ಗುರುಪ್ರಸಾದ್ ಮಜಲಕೋಡಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಸಮೀಪದ ನೀರ್ಕೆರೆಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು,ಈವರೆಗೂ ಅನೇಕ ಕತೆಗಳನ್ನು ಬರೆದಿರುತ್ತಾರೆ. ಗುರುಪ್ರಸಾದ್ ಮಜಲಕೋಡಿ ಅವರ ‘ಚಾಂಡಾಲನ ಮಗ’ ಸಣ್ಣಕತೆ ನಿಮ್ಮ ಓದಿಗಾಗಿ...
ಒಂದು ಊರಿನಲ್ಲಿ ಬಡ ಬ್ರಾಹ್ಮಣ ದಂಪತಿಗಳಿದರು. ಅವರಿಗೆ ಒಂದು ಸಣ್ಣ ಗದ್ದೆಯೂ ಇತ್ತು ಆ ದಂಪತಿಗಳು ಮುಂಜಾವಿನಿಂದ ಸಂಜೆಯ ಮಬ್ಬು ಕತ್ತಲವರೆಗೂ ಹೊಲದಲ್ಲಿಯೇ ದುಡಿಯುತ್ತಿದ್ದರು. ಕೆಲವೊಂದು ಬಾರಿ ಹೊಲದಲ್ಲಿ ಬೆಳೆದ ಬೆಳೆ ಅವರ ಮನೆ ಖರ್ಚಿಗೂ ಸಾಲದಾಗ ಇವರು ಬೇರೆಯವರ ಹೊಲಗಳಲ್ಲಿಯೂ ಯಾವುದೇ ಕೆಲಸವಾದರೂ ಬಲು ನಿಷ್ಠೆಯಿಂದ ಮಾಡಲು ಹಿಂಜರಿಯುತ್ತಿರಲಿಲ್ಲ. ಇವರಿಗೆ ವಿಜಯನೆಂಬ ಒಬ್ಬ ಮಗನಿದ್ದ, ಬ್ರಾಹ್ಮಣರಾದ್ದರಿಂದ ತಮ್ಮ ಮಗನನ್ನು ಪೌರೋಹಿತ್ಯ ಪಾರಂಗತ್ಯ ಪಡೆಯಲು ದೂರದ ಕಾಶಿ ಪಟ್ಟಣದ ವಿದ್ಯಾ ಪೀಠಕ್ಕೆ ವಿದ್ಯಾ ಸಂಪನ್ನರಾಗಿಸಲು ಕಳುಹಿಸಿ ಕೊಟ್ಟರು. ಅಲ್ಲಿ ವಿಜಯನು ಏಕಾಗ್ರಚಿತ್ತದಿಂದ ಎಲ್ಲಾ ಜ್ಞಾನವನ್ನು ಪಡೆದು, ಗುರುಕುಲದ ಸಹಪಾಠಿಗಳಲ್ಲಿ ಅತ್ಯುತ್ತಮನೆನಿಸಿಕೊಂಡು, ಗುರು ಆಶೀರ್ವಾದವ ಪಡೆದು ತನ್ನ ಊರಿಗೆ ಮರಳುತ್ತಾನೆ.
ಹೀಗೆ ವಿಜಯನು ಹಿಂತಿರುಗುವಾಗ ಆತನು ಒಂದು ಬಡ ಹಳ್ಳಿಯ ಮಧ್ಯೆ ಪ್ರಯಾಣಿಸ ಬೇಕಾದ ಸಂಧರ್ಭ ಒದಗಿ ಬಂದಿತು. ಆ ಹಳ್ಳಿಯಲ್ಲಿ ಮಹಾಮಾರಿ ರೋಗ ಒಂದು ತಾಂಡವವಾಡುತ್ತಿತ್ತು. ಜನರೆಲ್ಲಾ ರೋಗಗ್ರಸ್ಥರಾಗಿ ಪ್ರಾಣ ಬಿಡುತ್ತಿದ್ದುದನ್ನು ಕಂಡು ಆತನ ಮನಸ್ಸು ಆ ಸ್ಥಳದಿಂದ ಮುಂದೆ ನಡೆಯಲು ಒಪ್ಪಲೇ ಇಲ್ಲ. ಒಂದೆಡೆ ಕೊಳೆತ ಶವಗಳ ಸಂಸ್ಕಾರ ಮಾಡುವ ಜನರಿಲ್ಲ, ಆ ಶವಗಳಿಂದಲೇ ಮಹಾಮಾರಿ ಇನ್ನೂ ತೀವ್ರ ಗತಿಯಲ್ಲಿ ಹರಡುವ ತವಕದಲ್ಲಿತ್ತು. ವಿಜಯನು ನಿಂತಿದ್ದ ಪಕ್ಕದಲ್ಲೇ ಜೋಪಡಿಯಲ್ಲಿ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.
ಜೋಪಡಿಯ ಪರದೆ ಸರಿಸಿ ನೋಡಿದಾಗ ಅಲ್ಲಿ ತಂದೆ ತಾಯಿಯರ ಶವದ ಮುಂದೆ ಪುಟ್ಟ ಕಂದಮ್ಮಗಳು ಅಳುತ್ತಿದ್ದವು. ಇವನ್ನೆಲ್ಲಾ ಕಂಡು ವಿಜಯನು ಮನಸ್ಸಿನಲ್ಲಿ " ನಾ ಕಲಿತ ಪೌರೋಹಿತ್ಯ ಪಾಂಡಿತ್ಯ, ಚಿಕಿತ್ಸಾ ವಿದ್ಯೆಗಳಾವುದೂ ಈ ಮಹಾ ಮಾರಿಯ ಮುಂದೆ ಬರೀ ಶೂನ್ಯವಾಯಿತಲ್ಲಾ... ಇಲ್ಲಿ ಕೆಲಸಕ್ಕೆ ಬರುವುದು ಒಂದೇ ಅದು ಮಾನವೀಯತೆ" ಎಂದು ಯೋಚಿಸಿ ತಾನು ಪಾಂಡಿತ್ಯ ಪಾರಾಂಗತ ಬ್ರಾಹ್ಮಣನಾದರೂ ಆ ಕಂದಮ್ಮಗಳಿಗೆ ಸಮಾಧಾನಿಸಿ... ಆಸುಪಾದಿನಲ್ಲಿ ಸಿಕ್ಕ ಕಟ್ಟಿಗೆಗಳ ಕಟ್ಟಗಳ ರಚಿಸಿ ಸತ್ತ ಕೊಳೆತ ಶವಗಳ ದಹಿಸಿ ಪವಿತ್ರಾತ್ಮ ದೇಹಗಳ ಮೋಕ್ಷಕನಾದ, ಹೀಗೆ ಅಲ್ಲೊಂದು ಮೋಕ್ಷಧಾಮವೆಂಬ ಸ್ಮಶಾನ ನಿರ್ಮಿಸಿ ಬ್ರಾಹ್ಮಣನೇ "ಚಾಂಡಾಲ ವೃತ್ತಿಯನ್ನು" ತನ್ನದಾಗಿಸಿ ಸ್ಮಶಾನವಾಸಿ ಶಿವನ ಆರಾದಿಸಿ ಮಾನವರ ಕಡೇಯ ಪ್ರಯಾಣಕ್ಕೆ ಮುನ್ನುಡಿ ಬರೆಯುವಾತನಾದ. ಆ ಹೊತ್ತಿಗೆ ಮಹಾ ಮಾರಿಯೂ ವಿಜಯನೆದುರು ಸೋತು ಊರು ಬಿಟ್ಟಿತ್ತು. ಹೀಗೆ ಕಾಲ ಕಳೆಯುತು ಬ್ರಾಹ್ಮಣ ದಂಪತಿಗಳು ಮಗ ಹಿಂತಿರುಗಿ ಬಾರದ್ದನ್ನು ಕಂಡು ಆತನನ್ನು ಹುಡುಕಿ ಆತನಿರುವ ಊರಿಗೆ ಬಂದರು. ವಿಜಯನು ನಡೆದ ವಿಚಾರಗಳನ್ನು ತಿಳಿಸಿದ ಆತನ ತಂದೆ ತಾಯಿಗೆ ಮಗನ ಕೆಲಸಕಂಡು ಗರ್ವವಾಯಿತು...ಹೀಗೆ ವಿಜಯನು ಚಾಂಡಾಲ ವೃತ್ತಿ ಮಾಡುವ ಉತ್ತಮ ಚಾಂಡಾಲ ಮಗನಾದನು...
ಗುರುಪ್ರಸಾದ್ ಮಜಲಕೋಡಿ
ಗುರುಪ್ರಸಾದ್ ಮಜಲಕೋಡಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಸಮೀಪದ ನೀರ್ಕೆರೆಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿರುತ್ತದೆ.