Date: 02-08-2021
Location: ಮಂಗಳೂರು
ಲೇಖಕರ ವಿಭಿನ್ನ ದೃಷ್ಟಿಕೋನದ ಬರಹವು ಓದುಗರಿಗೆ ಹೆಚ್ಚು ಆಪ್ತವಾಗುತ್ತದೆ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕ ಯು.ಕೆ. ಕುಮಾರನಾಥ್ ಅವರು ಅಭಿಪ್ರಾಯಪಟ್ಟರು.
ಲೇಖಕ-ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಮುಂಬಯಿ ಮಿಂಚು (ಲೇಖನಗಳ ಸಂಕಲನ) ಹಾಗೂ ‘ಶ್ರೀನಿವಾಸ ಜೋಕಟ್ಟೆ ಅವರ ಸಮಗ್ರ ಕತೆಗಳು’-ಹೀಗೆ ಎರಡು ಕೃತಿಗಳನ್ನು ನಗರದ ಹೋಟೆಲೊಂದರ ಸಭಾಂಗಣದಲ್ಲಿ ಅವರು ‘ಮುಂಬಯಿ ಮಿಂಚು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ಸುದೀರ್ಘ ಕಾಲದಿಂದ ಮುಂಬಯಿಯಲ್ಲಿ ವಾಸಿಸುತ್ತಿದ್ದು, ಅಲ್ಲಿಯ ಆಧುನಿಕ ಬದುಕಿನ ವೈಭವ ಹಾಗೂ ದಾರುಣ ಸ್ಥಿತಿಯನ್ನುಕಟ್ಟಿಕೊಡುತ್ತಾರೆ. ಆದರೆ, ಅವರ ನಿರೂಪಣಾ ಶೈಲಿಯು ತುಂಬಾ ಆಪ್ತವಾಗಿದೆ. ಅವರ ವಿಭಿನ್ನ ದೃಷ್ಟಿಕೋನವು ಓದುಗರನ್ನು ಸೆರೆ ಹಿಡಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀನಿವಾಸ ಜೋಕಟ್ಟೆ ಅವರ ಮತ್ತೊಂದು ಕೃತಿ ‘ಸಮಗ್ರ ಕತೆಗಳು’ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳಾ ವಾರಪತ್ರಿಕೆಯ ಮಂಗಳೂರು ವಿಭಾಗದ ಟಿ.ಕೆ.ಸುನೀಲ ಅವರು ಶ್ರೀನಿವಾಸ ಜೋಕಟ್ಟೆ ಅವರ ಬರಹಗಳು ಕೇವಲ ಮುಂಬಯಿಗೆ ಮಾತ್ರ ಸೀಮಿತಗೊಂಡಿಲ್ಲ. ತಮ್ಮ ಮೂಲ ಊರಿನ ಸೆಳೆತದಿಂದ ಅವರು ಪಾರಾಗಿಲ್ಲ. ಕರ್ನಾಟಕದ ಕರಾವಳಿಯೂ ಅವರ ಸಾಹಿತ್ಯದಲ್ಲಿ ದಟ್ಟ ಅನುಭವವ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹರಿಯಪ್ಪ ಪೇಜಾವರ ಮಾತನಾಡಿ ‘ಕೃತಿಗಳನ್ನು ಸಂಖ್ಯೆಯ ದೃಷ್ಟಿಯಲ್ಲಿ ಪರಿಗಣಿಸಬಾರದು. ಅವುಗಳ ಗುಣಮಟ್ಟ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಜೋಕಟ್ಟೆ ಅವರ ಬರಹಗಳು ಕೃತಿಗಳು ಉತ್ತಮ ಗುಣಮಟ್ಟದಿಂದ ಕೂಡಿವೆ ಎಂದು ಹೇಳಿದರು.
ಲೇಖಕ ಶ್ರೀನಿವಾಸ ಜೋಕಟ್ಟೆ, ಈ ಎಲ್ಲ ಪ್ರತಿಕ್ರಿಯೆಗಳಿಗೆ ಸ್ಪಂದಿಸಿ, ಈವರೆಗೂ 39 ಕೃತಿಗಳನ್ನು ಬರೆದ ತಮಗೆ ಓದುಗರು ಉತ್ತಮವಾಗಿಯೇ ಸ್ಪಂದಿಸಿದ್ದು, ಶೀಘ್ರವೇ ಆತ್ಮಕಥೆ ಬರೆಯುವ ಯೋಜನೆ ಇದೆ ಎಂದು ಹೇಳಿದರು. ಉಪನ್ಯಾಸಕಿ ನಾಗವೇಣಿ, ಪತ್ರಕರ್ತ ಆರ್. ರಾಮಕೃಷ್ಣ ಮಾತನಾಡಿದರು. ಪತ್ರಕರ್ತ ಜೀತೇಂದ್ರ ಕುಂದೇಶ್ವರ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...
ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...
ʻಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...
©2024 Book Brahma Private Limited.