Date: 22-02-2020
Location: ಸುಚಿತ್ರ ಫಿಲ್ಮಂ ಸೊಸೈಟಿ
‘ಶಾಶ್ವತ’ ಎಂಬುದು ಕಲ್ಲು ಇದ್ದಂತೆ. ‘ಸದ್ಯ’ ಎನ್ನುವುದು ಚಲನಶೀಲತೆ. ‘ಇಹ ಮತ್ತು ಪರ’ದ ಪ್ರಶ್ನೆ ಬಂದಾಗ ‘ಪರ’ದ ಪರವಾಗಿ ಇರುತ್ತೇನೆ ಎಂದು ಪತ್ರಕರ್ತ-ಸಾಹಿತಿ ಜೋಗಿ ತಮ್ಮ ಬದುಕಿನ ಸೈದ್ಧಾಂತಿಕ ನಿಲುವನ್ನು ಸ್ಪಷ್ಟಪಡಿಸಿದರು.
‘ಬುಕ್ ಬ್ರಹ್ಮ’ ತಂಡವು ನಗರದ ಸುಚಿತ್ರ ಫಿಲ್ಮ್ಂ ಸೊಸೈಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಜೋಗಿ ಅವರೊಂದಿಗೆ ಅವಲೋಕನ’ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
‘ಸದ್ಯ’ದಲ್ಲೇ ನಂಬಿಕೆ ಇದೆ. ‘ಸದ್ಯ’ ಸ್ಥಿತಿಯಲ್ಲೇ ಚಲನಶೀಲತೆ -ಸೃಜನಶೀಲತೆ ಇದೆ. ಆದರೆ, ಏಕೋ ಏನೋ, ಇಹ ಮತ್ತು ಪರ ವಿಷಯದಲ್ಲಿ ನಾನು ‘ಪರ’ದ ಪರವಾಗಿ ಇರಬೇಕು ಎನಿಸುತ್ತದೆ. ಈ ದ್ವಂದ್ವವು ತಮಗೆ ಖುಷಿ ಕೊಡುತ್ತದೆ ಎಂದರು.
ಪುರಾಣ ಅಧ್ಯಯನದಿಂದ ಬರವಣಿಗೆಗೆ ಪ್ರೇರಣೆ : ಜಗತ್ತಿನ ಪರಿಕಲ್ಪನೆಯು ಪೌರಾಣಿಕ ಕಲ್ಪನೆಯಲ್ಲಿ ಅರ್ಥ ಪಡೆಯುತ್ತದೆ ಎನಿಸುತ್ತದೆ. ಯಯಾತಿ ಹಾಗೂ ಯುಗಾಂತದಂತಹ ಕೃತಿಗಳನ್ನು ಓದುವಾಗ ಬದುಕಿನ ಸಮಗ್ರತೆಯೊಂದಿಗೆ ಅದರಾಚೆಯ ಜಗತ್ತೂ ಅನುಭವಕ್ಕೆ ಬರುತ್ತದೆ. ಈ ಮೂಲಕ ತಮ್ಮ ಬರವಣಿಗೆಗೆ ಪುರಾಣದ ವಸ್ತು-ವಿಷಯಗಳು ಪ್ರೇರಣೆ ನೀಡಿವೆ ಎಂದರು.
ಓದುಗರೇ ನಿರ್ಧಾರಕರು: ಸಾಹಿತಿ ತನಗೆ ತಿಳಿದಂತೆ ಬರೆಯುತ್ತಾನೆ. ಆ ಕೃತಿಯು ರಚನಾತ್ಮಕವಾಗಿದೆಯೋ, ಭಾವನಾತ್ಮಕವಾಗಿದೆಯೋ, ಸಮಾಜ ಪರ ಇಲ್ಲವೇ ವಿರೋಧವಾಗಿದೆಯೋ ಓದುಗರು ನಿರ್ಧರಿಸುತ್ತಾರೆ. ಆದರೆ, ಸಾಹಿತಿಗೆ ಸಾಮಾಜಿಕ ಹೊಣೆಗಾರಿಕೆ ಎಂಬುದು ಇರುತ್ತದೆ. ಅದನ್ನು ಮರೆಯುವಂತಿಲ್ಲ ಎಂದರು.
ಬುಕ್ ಬ್ರಹ್ಮ ತಂಡದ ಸಂಪಾದಕ ದೇವು ಪತ್ತಾರ್, ಜೋಗಿ ಅವರೊಂದಿಗೆ ಜೋಗಿ ಸಾಹಿತ್ಯ-ಬದುಕು-ಬರೆಹ ಕುರಿತು ಅವಲೋಕಿಸಿದರು. ಕಿರುತೆರೆಯ ಧಾರಾವಾಹಿಯ ನಿರ್ದೇಶಕ, ನಟ ಟಿ. ಎನ್. ಸೀತಾರಾಮ್, ಚಲನಚಿತ್ರ ನಿರ್ದೇಶಕ ಬಿ. ಸುರೇಶ್, ಸಾಹಿತಿಗಳಾದ ಜಯಶ್ರೀ ದೇಶಪಾಂಡೆ, ಭಾರತಿ ಬಿ. ವಿ., ಜ್ಯೋತಿ ಗಿರೀಶ್ ರಾವ್ ಹತ್ವಾರ್, ಸಂಧ್ಯಾ ರಾಣಿ, ಪ್ರಕಾಶಕರಾದ ಜಮೀಲ್ ಸಾವಣ್ಣ, ರಮೇಶ್ ಉಡುಪ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.