Poem

ಗೊಂದಲ

ಗಂಡಿನ ಪ್ರೀತಿ ಉತ್ಸವಮೂರ್ತಿ,

ಹೆಣ್ಣಿಗೆ ಗರ್ಭಗುಡಿ.

ಗಂಡಿಗೆ ನವಿಲಿನ ಸಾವಿರ ಕಣ್ಣು,

ಹೆಣ್ಣಿಗೆ ಲಕ್ಷ್ಮಣರೇಖೆ.

 

ಗಂಡು, ಬೆಳೆ ನೋಡಿ ಹಿಗ್ಗುವ ರೈತ,

ಹೆಣ್ಣಿಗೆ ಕ್ಷೇತ್ರದ ಪಾತ್ರ.

ಲಕ್ಷ ವೀರ್ಯಾಣುಗಳ ಪೈಪೋಟಿ,

ಅಂಡಾಣು ಒಂದು ಮಾತ್ರ.

 

ಬೇಡವೆಂದಾಗ ಕಾಮನ ಸುಡಲು

ಹರನಿಗೆ ಉರಿಗಣ್ಣು.

ತೊರೆದರೂ ತಂದೆ, ಮಗನ ಪೊರೆಯುವಳು

ತಾಯಿ ಯಶೋಧರೆ.

 

ಓಡಿಹೋದವಳ ಹಿಂದೆಳೆದು ತರಲು

ಗ್ರೀಕರ ಭೀಕರ ಯುದ್ಧ.

ಗೂನನ ಗಾನಕೆ ಸೋತ ಗರತಿಗೆ

ಕೊನೆಗಾಣದ ನರಕ.

 

ತುಂಬಿದ ಸಭೆಯಲಿ ಸೀರೆ ಸೆಳೆದರೂ

ದಾಸಿ ಅಸಹಾಯಕಿ.

ಬಿಕರಿಗಿದ್ದಾಳೆ ಪತ್ನಿ, ಗೆಲ್ಲಿಸಲು

ಪತಿಯ ಸತ್ಯನಿಷ್ಠೆ.

         *

ಉರುಳಿಬಿದ್ದಿವೆ  ಹಳೆಯ ಪ್ರತಿಮೆಗಳು,

ಮುರಿದಿದೆ ಬಾಗಿಲ ಚಿಲಕ.

ಒಡ್ಡುಗಳ ಕೆಡವಿ ಮುನ್ನುಗ್ಗುತ್ತಿದೆ

ಇಂದಿನ ಸ್ತ್ರೀಲೋಕ.

 

ತೆರೆದ ದಾರಿಗಳು ಇಂದಿವೆ ನೂರು,

ಹೆಣ್ಣು ತಬ್ಬಿಬ್ಬು!

ಮನೆಯೋ? ಮನಸೋ? ಗೊಂದಲದಲ್ಲಿ

ಎಲ್ಲ ಮಬ್ಬು! ಮಬ್ಬು!!

 

ಬಿ.ಆರ್. ಲಕ್ಷ್ಮಣರಾವ್

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ಗಾಂಡಲೀನ, ಟುವಿಟಾರ, ಎಡೆ ಮತ್ತು ಇವಳು ನದಿಯಲ್ಲ(ಕವನ ಸಂಕಲನಗಳು), ಕ್ಯಾಮರಾ ಕಣ್ಣು (ಸಮಗ್ರ ಕಾವ್ಯ), ಗೆಸ್ಟರ್‌ ಕಥಾ ಸಂಕಲನ, ಮುಂತಾದವು. 

ಲಕ್ಷ್ಮಣ್‌ರಾವ್‌ ಅವರ  'ಲಿಲ್ಲಿ ಪುಟ್ಟಿಯ ಹಂಬಲ' ಕವನ ಸಂಗ್ರಹಕ್ಕೆ 1981ರ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ.ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೋಲಾರ ಜಿಲ್ಲೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

More About Author