Poem

ಹೇಳಬೇಕೆಂದದ್ದು

ಕ್ಷಣ ನೋಟದ ಸಂಪರ್ಕದಲ್ಲಿ ಆಗ ಎದ್ದ ಸ್ತರದಲ್ಲಿ ಚಾಚಿ
ತಲುಪಬೇಕೆಂದಿದ್ದೆ ಆಗ
ಬೇರೆ ಯಾರೋ ಹೆಲೋ ಎಂದು ಹಿಡಿದೆಳೆದರು
ಕುಶಲ ವಿಚಾರಿಸಿದರು
ಕೆಲಸ ಕ್ಯಾಂಪು ಸಂಬಳ ಮದುವೆ
ಅಷ್ಟರಲ್ಲಿ ಜನ ಬಂದರು ಜನರ ಓಡಾಟದಲ್ಲಿ
ಮಾತಿನ ಕಪ್ಪು-ಸಾಸರಿನ ಸೀರೆಯ ಸಂಗೀತದ ಗದ್ದಲದಲ್ಲಿ
ಹೇಳಬೇಕೆಂದದ್ದು ಹೇಳಲಾಗಲಿಲ್ಲ

ಮಾತಾಡಿಸಬಾರದೆಂದು ಡಾಕ್ಟರರು ಹೇಳಿದರು
ಮಾತಾಡಿಸಿದರೆ ಕ್ಷೀಣವಾಗುತ್ತದೆ ಎಂದು
ಹಾಗೆ ಮಾತಾಡಿಸಲೆ ಇಲ್ಲ. ಬರೇ ನೋಡುತ್ತ ನಿಂತೆ
ಮಾತಾಡದೆ ಮೌನದಲ್ಲಿ ಆ ಮುಖದಲ್ಲಿ ಏನೇನೋ
ಹುಡುಕುತ್ತ ನಿಂತೆ

ಕೊನೆಗೊಮ್ಮೆ ಆಕೆ ಕಣ್ಣು ತೆರೆದಾಗ
ತೆರೆಯುವ ಮೊದಲೆ ಮುಚ್ಚಿ ಹೋದಾಗ
ಎಲ್ಲ ನಿಶಬ್ದವಾದಾಗ
ಹೊದೆಸಿದ್ದ ವಸ್ತ್ರ ಮುಖದ ಮೇಲೆ ಎಳೆದಾಗ
ಯಾರೋ ಎತ್ತರದ ಧ್ವನಿಯಲ್ಲಿ ಅಳತೊಡಗಿದಾಗ

ಹೇಳಬೇಕೆಂದು ತುಡಿದಿದ್ದ ಇದು ತನಕ
ಬದುಕಿ- ಹೇಳಬೇಕೆಂದು ಮಾತ್ರ ಬದುಕಿ- ನನ್ನಲ್ಲಿ
ಉಳಿದಿದ್ದ ಮಾತು ಅನಾಥವಾಯ್ತು.

-ತಿರುಮಲೇಶ್

ಕೆ.ವಿ. ತಿರುಮಲೇಶ್‌

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ಅವರ ತಮ್ಮ ಕಾವ್ಯಕ್ಕೆ ಹಲವು ಪರಂಪರೆಗಳಿಂದ ತಾತ್ವಿಕತೆ, ಅನುಭವ ಮತ್ತು ಪ್ರತಿಮೆಗಳನ್ನು ತಂದಿದ್ದಾರೆ. ಶಬ್ದಗಳನ್ನು ಸಾಧ್ಯವಾದಷ್ಟೂ ನಿರಾಭರಣಗೊಳಿಸಿ ಬಳಲೆತ್ನಿಸಿದ ಎ.ಕೆ. ರಾಮಾನುಜನ್ ತರಹದ ಕನ್ನಡ ಕವಿಗಳ ಜೊತೆಗೆ ತಿರುಮಲೇಶ್ ಕೂಡ ಇದ್ದರು.

ನಾಯಕ ಮತ್ತು ಇತರರು, ಜಾಗುವ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿಗಿಡದ ಹೂ ಕಥಾಸಂಕಲನಗಳು. ಆರೋಪ, ಅನೇಕ, ತರಂಗಾಂತರ ಕಾದಂಬರಿಗಳು. ವ್ಯಕ್ತಿ ಮತ್ತು ಪರಂಪರೆಗಳು, ಸಮ್ಮುಖ, ನಮ್ಮ ಕನ್ನಡ, ಅಸ್ತಿತ್ವವಾದ, ವಿಮರ್ಶಾ ಬರಹಗಳು. ತಿರುಮಲೇಶ್ ಅವರ ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮಕ್ಕಳ ಸಾಹಿತ್ಯ ರಚನೆ ಮಾಡಿರುವ ತಿರುಮಲೇಶ್ ಅವರು ಎಜ್ರಾ ಪೌಂಡ್, ಚೀನಿ ಕವಿತೆಗಳನ್ನು ಅನುವಾದಿಸಿದ್ದಾರೆ. ತಿರುಮಲೇಶ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ --ಪ್ರಶಸ್ತಿ ಸಂದಿದೆ.

----------

More About Author