Poem

ಅರ್ಧ ಹೇಳಿದ ಕಥೆ

 

ಪಾಮ್ ಮರದ ನೆರಳುಗಳು ಮರೆಯಾಗುವಾಗ

ನಾವು ಮನೆಗೆ ಮರಳುವದರ ಬಗ್ಗೆ ಮಾತನಾಡಿದೆವು

ಹೋಗುವದರ ಬಗ್ಗೆ ಮಾತನಾಡಿದೆವು

ಹಿಂತಿರುಗುವದರ ಬಗ್ಗೆ ಮಾತನಾಡಿದೆವು.

ಆನಂತರ ಏನಾಯಿತೆಂಬುದರ ಬಗ್ಗೆ ಮಾತನಾಡಲಿಲ್ಲ

ಹಿಂತಿರುಗಿದ ಬಳಿಕ ನಾವೇನು ಮಾಡಿದೆವು?

ಎಲ್ಲಿ ಹೋದೆವು? ಎಂಬುದರ ಬಗ್ಗೆ ಹೇಳಲಿಲ್ಲ.

ಹಾಗಾದರೆ ಮುಂದೇನಾಯಿತು?

ಇದೊಂದು ಅಪೂರ್ಣ ನಿರೂಪಣೆ

ಅಥವಾ ಅಪೂರ್ಣ ಕಥೆ ಎನ್ನೋಣ

ಹಾಗೆ ನೋಡಿದರೆ

ಎಲ್ಲ ಕಥೆಗಳು ಅಪೂರ್ಣವಲ್ಲವೇ?

ನಮಗೆ ಗೊತ್ತಿಲ್ಲ ಅಪೂರ್ಣತೆ ಹೇಗೆ ಕೊನೆಗೊಳ್ಳುತ್ತದೆಯೆಂದು?

ನಾವು ಮಧ್ಯದಿಂದಲೆಲ್ಲೋ ದಾರವನ್ನೆತ್ತಿಕೊಂಡು

ಜಗ್ಗಿ ಜಗ್ಗಿ ಎಳೆಯುತ್ತ ಇರುತ್ತೇವೆ

ಮತ್ತೆ ಮಧ್ಯದಲ್ಲೆಲ್ಲೋ ಅದು ಜಾರಿ ಹೋಗಿರುತ್ತದೆ

ಕಥೆಗಳು ಕೂಡ ಹಾಗೆಯೇ.

ಹಾಗಾದರೆ, ಇದನ್ನು ಹೀಗೆ ವ್ಯಾಖ್ಯಾನಿಸಬಹುದೆ?

ನಾವೆಲ್ಲಾ ಅಪೂರ್ಣ ಕಥೆಗಳನ್ನು ಹೇಳುವದರಲ್ಲಿ ನಿಸ್ಸೀಮರು

ಮತ್ತು ಮುಗಿಯದ ಕಥೆಗಳನ್ನೇ ಮತ್ತೆ ಮತ್ತೆ ಹೇಳುವವರು.

ಮೂಲ ಅಸ್ಸಾಮಿ: ಕಮಲ್ ಕುಮಾರ ತಂತಿ

ಇಂಗ್ಲೀಷಿಗೆ: ಸಲೀಮ್ ಎಮ್ ಹುಸೇನ್

ಕನ್ನಡಕ್ಕೆ: ಉದಯ ಇಟಗಿ

ಉದಯ್ ಇಟಗಿ

ಉದಯ ಇಟಗಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರು. ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಎಂಟು ವರ್ಷ ಕಾಲ ಇಂಗ್ಲೀಷ್ ಅಧ್ಯಾಪಕರಾಗಿ, ಸದ್ಯ ಸ್ವದೇಶದಲ್ಲಿ ನೆಲೆಸಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದ ಇವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡು, ಅನುವಾದ ಸಾಹಿತ್ಡಯ ಸೃಷ್ಟಿಯಲ್ಲಿ ಒಲವು ಬೆಳೆಸಿಕೊಂಡವರು. ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು ‘ಕೆಂಡಸಂಪಿಗೆ’ ಸೇರಿದಂತೆ ಬೇರೆ ಬೇರೆ ಆನ್‍ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಅನುವಾದಿತ ಕಥೆಗಳು ‘ಉದಯವಾಣಿ’ಯಲ್ಲಿ ಪ್ರಕಟವಾಗಿವೆ. ಅನೇಕ ಅರೆಬಿ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಶಿಕ್ಷಣ, ಪ್ರವಾಸ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಚಿತ್ರದುರ್ಗದ ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರು. ಅವರ ‘ಲಿಬಿಯಾ ಡೈರಿ’ ಲಿಬಿಯಾ ದೇಶದ ಕುರಿತ ಇತ್ತಿಚಿನ ಕೃತಿಯಾಗಿದೆ.

More About Author