`ಹೊಸಾವೇ' ಎಂಬ ಹೆಸರಿನ ಮೂಲಕವೇ ಜನಪ್ರಿಯವಾಗುತ್ತಿರುವ ಹೊನ್ನ ಕುಸುಮ ಸಾಹಿತ್ಯ ವೇದಿಕೆ ಬಳಗವು 2017 ರಲ್ಲಿ ಸಮಾನಮನಸ್ಕ ಗೆಳೆಯರಿಂದ ಆರಂಭಗೊಂಡು ಸಾಹಿತ್ಯದ ಓದು, ಚಿಂತನೆ, ಚರ್ಚೆ, ವಿಮರ್ಶೆ ಹಾಗೂ ಪುಸ್ತಕ ಪ್ರಕಟಣೆಯಂತಹ ವೈವಿಧ್ಯಮಯ ಚಟುವಟಿಕೆಗಳಿಂದ ಕ್ರೀಯಾಶೀಲವಾಗಿದೆ. ಕನ್ನಡ ಸಾಹಿತ್ಯ ಮತ್ತು ಸಾಹಿತಿ ಎಂಬ ಕಾರ್ಯಸರಣಿಯಲ್ಲಿ ಪ್ರತೀ ತಿಂಗಳಿಗೊಮ್ಮೆ ವಿಶೇಷ ಆಹ್ವಾನಿತ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ ಚರ್ಚಾಗೋಷ್ಠಿಗಳನ್ನು ಆಯೋಜಿಸಿ, ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಯಶಸ್ವಿಗೊಳಿಸಿತು. ಈ ಪ್ರಕಾಶನದ ಅಡಿಯಲ್ಲಿ ವೈವಿಧ್ಯಮಯ ಮಾದರಿಗಳ ಪುಸ್ತಕ ಪ್ರಕಟಿಸುವ ಮೂಲಕ ಯುವಲೇಖಕರು ಹಾಗೂ ಸಾಹಿತ್ಯಾಸಕ್ತರ ಪ್ರೀತಿಗೆ ಪಾತ್ರವಾಗುತ್ತಿದೆ.
ಕರೋನೋತ್ತರ ಕಾಲಘಟ್ಟದಲ್ಲಿ ಮತ್ತೆ ಸಕ್ರೀಯವಾಗಿರುವ ವೇದಿಕೆಯು, ತಿಂಗಳ ಬೆಳಕು ಎಂಬ ವಿನೂತನ ಯೋಚನೆ ಹಾಗೂ ಯೋಜನೆಯಲ್ಲಿ ಪ್ರತೀ ತಿಂಗಳ ಕೊನೆಯ ಭಾನುವಾರ ಆಯ್ದ ಕೃತಿಯೊಂದರ ಓದು, ಚರ್ಚೆ, ವಿಮರ್ಶೆ, ವಿಶ್ಲೇಷಣೆ ಹಾಗೂ ಸಂವಾದ ಪ್ರಕ್ರೀಯೆಯನ್ನು ಲೇಖಕರ ಸಮ್ಮುಖದಲ್ಲಿಯೇ ನಡೆಸುತ್ತಾ ಸಾಗಿದ್ದು, ಈಗಾಗಲೇ ಹನ್ನೆರಡು ಕಂತುಗಳನ್ನು ಪೂರ್ಣಗೊಳಿಸಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಸಾಹಿತಿಗಳಾದ ಪ್ರಭುಶಂಕರ, ಸಾರಾ ಅಬೂಬಕರ್, ಶಿವರಾಮ ಕಾರಂತ, ರಾಗಂ, ಲಲಿತಾ ಹೊಸಪ್ಯಾಟಿ, ಪ್ರಕಾಶ ಖಾಡೆ, ಕೆ.ಎ.ಬನ್ನಟ್ಟಿ, ವಿ.ಆರ್.ಜನಾದ್ರಿ ಮುಂತಾದ ಹಿರಿ-ಕಿರಿಯ ಸಾಹಿತಿಗಳ ಪುಸ್ತಕಗಳೆಲ್ಲ ಓದಿಗೆ, ಚರ್ಚೆ, ವಿಮರ್ಶೆಗೆ ಸಾಕ್ಷಿಯಾಗಿವೆ. ತಿಂಗಳ ಬೆಳಕು ಕಾರ್ಯಕ್ರಮದ ಮೂಲಕ ಸಕ್ರೀಯವಾಗಿರುವ ಬಳಗವು ಪುಸ್ತಕ ಪ್ರಕಟಣೆಯ ಜೊತೆಗೆ ಭವಿಷ್ಯದಲ್ಲಿ ಮತ್ತಷ್ಟು ವಿನೂತನ ಕಾರ್ಯಚಟುವಟಿಕೆಗಳೊಂದಿಗೆ ನಾಡು-ನುಡಿಯ ಸೇವೆಗೆ ಕಂಕಣಬದ್ದವಾಗಿದೆ.
©2024 Book Brahma Private Limited.