Date: 21-03-2020
Location: ಹಾವೇರಿ
ಕವಿ ಹೆಬಸೂರ ರಂಜಾನ ಅವರ `ಮಂಜಿನೊಳಗಿನ ಕೆಂಡ' ಹಾಯ್ಕು ಕವನ ಸಂಕಲನ ಕುರಿತುಹಾವೇರಿಯ ಹೊಸಮಠದ ಆವರಣದಲ್ಲಿ ವಿಚಾರ ಸಂಕಿರಣ ಜರುಗಿತು. ಹೊಸಮಠ, ಸಾಹಿತಿ ಕಲಾವಿದರ ಬಳಗ ಹಾಗೂ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರಣ ಸಂಕಿರಣವನ್ನು ಹಿರಿಯ ಕವಿ ಸತೀಶ ಕುಲಕರ್ಣಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು “ಹಲವು ಅರ್ಥಗಳನ್ನು ಪಡೆಯುವ ಜಪಾನಿ ಭಾಷೆಯ ಹಾಯ್ಕು ಚುಟುಕು ಕಾವ್ಯ ಪ್ರಕಾರ ನಮ್ಮ ಅನುಭವ ಮತ್ತು ಕಲ್ಪನಾ ಶಕ್ತಿಯನ್ನು ವಿಸ್ತರಿಸುವ ಶಕ್ತಿಯುಳ್ಳದ್ದು. ಜಪಾನಿನ ಹಾಯ್ಕು ಕಾವ್ಯಕ್ಕೆ ಛಂದಸ್ಸಿನ ನಿರ್ಬಂಧಗಳಿದ್ದರೂ, ಆ ಕಟ್ಟಳೆಗಳನ್ನು ಮುರಿದು ಜಗತ್ತಿನ ಎಲ್ಲ ಭಾಷೆಗಳಲ್ಲಿ ಮನ್ನಣೆ ಪಡೆದಿದೆ. ರಂಜಾನ ಹೆಬಸೂರರ ‘ಮಂಜಿನೊಳಗಿನ ಕೆಂಡ’ ಇದನ್ನು ಸಮರ್ಥವಾಗಿ ಪ್ರಯೋಗಿಸಿದೆ. ಮಂಜು ಮತ್ತು ಕೆಂಡ ವೈರುಧ್ಯಗಳಾದರೂ, ಅವುಗಳನ್ನು ದಾಟುವುದೇ ಕಾವ್ಯದ ಗುಣ” ಎಂದು ಹೇಳಿದರು.
ಬಸವಶಾಂತಲಿಂಗ ಸ್ವಾಮಿಗಳು ಸಾನ್ನಿಧ್ಯವಹಿಸಿ, “ರಂಜಾನರ ಕಾವ್ಯ ಸಮಾಜ ಜೀವನದ ಎಲ್ಲ ಸ್ಥಿತ್ಯಂತರಗಳನ್ನು ದಕ್ಕಿಸಿಕೊಂಡು ರಚಿತವಾದ ವಿಚಾರ ಕೆಂಡಗಳ ಕಾವ್ಯ. ಮಂತ್ರದಲ್ಲಿ ಶಬ್ದವಿಲ್ಲ, ಶಬ್ದಗಳೇ ಮಂತ್ರವಾಗುವ ಕಾವ್ಯವನ್ನು ರಂಜಾನ ರಚಿಸಿದ್ದರೆ” ಎಂದು ಅಭಿಪ್ರಾಯಪಟ್ಟರು.
ಕವಿ ರಂಜಾನ ಹೆಬಸೂರರನ್ನು ಹಾಗೂ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಾಜೇಶ್ವರಿ ರವಿ ಸಾರಂಗಮಠ ಅವನ್ನು ಎಲ್ಲ ಸಂಘಟನೆಗಳ ಪರವಾಗಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿ ಪ್ರೊ. ಮಾರುತಿ ಶಿಡ್ಲಾಪೂರ, ಪತ್ರಕರ್ತ ಮಾಲತೇಶ ಅಂಗೂರ, ಲೇಖಕರಾದ ಜೀವರಾಜ ಛತ್ರದ, ಲಿಂಗರಾಜ ಸೊಟ್ಟಪ್ಪನವರ, ಕಾಂತೇಶ ಅಂಬಿಗೇರ, ಪರಿಮಳಾ ಜೈನ, ಕವಿತಾ ಸಾರಂಗಮಠ, ಡಾ. ಅಂಬಿಕಾ ಹಂಚಾಟೆ, ಎಸ್.ವ್ಹಿ. ಕುಲಕರ್ಣಿ, ಜಿ.ಎಂ. ಓಂಕಾರಣ್ಣನವರ, ವಾಗೀಶ ಹೂಗಾರ, ಮಹಾದೇವ ಕರಿಯಣ್ಣ ಹಾಗೂ ಕವಿ ವೀರೇಶ ಹಿತ್ತಲಮನಿ ಮತ್ತಿತರ ಸಾಹಿತ್ಯಾಸಕ್ತರು ಭಾಗಿಯಾಗಿದ್ದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.