Poem

ಅಯೋಮಯ

ಗೂಳಿ ಗಾಳಿಗೆ
ಮಲೆತ ಮರ
ಪೂರ ಬೆತ್ತಲಾದಂತೆ

ತುಂಬು ಗರ್ಭಿಣಿಗೆ
ಧುತ್ತೆಂದು
ಮೈಯಿಳಿದಂತೆ

ಮಟಮಟ ಮಧ್ಯಾಹ್ನ
ಗುದ್ದಿನಿಂದೆದ್ದ
ಬೇತಾಳ
ಕಾಮಕೇಳಿಗೆ ಸೆಳೆದಂತೆ

ಅಮಾವಾಸ್ಯೆಯ
ಕಾರ್ಗತ್ತಲು
ಹುಣ್ಣಿಮೆಯ
ಬೆಳದಿಂಗಳ
ನುಂಗಿ ನೆಗೆದಂತೆ

ಮುಗಿಲು ಹರಿದಂತೆ
ನೆಲ ಬಿರಿದಂತೆ
ತಿರೆಗೆ ಜ್ವರ ಬಂದು
ನೆರೆ ಬಂದು
ದಿಗಂತಕ್ಕೆ ಚಿಮ್ಮಿದಂತೆ

ವಸ್ತ್ರವಿದ್ದೂ
ವಿವಸ್ತ್ರನಾದಂತೆ
ವಿವಸ್ತ್ರನಾಗಿ
ಮೈಲಿಗೆಗಂಜಿ
ನಡುಗಿದಂತೆ

ಮಾತು ಮೌನದ
ಮೊರೆ ಹೋದಂತೆ
ಮೌನದ ಮಾತು
ರಿಂಗಣಿಸಿದಂತೆ

ಸನಿಹದ ದನಿ
ಕೇಳಿಸದಂತೆ
ದೂರದ ಮಾತ
ಆಲಿಸಿದಂತೆ

ದೇಹಕ್ಕೆ ಜೀವ
ಹೊರೆಯಾದಂತೆ
ಜೀವಕ್ಕೆ ಜೀವ
ಎರವಾದಂತೆ

ಆತ್ಮಕ್ಕೆ ಪರಮಾತ್ಮನ
ನೆನಹು
ಹೆಚ್ಚಾದಂತೆ
ಆತ್ಮನಿಂ ಪರಮಾತ್ಮ
ದೂರದೂರ ಸರಿದಂತೆ

- ರೇವಣಸಿದ್ದಪ್ಪ ಜಿ.ಆರ್.


ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author