ಉಸಿರಾಡುವುದನ್ನೇ ಮರೆತ ಮರದ ಎಲೆಗಳು
ಜೀವಪಡೆದುಕೊಂಡು ಅಲುಗಾಡಲು ಆರಂಭಿಸಿದವು
ಅಲ್ಲೆಲ್ಲೋ ಎದ್ದ ಗಾಳಿಯ ಸುಳಿವಿಗೆ
ಮಳೆಯೆಂಬ ಸಮೀಕ್ಷಕ ಭುವಿಗೆ ಇಳಿವನೆಂದು
ಮಣ್ಣಲ್ಲಿ ಆಡುತ್ತಿದ್ದ ಪೋರ-ಪೋರಿಯರು ಚೆಲ್ಲಾಪಿಲ್ಲಿ
ಹುಲಿ ನುಗ್ಗಲು ಕಂಗಾಲಾದ ಕುರಿ ಹಿಂಡಿನಂತೆ
ಮಳೆಹನಿಗಳೆಲ್ಲಾ ಮುತ್ತಿಕೊಳ್ಳಲು ಭೂರಮೆಯ ಎದೆಯ ಗೂಡಿಗೆ
ಧೂಳಾಗಿ ಬಿದ್ದಿದ್ದ ಮಣ್ಣು ಕೆಸರಿನ ಬೆಣ್ಣೆ
ಮನೆಮಂದಿಯೆಲ್ಲಾ ಈಗ ಹೆಚ್ಚು ಚಟುವಟಿಕೆ
ಕೂತಿದ್ದ ಅಜ್ಜನು ಈಗ ಕೊಡೆಯ ಹುಡುಕಾಟದಲ್ಲಿ
ಶಾಲೆಯಿಂದ ಬಂದ ಮಗುವಿಗೆ ಪೇಪರ್ ದೋಣಿ ಬಿಟ್ಟನಂತರವಷ್ಟೆ ಹಾಲು ಸೇವಿಸುವೆ ಎಂಬ ಹಠ
ಅಮ್ಮನಿಗಂತೂ ಕಂಬಿಯ ಮೇಲಿರುವ ಒಗೆದ ಬಟ್ಟೆಯ ತೆಗೆದಿಡುವ ಧಾವಂತ
ಮಳೆ ಧರೆಗೆ ಬಂದರೆ ಹಸಿರಾಗುವುದು ಮಾತ್ರವಲ್ಲ ನಮ್ಮೆಲ್ಲರ ನಿರುಪಯೋಗದ ಉಸಿರು ಶುದ್ಧವಾಗುವುದು
ಅಸಹನೀಯವಾದ ದಟ್ಟಡಿ ಬದುಕಿನ ಕೊಳೆಯೂ ಹರಿದು ಸೇರುವುದು ಪಾವನಗೊಳ್ಳಲು
ಮಳೆ ಮನುಷ್ಯನಂತೆ ಪಕ್ಷಪಾತಿಯಂತೂ ಅಲ್ಲ
ಪ್ರತಿಯೊಬ್ಬರ ಬದುಕಿಸಲೆಂದು ಇಳಿವುದು
ಅರಿವಾಗಿದೆ ಅದಕೆ ಮಾನವನ ಜತ್ತಕ ಚಾಲಾಕು
ಆದರೂ ಮನ್ನಿಸಿ, ಮನ್ನಿಸಿ ಮತ್ತೆ ಮತ್ತೆ ಬರಲಿದೆ ಭುವಿಗೆ.
Latest Comments
No comments are available!