Date: 03-10-2022
Location: ಮೈಸೂರು
ಕಾವ್ಯ ಎನ್ನುವುದು ಸುತ್ತಲಿನ ಸಮಾಜದ ಆಗುಹೋಗುಗಳ ಬಗ್ಗೆ ಒಂದು ಸಹೃದಯ ಮನಸ್ಸಿನ ಅಭಿವ್ಯಕ್ತಿ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ಹಿರಿಯ ಲೇಖಕ ಡಾ.ಡಿ. ಕೆ ರಾಜೇಂದ್ರ ಅಭಿಪ್ರಾಯಪಟ್ಟರು.
ಭಾನುವಾರ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾಬಳಗ ಮೈಸೂರು ನಗರದ ನಮನ ಕಲಾಮಂಟಪದಲ್ಲಿ ಆಯೋಜಿಸಿದ್ದ ‘ಕಾವ್ಯದಸರಾ’ ಎಂಬ ದಸರಾ ಕವಿಗೋಷ್ಠಿ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಡಿ.ಕೆ ರಾಜೇಂದ್ರ ಮಾತನಾಡಿ, ಸೂಕ್ಷ್ಮ ಸಂವೇದನೆ ಇರುವ ವ್ಯಕ್ತಿ ಮಾತ್ರ ಕವಿಯಾಗಬಲ್ಲ. ತನ್ನೊಳಗಿನ ಭಾವನೆಗಳನ್ನು ಅಭಿವ್ಯಕ್ತಿಸಲು ಒಂದು ಮಾಧ್ಯಮ ಕವಿತೆಯಾದರೆ ಅದನ್ನು ಪ್ರಕಾಶನಗೊಳಿಸುವ ಕೆಲಸವನ್ನು ಸಾಹಿತ್ಯ ಸಂಘಟನೆಗಳು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ದಸರಾ ಕವಿಗೋಷ್ಠಿ ಆಯೋಜಿಸಿರುವುದು ಸಂತಸಕರ ಸಂಗತಿ ಎಂದು ನುಡಿದರು.
ಹೊಯ್ಸಳ ಕನ್ನಡ ಸಂಘ ಕಳೆದ 20 ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಅದರಲ್ಲೂ ದಸರಾ ಕವಿಗೋಷ್ಠಿಯಲ್ಲಿ ಕವಿಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಮಹಾಕವಿ ಡಾ. ಲತಾರಾಜಶೇಖರ್, ಎಲೆಮರೆಯ ನೂರಾರು ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಹೊಯ್ಸಳ ಕನ್ನಡ ಸಂಘ ಮಾಡಿದೆ. ಮೂರು ದಶಕಗಳಿಂದ ಕನ್ನಡದ ಕೆಲಸ ಮಾಡುತ್ತಿರುವ ಸಂಸ್ಥೆ ದಸರೆಯ ಸಂದರ್ಭದಲ್ಲಿ ಕವಿಗೋಷ್ಠಿಯ ಮೂಲಕ ಅವಕಾಶ ನೀಡಿದ ಅದೆಷ್ಟೋ ಪ್ರತಿಭೆಗಳು ಇಂದು ಖ್ಯಾತ ಕವಿಯಾಗಿದ್ದಾರೆ ಎಂದರು.
ವಿದ್ಯೋದಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಸಿ. ಜಿ ಉಷಾದೇವಿ ಮಾತನಾಡಿ, ಸಂಸ್ಕೃತಿ, ಸಂಘಟನೆ, ಪತ್ರಿಕೆ ಈ ಮೂರು ರಂಗಗಳಲ್ಲಿ ಕೆಲಸ ಮಾಡುತ್ತಿರುವ ರಂಗನಾಥ್ ಅವಿಶ್ರಾಂತ ಕೆಲಸಗಾರ. 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಪ್ರತಿವರ್ಷ ದಸರಾ ಕವಿಗೋಷ್ಠಿಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಅಭಿನಂದನಾರ್ಹ ಸಂಗತಿ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಗಾಯತ್ರಿರಾಜ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ಹಿರಿಯ ವಿಜ್ಞಾನ ಲೇಖಕ ಹಾಗೂ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿಯ ಸಂಸ್ಥಾಪಕ ಪ್ರೊ.ಎಸ್. ರಾಮಪ್ರಸಾದ್, ಕವಿಗೋಷ್ಠಿ ಅಧ್ಯಕ್ಷ ಬಿ. ರಮೇಶ್ ಮಾತನಾಡಿದರು. ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ನೊಂದಾಯಿತ ಕವಿಗಳು ಪಾಲ್ಗೊಂಡಿದ್ದರು. ಕವಯಿತ್ರಿ ಪದ್ಮಾರಘು ಕಾರ್ಯಕ್ರಮ ನಿರೂಪಿಸಿದರು. ಸವಿಗನ್ನಡ ಪತ್ರಿಕೆ ಸಂಪಾದಕ ರಂಗನಾಥ್ ಮೈಸೂರು ಸ್ವಾಗತಿಸಿದರು.
ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...
ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...
ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...
©2024 Book Brahma Private Limited.