ಶರಣರ ದೇವಾಲಯಗಳು

Date: 08-03-2023

Location: ಬೆಂಗಳೂರು


‘ದೇವಾಲಯದ ನಿರಾಕರಣೆಯ ಮೂಲಕ ಅನೇಕ ಸಮಸ್ಯೆಗಳನ್ನು ಶರಣರು ಬಗೆಹರಿಸಿದರು. ದೇವಾಲಯ ಶ್ರೇಷ್ಠ, ಈ ದೇಹ ಕನಿಷ್ಠವೆಂಬ ಭಾವನೆ ಇದರಿಂದ ಹೊರಟುಹೋಯಿತು’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ‘ಶರಣರ ಧಾರ್ಮಿಕ ಸಿದ್ಧಾಂತಗಳು’ ಅಂಕಣದಲ್ಲಿ ಶರಣರು ದೇವಾಲಯಗಳ ಕುರಿತು ತಳೆದ ನಿಲುವು, ತಮ್ಮ ವಚನಗಳಲ್ಲಿ ದೇವಾಲಯಗಳ ಕುರಿತು ಬರೆದ ಅರ್ಥಪೂರ್ಣ ಸಾಲುಗಳನ್ನು ವಿವರಿಸಿದ್ದಾರೆ.

ಶರಣರ ದೇವರ ಪರಿಕಲ್ಪನೆ ಹೇಗೆ ಹೊಸದೊ, ಅದೇ ರೀತಿ ಅವರ ದೇವಾಲಯ ಕಲ್ಪನೆಯೂ ಹೊಸತಾಗಿದೆ. ಹೊರಗಿನ ಮೂರ್ತಿ ದೇವರುಗಳನ್ನು ನಿರಾಕರಿಸಿದ ಮೇಲೆ ಅವರಿಗೆ ದೇವಾಲಯಗಳ ಅಗತ್ಯವೇ ಕಂಡುಬರಲಿಲ್ಲ. ದೇವಾಲಯಗಳ ಪ್ರವೇಶದ ಹೋರಾಟಕ್ಕಿಂತ ದೇವಾಲಯಗಳ ನಿರಾಕರಣೆಯ ಚಳುವಳಿಯನ್ನವರು ಪ್ರಾರಂಭಿಸಿದರು. ಆತ್ಮನೇ ಪರಮಾತ್ಮನೆಂದು ಹೇಳಿದ ಹಾಗೆ ದೇಹವೇ ದೇಗುಲವೆಂದು ಹೇಳಿದರು. ದೊಡ್ಡ ದೊಡ್ಡ ಶ್ರೀಮಂತರು, ರಾಜ-ಮಹಾರಾಜರು ದೇವಾಲಯಗಳನ್ನು ನಿರ್ಮಿಸುತ್ತಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ. ಹೀಗೆ ನಿರ್ಮಾಣಗೊಂಡ ದೇವಾಲಯಗಳ ಕೇಂದ್ರವಾದವರು ಪೂಜಾರಿಗಳು-ಪುರೋಹಿತರು. ದೇವಾಲಯಗಳಲ್ಲಿ ಪುರೋಹಿತರು ಪ್ರಬಲರಾದಾಗ ದೇವರ ಹೆಸರಿನಲ್ಲಿ ಶೋಷಣೆಗಳು ಪ್ರಾರಂಭವಾದವು. ದೇವದಾಸಿಯಂತಹ ಅನಿಷ್ಠ ಪದ್ಧತಿ ದೇವಾಲಯಗಳ ಮೂಲಕವೇ ಪ್ರಾರಂಭವಾಯಿತು. ಶ್ರೀಮಂತರು, ಪುರೋಹಿತರು ಇದರ ಫಲಾನುಭವಿಗಳಾದರು. ಇಂತಹ ಅನೇಕ ಅನಿಷ್ಠ ಪದ್ಧತಿಗಳನ್ನು ಹುಟ್ಟು ಹಾಕಿದ ದೇವಾಲಯಗಳು ಮೂಢನಂಬಿಕೆಗಳ ಕೇಂದ್ರಗಳಾದವು.

ಚಾತುವರ್ಣ ವ್ಯವಸ್ಥೆಯ ಪ್ರಕಾರ ಶೂದ್ರರಿಗೆ, ಮಹಿಳೆಯರಿಗೆ, ಅಸ್ಪೃಷ್ಯರಿಗೆ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲ. ಹೀಗಾಗಿ ದೇವಾಲಯವೆಂಬುದು ವರ್ಗ-ವರ್ಣ-ಲಿಂಗ ಅಸಮಾನತೆಯನ್ನು ಹುಟ್ಟುಹಾಕಿದ ಪ್ರಮುಖ ಶೋಷಣಾ ಕೇಂದ್ರವಾಯಿತು. ಕೆಳಜಾತಿಯವರಿಗೆ-ಕೆಳವರ್ಗದವರಿಗೆ-ಮಹಿಳೆಯರಿಗೆ ಪ್ರವೇಶ ನೀಡದ ದೇವಾಲಯಗಳು ದೇವರ ಹೆಸರಿನಲ್ಲಿ ಸುಲಿಗೆ ನಡೆಸಿದ್ದರಿಂದ ಶರಣರು ದೇವಾಲಯಗಳನ್ನು ನಿರಾಕರಿಸಬೇಕಾಯಿತು.

“ಉಳ್ಳವರು ಶಿವಾಲಯವ ಮಾಡಿಹರು
ನಾನೇನು ಮಾಡುವೆ ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರ ಹೊನ್ನ ಕಲಶವಯ್ಯಾ
ಕೂಡಲಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ”
-ಬಸವಣ್ಣ (ಸ.ವ.ಸಂ.೧, ವ:೮೨೧,೧೯೯೩)

ಬಸವಣ್ಣನವರ ಈ ವಚನದಲ್ಲಿ ಸ್ಥಾವರ ದೇವಾಲಯಗಳ ನಿರ್ಮಾಣವನ್ನು ಕೈಬಿಟ್ಟು, ದೇಹವನ್ನೇ ದೇಗುಲವನ್ನಾಗಿ ಮಾಡಿಕೊಳ್ಳುವ ಹೊಸ ವಿಚಾರವಿದೆ. ದೇಹವೇ ದೇಗುಲವಾದಾಗ, ಮನುಷ್ಯನ ಕಾಲುಗಳೇ ಕಂಬಗಳಾಗುತ್ತದೆ. ಶಿರವೇ ಬಂಗಾರದ ಕಳಶವಾಗುತ್ತದೆ. ದೇಹವೇ ದೇಗುಲವಾದಾಗ ಅದು ಚಲನಶೀಲವಾದ್ದರಿಂದ ಜಂಗಮವಾಗುತ್ತದೆ, ಕಟ್ಟಡದ ಕಲ್ಲಿನ ದೇವಾಲಯ ಸ್ಥಾವರವಾಗುತ್ತದೆ. ಇದನ್ನೇ ಬಸವಣ್ಣ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲವೆಂದು ತಿಳಿಸಿದ್ದಾರೆ. ಉಳ್ಳವರು ಶ್ರೀಮಂತರು ದೇವಾಲಯಗಳನ್ನು ಕಟ್ಟುತ್ತಾರೆ. ಆದರೆ ಬಡವರು-ಶೂದ್ರರಿಗೆ ಮಂದಿರ ಕಟ್ಟಲು ಸಾಧ್ಯವಾಗುವದಿಲ್ಲ, ಅಂತೆಯೇ ಅಂತವರು ತಮ್ಮ ದೇಹವನ್ನೇ ದೇಗುಲವನ್ನಾಗಿ ಮಾಡಿಕೊಳ್ಳಬೇಕು, ಆಗ ಪುರೋಹಿತಶಾಹಿಯೊಂದಿಗಿನ ಸಂಬಂಧ ಕಡಿದು ಹೋಗುತ್ತದೆಂದು ವಿವರಿಸಿದ್ದಾರೆ. ಶೋಷಣೆಯ ಕೇಂದ್ರಗಳಾಗಿದ್ದ ದೇವಾಲಯಗಳನ್ನು ನಿರಾಕರಿಸಿದ ಬಸವಣ್ಣ, ದೇವಾಲಯದ ಪರಿಕಲ್ಪನೆಯೇ ತಪ್ಪೆಂದು ಹೇಳಲಿಲ್ಲ, ಅದನ್ನು ಹೊರಗಿನಿಂದ ಒಳಗಡೆ ಸಿಫ್ಟ್ಮಾಡಿದ. ಆಗ ದೇಹದ ಬಗೆಗಿದ್ದ ಕೀಳರಿಮೆಗಳು ತಪ್ಪು ಭಾವನೆಗಳು ಹೊರಟು ಹೋದವು. ಈ ದೇಹವು ನಶ್ವರ, ಇದು ಮೂಳೆಮಾಂಸದ ತಡಿಕೆ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದ ಪುರೋಹಿತಶಾಹಿಯ ಮುಖಕ್ಕೆ ಹೊಡೆದಂತೆ, ಇದು ಮೂಳೆಮಾಂಸದ ತಡಿಕೆಯಲ್ಲ, ಆತ್ಮ-ಪರಮಾತ್ಮನಾಗಿ ಕಂಗೊಳಿಸುವ ಸುಂದರ ದೇವಾಲಯವೆಂದು ವಿವರಿಸಿ ಹೇಳಿದರು ಶರಣರು.

ದೇವಾಲಯದ ನಿರಾಕರಣೆಯ ಮೂಲಕ ಅನೇಕ ಸಮಸ್ಯೆಗಳನ್ನು ಶರಣರು ಬಗೆಹರಿಸಿದರು. ದೇವಾಲಯ ಶ್ರೇಷ್ಠ, ಈ ದೇಹ ಕನಿಷ್ಠವೆಂಬ ಭಾವನೆ ಇದರಿಂದ ಹೊರಟುಹೋಯಿತು. ಈ ದೇಹ ನಶ್ವರವೆಂಬ ಆತಂಕ ದೂರವಾಯಿತು. ಆತ್ಮನೇ ಪರಮಾತ್ಮನಾಗುವ ಸಾಧನ ಈ ದೇಹವೆಂದು ತಿಳಿದಾಗ ಅದರ ಬಗೆಗೆ ಸ್ವಾಭಿಮಾನ ಹುಟ್ಟಿಕೊಂಡಿತು. ಪೂಜಾರಿ-ಪುರೋಹಿತರಿಂದ ನಡೆಯುತ್ತಿದ್ದ ಶೋಷಣೆಯಿಂದ ತಪ್ಪಿಸಿಕೊಂಡಂತಾಯಿತು. ಪುಣ್ಯಕ್ಷೇತ್ರಗಳಿಗೆ ತಿರುಗುವ, ಹುಚ್ಚರಂತೆ ಅಲೆಯುವ ಸ್ಥಿತಿ ತಪ್ಪಿತು. ದೇವರ ಹೆಸರಿನಲ್ಲಿ ಕೆಲಸಬಿಟ್ಟು ದೇವಾಲಯಗಳನ್ನು ಸುತ್ತುವ ಸಮಯ ಉಳಿಯಿತು. ತಾನೇ ದೇವಾಲಯ, ತನ್ನೊಳಗೆ ದೇವನಿದ್ದಾನೆಂಬ ಹೆಮ್ಮೆ ಬೆಳೆಯಿತು. ಹೀಗೆ ಸ್ಥಾವರ ದೇವಾಲಯಗಳಿಂದ ಹೊರಬಂದ ಜನತೆಗೆ ಅನೇಕ ಲಾಭಗಳಾದವು. ಚಾತುರ್ವರ್ಣ ವ್ಯವಸ್ಥೆ ಉಳಿಯಲು, ಪುರೋಹಿತಶಾಹಿ ಬೆಳೆಯಲು, ಬಡವರ ಶೋಷಣೆ ಹೆಚ್ಚಿಸಲು ದೇವಾಲಯಗಳು ಮುಖ್ಯಕಾರಣವಾಗಿದ್ದವು. ಇಂತಹ ಸ್ಥಾವರ ದೇವಾಲಯಗಳನ್ನು ನಿರಾಕರಿಸುವುದರ ಮೂಲಕ ಶರಣರು ಕ್ರಾಂತಿಕಾರಕ ನಿರ್ಣಯಗಳನ್ನು ಕೈಕೊಂಡರು. ದೇವಾಲಯಗಳನ್ನು ತಿರಸ್ಕರಿಸಿದ್ದರೆ ಜನಸಮುದಾಯ ಶರಣರ ಅನುಮಾಯಿಗಳಾಗುತ್ತಿರಲಿಲ್ಲ. ಅಂತೆಯೇ ಅವರು ದೇವಾಲಯವನ್ನು ತಿರಸ್ಕರಿಸದೆ: ದೇಹಾಲಯವನ್ನೇ ದೇವಾಲಯವನ್ನಾಗಿ ಮಾಡುವುದರ ಮೂಲಕ ಒಂದು ಹೊಸ ಪರಿಕಲ್ಪನೆಯನ್ನು ಜನತೆಯ ಮುಂದಿಟ್ಟರು.

ಶರಣರು ಯಾವಾಗ ದೇವಾಲಯವನ್ನು ಅದರೊಳಗಿರುವ ಸ್ಥಾವರಲಿಂಗವನ್ನು ನಿರಾಕರಿಸಿದರೋ, ಆಗ ಅವರು ಪರ್ಯಾಯ ವ್ಯವಸ್ಥೆ ಮಾಡಿದರು. ದೇಹ ದೇಗುಲವಾದಾಗ, ಸ್ಥಾವರಲಿಂಗದ ಪೂಜೆ ಇಷ್ಟಲಿಂಗಕ್ಕೆ ವರ್ಗಾವಣೆಗೊಂಡಿತು. ದೇವಾಲಯವಿಲ್ಲ, ದೇವರಿಲ್ಲ ಎಂದು ಈ ಹಿಂದೆಯೇ ಚಾರ್ವಾಕರು ಹೇಳಿದ್ದರು. ದೇವರು ತಮ್ಮ ಬಳಿಯಿದ್ದಾನೆಂದು ಪುರೋಹಿತರು ದೇವರ ಹೆಸರು ಹೇಳಿ ವ್ಯಾಪಾರ ಪ್ರಾರಂಭಸಿದ್ದರು. ಏಕಕಾಲಕ್ಕೇ ಶರಣರು ಚಾರ್ವಾಕರಿಗೆ ಮತ್ತು ಪುರೋಹಿತರಿಗೆ ದೂರವಿಟ್ಟರು. ದೇವರನ್ನು ಕಾಣಲು ಪೂಜಾರಿ-ಪುರೋಹಿತನೆಂಬ ದಲ್ಲಾಳಿಯೇಕೆ? ಎಂದು ನೇರವಾಗಿ ಪ್ರಶ್ನಿಸಿದರು.

ಸ್ಥಾವರಲಿಂಗವನ್ನು ಶತಮಾನಗಳಿಂದ ಪೂಜೆಸುತ್ತಾ ಬಂದಿದ್ದ ಜನತೆಗೆ ದೇವರೇ ಇಲ್ಲವೆಂದು ಹೆದರಿಸಲಿಲ್ಲ, ಬದಲಾಗಿ ಪರ್ಯಾಯ ಮಾರ್ಗವನ್ನು ಹುಡುಕಿದರು. ಸ್ಥಾವರಲಿಂಗ, ಪೂಜೆಯ ಬದಲು ಇಷ್ಟಲಿಂಗ ಪೂಜೆಯನ್ನು ಪ್ರಾರಂಭಿಸಿದರು. ದೇಹ ದೇವಾಲಯವಾದಾಗ, ಸ್ಥಾವರಲಿಂಗದ ಪೂಜೆ ನಿಂತುಹೋಗಿ ಇಷ್ಟಲಿಂಗದ ಪೂಜೆ ಪ್ರಾರಂಭವಾಯಿತು. ಆಗ ಸಹಜವಾಗಿಯೇ ಪೂಜಾರಿಗಳು-ಪುರೋಹಿತರು ವಚನಚಳವಳಿಯ ವಿರುದ್ಧ ಕೆಲಸ ಮಾಡಿದರು. ಪುರೋಹಿತಶಾಹಿ ವ್ಯವಸ್ಥೆ ಪೂಜೆಯನ್ನೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದತ್ತು. ಶರಣರು ಬಂದು ಕಾಯಕವನ್ನೇ ಪೂಜೆಯನ್ನಾಗಿ ಪರಿವರ್ತಿಸಿದರು.

ಈ ದೇಶವ್ಯವಸ್ಥೆಯಲ್ಲಿ ಎಷ್ಟೊಂದು ಅಸಮಾನತೆ ಇತ್ತೆಂದರೆ ಜಾತಿ ಅಸಮಾನತೆ-ವರ್ಗ ಅಸಮಾನತೆ-ಲಿಂಗ ಅಸಮಾನತೆಯ ಜತೆಗೆ ಅಂಗ ಅಸಮಾನತೆಯೂ ಇತ್ತು. ಒಂದೇ ದೇಹದ ಅಂಗಾಂಗಗಳಲ್ಲಿ ಪುರೋಹಿತಶಾಹಿ ವ್ಯವಸ್ಥೆ ಅಸಮಾನತೆಯನ್ನು ಹುಟ್ಟು ಹಾಕಿತ್ತು. ಒಂದೇ ದೇಹದಲ್ಲಿ ಬಲಗೈ ಶ್ರೇಷ್ಠ-ಎಡಗೈ ಕನಿಷ್ಠ, ಬಲಗಾಲು ಶ್ರೇಷ್ಠ-ಎಡಗಾಲು ಕನಿಷ್ಠ ಎಂಬಂತಹ ಮೌಢ್ಯತೆ ಜನತೆಯಲ್ಲಿ ಮನೆಮಾಡಿಕೊಂಡಿತ್ತು. ಪೂಜೆ ಮಾಡಲು, ಪ್ರಸಾದ ಪಡೆಯಲು ಬಲಗೈಯನ್ನೇ ಬಳಸಬೇಕೆಂಬ ನಿಯಮವಿತ್ತು. ಇಂತಹ ನಿಯಮವನ್ನು ಕಿತ್ತೊಗೆದ ಶರಣರು ಎಡಗೈಯಲ್ಲಿ ಲಿಂಗಕೊಟ್ಟರು. ಇದು ಪೂಜಾವಿಧಾನದಲ್ಲಿ ಶರಣರು ಮಾಡಿದ ಕ್ರಾಂತಿಕಾರಕ ಬದಲಾವಣೆಯೆನ್ನಬಹುದಾಗಿದೆ. ಹೀಗೆ ಇಷ್ಟಲಿಂಗ ಕೊಡುವುದರ ಮೂಲಕ ಬಹುದೇವೋಪಾಸನೆಯನ್ನು ತಪ್ಪಿಸಿ, ಏಕದೇವೋಪಾಸನೆಯತ್ತ ಜನರನ್ನು ಕರೆತಂದರು. ಎಡಗೈಯಲ್ಲಿ ಲಿಂಗವನ್ನು ಕೊಡುವುದರ ಮೂಲಕ ಮೌಢ್ಯತೆಯನ್ನು ಮುರಿದು ಹಾಕಿದರು, ಕೊರಳಲ್ಲಿಯೇ ಇಷ್ಟಲಿಂಗ ಬಂದದ್ದರಿಂದ ಪೂಜಾರಿ-ಪುರೋಹಿತರು ದೂರ ಸರಿದರು. ಹೀಗೆ ಇಷ್ಟಲಿಂಗದ ಮೂಲಕ ಶರಣರು ಕ್ರಾಂತಿಯನ್ನೇ ಹುಟ್ಟುಹಾಕಿದರು. ಯಾವುದೇ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಭಕ್ತನಾದಾಗ ಇಷ್ಟಲಿಂಗ ಪಡೆಯುವ ಅಧಿಕಾರ ಹೊಂದಿದ್ದನು, ಇಷ್ಟಲಿಂಗ ಕಟ್ಟಿಕೊಂಡೂ, ಬಹುದೇವೋಪಾಸನೆ ಮಾಡಿದ, ಸ್ಥಾವರಲಿಂಗಕ್ಕೆ ಪೂಜೆಮಾಡಿದ ಭಕ್ತರನ್ನು ಶರಣರು ನೇರವಾಗಿ ವಿಡಂಬಿಸಿದರು.

“ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ
ಹೊಟ್ಟೆ ಅಡಿಯಾಗಿ ಬೀಳುವ ಲೊಟ್ಟಿ ಮೂಳರ ಕಂಡರೆ
ಮೆಟ್ಟಿದ್ದ ಎಡದ ಪಾದರಕ್ಷೆಯ ತೆಗೆದುಕೊಂಡು
ಲಟಲಟನೆ ಹೊಡೆಯೆಂದಾತ ಅಂಬಿಗರ ಚೌಡಯ್ಯ”
-ಅಂಬಿಗರ ಚೌಡಯ್ಯ (ಸ.ವ.ಸಂ.೬, ವ:೯೩, ೧೯೯೩)

ಹೀಗೆ ಬಹುದೇವೋಪಾಸನೆಯನ್ನು ನಿರಾಕರಿಸಿದ ಶರಣರು ಇಷ್ಟಲಿಂಗ ಪೂಜೆಗೆ ಪ್ರಾಧಾನ್ಯತೆ ಕೊಡುವದರ ಮೂಲಕ ಲಿಂಗಕಟ್ಟಿದ ಭಕ್ತನನ್ನೇ ದೇವರೆಂದು ತಿಳಿದರು. ಅಂಬಿಗರ ಚೌಡಯ್ಯನ ಈ ವಚನ ಕೇಳುಗರ ಕಿವಿಗೆ ಕರ್ಕಶವೆನಿಸಿದರೂ ಅದು ಆ ಕಾಲಘಟ್ಟದ ಅನಿವಾರ್ಯತೆಯಾಗಿತ್ತು. ಚೌಡಯ್ಯನಂತಹ ಶರಣರು ಹೀಗೆ ಶರಣರ ತತ್ವಗಳಿಗೆ ಬದ್ಧರಾಗದೇ ಹೋಗಿದ್ದರೆ, ಶೈವರಿಗೂ -ಶರಣರಿಗೂ ವ್ಯತ್ಯಾಸವೇ ಇರುತ್ತಿರಲಿಲ್ಲ

“ಹಿಡಿದ ಇಷ್ಟಲಿಂಗವ ಬಿಟ್ಟು ಗುಡಿಯಲಿಂಗಕ್ಕೆ ಶರಣೆಂಬ
ಲೊಟ್ಟೆಗುಡಿಹಿಗಳನೇನೆಂಬೆನಯ್ಯ ಕಲಿದೇವರದೇವಾ”
-ಮಡಿವಾಳ ಮಾಚಿದೇವ (ಸ.ವ.ಸಂ.೮, ವ:೭೮೧, ೧೯೯೩)

ಎನ್ನುವ ಮಾಚಿದೇವನೂ ಕೂಡ ಇಷ್ಟಲಿಂಗಕ್ಕೆ ಬದ್ಧನಾಗಿದ್ದು ಗುಡಿಗೆ ಹೋಗುವ ಭಕ್ತರನ್ನು ಅಪ್ರಮಾಣಿಕರು ಎಂದು ವಿಡಂಬಿಸಿದ್ದಾನೆ. ದೇಹದೊಳಗೇ ದೇವಾಲಯವಿರುವಾಗ ಬೇರೆ ದೇವಾಲಯವೇಕಯ್ಯಾ ಎಂದು ಅಲ್ಲಮಪ್ರಭು ಕೇಳಿದ್ದಾನೆ. ಹೀಗೆ ದೇಹವೇ ದೇವಾಲಯವಾದಾಗ, ಒಳಗಿನ ಪೂಜೆ ಹೇಗೆ ನಡೆಯುತ್ತದೆಂಬುದನ್ನು ಉರಿಲಿಂಗಪೆದ್ದಿ ಕುತೂಹಲಕಾರಿಯಾಗಿ ಹೇಳಿದ್ದಾನೆ.

“ಎನ್ನಂಗದಲ್ಲಿ ನಿನಗೆ ಮಜ್ಜನ
ಎನ್ನ ಲಲಾಟದಲ್ಲಿ ನಿನಗೆ ಗಂಧಾಕ್ಷತೆ
ಎನ್ನ ತುರುಬಿನಲ್ಲಿ ನಿನಗೆ ಕುಸುಮ ಪೂಜೆ
ಎನ್ನ ನೇತ್ರದಲ್ಲಿ ನಿನಗೆ ವಿಚಿತ್ರ ವಿನೋದ
ಎನ್ನ ಶ್ರೋತ್ರದಲ್ಲಿ ನಿನಗೆ ಪಂಚವಾದ್ಯ ಕೇಳಿಕೆ
ಎನ್ನ ನಾಶಿಕದಲ್ಲಿ ನಿನಗೆ ಸುಗಂಧ ಪರಿಮಳ
ಎನ್ನ ಜಿಹ್ವೆಯಲ್ಲಿ ಷಡ್ರಸಾನ್ನ ನೈವೇದ್ಯ
ಎನ್ನ ತ್ವಕ್ಕಿನಲ್ಲಿ ನಿನಗೆ ವಸ್ತಾçಲಂಕಾರ ಪೂಜೆ
ಎನ್ನ ಸಚ್ಚಿದಾನಂದ ಸೆಜ್ಜೆಗೃಹದಲ್ಲಿ
ನೀನು ಸ್ಪರ್ಷಗೈದು ನೆರೆದಿಪ್ಪೆಯಾಗಿ ನೀನಾನೆಂದೆರಡಳಿದು
ತಾನು ತಾನಾದ ಘಟವನೇನೆಂಬೆನು
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ”
-ಉರಿಲಿಂಗಪೆದ್ದಿ (ಸ.ವ.ಸಂ೬, ವ:೧೩೩೦, ೧೯೯೩)

ಹೀಗೆ ದೇಹವೇ ದೇಗುಲವಾದಾಗ ಆತ್ಮನೆಂಬ ಸತಿ ಪರಮಾತ್ಮನೆಂಬ ಪತಿಯೊಂದಿಗೆ ಕೂಡಿಕೊಂಡು ಐಕ್ಯಸ್ಥಾನ ತಲುಪುತ್ತದೆ. ಈ ವಚನದಲ್ಲಿ ದೇಹ ದೇವಾಲಯವಾದಾಗ ಎಂತಹ ಬದಲಾವಣೆಯಾಗುತ್ತದೆಂಬುದನ್ನು ತಿಳಿಸಲಾಗಿದೆ. ಇಲ್ಲಿ ಸತಿ-ಪತಿಭಾವದ ಭಕ್ತಿ ಬೆಳೆದು ಆತ್ಮ-ಪರಮಾತ್ಮನಾಗಿ ಕಾಣಿಸಿಕೊಳ್ಳುತ್ತಾನೆ. ಬೇರೆ ಬೇರೆ ದೇವಾಲಯಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಹೋಗುವವರನ್ನು ಕಂಡು ಅಂಬಿಗರ ಚೌಡಯ್ಯ ತನ್ನ ಇನ್ನೊಂದು ವಚನದಲ್ಲಿ ಕಟುವಾಗಿ ವಿಡಂಬಿಸಿದ್ದಾನೆ.

“ಕಾಶಿಯಾತ್ರೆಗೆ ಹೋದೆವೆಂಬ
ಹೇಸಿಮೂಳರ ಮಾತ ಕೇಳಲಾಗದು
ಕೇದಾರಕ್ಕೆ ಹೋದೆವೆಂಬ
ಹೇಸಿಹೀನರ ನುಡಿಯನಾಲಿಸಲಾಗದು
ಸೇತುಬಂಧ ರಾಮೇಶ್ವರಕ್ಕೆ ಹೋದೆವೆಂಬ
ರ‍್ವಹೀನರ ಮುಖವ ನೋಡಲಾಗದು
ಪರ್ವತಗಳಿಗೆ ಹೋದೆವೆಂಬ
ಪಂಚಮಹಾಪಾತಕರ ಮುಖವ ನೋಡಲಾಗದು......”
-ಅಂಬಿಗರ ಚೌಡಯ್ಯ (ಸ.ವ.ಸಂ.೬, ವ:೧೦೧, ೧೯೯೩)

ದೇಹದಲ್ಲಿಯೇ ದೇವರಿದ್ದಾನೆ. ಆದ್ದರಿಂದ ದೇಹವೆಂಬ ದೇವಾಲಯ ಬಿಟ್ಟು ಅನ್ಯ ದೇವಾಲಯಕ್ಕೆ ಹೋಗಬಾರದೆಂದು ಶರಣಧರ್ಮ ಹೇಳಿದರೂ ಆ ಕಾಲದಲ್ಲಿಯೂ ಜನ ಕೇಳುತ್ತಿರಲಿಲ್ಲ. ಬಹುದೇವೋಪಾಸನೆಯ ನೆಲೆಬೀಡಾದ ಕರ್ನಾಟಕದಲ್ಲಿ ಏಕದೇವೋಪಸನೆಯನ್ನು ಮೊದಲ ಬಾರಿಗೆ ಶರಣರು ಕಡ್ಡಾಯ ಮಾಡಿದಾಗ, ಅನೇಕ ಜನ ಇವರ ಮಾತಿಗೆ ಗೌರವ ಕೊಡಲಿಲ್ಲ. ಮತ್ತೆ ಮತ್ತೆ ಹೀಗೆ ದೇವಾಲಯಗಳಿಗೆ-ಪುಣ್ಯಕ್ಷೇತ್ರಗಳಿಗೆ ಹೋಗುವ ಭಕ್ತರನ್ನು ನೋಡಿ ಚೌಡಯ್ಯನಂತಹ ಬದ್ಧತೆಯುಳ್ಳ ಶರಣರಿಗೆ ಸಹಿಸಲಿಕ್ಕಾಗಲಿಲ್ಲ. ಅಂತಯೇ ಆತ ಇಂತವರನ್ನು ಹೇಸಿಮೂಳರು, ಹೇಸಿಹೀನರು, ರ‍್ವಹೀನರು, ಪಂಚ ಮಹಾಪಾತರೆಂದು ಕರೆದಿದ್ದಾನೆ. ಆ ವಚನದಲ್ಲಿ ಮುಂದುವರೆದು ಚೌಡಯ್ಯ ಅದಕ್ಕೆ ಸಮಜಾಯಿಷಿ ಕೊಡುತ್ತಾನೆ. ಕಾಯವೇ-ಕಾಶಿಯಾಗಿರುವಾಗ, ಒಡಲೇ-ಕೇದಾರವಾಗಿರುವಾಗ, ಹಸ್ತವೇ-ರಾಮೇಶ್ವರವಾಗಿರುವಾಗ, ಶಿರವೇ-ಶ್ರೀಶೈಲ ಪರ್ವತವಾಗಿರುವಾಗ ಮತ್ತೇಕೆ ಪುಣ್ಯಕ್ಷೇತ್ರಗಳಿಗೆ ಹೋಗುವುದು? ಹೋಗಿ ಹಣವನ್ನೇಕೆ ವ್ಯಯ ಮಾಡುವುದು? ಎಂದು ಕೇಳಿದ್ದಾನೆ. ಇಂತವರನ್ನೆಲ್ಲಾ ಕತ್ತೆಮೂಳರು-ನೀಚಮೂಳರು ಎಂದು ಚೌಡಯ್ಯ ವಿಡಂಬಿಸಿದ್ದಾನೆ.

ನಿಜವಾದ ಶರಣನಿಗೆ ತನುವೇ ಬ್ರಹ್ಮ, ಜ್ಮಾನವೇ ಆತ್ಮವೆಂದು ಸಿದ್ಧರಾಮ ತನ್ನ ವಚನವೊಂದರಲ್ಲಿ ಹೇಳಿದ್ದಾನೆ. ತನುವಿನಲ್ಲಿರುವ, ಮನದಲ್ಲಿ ಮನೆಮಾಡಿಕೊಂಡಿರುವ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳೆಂಬ ಷಡ್‌ವೈರಿಗಳನ್ನು ಹೊರಗೆ ಹಾಕಿದಾಗ ಮಾತ್ರ ದೇಹ-ದೇವಾಲಯವಾಗುತ್ತದೆಂದು ಶರಣರು ಸ್ಪಷ್ಟಪಡಿಸಿದರು, ಇಂತಹ ವಿಷಯಂಗಳ ಒಳಗಿಟ್ಟುಕೊಂಡು ಪೋಷಿಸಿದರೆ ದೇಹವು ಮೂಳೆಮಾಂಸದ ತಡಿಕೆಯಾಗುತ್ತದೆ. ಅವುಗಳನ್ನೆಲ್ಲಾ ಹೊರಗೆ ಹಾಕಿ ಒಳಗಡೆ ಪಂಚಾಚಾರಗಳನ್ನು ತುಂಬಿಕೊಂಡಾಗ, ಸದ್ಗುಣಗಳನ್ನು ಬೆಳೆಸಿಕೊಂಡಾಗ ಈ ದೇಹವೇ ದೇವಾಲಯವಾಗುತ್ತದೆಂದವರು ತಿಳಿಸಿ ಹೇಳಿದರು.

ದೇಹಾಲಯ-ದೇವಾಲಯವಾಗುವುದು ಸುಲಭದ ಕೆಲಸವಲ್ಲ. ಮಲ-ಮೂತ್ರ ತುಂಬಿಕೊಂಡಿರುವ ದೇಹಗಳಲ್ಲಿ ಅಷ್ಟಾವರಣಗಳನ್ನು ಸ್ಥಾಪಿಸಿಬೇಕು. ಷಟ್‌ಸ್ಥಲಗಳ ಮೂಲಕ ಅದನ್ನು ಸಾಧಿಸಬೇಕು. ಕಾಮ-ಕ್ರೋಧಗಳ ಬದಲು ಪ್ರೀತಿ-ದಯೆ-ಸಹನೆ- ತ್ಯಾಗದಂತಹ ಗುಣಗಳು ನೆಲೆಗೊಳ್ಳಬೇಕು. ಆಗ ಮಾತ್ರ ದೇಹವೆಂಬುದು ದೇಗುಲವಾಗುತ್ತದೆ.

ದೇವಾಲಯಗಳು ಮುಗ್ಧ ಭಕ್ತರ ಶೋಷಣೆಯ ಕೇಂದ್ರಗಳಾಗಿದ್ದಂತಹ ಸಂದರ್ಭದಲ್ಲಿ ಶರಣರು ಅವರಿಗಾಗಿ ಪರ್ಯಾಯ ದೇವಾಲಯಗಳನ್ನು ಕಟ್ಟಿಸದೆ; ಇದ್ದ ದೇವಾಲಯಗಳಿಗೆ ಪ್ರವೇಶ ಕೊಡಿಸಲು ಹೋಗದೆ; ಪ್ರತಿಯೊಬ್ಬರೂ ತಮ್ಮ ತಮ್ಮ ದೇಹಗಳನ್ನೇ ದೇವಾಲಯಗಳನ್ನಾಗಿ ಮಾಡಿಕೊಳ್ಳುವ ಮಾರ್ಗವನ್ನು ತೋರಿಸಿದರು. ಭಾರತದಂತಹ ಧರ್ಮಗಳ ಬೀಡಾದ ದೇಶದಲ್ಲಿ, ದೇವಾಲಯಗಳ ಕೇಂದ್ರವಾಗಿರುವ ನಾಡಿದಲ್ಲಿ ಹೀಗೆ ಏಕಾಏಕಿ ದೇವಾಲಯಗಳನ್ನು ನಿಷೇಧಿಸಿದ್ದು ಶರಣರ ಬಹುದೊಡ್ಡ ಕ್ರಾಂತಿಯಾದಾರೂ, ಜನರು ಅವರ ಮಾತುಗಳನ್ನು ಕೇಳಲಿಲ್ಲವೆಂಬುದು ಅಷ್ಟೇ ಸತ್ಯ. ಇಂದು ಓಣಿಗೊಂದು ದೇವಾಲಯ, ಊರಿಗೊಬ್ಬ ಜಗದ್ಗುರು ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಶರಣರ ದೇವಾಲಯದ ಪರಿಕಲ್ಪನೆ ಮತ್ತೆ ಪ್ರಸ್ತುತವೆನಿಸುತ್ತದೆ.

“ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ?
ಎರಡಕ್ಕೆ ಹೇಳಲಿಲ್ಲಯ್ಯಾ
ಗುಹೇಶ್ವರಾ ನೀನು ಕಲ್ಲಾದಡೆ ಏನೆಪ್ಪೆನು?
-ಅಲ್ಲಮಪ್ರಭು (ಸ.ವ.ಸಂ೨, ವ:೨೧೩)

“ದೇಹವೇ ದೇಗುಲ” ವೆಂದು ಬಸವಣ್ಣ ಹೇಳಿದರೆ, “ದೇಹದೊಳಗೆ ದೇವಾಲಯವಿದೆ” ಎಂದು ಅಲ್ಲಮಪ್ರಭು ಹೇಳಿದ್ದಾನೆ. ಹೀಗೆ ದೇಹದೊಳಗೆ ದೇವಾಲಯವಿದ್ದಾಗ ಮತ್ತೆ ಬೇರೆ ದೇವಾಲಯವೇಕೆ ಬೇಕೆಂದು ಅಲ್ಲಮಪ್ರಭು ಪ್ರಶ್ನಿಸಿದ್ದಾನೆ. ಪ್ರಭು ಇಲ್ಲಿ ಸ್ವತಃ ಗುಹೇಶ್ವರನನ್ನೇ ಪ್ರಶ್ನಿಸುತ್ತಿದ್ದಾನೆ. “ಗುಹೇಶ್ವರಾ ನೀನೇ ಕಲ್ಲಾದರೆ ಹೇಗೆ?” ಈ ಪ್ರಶ್ನೆಯಲ್ಲಿ ಅನೇಕ ಅರ್ಥಗಳಿವೆ. ಅಂದರೆ ದೇವರು ಸ್ಥಾವರವಲ್ಲ, ಗುಹೇಶ್ವರ ಸ್ಥಾವರನಲ್ಲ, ನಿಜವಾದ ಗುಹೇಶ್ವರ ದೇಹವೆಂಬ ದೇವಾಲಯದಲ್ಲಿದ್ದಾನೆ. ನಿತ್ಯವೂ ಸಂಚರಿಸುವ ಜಂಗಮನಾಗಿದ್ದಾನೆ, ಆತ್ಮ-ಪರಮಾತ್ಮನನ್ನು ಜೋಡಿಸುವ ಇಷ್ಟಲಿಂಗವಾಗಿದ್ದಾನೆಂಬ ಅರ್ಥಗಳು ಇಲ್ಲಿವೆ. ಹೀಗೆ ಅಲ್ಲಮ ಕೂಡಾ ದೇಹವೇ ದೇಗುಲವಾಗಿದೆಯೇ ಹೊರತು, ಲಿಂಗಾಯತರಿಗೆ ಬೇರೆ ದೇವಾಲಯವಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ.

“ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಕ್ಷೇತ್ರ ತೀರ್ಥಕ್ಕೆ ಹೋಗಲೇಕಯ್ಯ?
ಅಂಗದ ಮೇಲಣ ಲಿಂಗ ಕಲ್ಲತಾಗಿದರೆ
ಆವುದ ಘನವೆಂಬೆನಾವುದ ಕಿರಿದೆಂಬೆ!
ತಾಳ ಸಂಪುಟಕ್ಕೆ ಬಾರದ ಘನವನರಿಯದೆ ಕೆಟ್ಟರು
ಜಂಗಮದರ್ಶನ ಶಿರಮುಟ್ಟಿ ಪಾವನ, ಲಿಂಗದರ್ಶನ ಕರಮುಟ್ಟಿ ಪಾವನ
ಹತ್ತಿರಿದ್ದ ಲಿಂಗವ ಹುಸಿಮಾಡಿ, ದೂರಲಿದ್ದ ಲಿಂಗಕ್ಕೆ ನಮಸ್ಕರಿಸುವ
ವ್ರತಗೇಡಿಯ ತೋರದಿರಯ್ಯಾ! ಕೂಡಲಚೆನ್ನಸಂಗಯ್ಯಾ”
-ಚೆನ್ನಬಸವಣ್ಣ (ಸ.ವ.ಸಂ.೩, ವ:೭೮)

ಅಂಗದ ಮೇಲೆ ಲಿಂಗವಿದ್ದ ಬಳಿಕ ಕ್ಷೇತ್ರತೀರ್ಥದ ಅಗತ್ಯವಿಲ್ಲವೆಂದು ತಿಳಿಸಿದ್ದಾನೆ. ತನ್ನಲ್ಲಿದ್ದ ಲಿಂಗವ ಹುಸಿಮಾಡಿ ದೂರದಲ್ಲಿರುವ ಸ್ಥಾವರಲಿಂಗಕ್ಕೆ ನಮಸ್ಕರಿಸುವವರನ್ನು ವ್ರತಗೇಡಿಗಳೆಂದು ಕರೆದಿದ್ದಾನೆ. ದೇಹದ ಮೇಲಿರುವ ಲಿಂಗವು ಪೂಜೆಯ ವೇಳೆಗೆ ಕರಸ್ಥಲಕ್ಕೆ ಬರುತ್ತದೆ. ಆಗ ಕರಮುಟ್ಟಿ ಪಾವನವಾಗುತ್ತದೆ. ತನ್ನೊಳಗೇ ಇರುವ ದೇವರನ್ನು ಬಿಟ್ಟು ದೇವಾಲಯಗಳಿಗೆ ಹೋಗಿ ದೇವರುಗಳನ್ನು ಹುಡುಕುವವರಿಗೆ ವ್ರತಗೇಡಿಗಳೆಂದು ಕರೆದಿರುವುದು ಸೂಕ್ತವಾದುದಾಗಿದೆ.

“ದೇಹವೆಂಬ ದೇವಾಲಯದಲ್ಲಿ
ದೇವಾಲಯದವರ ಮೂವರು ಮಂದಿಯ ಕಾಣದೆ
ಕಂಗೆಟ್ಟಿದ್ದೇವೆ ಗುರುವೆ.
ದೇಗುಲದೊಡೆಯರ ಕರೆತಂದು ದೇವಾಲಯದಂತುವ ತೋರಾ
ಕಪಿಲಸಿದ್ಧ ಮಲ್ಲಿನಾಥಯ್ಯಾ”
-ಸಿದ್ಧರಾಮ (ಸ.ವ.ಸಂ.೪, ವ:೪೯೨)

ಸಿದ್ಧರಾಮನೂ ಕೂಡ ದೇಹವೇ ದೇಗುಲವೆಂದು ಒಪ್ಪಿಕೊಳ್ಳುತ್ತಲೇ ಆ ದೇವಾಲಯದಲ್ಲಿ ಮೂರುಮಂದಿಯಿದ್ದಾರೆಂದು ಹೇಳುತ್ತಾನೆ. ಗುರು-ಲಿಂಗ-ಜಂಗಮರೆಂಬ ಮೂರುಮಂದಿ ದೇಹವೆಂಬ ದೇವಾಲಯದೊಳಗೆ ಇದ್ದಾರೆ. ಅವರನ್ನು ಕಾಣದೆ ಕಂಗೆಟ್ಟೆದ್ದೇನೆಂದು ಹೇಳುವ ಸಿದ್ಧರಾಮನು ದೇಹದ ಒಡೆಯರ ಮೂಲಕ ದೇವಾಲಯದ ಮಹತ್ವವನ್ನು ತೋರಿಸೆಂದು ಕೇಳಿಕೊಂಡಿದ್ದಾನೆ. ಗುರು-ಲಿಂಗ-ಜಂಗಮ ಮೂರ್ತರೂಪಗಳಾದರೆ ಅರಿವು-ಆಚಾರ-ಅನುಭಾವ ಈ ಮೂರೂ ಅಮೂರ್ತಗಳಾಗಿವೆ. ಈ ಮೂರು ಅಮೂರ್ತಗಳು ದೇಹವೆಂಬ ದೇವಾಲಯದಲ್ಲಿವೆ. ಇವುಗಳನ್ನು ಕಾಣಬೇಕಾದರೆ ದೇಗುಲದೊಡೆಯನಾದ ಆತ್ಮನ ಸಾಧನೆ ಬಹುಮುಖ್ಯವಾಗುತ್ತದೆ.

“ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು
ದೇಹದೊಳಗೆ ಮನ ಉಳ್ಳನ್ನಕ್ಕರ ಅಭಿಮಾನ ಬಿಡದು
ನೆನಹಿನ ವ್ಯಾಪ್ತಿ ಬಿಡದು
ದೇಹ ಮನವೆರಡೂ ಇದ್ದಲ್ಲಿ ಸಂಸಾರ ಬಿಡದು
ಭವದ ಕುಣಿಕೆಯುಳ್ಳನ್ನಕ್ಕರ ವಿಧಿವಶ ಬಿಡದು
ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ
ದೇಹವಿಲ್ಲ, ಮನವಿಲ್ಲ, ಅಭಿಮಾನವಿಲ್ಲ ಕಾಣಾ ಮರುಳೆ”
-ಅಕ್ಕಮಹಾದೇವಿ (ಸ.ವ.ಸಂ.೫, ವ:೨೪೧)

ದೇಹವು ದೇವಾಲಯವಾಗಬೇಕಾದರೆ ಸಾಧಕನು ನಿರಂತರ ಸಾಧನೆ ಮಾಡಬೇಕಾಗುತ್ತದೆ. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ತುಂಬಿಕೊಂಡವರ ದೇಹಗಳು ಎಂದಿಗೂ ದೇವಾಲಯಗಳಾಗುವದಿಲ್ಲವೆಂದು ಅಕ್ಕಮಹಾದೇವಿ ಹೇಳಿದ್ದಾಳೆ. ದೇಹವೆಂದಾಕ್ಷಣ, ನಾಚಿಕೆ, ಅಹಂಕಾರ, ಹಮ್ಮುಬಿಮ್ಮು, ಇವೆಲ್ಲ ಇದ್ದದ್ದೆ. ಆದರೆ ಇವುಗಳನ್ನು ಬಿಡದ ಹೊರತು ದೇಹವು ದೇವಾಲಯವಾಗುವದಿಲ್ಲ. ದೇಹವು ದೇವಾಲಯವಾಗಬೇಕಾದರೆ ಸೈದ್ಧಾಂತಿಕ ಬದ್ಧತೆ ಬೇಕಾಗುತ್ತದೆ.

ದೇಹದ ಮೂಲಕ, ಪಂಚೇಂದ್ರಿಯಗಳ ಮೂಲಕ ಸುಖ-ಸಂತೋಷವನ್ನು ಪಡೆದುಕೊಳ್ಳುವವರೇ ಹೆಚ್ಚಾಗಿದ್ದಾರೆ. ಹೀಗಿರುವ ಎಲ್ಲರೂ ತಮ್ಮ ದೇಹಗಳನ್ನು ದೇವಾಲಯ ಮಾಡಿಕೊಳ್ಳಲು ಸಾಧ್ಯವಾಗುವದಿಲ್ಲ. ತಮ್ಮ ದೇಹಗಳನ್ನು ದೇವಾಲಯವ ಮಾಡಿಕೊಳ್ಳದವರು ಸಹಜವಾಗಿಯೇ ದೇವಾಲಯಗಳಿಗೆ ಹೋಗುತ್ತಾರೆ. ನಿಜವಾದ ಶರಣನು ತನ್ನ ದೇಹ, ಮನಸ್ಸು, ಅಭಿಮಾನಗಳನ್ನೆಲ್ಲ ಆತ್ಮಕ್ಕೆ

ಅರ್ಪಣೆ ಮಾಡಬೇಕಾಗುತ್ತದೆ. ಆಗ ಅವಾವೂ ಕಾಡುವದಿಲ್ಲವೆಂದು ಅಕ್ಕಮಹಾದೇವಿ ಹೇಳಿದ್ದಾಳೆ. ಮನಸ್ಸು-ಭಾವನೆ ಶುದ್ಧವಿದ್ದಾಗ ತನು ಶುದ್ಧವಾಗುತ್ತದೆ. ನಡೆ-ನುಡಿ ಒಂದಾದಾಗ ದೇಹ ಶುದ್ಧವಾಗುತ್ತದೆ. ಹೀಗೆ ದೇಹಶುದ್ಧವಾದವರು ಸಿಗುವದು ತುಂಬ ವಿರಳವೆಂದು ಅಕ್ಕಮಹಾದೇವಿ ಮತ್ತೊಂದು ವಚನದಲ್ಲಿ ಹೇಳಿದ್ದಾಳೆ. ಶಿವಭಕ್ತರೊಕ್ಕದ ಕೊಂಡೆನ್ನ ತನು ಶುದ್ಧವಾಯಿತ್ತೆಂದು ತಿಳಿಸಿದ್ದಾಳೆ.

“ತನುವಿಂಗೆ ಕ್ರೀ, ಆತ್ಮಂಗೆ ವ್ರತ
ಆ ವ್ರತಕ್ಕೆ ನಿಶ್ಚಯ ಕರಿಗೊಂಡು
ಬಾಹ್ಯದ ಕ್ರೀ, ಅರಿವಿನ ಆಚರಣೆ
ಭಾಷೆ ಓಸರಿಸದೆ ನಿಂದಾತನೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು”
-ಅಕ್ಕಮ್ಮ (ಸ.ವ.ಸಂ.೫, ವ:೪೯೩)

ಅಕ್ಕಮ್ಮ ತನ್ನ ವಚನದಲ್ಲಿ ಕ್ರಿಯೆಗೆ ಮತ್ತು ವ್ರತಕ್ಕೆ ಮಹತ್ವ ನೀಡಿದ್ದಾಳೆ. ತನು ಮಾಡುವ ಕ್ರಿಯೆ ಬಹಳ ಮಹತ್ವದ್ದಾಗಿದೆ. ಆತ್ಮನಿಗೆ ವ್ರತ ಮುಖ್ಯವಾದುದ್ದಾಗಿದೆ. ತನು ಒಳ್ಳೆಯ ಕ್ರಿಯೆಯಲ್ಲಿ ತೊಡಗಬೇಕಾದರೆ, ಆತ್ಮನಲ್ಲಿ ವ್ರತಬದ್ಧತೆ ಇರಬೇಕಾಗುತ್ತದೆ. ಹಾಗೆ ವ್ರತಬದ್ಧತೆ ಬಂದಾಗ, ತನುವಿನ ಕ್ರಿಯೆ ಸತ್‌ಕ್ರಿಯೆಯಾಗುತ್ತದೆ. ಆಗ ಆಚಾರವೇ ಪ್ರಾಣಲಿಂಗವಾಗುತ್ತದೆ. ನಡೆ-ನುಡಿ ಒಂದಾಗುತ್ತದೆ. ಆಗ ಮಾತ್ರ ದೇಹ ದೇವಾಲಯವಾಗುತ್ತದೆ. ಅಕ್ಕಮ್ಮ ತನ್ನ ವಚನಗಳಲ್ಲಿ ವ್ರತದ ಬಗೆಗೆ ವಿವರವಾಗಿ ಹೇಳಿದ್ದಾಳೆ. ವ್ರತ ಎಂದರೆ ಇಲ್ಲಿ ಸಾಂಪ್ರದಾಯಿಕ ಮಡಿ-ಮೈಲಿಗೆಗಳಲ್ಲ, ವ್ರತವೆಂದರೆ ಶರಣಸಿದ್ಧಾಂತಗಳ ಬದ್ಧತೆಯಾಗಿದೆ. ಇಂತಹ ಬದ್ಧತೆಯನ್ನೇ ಅಕ್ಕಮ್ಮ ವ್ರತವೆಂದು ಹೇಳಿದ್ದಾಳೆ.

“ತನುವ ಕರಗಿಸಿ, ಹರಿವ ಮನವ ನಿಲಿಸಿ
ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ
ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣನ
ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ?”
-ಹಡಪದ ಲಿಂಗಮ್ಮ (ಸ.ವ.ಸಂ.೫, ವ:೨೫೩)

ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ ಈ ವಚನದಲ್ಲಿ ದೇಹ ದೇಗುಲವಾಗಬೇಕಾದರೆ ಏನು ಮಾಡಬೇಕಾಗುತ್ತದೆಂಬುದನ್ನು ಹೇಳಿದ್ದಾಳೆ. ಮೊದಲು ತನುವನ್ನು ಕರಗಿಸಬೇಕು. ತನುವನ್ನು ಕರಗಿಸುವದೆಂದರೆ ಡಯಟ್ ಮಾಡಿ ತೆಳ್ಳಗಾಗಿಸುವದಲ್ಲ. ತನು ಕರಗಬೇಕಾದರೆ ನಿತ್ಯ ಕಾಯಕ ಮಾಡಬೇಕು. ಕಾಯಕದಿಂದ ತನು ಕರಗುತ್ತದೆ, ದಾಸೋಹದಿಂದ ಮನಸ್ಸು ದೊಡ್ಡದಾಗುತ್ತದೆ. ಆಗ ದೇಹದಲ್ಲಿ ಅಂಗಗುಣವಳಿದು ಲಿಂಗಗುಣವಳವಡುತ್ತದೆ. ಆಗ ಭಾವವಳಿದು ಬಯಕೆ ಸವೆದು ಭಕ್ತನಾದವ ಶರಣನಾಗುತ್ತಾನೆ. ಇಂತಹ ಶರಣರ ಮಹಾತ್ಮೆಯನ್ನು ಈ ಜಗದ ಜನಸಾಮಾನ್ಯರೆತ್ತಬಲ್ಲರೆಂದು ಲಿಂಗಮ್ಮ ಪ್ರಶ್ನಿಸಿದ್ದಾಳೆ. ಅಂದರೆ ದೇಹವನ್ನು ದೇವಾಲಯವನ್ನಾಗಿ ಮಾಡಿಕೊಳ್ಳುವುದು ಅಷ್ಟು ಸುಲಭವಾದದ್ದಲ್ಲ. ಶರಣರು ಮಾತ್ರ ತಮ್ಮ ಸಾಧನೆಯಿಂದ ದೇಹವನ್ನು ದೇಗುಲವನ್ನಾಗಿ ಮಾಡಿಕೊಂಡಿದ್ದಾರೆಂದು ಲಿಂಗಮ್ಮ ತಿಳಿಸಿದ್ದಾಳೆ.

ಲಿಂಗಮ್ಮ ತನ್ನ ಇನ್ನೊಂದು ವಚನದಲ್ಲಿ “ತನುವೆಂಬ ರಾಜ್ಯಕ್ಕೆ ಮನವೆಂಬ ಅರಸ” ಎಂದು ಹೇಳಿದ್ದಾಳೆ. ಈ ಅರಸನಿಗೆ ನೋಟ-ಬೇಟವೆಂಬರಡು ಕಣ್ಣುಗಳಿವೆ. ಅಷ್ಟಮದಗಳು ದೇಹದ ತುಂಬ ತುಂಬಿಕೊಂಡಿದೆ. ಷಡ್‌ವೈರಿಗಳು ಅಟ್ಟಹಾಸ ಮಾಡುತ್ತಲಿವೆ. ಇಂತಹ ದೇಹ ಎಂದಿಗೂ ದೇವಾಲಯವಾಗುವದಿಲ್ಲವಾದ್ದರಿಂದ ದೇಹವನ್ನು ದೇವಾಲಯನ್ನಾಗಿಸಿಕೊಳ್ಳುವುದು ಸುಲಭದ ಮಾರ್ಗವಲ್ಲವೆಂದು ಶರಣರು ತಿಳಿಸಿದ್ದಾರೆ. ದೇಹದಲ್ಲಿರುವ ಮಲ-ಮೂತ್ರಗಳು ಸಹಜವಾದಂತವುಗಳು, ಅವು ನಿತ್ಯ ಹೊರಹೋಗಿ ದೇಹ ಸ್ವಚ್ಛವಾಗುತ್ತದೆ. ಆದರೆ ಅಷ್ಟಮದ-ಷಡ್‌ವೈರಿಗಳೆಂಬ ಮಲತ್ರಯಗಳು ಕೆಟ್ಟ ಮಲಮೂತ್ರಗಳಾಗಿವೆ. ಇಂತಹ ಕೆಟ್ಟ ಮಲಮೂತ್ರಗಳನ್ನು ಕಳೆದುಕೊಳ್ಳದ ಹೊರತು ದೇಹ ಶುದ್ಧವಾಗಲಾರದು, ಶುದ್ಧವಾಗದ ದೇಹವು ದೇವಾಲಯವಾಗಲಾರದು. ಶರಣರು “ದೇಹವೇ ದೇಗುಲ” ವೆಂದು ಹೇಳುವದರ ಜತೆಗೆ, ಆ ದೇಹವನ್ನು ಹೇಗೆ ದೇವಾಲಯವನ್ನಾಗಿ ಮಾಡಿಕೊಳ್ಳಬೇಕೆಂಬುದರ ಬಗೆಗೆ ವಿವರವಾಗಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಶರಣರು ಅಷ್ಟಾವರಣ-ಷಟ್‌ಸ್ಥಲ-ಪಂಚಾಚಾರದಂತಹ ಸಿದ್ಧಾಂತಗಳನ್ನು ಕಟ್ಟಿಕೊಟ್ಟಿದ್ದಾರೆ. ಶರಣರ ಈ ಸಿದ್ಧಾಂತಗಳನ್ನು ಕ್ರಿಯಾರೂಪಕ್ಕೆ ತಂದಾಗ ಈ ದೇಹವು ದೇವಾಲಯವಾಗುತ್ತದೆ.

ಕಾಯಕ-ದಾಸೋಹ-ಸಮಾನತೆಯಂತಹ ಸಾಮಾಜಿಕ ಸಿದ್ಧಾಂತಗಳನ್ನು ಒಪ್ಪಿಕೊಂಡರೆ ಆತ್ಮವೇ ಪರಮಾತ್ಮನಾಗುತ್ತಾನೆ. ಹೀಗೆ ಲಿಂಗಾಯತರ ದೇವಾಲಯದ ಪರಿಕಲ್ಪನೆ ತುಂಬ ವಿಶಿಷ್ಟವಾದುದಾಗಿದೆ. ಉಳಿದ ಧರ್ಮಿಯರ ದೇವಾಲಯದ ಪರಿಕಲ್ಪನೆ ಸ್ಪಷ್ಟವಾಗಿದೆ. ಹೊರಗಿನ ಗುಡಿ-ಗುಂಡಾರಗಳು-ಪುಣ್ಯಕ್ಷೇತ್ರಗಳು ಅವರ ದೇವಸ್ಥಾನಗಳಾಗಿವೆ. ಹೀಗೆ ಹೊರಗಿನ ದೇವಾಲಯಗಳಿಗೆ ಪುಣ್ಯಕ್ಷೇತ್ರಗಳಿಗೆ ಹೋಗುವದು ಸುಲಭ. ಆದರೆ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳುವದು ಕಷ್ಟ. ಇದು ಶರಣರಿಗೆ ಮಾತ್ರ ಸಾಧ್ಯವಾಗುತ್ತದೆ. ಹೀಗೆ ಶರಣರು ಹೇಳಿದ ಧರ್ಮ-ದೇವರು-ದೇವಾಲಯಗಳು ತುಂಬ ವಿಶಿಷ್ಟವಾಗಿವೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:

ಈ ಅಂಕಣದ ಹಿಂದಿನ ಬರಹಗಳು:
ಪ್ರಾಣಲಿಂಗಿಸ್ಥಲ
ಶರಣಸ್ಥಲ
ಭಕ್ತಿಸ್ಥಲದಲ್ಲಿ ಬಯಲಾದವರು ಬಸವಣ್ಣನವರು
ಗಣಾಚಾರ
ಐಕ್ಯಸ್ಥಲ
ಪ್ರಸಾದಿಸ್ಥಲ
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...