಳನ್ನು ಸೃಷ್ಟಿಸಿ ಬಳಸಿದ್ದೇವೆ. ಅವನ್ನೆಲ್ಲ ಅಧ್ಯಯನ ಮಾಡಿ ಗುರ್ತಿಸಿಕೊಳ್ಳಬೇಕಿದೆ. ಅದರಿಂದ ಕವಿಗಳಿಗೆ ಹೆಚ್ಚೇನೂ ಪ್ರಯೋಜನ ಆಗಲಾರದು. ಅದೆಲ್ಲ ವಿದ್ವಾಂಸರ ಹೊಟ್ಟೆಪಾಡು ಬಿಡಿ. ಕವಿತೆಗೆ ಉತ್ತಮವಾದ ಛಂದಸ್ಸು ಇಂಥದ್ದು ಅಂತ ಇಲ್ಲ. ಛಂದಸ್ಸು ಇಲ್ಲದೆ ಕವಿತೆ ಬರೆಯಬಾರದು ಅಂತೇನಿಲ್ಲ. ಈಗಾಗಲೇ ಬಳಸಿರುವ ಛಂದಸ್ಸನ್ನೆ ಕಲಿತು; ಅದರಲ್ಲೆ ಬರೆಯಬೇಕು ಎಂಬ ನಿಯಮ ಏನೂ ಇಲ್ಲ. ನಾವು ಏನು ಬರೆದರೂ ಅಲ್ಲಿ ಯಾವುದೋ ಒಂದು ಛಂದಸ್ಸು ಇರ್‍ತದೆ. ಮುಕ್ತ ಛಂದಸ್ಸು ಅಂದರೆ ಕಟ್ಟುನಿಟ್ಟಾದ ನಿಯಮಗಳು ಇಲ್ಲದ ಛಂದಸ್ಸು. ಮುಕ್ತಛಂದಸ್ಸು ಅನ್ನುವುದು ಒಂದಲ್ಲ ಹತ್ತೆಂಟು. ನಾನು ಆಗಲೆ ಹೇಳಿದೆನಲ್ಲ ಅವುಗಳನ್ನು ಇನ್ನೂ ನಾವು ನಿರ್ವಚಿಸಿಕೊಂಡಿಲ್ಲ.


ಕವಿತೆಯನ್ನು ಬರೆಯುವಾಗ ಇನ್ನೊಬ್ಬರ ಕವಿತೆಯನ್ನು ನೋಡಿ ಇನ್ಸ್‌ಪೈರ್ ಆಗಿ ಅವರ ಕವಿತೆಯ ಒಂದಿಷ್ಟು ಭಾಗ ಬಳಸಿಕೊಂಡು ಕವಿತೆ ಬರೆಯಬಹುದಾ?
ನನಗೆ ಬೇರೆ ಕವಿಗಳ ಪದ್ಯ ಓದಿದಾಗ, ಅವು ಇಷ್ಟ ಆದರೆ ಅಲ್ಲಿನ ಕೆಲವು ಪದಗಳನ್ನು, ರೀತಿಯನ್ನು ಕದಿಯಬೇಕು, ಅನುಕರಣೆ ಮಾಡಬೇಕು ಅನ್ನಿಸುತ್ತೆ. ಇದು ತಪ್ಪಾ? ಇನ್ನೊಬ್ಬರ ಥರನೆ ನಾನೂ ನನಗನ್ನಿಸಿದ್ದು ಬರೆದರೆ ತಪ್ಪಾ?
ಬರೆಯಬಹುದು. ಇನ್ನೊಬ್ಬರ ಕವಿತೆ ನೋಡಿ ಇನ್ಸ್‌ಪೈರ್ ಆಗಿ ಬರೆಯುವುದು ತಪ್ಪೇನೂ ಅಲ್ಲ. ಆದರೆ ಅದು ಕೇವಲ ಸ್ಪೂರ್‍ತಿ ಅಷ್ಟೇ ಆಗಬೇಕು. ಯಾರದ್ದೋ ಸಾಲುಗಳನ್ನು ನಮ್ಮದು ಎಂಬಂತೆ ಬರೆಯುವುದು ತರವಲ್ಲ. ಹಾಗೆ ಇನ್ನೊಬ್ಬರ ಸಾಲುಗಳನ್ನು ಬಳಸಿದಾಗ ಅವಕ್ಕೆ ಕೋಟ್ ಹಾಕುವುದು ಒಳ್ಳೆಯದು. ಕೋಟ್ ಹಾಕದೆ ಅವರಿವರ ಕವಿತೆಯ ತುಣುಕುಗಳನ್ನೆ ಕದ್ದು ಕತ್ತರಿಸಿ ಅಂಟಿಸಿ ಪದ್ಯ ಮಾಡುವುದು ಕೃತಿಚೌರ್‍ಯ. ಇನ್ನೊಬ್ಬರ ಥರನೆ ನೀವೂ ನಿಮಗೆ ಅನ್ನಿಸಿದ್ದು ಬರೆದರೆ ತಪ್ಪಲ್ಲ. ಇನ್ನೊಬ್ಬರ ಥರಾನೇ ಬರೆದರೆ ನಿಮ್ಮ ಸ್ವಂತಿಕೆ ಏನು ಉಳಿಯುತ್ತದೆ? ಇನ್ನೊಬ್ಬರದು ನಿಮ್ಮದಾಗಲು ಹೇಗೆ ಸಾಧ್ಯ? ಆದರೆ ಯಾವುದೋ ಒಂದು ಕವಿತೆಯಿಂದ ನೀವು ಪ್ರೇರಣೆ ಪಡೆದು ಇಲ್ಲವೆ ಸ್ಪೂರ್ತಿ ಪಡೆದು ನೀವು ಬೇರೊಂದು ಕವಿತೆ ಬರೆದರೆ ಅದೆಲ್ಲ ಒಳ್ಳೆಯದೇ. ಅಲ್ಲೂ ಅನುಕರಣೆ ಸಲ್ಲದು. ನಿಮ್ಮದೇ ಅನುಭವ, ನಿಮ್ಮದೇ ಕಟ್ಟಾಣಿಕೆ ಇದ್ದರೆ ನೀವೂ ಒಬ್ಬ ಕವಿ ಅಂತ ಕರೆಸಿಕೊಳ್ಳುತ್ತೀರಿ; ಇಲ್ಲದಿದ್ದರೆ ಹನ್ನೊಂದರಲ್ಲಿ ಇನ್ನೊಂದಾಗುತ್ತೀರಿ. ನೀವು ಯಾರನ್ನು ಅನುಕರಿಸುತ್ತೀರೋ ಅವರು ದೊಡ್ಡವರೆನಿಸುತ್ತಾರೆ.

ಕನ್ನಡದಲ್ಲಿ ನವೋದಯ ನವ್ಯ ದಲಿತ ಬಂಡಾಯ ಸ್ತ್ರೀವಾದಿ ಹೀಗೆ ಕಾವ್ಯದ ಕಾಲಘಟ್ಟಗಳು ಇವೆ. ಈಗ ಯಾವುದು ಇದೆ? ನಾವು ಇವುಗಳಲ್ಲಿ ಯಾವ ರೀತಿ ಬರೀಬೇಕು? ಈಗೇನಾದರೂ ಹೊಸ ರೀತಿ ಬರೆಯುವ ಧಾಟಿ ಬಂದಿದೆಯಾ?
ನವೋದಯ, ನವ್ಯ, ದಲಿತ, ಬಂಡಾಯ, ಸ್ತ್ರೀವಾದಿ ಇವೆಲ್ಲ ಕಾವ್ಯದ ಕಾಲಘಟ್ಟಗಳಲ್ಲ. ಇವೆಲ್ಲ ಕಾವ್ಯ ಬರೆವಣಿಗೆಯ ಸಂವೇದನೆಗಳು. ಅಂದರೆ ಭಿನ್ನ ಕಾವ್ಯ ಬರೆವಣಿಗೆಯ ಕ್ರಮಗಳು. ಇವಾದ ಮೇಲೆ ಈಗ ಒಂದು ನಿರ್ದಿಷ್ಟ ಬರೆಯುವ ಧಾಟಿ ಅನ್ನುವುದು ಇಲ್ಲ. ಹಲವಾರು ಜನ ಹಲವಾರು ರೀತಿಗಳಲ್ಲಿ ಬರೆಯುತ್ತಿದ್ದಾರೆ. ಒಬ್ಬೊಬ್ಬರೆ ಹಲವು ಧಾಟಿ ಸಂವೇದನೆಗಳಲ್ಲೂ ಬರೆಯುತ್ತಿದ್ದಾರೆ. ಕಂಬಾರ, ಶಿವಪ್ರಕಾಶ್, ಸಿದ್ಧಲಿಂಗ ಪಟ್ಟಣಶೆಟ್ಟಿ, ಎಸ್.ಜಿ.ಸಿದ್ಧರಾಮಯ್ಯ ಅವರ ಕಾವ್ಯ ನೋಡಿದರೆ ಇದು ನಿಮಗೆ ತಿಳಿಯುತ್ತದೆ. ಅಂದರೆ ನವೋದಯ, ನವ್ಯ, ಬಂಡಾಯ ಎಲ್ಲ ಧಾಟಿಗಳಲ್ಲು ಇವರು ಬರೆದಿದ್ದಾರೆ. ಕೆ.ವಿ. ತಿರುಮಲೇಶ್, ಕೆ.ಎಸ್. ನರಸಿಂಹಸ್ವಾಮಿ, ಕಣವಿ, ಸ.ಉಷಾ, ಲಕ್ಷ್ಮೀಪತಿ ಕೋಲಾರ ಇವರನ್ನೆಲ್ಲ ನವೋದಯ ನವ್ಯ ಬಂಡಾಯ ಅಂತ ಒಂದೊಂದೆ ಚೀಲಕ್ಕೆ ಹಾಕೋಕೆ ಆಗಲ್ಲ. ಆದಾಗ್ಯೂ ಆಧುನಿಕ ಕನ್ನಡ ಕಾವ್ಯ ಜಡ ಆಗಿದೆ. ಅದನ್ನ ಬದಲಿಸಬೇಕು. ನೀವು ಇವುಗಳಲ್ಲಿ ಯಾವುದನ್ನೂ ಅನುಕರಿಸಬಾರದು. ಹೊಸತಾಗಿ ಬರೆಯಬೇಕು. ಹೊಸ ಚೌಕಟ್ಟುಗಳನ್ನು ಹುಡುಕಬೇಕು.

ಪ್ರಸ್ತುತ ದಿನಮಾನಗಳಲ್ಲಿ ಲೇಖಕರ, ಕವಿತೆಗಾರರ ಬಂಧನ ಆಗುತ್ತಿದೆಯಲ್ಲ! ಕೊಲೆ ಆಗುತ್ತಿದೆಯಲ್ಲ! ಹಾಗಾದರೆ ನಮ್ಮ ಭಾಷೆ ಮತ್ತು ವಸ್ತು ಹೇಗಿರಬೇಕು?
ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಪ್ರಶ್ನಿಸುವುದಕ್ಕೆ ಸಾಹಿತ್ಯ ಇರುವುದು. ಯಾರೋ ನಮ್ಮನ್ನು ಬಂಧಿಸ್ತಾರೆ, ಕೊಲ್ತಾರೆ ಅಂತ ಹೆದರಿಕೊಂಡು ಕೂತರೆ ಏನೂ ಬರೆಯೋಕೆ ಆಗಲ್ಲ. ಯಂಗ್ ಮೈಂಡ್ಸ್ ಇದಕ್ಕೆಲ್ಲ ಹೆದರಬಾರದು. ನಮ್ಮ ಕವಿತೆಯ ಟಾರ್ಗೆಟ್ ಆಡಿಯೆನ್ಸ್ ಯಾವಾಗಲೂ ಯಂಗ್ ಮೈಂಡ್ಸ್ ಆಗಿರಬೇಕು. ಗೌರಿ, ಕಲಬುರ್‍ಗಿ ಕೊಲೆ ಆಯಿತು. ಹಾಗಂತ ನಮ್ಮ ಕಾವ್ಯದ ಭಾಷೆ ಮತ್ತು ವಸ್ತುಗಳನ್ನ ಕೊಲೆಗಡುಕರನ್ನ ಮೆಚ್ಚಿಸುವುದಕ್ಕಾಗಿ ರೂಪಿಸಿಕೊಳ್ಳೋಕೆ ಆಗಲ್ಲ. ನಮ್ಮ ಕಾವ್ಯ ಮತ್ತಷ್ಟು ಚೈತನ್ಯ ತುಂಬಿಕೊಳ್ಳಬೇಕು. ಕೊಲೆಯೆ ನಮ್ಮೆದುರಿನ ವಾಸ್ತವ ಆಗಿರುವಾಗ ಅದನ್ನು ಬರೆಯದೆ ರಂಜನೆಗೆ, ಭಜನೆಗೆ ಮಾತ್ರ ಬರೆಯುತ್ತ ಕೂರಲು ಸಾಧ್ಯವೇ? ನಮ್ಮ ಕಣ್ಣೆದುರು ಆಗುವ ಅನ್ಯಾಯ, ಅನಾಚಾರ, ದಬ್ಬಾಳಿಕೆ, ವಂಚನೆಗಳನ್ನು ಪ್ರತಿರೋಧಿಸುವ ವಸ್ತು ಭಾಷೆ ನಮ್ಮ ಕಾವ್ಯದ್ದಾಗಬೇಕು. ವರ್‍ತಮಾನದ ಅನರ್‍ಥಗಳಿಗೆ ಸ್ಪಂದಿಸದೆ ಇರುವ ಕವಿ ಕವಿಯೇ ಅಲ್ಲ. ಸದಾ ವರ್‍ತಮಾನವನ್ನು ಗುಣಾತ್ಮಕವಾಗಿ ಬದಲಿಸುವ ಹೊಣೆ ಕವಿ, ಬರಹಗಾರರದ್ದು. ಹಾಗೆ ಭಾವಿಸದೆ ಕೇವಲ ರಂಜನೆಗೆ ಬರೆಯುವುದು, ಕೌಟುಂಬಿಕ ಗೋಡೆಗಳ ನಡುವೆ ಬರೆಯುವುದು, ಪ್ರೀತಿ ಪ್ರೇಮ ಮಾತ್ರ ಬರೆಯುವುದು, ಸಾಮಾಜಿಕ ನ್ಯಾಯದ ಹೊಣೆಯೇ ಅರಿಯದೆ ತೌಡು ಮಾತ್ರ ಕುಟ್ಟುವುದು ಕಾವ್ಯವೇ ಅಲ್ಲ. ಕಾವ್ಯದ ಭಾಷೆ ಜನಭಾಷೆ ಆಗಬೇಕು; ವಸ್ತು ವರ್‍ತಮಾನದ ತಲ್ಲಣಗಳನ್ನು, ಭವಿಷ್ಯತ್ತಿನ ಕನಸುಗಳನ್ನು ಒಳಗೊಳ್ಳಬೇಕು.

ಇವತ್ತಿನ ಸಂದರ್ಭದ, ಸನ್ನಿವೇಶಗಳ ಪ್ರೇರಣೆಗಳ ಹಿನ್ನೆಲೆಯಲ್ಲಿ ಕವಿತೆ ಬರೆಯುವುದು ಎಷ್ಟು ಸರಿ?
ಯಾಕೆ ಬರೀಬಾರದು? ಇವತ್ತು ನಮ್ಮ ಕಣ್ಣೆದುರು ಕಾಣುವ ಅನ್ಯಾಯಗಳನ್ನು ಕುರಿತು ಬರೆಯಲೇಬೇಕಲ್ಲವೆ? ಈಗ ಉದಾಹರಣೆಗೆ ಕೇಂದ್ರದಲ್ಲಿ ಮೇಲ್ಜಾತಿ ಬಡವರಿಗೆ ಅಂದರೆ ಆರ್ಥಿಕವಾಗಿ ಹಿಂದುಳಿದವರಿಗೆ ಹತ್ತು ಪರ್ಸೆಂಟ್ ಮೀಸಲಾತಿ ಕಾನೂನು ಜಾರಿಗೆ ತಂದರು. ಆರ್ಥಿಕ ಹಿಂದುಳಿದಿರುವಿಕೆ ಅಂದರೆ ಅವರ ಪ್ರಕಾರ ಎಂಟು ಲಕ್ಷ ಇನ್ಕಮ್ ಸೀಲಿಂಗು. ಈ ಬಗ್ಗೆ ನೀವು ಏನೂ ಪದ್ಯ ಲೇಖನ ಬರೀಬಾರದು ಅಂದರೆ ಹೇಗೆ! ಹಾಗಾದರೆ ಬರಹಗಾರ ಏತಕ್ಕೆ ಬರೀಬೇಕು? ಸರ್‍ಕಾರ ರೈತರನ್ನು ಶೋಷಿಸುವ ಕಾನೂನು ತಂದರೆ, ಜನರನ್ನು ಪೀಡಿಸುವ ಕಾನೂನು ತಂದರೆ, ಸಮಾಜದಲ್ಲಿ ಕೆಲವರು ದಬ್ಬಾಳಿಕೆ ಮಾಡ್ತಾ ಇದ್ದರೆ, ರಸ್ತೆಯಲ್ಲಿ ರಕ್ತದ ಕೋಡಿ ಹರೀತಾ ಇದ್ದರೆ, ಒಬ್ಬರು ಇನ್ನೊಬ್ಬರನ್ನು ನುಂಗುತಾ ಇದ್ದರೆ, ಅತ್ಯಾಚಾರ-ಅನಾಚಾರ ನಡೀತಾ ಇದ್ದರೆ ಅದನ್ನೆಲ್ಲ ಕಂಡೂ ಕಾಣದ ಹಾಗೆ ಯಾರಾದರೂ ಬರೆಯಲು ಸಾಧ್ಯವೇ? ಪೊಲಿಟಿಕಲ್ ಪವರ್ ಸೆಂಟರ್, ರಿಲಿಜಿಯಸ್ ಪವರ್ ಸೆಂಟರ್, ಜಾತಿಗುಂಪುಗಳನ್ನು ಓಲೈಸೋಕೆ ಬರೀಬೇಕಾ? ನಮ್ಮಲ್ಲಿ ಸಾಹಿತ್ಯವನ್ನು ಈ ಎಲ್ಲ ಶಕ್ತಿಕೇಂದ್ರಗಳು ತಮ್ಮ ಯಥಾಸ್ಥಿತಿ ರಕ್ಷಣೆಯ ಟೂಲ್‌ಗಳಾಗಿ ಬಳಸ್ತಾ ಬಂದಿದಾವೆ. ಇವತ್ತೂ ಹಾಗೇ ಆಗ್ಬೇಕಾ? ಲೇಖಕರ ಬಂಧನದ ಪ್ರಶ್ನೆ, ಕೊಲೆಯ ಪ್ರಶ್ನೆ ಬಂತಲ್ಲ ಆವಾಗಲೆ. ಏನು ನಮ್ಮನ್ನ ಹೆದರಿಸ್ತೀರಾ? ನಮಗೆ ಯಾರೋ ಅವರ ತಾಳಕ್ಕೆ ತಕ್ಕ ಸಾಹಿತ್ಯ ಬರಿಯೋಕೆ ಹೇಳ್ತಾರಂದರೆ, ಹಾಗೆ ಮಾಡಿದರೆ ನಾವು ಮಠದ ಸಾಹಿತಿ, ಸರ್ಕಾರಿ ಕವಿ ಆಗಬೇಕಾಗುತ್ತೆ ಅಷ್ಟೆ.

ಪದ ಪ್ರಯೋಗ ಹೇಗಿರಬೇಕು, ಪುನರಾವರ್ತನೆ, ಮತ್ತೆ ಮತ್ತೆ ಅದದೇ ಪದಗಳನ್ನು ಬಳಸುವುದು ಇರಬಾರದೇ?
ಪದ ಪ್ರಯೋಗ ಹೇಗಿರಬೇಕು ಅನ್ನೋ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ಆದರೆ ನೀವು ಪಂಪ, ಕುಮಾರವ್ಯಾಸ, ಒಬ್ಬ ಜಾನಪದ ಲಾವಣಿಕವಿ, ಆಧುನಿಕ ಮೇಜರ್ ಕವಿಗಳು ಇವರ ಪ್ರಯೋಗಗಳನ್ನು ನೋಡಿದ್ರೆ ಅವರೆಲ್ಲ ಹೇಗೆ ಭಿನ್ನ ಭಿನ್ನವಾಗಿ ಪದಪ್ರಯೋಗಗಳನ್ನ ಮಾಡಿದಾರೆ ಅನ್ನೋದು ತಿಳಿಯುತ್ತೆ. ಸಾಮಾನ್ಯವಾದ ಜನಬಳಕೆಯನ್ನೆ ಕವಿ ವಿಭಿನ್ನವಾಗಿ ಬಳಸಬೇಕು. ಭಿನ್ನ ಸಂದರ್ಭಗಳಲ್ಲಿ ಪದಗಳು ಭಿನ್ನ ಅರ್ಥಗಳಿಗೆ ಗುರಿಯಾಗ್ತವೆ. ಕೆಲವೊಮ್ಮೆ ಹೊಸ ಪದಗಳನ್ನು ಕವಿಯಾದವನು ಟಂಕಿಸಿಕೊಳ್ಳಬೇಕಾಗ್ತದೆ; ಹಳೆ ಪದಗಳನ್ನು ಸಂಯೋಜಿಸಿ ಹೊಸ ಪದಗಳನ್ನು ಸೃಷ್ಟಿಸಿಕೊಳ್ಳಬೇಕಾಗ್ತದೆ. ಅನ್ಯಭಾಷಾ ಪದಗಳನ್ನು ಕನ್ನಡೀಕರಿಸಿ ತಗೋಬೇಕಾಗ್ತದೆ. ನಿಮ್ಮ ನಿಮ್ಮ ಪ್ರಯೋಗದ ಕೋಶದಿಂದ ಪದಗಳನ್ನು ಹೆಕ್ಕಿ ಕೂಟ ಮಾಡಿಕೊಂಡು ಬಳಸಬೇಕಾಗ್ತದೆ. ಇಂದ್ರಿಯಗಳ ಅನುಭವಗಳನ್ನು ಅದಲಿ ಬದಲಿ ಮಾಡಿಯೂ ಬಳಸಬೇಕಾಗ್ತದೆ. ಇದನ್ನೆಲ್ಲ ಪದ್ಯಗಳನ್ನು ಓದುವಾಗ ನಾವು ಕಂಡಿದ್ದೇವೆ. ಚರ್ಚಿಸಿದ್ದೇವೆ. ಅಡಿಗರ ಪದಕೂಟ ನೋಡಿ, ಕುವೆಂಪು ಪದಕೂಟಗಳನ್ನು ನೋಡಿ, ಬೇಂದ್ರೆ ಆಡುಭಾಷೆಯ ಪದಗಳನ್ನು ಬಳಸೋದು ನೋಡಿ, ಕಂಬಾರರು ಜನಪದ ನುಡಿಗಟ್ಟು ಬಳಸೋದು ನೋಡಿ, ಶಿವಪ್ರಕಾಶ್ ಮಾನಕ ಭಾಷೆ ಬಳಸೋದು ನೋಡಿ, ನಿಮ್ಮ ನಿಮ್ಮ ಊರಿನ ಗಡಂಗಿನ ಭಾಷೆ, ಜಾತ್ರೆ, ಹಬ್ಬ ಇತ್ಯಾದಿಗಳಲ್ಲಿ ಬಳಸುವ ಸಾಂದರ್ಭಿಕ ಭಾಷೆ ನೋಡಿ, ನೋಡ್ರಿ ಇದೆಲ್ಲ ಕಲಿಸೋಕಾಗಲ್ಲ. ಆದರೆ ನಮ್ಮದೇ ಕಣ್ಣು, ಮನಸ್ಸು, ಓದು ಇದ್ದರೆ ಸುಲಭವಾಗಿ ತಿಳಿಯುತ್ತೆ. ಇನ್ನು ಮತ್ತೆ ಮತ್ತೆ ಅದದೆ ಪದಗಳನ್ನು ಬಳಸಬಾರದಾ ಅಂದ್ರೆ ಪುನರುಕ್ತಿ ಕೂಡ ಒಂದು ಕಾವ್ಯ ತಂತ್ರ. ಬಳಸಬಹುದು. ಅದಕ್ಕೆಲ್ಲ ಪದ್ಯದ ಕಂಟೆಂಟಿನ ಮತ್ತು ಶೈಲಿಯ ಅಗತ್ಯ ನೋಡಿಕೋಬೇಕು.

ರೂಪಕಗಳನ್ನು ಕಟ್ಟಿಕೊಳ್ಳುವುದು ಹೇಗೆ? ರೂಪಕಗಳಲ್ಲಿ ಬರೆದರೆ ಮಾತ್ರ ಒಳ್ಳೆ ಕವಿತೇನಾ? ಬೇಗ, ಸರಳವಾಗಿ ಅರ್ಥ ಆಗುವಂತೆ ಬರೆದರೆ ಅದು ಒಳ್ಳೆ ಕವಿತೆ ಅಲ್ಲವಾ? ಒಳ್ಳೆ ಕವಿತೆ ಅಂದರೆ, ಉತ್ತಮ ಕವಿತೆ ಅಂದರೆ ಹೇಗಿರಬೇಕು?
ರೂಪಕ ಕಟ್ಟಿಕೊಳ್ಳುವುದು ಹೇಗೆ ಅಂತ ಒಬ್ಬ ಕವಿ ಕೇಳಿದರೆ, ಅವನಿಗೆ ಹೇಗೆ ಪಾಠ ಮಾಡೋದು? ಒಂದು ಇನ್ನೊಂದೆ ಆಗಿದೆ ಅಂತ ಬರೆದರೆ ಅದೆ ರೂಪಕ. ಕೆಂಡಗಣ್ಣು, ನಾಲಿಗೆಚಡಾವು ಅಂತ ಬರೆದರೆ ಅದು ರೂಪಕ. ರೂಪಕಗಳಲ್ಲಿ ಮಾತ್ರ ಕವಿತೆ ಬರೆದರೆ ಇಡೀ ಕವಿತೆಯೆ ಒಂದು ರೂಪಕ ಆಗಿ ಕಂಡರೆ ಅದು ಒಳ್ಳೆ ಕವಿತೆ ಹೌದು. ಆದರೆ ಕವಿತೆ ಹಾಗೆ ಮಾತ್ರ ಬರೀಬೇಕು ಅಂತೇನಿಲ್ಲ. ಹಾಗೆ ಬರೆದರೆ ಮಾತ್ರ ಒಳ್ಳೆ ಕವಿತೆ ಇಲ್ಲದಿದ್ದರೆ ಅದು ಒಳ್ಳೆ ಕವಿತೆ ಅಲ್ಲ ಅಂತೇನೂ ಅಲ್ಲ. ಸರಳವಾಗಿ ಅರ್ಥ ಆಗುವ ಹಾಗೆ ಬರೆದರು ಅದು ಒಳ್ಳೆ ಕವಿತೆ ಆಗಿರಲು ಸಾಧ್ಯ. ನರಸಿಂಹಸ್ವಾಮಿ, ಕಣವಿ, ಪ್ರತಿಭಾ, ಶಶಿಕಲಾ ಎಲ್ಲರೂ ಸರಳವಾಗಿ ಬರೆದೂ ಒಳ್ಳೆಯ ಕವಿತೆಗಳನ್ನು ಬರೆದಿದ್ದಾರಲ್ಲಾ. ವಚನಕಾರರು, ದಾಸರು, ತತ್ವಪದಕಾರರು, ಸರ್‍ವಜ್ಞ ಇವರನ್ನೆಲ್ಲ ನೋಡಿ; ಅವರು ಸರಳವಾಗೂ ಬರೆದಿದ್ದಾರೆ; ಬೆಡಗಿನಲ್ಲು ಬರೆದಿದ್ದಾರೆ; ಹಾಡುಗಳನ್ನೂ ಬರೆದಿದ್ದಾರೆ. ಸರಳವಾಗಿ ಬರೆದರೆ, ವಾಚ್ಯವಾಗಿ ಇದ್ದರೆ ಅದು ಒಳ್ಳೆಯ ಕವಿತೆ ಯಾಕಾಗಬಾರದು? ಒಂದು ಉತ್ತಮ ಕವಿತೆ ನಿಮಗೆ ಓದಿದ ಕೂಡಲೆ ವಿಭಿನ್ನ, ವಿಶಿಷ್ಟ, ತಾಜಾ ಅನ್ನಿಸಬೇಕು. ಲೋಕದೃಷ್ಟಿಯನ್ನು ಬದಲಿಸುವಂತೆ ಇರಬೇಕು. ಲೋಕದ ಹುಳುಕು, ಹುಣ್ಣು, ಲೋಕದ ದುಃಖವನ್ನು ತೆಗೆದ ರಾಚುವಂತೆ ನಿರೂಪಿಸಬೇಕು. ಬರಿ ಡಿಂಗ್ ಡಾಂಗ್ ರಚನೆಗಳನ್ನು ಬರಕೊಂಡು ಕೂತರೆ ಸಾಕಾ? ಒಳ್ಳೆ ಕವಿತೆ ಎಂದರೆ ನಿಮ್ಮ ಕಣ್ಣಿಗಿಂತ ಭಿನ್ನವಾದ ದೃಷ್ಟಿ ಅಲ್ಲಿ ಕಾಣಬೇಕು. ಅಥವಾ ಜಗತ್ತನ್ನು ನಿಮ್ಮ ನಂಬಿಕೆಗಿಂತ ಭಿನ್ನವಾಗಿ ಕವಿತೆ ನಿಮಗೆ ಕಾಣಿಸಬೇಕು.

ಕಥೆ ಕಾದಂಬರಿಗಳಲ್ಲಿ ಕಾವ್ಯ ಮಿಕ್ಸ್ ಮಾಡಬಹುದಾ?
ಮಾಡಬಹುದು. ಮಾಡಬಾರದು ಅಂತಿಲ್ಲ. ಕಾವ್ಯಾತ್ಮಕ ಕಾದಂಬರಿ, ಕತೆ; ಗದ್ಯಾತ್ಮಕ ಕಾವ್ಯಗಳೂ ನಮ್ಮಲ್ಲಿ ಪ್ರಯೋಗ ಆಗಿದಾವೆ. ಕಾದಂಬರಿ ಗಾತ್ರದ ಕಾವ್ಯಗಳೂ, ಮಹಾಕಾವ್ಯಗಳೂ ನಮ್ಮಲ್ಲಿ ಪ್ರಯೋಗ ಆಗಿದಾವೆ. ಕತೆ ಕಾದಂಬರಿಗಳ ನಡುವೆ ಕೆಲವೊಂದು ಪದ್ಯಗಳನ್ನು ಬರೆದಿರುವದೂ ಉಂಟು. ಕವಿತೆ, ಕತೆ ಎಂಬುವು ಎರಡು ಪ್ರಕಾರಗಳು. ಅವನ್ನು ಒಟ್ಟಿಗೆ ಬೆರೆಸಿ ಬರೆದರೆ ತಪ್ಪೇನಿಲ್ಲ.
ಸಾರ್ ಒಟ್ಟು ಕವಿತೆ ಹೆಂಗ್ ಬರೀಬೇಕು ಅಂತ ಒಂದು ಸ್ಯಾಂಪಲ್ ಮೂಲಕ ಸರಳವಾಗಿ ತಿಳಿಸಿಕೊಡಿ ಸಾ.
ಕವಿತೆ ಹೆಂಗ್ ಬರೀಬೇಕು... ಅಂತ ಒಂದು ಪದ್ಯ ನೋಡಿ, ನೋಡ್ರೀ ಇದೇ ಕಣ್ರಿ ಪದ್ಯ, ಹಿಂಗೇ ಬರೀರಿ ಅಂತ ಹೇಳೋಕಾಗಲ್ಲ. ಹೇಳಬಾರದು. ಹಂಗೆ ಅಂತಿಮವಾದ, ಅತ್ಯುತ್ತಮವಾದ ಮಾದರಿ ಇದೆ ಅಂತ ಇಲ್ಲ. ಹತ್ತಾರು ನೂರಾರು ಮಾದರಿಗಳು ಇದಾವೆ. ನೀವೂ ನಿಮ್ಮದೇ ಮಾದರಿಗಳ ಹುಡುಕಾಟ ನಡೆಸಬೇಕು. ಕನ್ನಡದ ಒಂದೊಂದು ಯಶಸ್ವಿ ಕವಿತೆಗಳೂ ಒಂದೊಂದು ಒಳ್ಳೆಯ ಕವಿತೆಯನ್ನು ಹೇಗೆ ಬರೆಯಬೇಕು ಎಂಬುದಕ್ಕೆ ಸ್ಯಾಂಪಲ್ಲುಗಳೇ. ಆದರೆ ಆ ಸ್ಯಾಂಪಲ್ಲೆ ಕನ್ನಡ ಕಾವ್ಯ ಅಲ್ಲ. ಈಗ ನಾವು ಓದಿದ ನವ್ಯವೇ ಕನ್ನಡ ಕಾವ್ಯ ಅಲ್ಲ. ಅದರಾಚೆಗೂ ಕನ್ನಡ ಕಾವ್ಯ ವೈವಿದ್ಯಮಯವಾಗಿ ಇದೆ. ಅದನ್ನೆಲ್ಲ ನೀವು ಕಲಿಯಲು ಓದಬಾರದು, ನಾನು ಪದೇ ಪದೇ ಹೇಳುತ್ತಿದ್ದೇನೆ; ದಾಟಲು, ಮೀರಲು, ನಿಮ್ಮದೇ ರೀತಿ ಬರೆಯುವುದನ್ನು ಕಲಿಯಲು ಓದಬೇಕು.
ಒಂದು ಸರಳವಾದ ವ್ಯತ್ಯಾಸ ರೂಪಿ ಮಾತು ಹೇಳುವುದಾದರೆ; ಆಡುಭಾಷೆಗಿಂತ ಭಿನ್ನವಾದುದು ಕಾವ್ಯ. ಅಲ್ಲಿ ನಾದ, ಲಯ, ಗೇಯತೆ, ಪದ್ಯಗಂಧಿ ಭಾಷೆ ಇರುತ್ತವೆ. ಅವುಗಳ ಪ್ರಮಾಣ ಒಮ್ಮೊಮ್ಮೆ ಹೆಚ್ಚು ಕಮ್ಮಿ ಆಗಬಹುದು. ಕುವೆಂಪು ಕಲ್ಕಿ ಪದ್ಯ ನೋಡಿದರೆ ಅಲ್ಲಿ ಸರಳವಾದ ಭಾಷೆಯಲ್ಲೆ ಕವಿತೆಯನ್ನು ಲಯಗಾರಿಕೆಯಲ್ಲಿ ಬರೆಯಲಾಗಿದೆ. ಬೇಂದ್ರೆಯವರ ಚಿಗರಿಗಂಗಳ ಚೆಲುವಿ ಕವಿತೆ ನೋಡಿದರೆ ಅದನ್ನು ಹಾಡಾಗಿ ಬರೆಯಲಾಗಿದೆ. ಕುವೆಂಪು ಅವರದು ಗಪದ್ಯ, ಬೇಂದ್ರೆ ಅವರದು ಹಾಡು. ನರಸಿಂಹಸ್ವಾಮಿ ಅವರ ಬಳೆಗಾರ ಚೆನ್ನಯ್ಯ, ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ ಎರಡೂ ಕವಿತೆ ನೋಡಿದರೆ ಎರಡೂ ಭಿನ್ನ ಕಟ್ಟಾಣಿಕೆ ಉಳ್ಳ ಕವಿತೆಗಳು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹಾಗಾಗಿ ಕವಿತೆ ಬರೆಯುವುದಕ್ಕೆ ನಮ್ಮವರು ಒಂದು ನಿರ್‍ದಿಷ್ಟವಾದ ಅಂತಿಮ ಮಂತ್ರ, ಸೂತ್ರ ಅಂತ ಬಳಸಿಲ್ಲ. ನಾವೂ ಬಳಸೋಕೆ ಆಗಲ್ಲ. ನಾವು ಇದುವರೆಗೆ ಓದಿರುವ ನವ್ಯ ಕವಿತೆಗಳನ್ನೆ ಮತ್ತೆ ಮೆಲುಕು ಹಾಕಿದರೆ ಎಲ್ಲವೂ ನವ್ಯವೇ ಆದರೂ ಒಂದೊಂದೂ ಭಿನ್ನ ಅಲ್ಲವೆ?
ಕವಿತೆ ಸಹಜವಾಗಿ ಮಾತ್ರ ಹುಟ್ಟಬೇಕಾ? ಪ್ರಜ್ಞಾಪೂರ್ವಕವಾಗಿ ಕವಿತೆ ಬರೆಯುವುದು ತಪ್ಪಾ? ಸಾಧ್ಯವಿಲ್ಲವಾ? ಸಹಜವಾಗಿ ಹುಟ್ಟುವುದು ಎನ್ನುವುದು ಇಲ್ಲ. ಅದರ ಹಿಂದೆ ಅನೇಕ ರೀತಿಯ ಕ್ರಿಯೆ ಪ್ರತಿಕ್ರಿಯೆಗಳು ಇರ್‍ತಾವೆ. ಕೆಲವರು ಒಮ್ಮೆಗೇ ಕೂತು, ನಿಂತು ಕವಿತೆ ಕಟ್ತಾರೆ. ಕೆಲವರು ತಿದ್ದಿ ತೀಡಿ ಕಟ್ತಾರೆ. ಪ್ರಜ್ಞಾಪೂರ್ವಕ ಆಗಿ ಬರೆಯುವುದು ತಪ್ಪಲ್ಲ. ಸಾಧ್ಯ ಇದೆ.

ಉತ್ತಮ ಕವಿತೆಯ ವಾಚನ ಅಂದರೆ ಅದರ ಲಕ್ಷಣಗಳು ಯಾವುವು? ಹಾಡುಗಳನ್ನು ಓದುವುದು ಹಾಡಲ್ಲದ ಕವಿತೆಗಳನ್ನು ಓದುವುದರಲ್ಲಿ ವ್ಯತ್ಯಾಸ ಇದೆಯಾ?
ಒಂದೊಂದು ಕವಿತೆ ಓದೂ ಭಿನ್ನ. ನಾವು ಓದುವ ಕವಿತೆಯೆ ಕೆಲವು ನಿಲ್ದಾಣಗಳನ್ನು, ಧಾಟಿಗಳನ್ನು ಸೂಚಿಸುತ್ತದೆ. ಕೆಲವರು ಎಲ್ಲ ಕವಿತೆಗಳನ್ನೂ ಒಂದೇ ರೀತಿ ಮನಾಟನಸ್ಸಾಗಿ ಓದುವುದುಂಟು. ಹಾಡು ಮತ್ತು ಹಾಡಲ್ಲದ ಕವಿತೆಗಳನ್ನು ಓದುವುದರಲ್ಲಿ ವ್ಯತ್ಯಾಸ ಇದೆ. ಅದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿದೆ.
ಸಾಮಾನ್ಯವಾಗಿ ಯಾವುದೇ ಒಂದು ಕವಿತೆ ಓದುವಾಗ ಅದರ ಲಯ ಹಿಡಿದು ಓದಬೇಕು. ಹಾಗೆ ಓದುವಾಗ ಅದು ಕೇವಲ ಶಬ್ದಾಡಂಬರ ಆಗದ ಹಾಗೆ ಓದುಗ ಎಚ್ಚರ ವಹಿಸಬೇಕು. ಕೆಲವೊಮ್ಮೆ ಭಾವ, ಅರ್ಥ, ಅನುಭವಗಳು ಎಲ್ಲವೂ ಓದಿನಲ್ಲಿ ಬಿಚ್ಚಿಕೊಳ್ಳುವಂತೆ ಇರಬೇಕು. ಒಮ್ಮೊಮ್ಮೆ ಈ ಒಂದೊಂದರ ಮೇಲೆ ಒತ್ತು ಬೀಳಬಹುದು. ಕೆಲವೊಮ್ಮೆ ಪ್ರಾಸದ ಮೇಲೆ ಒತ್ತು ಬೀಳಬಹುದು. ಕೆಲವೊಮ್ಮೆ ಹನಿಗವಿತೆಗಳನ್ನು ಓದುವಾಗ ರಂಜನೆಯೇ, ಹಾಸ್ಯವೇ ಪ್ರಧಾನವಾಗಿ ಪಂಚಿಂಗ್ ಪಾಯಿಂಟುಗಳನ್ನು ಹಿಡಿದು ಓದು ನಡೆಯಬಹುದು. ನೋಡೀ, ಆಧುನಿಕ ಕವಿತೆಯಲ್ಲಿ ಹಾಗೆ ನಾವಿನ್ನೂ ಸಮುದಾಯಕ್ಕೆ ಪದ್ಯ ಓದುವ ಬಗೆಗಳನ್ನು ಹೆಚ್ಚು ಹೆಚ್ಚು ಪ್ರಯೋಗಗಳ ಮೂಲಕ ಎಕ್ಸ್‌ಪ್ಲೋರ್ ಮಾಡಿಲ್ಲ. ಹಾಡೋದು, ಓದೋದು ಎರಡೇ ಮಾದರಿ ಇರೋದು. ಕೆಲವೊಮ್ಮೆ ಚಿತ್ರ ಕುಂಚ ಕಾವ್ಯ ಅಂತ ಪ್ರಯೋಗ ಮಾಡಿದ್ದೀವಿ. ಅದು ಬಿಟ್ಟರೆ ಇನ್ನೇನೂ ಹೆಚ್ಚು ಪ್ರಯೋಗಗಳು ಆಗಿಲ್ಲ. ಹಿಂದೆ ನಮ್ಮಲ್ಲಿ ಹಳಗನ್ನಡ ಕಾವ್ಯಗಳನ್ನು ಗಮಕ, ವಾಚನ, ಪಠಣ, ಪಾರಾಯಣ, ಗಾಯನ, ವ್ಯಾಖ್ಯಾನ, ಹರಿಕಥಾಶ್ರವಣ, ಶಿವಕಥಾವಿನೋದ, ತಾಳಮದ್ದಲೆ, ತತ್ವಕ್ಕೆ ಹಾಕುವುದು ಹೀಗೆ ಹಲವು ಬಗೆಗಳ ಅನುಸಂಧಾನಗಳನ್ನು ರೂಡಿಸಿಕೊಂಡಿದ್ದೆವು. ಆದರೆ ಆದುನಿಕ ಕನ್ನಡ ಕವಿತೆಗೆ ಅಂಥಹ ಸಾಧ್ಯತೆಗಳನ್ನು ನಾವಿನ್ನೂ ಎಕ್ಸ್‌ಪ್ಲೋರ್ ಮಾಡಿಕೊಂಡಿಲ್ಲ. ಚಿತ್ರಗೀತೆಗಳ ಭರಾಟೆಯೊಳಗೆ ಇನ್ನದು ಸಾಧ್ಯ ಆಗದೇನೂ ಇರಬಹುದು. ನೋಡೋಣ... ಹೋಪ್ಸ್ ಕಳಕೊಳ್ಳೋದು ಬೇಡ. ಅದರ ಬದಲು ಹೊಸ ಹೊಸ ರೀತಿಯ ಪ್ರಯೋಗಗಳಿಗೆ ನಾವೆ ಒಡ್ಡಿಕೊಳ್ಳಬೇಕು, ತೊಡಗಿಕೊಳ್ಳಬೇಕು. ಇವತ್ತಿನ ಚರ್ಚೆಯೂ ಅಂತಹ ಒಂದು ಪ್ರಯತ್ನ ಅಲ್ಲವೇ?

ಕತೆ, ಕವಿತೆ, ಕಾದಂಬರಿ ಇವುಗಳಲ್ಲಿ ನಾವು ಯಾವುದನ್ನು ಇಂದು ಆಯ್ಕೆ ಮಾಡಿಕೊಂಡರೆ ಒಳ್ಳೆಯದು? ಯಾವ ಪ್ರಕಾರ ಹೆಚ್ಚು ಉತ್ತಮವಾದದ್ದು? ಯಾವುದನ್ನು ಜನ ಹೆಚ್ಚು ಇಷ್ಟ ಪಡುತ್ತಾರೆ? ನಮಗೆ ಉತ್ತಮ ಸಾಹಿತಿ ಆಗುವುದು ಹೇಗೆ ಹೇಳಿ?
ನಿಮ್ಮ ಇಷ್ಟದ ಪ್ರಕಾರ ನೀವು ಆಯ್ಕೆ ಮಾಡಿಕೊಳ್ಳಿ. ಅಥವಾ ನಿಮಗೆ ಬೇಕಾದ್ದು ಬರೀತಾ ಹೋಗಿ ನಿಮ್ಮ ಪ್ರಕಾರವು ನಿಮ್ಮನ್ನೆ ಆಯ್ಕೆ ಮಾಡಿಕೊಳ್ಳುತ್ತದೆ. ಒಳ್ಳೆಯ ಪ್ರಕಾರ, ಒಳ್ಳೆಯದಲ್ಲದ್ದು ಅಂತ ಇಲ್ಲ. ಎಲ್ಲ ಪ್ರಕಾರಗಳನ್ನೂ ಇಷ್ಟ ಪಡುವ ಜನ ಇದ್ದಾರೆ. ಯಾವುದನ್ನು ಜನ ಇಷ್ಟ ಪಡ್ತಾರೆ ಅಂದರೆ ಈಗ ಸದ್ಯಕ್ಕೆ ಹೆಚ್ಚು ಓದುಗರು ಪರದೆ ಓದುಗರೆ ಆಗಿದ್ದಾರೆ. ಅವರು ನೋಡುಗರೂ ಕೇಳುಗರೂ ಆಗಿದ್ದಾರೆ. ಹಾಗಾಗಿ ಇವತ್ತು ಮಲ್ಟಿಮೀಡಿಯಾ ದೃಶ್ಯಪಠ್ಯಗಳು ಹೆಚ್ಚು ಹೆಚ್ಚು ಓದಿಗೆ ಗುರಿ ಆಗುತ್ತಿವೆ. ಲಿಖಿತ ಪಠ್ಯಗಳು ಆ ರೀತಿ ರೂಪಾಂತರ ಕೂಡ ಆಗುತ್ತಿವೆ. ಹಾಡು ಕೇಳುವುದು, ಕತೆ ಕೇಳುವುದು, ನೋಡುವುದು ಇವತ್ತು ಹೆಚ್ಚಾಗ್ತಾ ಇದೆ. ಹಾಗಾದರೆ ಕವಿತೆ ಬರೆಯಬಾರದಾ? ಕವನಸಂಕಲನ ಪ್ರಕಟಿಸಬಾರದಾ ಅಂದರೆ ಹಾಗೇನಿಲ್ಲ. ನಿಮ್ಮ ನಿಮ್ಮ ಓದುಗರನ್ನು ಕಟ್ಟಿಕೊಳ್ಳುವ ಹೊಣೆ ನಿಮ್ಮದೂ ಕೂಡ. ಬರೆಯುವವರು ಯಾರೋ, ಪುಸ್ತಕ ಪ್ರಕಟಿಸುವವರು ಯಾರೋ, ಪ್ರಚಾರ-ವ್ಯಾಪಾರ ಮಾಡುವವರು ಯಾರೋ ಆಗಿ ಲಿಂಕುಗಳು ತಪ್ಪಿಹೋಗಿವೆ. ಪುಸ್ತಕ ರಚನೆ ಮುದ್ರಣ ಮತ್ತು ಓದುಗಳೆಲ್ಲ ಉದ್ಯಮ ಆಗಿ ಬೆಳೆದಿವೆ. ಕಾವ್ಯದ ಬರವಣಿಗೆ ಮತ್ತು ಅದರ ಅನುಸಂಧಾನ ಒಂದು ಸಾಂಸ್ಕೃತಿಕ ವಿದ್ಯಮಾನ ಆಗುವುದಕ್ಕಿಂತ ಅದೊಂದು ಪುಸ್ತಕೋದ್ಯಮದ ಅಂಗ ಆಗಿದೆ. ಓದೆಂಬುದು ಶಿಕ್ಷಣವ್ಯವಸ್ಥೆಯ ಪಠ್ಯ ಆಗಿದೆ. ಸುಗಮ ಮತ್ತು ಚಲನಚಿತ್ರ ಗೀತೆಗಳ ಜಗತ್ತೇ ಬೇರೆಬೇರೆ ’ಗಂಭೀರ’ ಕಾವ್ಯಜಗತ್ತೆ ಬೇರೆ ಎಂಬಂತೆ ಒಡಕುಗಳು ನಿರ್‍ಮಾಣ ಆಗಿವೆ.
ಇನ್ನು ಉತ್ತಮ ಸಾಹಿತಿ ಆಗುವುದು ಹೇಗೆ ಎಂದು ಹೇಳಲಿಕ್ಕೆ ಯಾರಿಂದಲು ಸಾಧ್ಯವಿಲ್ಲ. ಅದಕ್ಕೆ ನನ್ನಲ್ಲಂತು ಪ್ಯಾಕೇಜ್ ಇಲ್ಲ. ಕ್ಷಮಿಸಿ.

ಪರಂಪರೆಯ ಕಾವ್ಯಗಳನ್ನು ನೋಡಿ ನಮ್ಮ ಈಗಿನ ಕಾವ್ಯಗಳನ್ನು ತಿಳಿಯಬೇಕೆ?
ಹಿಂದಣ ಹೆಜ್ಜೆ ಅರಿಯದೆ ಇಂದಣ ಹೆಜ್ಜೆ ಅರಿಯಲಾಗದು ಅಂತಾರೆ! ಪರಂಪರೆಯ ಅರಿವು ಕಾವ್ಯ ಕಟ್ಟಲು ತೊಡಗುವುದಕ್ಕೆ ಅತ್ಯಗತ್ಯವೇ?
ಹಾಗೇನಿಲ್ಲ. ಈಗಿನ ಕಾವ್ಯವನ್ನು ಓದಲಿಕ್ಕೆ ತಿಳಿಯಲಿಕ್ಕೆ ಹಿಂದಿನ ಕಾವ್ಯ ಅಗತ್ಯವಾಗಿ ತಿಳಿದಿರಬೇಕು ಅಂತೇನು ಇಲ್ಲ. ಪರಂಪರೆಗಳ ಹಿನ್ನೆಲೆಯಲ್ಲೆ ಇಟ್ಟು ತೌಲನಿಕವಾಗಿ ಇಂದಿನ ನಮ್ಮ ಕಾವ್ಯವನ್ನು ಅರ್‍ಥ ಮಾಡಿಕೊಳ್ಳುವ, ತೂಗಿ ನೋಡುವ ಅಗತ್ಯ ಕೂಡ ಇಲ್ಲ. ಆದರೆ ಹೇಗೆ ಬರೆಯಬಾರದು ಎಂದು ತಿಳಿಯಲಿಕ್ಕೆ ಪರಂಪರೆಯ ತಿಳುವಳಿಕೆ ಅಗತ್ಯ. ಅಂದರೆ ಅದನ್ನು ನೋಡಿ ಅದಕ್ಕಿಂತ ಭಿನ್ನವಾಗಿ ಬರೆಯಲು ಮತ್ತು ಅದರ ಮೂಲಕ ಬರೆಯುವ ಏನೆಲ್ಲ ಹತಾರಗಳು, ತಂತ್ರಗಳು ಬಳಕೆಯಾಗಿವೆ ಎಂದು ತಿಳಿಯಲು ಮತ್ತು ಹೊಸ ತಂತ್ರ, ಭಾಷೆ, ಚೌಕಟ್ಟುಗಳನ್ನು ರೂಪಿಸಿಕೊಳ್ಳಲು ಪರಂಪರೆಯ ತಿಳುವಳಿಕೆ ಅಗತ್ಯ.
ಲೋಕಾನುಭವ ಇರುವ ಯಾರು ಬೇಕಾದರೂ ಕಾವ್ಯ ಬರೆಯಬಹುದು. ಕವಿ ಆಗಬಹುದು. ನಿಮಗೆ ಇಲ್ಲೊಂದು ದೃಷ್ಟಾಂತ ಹೇಳಬೇಕು. ನೋಡಿ ಒಮ್ಮೆ ಒಬ್ಬ ಎಲ್ಲರೂ ಬೆಟ್ಟ ಹತ್ತುವ ಮೆಟ್ಟಿಲುಗಳನ್ನು ಬಿಟ್ಟು ತಾನೇ ಕೊರಕಲು ಇರುಕಲು ಇರುವ ಕಡೆ ಬೆಟ್ಟ ಹತ್ತೋಕೆ ಹೊರಟನಂತೆ. ಅದನ್ನ ನೋಡಿದ ಕೆಲವರು ಅವನಿಗೆ ಕೂಗಿ ಯೋ ಅಲ್ಲಿ ಹೋಗಬೇಡ ಇಲ್ಲಿ ಬಾ. ಮೆಟ್ಟಿಲಿವೆ. ಅಲ್ಯಾಕೆ ಪ್ರಯಾಸ ಅಂತ ಕರೆದರಂತೆ. ಅವನು ಸುಮ್ಮನೆ ತನ್ನ ಪಾಡಿಗೆ ತಾನು ಹತ್ತಿ ಜನ ನೋಡನೋಡುತ್ತಿರುವಾಗಲೇ ಬೆಟ್ಟದ ಶಿಖರ ತಲುಪಿದನಂತೆ. ಇಳಿದೂ ಬಂದನಂತೆ. ಅವನನ್ನು ಅಭಿನಂದಿಸಲು ಕೆಲವರು ಬಂದು ಮಾತಾಡಿಸಿದರಂತೆ. ಆಗ ಅವರಿಗೆ ಅವನು ಕಿವುಡ ಅನ್ನುವುದು ಗೊತ್ತಾಯಿತಂತೆ.
ಇಲ್ಲೆ ಇನ್ನೊಂದು ದೃಷ್ಟಾಂತ ಹೇಳಬೇಕು ನಿಮಗೆ. ಒಬ್ಬ ಸಿಟಿ ಹುಡುಗ ನಾಲ್ಕು ಗೋಡೆ ನಡುವೆ ಕೂತು ಈಜುವುದು ಹೇಗೆ ಅಂತ ಥಿಯರಿ ಕೇಳಿ ಕೇಳಿ ಈಜಲು ನೀರಿಗೆ ಇಳಿದನಂತೆ. ಈಜಲು ಸರಿಯಾದ ಸಿದ್ಧತೆ ಇಲ್ಲದೆ, ಬರಿ ಥಿಯರಿ ಕೇಳಿ ನೀರಿಗೆ ಈಜಲು ಇಳಿದ ಅವನ ಧೈರ್‍ಯವನ್ನೂ ನಾವು ಮೆಚ್ಚಬೇಕಾದದ್ದೆ. ಆದರೂ ಅವನಿಗೆ ಒಮ್ಮೆಲೆ ಈಜಲು ಆಗಲಿಲ್ಲವಂತೆ. ನೀರು ಕುಡಿದು ಮುಳುಗಿದನಂತೆ. ಯಾರೋ ಕಾಪಾಡಿದರಂತೆ.
ಈ ಎರಡೂ ದೃಷ್ಟಾಂತ ಯಾಕೆ ನಿಮಗೆ ಹೇಳಿದೆನೆಂದರೆ; ಹೊಸತನ, ಹೊಸದಾರಿ ಹುಡುಕುವ ಮನಸ್ಸು ಮತ್ತು ಲೋಕಜ್ಞಾನ ಇದ್ದರೆ ಕೆಲವೊಮ್ಮೆ ಸಕ್ಸಸ್ ಆಗಬಹುದು. ಆದರೆ ಅದೇ ಸಿದ್ಧತೆ ಇಲ್ಲದೆ, ಮೊಳಕಾಲುದ್ದ, ಸೊಂಟದುದ್ದ ನೀರಲ್ಲಿ ಕಾಲಾಡಿಸಿ ಅಭ್ಯಾಸವೂ ಇಲ್ಲದೆ ಒಮ್ಮೆಗೆ ಆಳದ ನೀರಿಗೆ ಬಿದ್ದರೆ ಕಳೆದುಹೋಗಲೂಬಹುದು.
ಅಂದರೆ ನೀವು ಇಲ್ಲಿ ಕೇಳಿದ ಪರಂಪರೆಯ ಅರಿವಿನ ಪ್ರಶ್ನೆಗೆ ಎರಡು ಮುಖಗಳಿವೆ. ನಿಮಗೆ ಶೂನ್ಯ ಸ್ಥಿತಿ ಅನ್ನುವುದು ಇರುವುದಿಲ್ಲ. ಏನೂ ಅರಿಯದ ಸ್ಥಿತಿ ಅನ್ನುವುದು ಇರುವುದಿಲ್ಲ. ನಿಮ್ಮದೇ ಲೋಕಜ್ಞಾನ ಇರುತ್ತೆ. ಅಂದರೆ ನಿಮಗೆಲ್ಲ ನಿಮ್ಮದೇ ಆದ ಪರಂಪರೆಗಳು ಇರುತ್ತವೆ. ನೀವು ಮಂಟೆ ಪರಂಪರೆಗೋ, ಎತ್ತಪ್ಪ, ಜುಂಜಪ್ಪ, ಮೈಲಾರಲಿಂಗ, ಕಡಕೋಳ ಮಡಿವಾಳ, ಶೈವ, ವೈಷ್ಣವ, ಜೈನ, ಆರೂಢ, ಅವಧೂತ ಹೀಗೆ ಯಾವುದೋ ಒಂದು ಪರಂಪರೆಗೆ ಸೇರಿರಬಹುದು. ಆಗ ನಿಮ್ಮನ್ನು ಮುಗಳಿ ರಚಿತ ಸಾಹಿತ್ಯ ಪರಂಪರೆ ಎಂಬ ಒಂದು ಪರಂಪರೆ ಮಾತ್ರ ಇದೆ. ಅದನ್ನು ಮಾತ್ರ ಕಲಿತು ಬರೆಯಿರಿ ಎಂದು ಹೇಗೆ ಹೇಳುವುದು. ಆಗ ನೀವು ಕಿವುಡನ ಥರ ನಿಮ್ಮ ದಾರಿಯಲ್ಲಿ ನೀವು ಸಾಗಬೇಕಾಗುತ್ತದೆ. ಇರುವ ದಾರಿ ನೋಡಬಾರದು ಎಂದು ಯಾರೂ ಹೇಳುವುದಿಲ್ಲ. ಹೊಸ ದಾರಿ ಹಿಡಿಯಬೇಕು ಎನ್ನುವುದು ನಮಗೆ ಗೊತ್ತಿರಬೇಕಷ್ಟೆ. ಇಲ್ಲ ನಾನು ಶೈಕ್ಷಣಿಕವಾಗಿ ಓದಿಕೊಂಡಿರೋ ಆಲದ ಮರಗಳಿಗೇ ಜೋತು ಬೀಳಬೇಕು ಅಂದರೆ ಆಯ್ತಪ್ಪ ಪ್ಯಾಡು, ಗೀಡು ಕಟ್ಕೊಂಡ್ ನೀರಿಗಿಳಿ ಅನ್ನಬೇಕಷ್ಟೆ...
(ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಕಾವ್ಯಕಮ್ಮಟದಲ್ಲಿ ಮಾಡಿದ ಭಾಷಣದ ಮತ್ತು ಚರ್ಚೆಯ ಲೇಖನ ರೂಪ)

ಭೂಮಿಗೀತ ಕವಿತೆಯ ಆಯ್ದಭಾಗ

ಎ.ಕೆ.ರಾಮಾನುಜನ್ ಅವರಿಂದ ‘ಪಿತ್ರಾರ್ಜಿತ’ ಕವಿತೆಯ ವಾಚನ

ಎಚ್.ಎಂ. ಚೆನ್ನಯ್ಯ ಅವರ `ಆಮೆ' ಕವನ ವಾಚನ

`ತೊಗಲು ಗೊಂಬೆಯ ಆತ್ಮಕಥೆ' ಕವನ ವಾಚನ

ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ `ಔರಂಗಜೇಬ' ಕವನ ವಾಚನ ರಾಮಲಿಂಗಪ್ಪ ಬೇಗೂರರದಿಂದ

ಎಚ್.ಎಲ್.ಪುಷ್ಪ ಅವರ ‘ಗೆಲಿಲಿಯೊ ಮತ್ತು ಫೆವಿಕಾಲ್’ ಕವನ ವಾಚನ

ಬಿ.ಸಿ.ರಾಮಚಂದ್ರ ಶರ್ಮ ಅವರ ‘ಹೇಸರಗತ್ತೆ’ಕವನ ವಾಚನ

ಲಕ್ಷ್ಮೀಪತಿ ಕೋಲಾರ ಅವರ ‘ನವಿಲು ಕಿನ್ನರಿ’ ಕವನ ವಾಚನ

ಎಸ್.ವಿ.ಪ್ರಭಾವತಿ ಅವರ ‘ಬೋನ್ಸಾಯ್ ಗಿಡಗಳು’ ಕವನ ವಾಚನ

ಕೆ.ವಿ.ತಿರುಮಲೇಶ್ ಅವರ `ಹೊಸ ದೇವರ ಬರವಿಗಾಗಿ' ಕವನ ವಾಚನ

ವಿ. ಚಿಕ್ಕವೀರಯ್ಯ ಅವರ ‘ಮಿಂಚಿನಂತೆ ಬರಬಹುದೆ’ ಕವನ ವಾಚನ

ಚಂದ್ರಶೇಖರ ತಾಳ್ಯ ಅವರ ‘ಸಿಂಧೂ ನದಿಯ ದಂಡೆಯ ಮೇಲೆ’ ಕವನ ವಚನ

ಜಿ.ಕೆ.ರವೀಂದ್ರಕುಮಾರ್ ಅವರ ‘ಪ್ಯಾಂಜಿಯಾ’ ಕವನ ವಾಚನ

ಈ ಅಂಕಣದ ಹಿಂದಿನ ಬರೆಹಗಳು

ಹರಿಭಕ್ತಿ ಸಾರ ಎಂಬ ಗಿಳಿಪಾಠ

ಕಲ್ಲು ದೈವ, ಮೊರ ದೈವ?

ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು

ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...