Poem

ಗುರುತ್ವಾಕರ್ಷಣೆ

ಗುರುತ್ವಾಕರ್ಷಣೆ


ಯಾವ ಸೆಳೆತವ ಕಾಣೆ
ಈ ಬದುಕಿನ ಮೇಲೆ
ಯಾವ ಅಂಟಿನ ನಂಟು ಬಂಧಿಸಿಟ್ಟಿದೆ ಈ ಭೂಮಿ ಮೇಲೆ

ಚಿಂತೆಗಳು ಕಂತೆ ಕಂತೆ ಇರಲಿ
ದುಃಖದ ಕಟ್ಟೆ ಒಡೆದಿರಲಿ
ಬವಣೆಗಳು ಭಾದಿಸಲಿ
ಮುಪ್ಪು ಅಡರಿ ಸುಕ್ಕುಗಟ್ಟಲಿ
ರೋಗ ರುಜಿನಗಳು ರೇಜಿಗೆ ಹಿಡಿಸಲಿ
ಭಯದ ಭೂತ ವಿಭ್ರಮೆ ಹಿಡಿಸಲಿ

ಮತ್ತೆ ಮತ್ತೆ ಬದುಕಿ ಬಾಳ ಬೇಕೆಂಬ ಒತ್ತಾಸೆ ಹುಟ್ಟೋದು ಎಲ್ಲಿಂದ ತಿಳಿಯದಾಗಿದೆ

ಕರುಳು ಬಳ್ಳಿಯ ಎಳಿತವೋ
ರುಚಿ ಕಂಡ ದೇಹದ ಚಪಲವೊ
ಹಣ ಅಧಿಕಾರ ಅಂತಸ್ತಿನ ಮೋಹವೊ
ನಾಳೆ ಬರುವ ತರಣಿ ಹೊಸ ಬೆಳಕ
ತರುವನೆಂಬ ಆಶಾಭಾವನೆಯೊ

ಪ್ರೇಮವೊ,ಕಾಮವೊ
ಭಕ್ತಿಯೊ,ಶಕ್ತಿಯೊ
ಒಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡದ್ದೆವೆ
ಹಲವು ಬಗೆಯ ಬಣ್ಣದ ಸುಂದರ ಬಾಳಪಂಜರದಲಿ

****
ಲಕ್ಷ್ಮೀದೇವಿ ಕಮ್ಮಾರ, ಶಿಕ್ಷಕಿ, ಬರಹಗಾರ್ತಿ ಗಂಗಾವತಿ

ಲಕ್ಷ್ಮೀದೇವಿ ಕಮ್ಮಾರ (ಪತ್ತಾರ)

ಕತೆಗಾರ್ತಿ ಲಕ್ಷ್ಮೀದೇವಿ ಕಮ್ಮಾರ (ಪತ್ತಾರ) ಅವರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ. ಯಶಸ್ಸಿನ ದಾರಿದೀಪಗಳು (ಕಥಾ ಸಂಕಲನ-ವೆಂಕಟರಾಮಯ್ಯ ಶ್ರೀನಿವಾಸ್ ರಾವ್ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ) ಕತ್ತಲೆಗಂಟಿದ ಬೆಳಕು:ಈ ಕವನ ಸಂಕಲನಕ್ಕೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ (2017) ಲಭಿಸಿದೆ. ಅವರ ಹಲವು ಕವನ, ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಚೇತನ ಪ್ರಶಸ್ತಿ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ. ಟೈಮ್ಸ್ ಆಫ್ ಇಂಡಿಯಾದವರ ಟಾಫಿಟ್ ಅವಾರ್ಡ್(ಶಿಕ್ಷಣಕ್ಕಾಗಿ)2018-19, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ(2019) ಲಭಿಸಿವೆ.

More About Author