Poem

ಮನದ ತುಡಿತ 

ಬಳಲಿದೆ ಮನವು ಕದಲಿತು‌ ನಗುವು
ಬರುವುದೇ ನಲಿವು ಮರಳಿ?
ಕಳೆದಿದೆ ಸುಖವು ದುಃಖದ ಗೂಡಲಿ
ಸಿಗುವುದೇ ನೆಮ್ಮದಿ ಹೊರಳಿ?

ಯಾರ ಹೊಂಚಿಗೆ ಯಾವ ಸಂಚಿಗೆ
ನಲುಗಿದೆ ಹೃದಯ ತಿರುಗಿ?
ಗಾಳಿಯು ಏಕೆ ನುಸುಳಿತೋ ಒಳಗೆ
ನಡುಗಿದೆ ಹಣತೆ ಮರುಗಿ ?

ದೂರದ ಹಾದಿ ಕಾಣದೆ ಹೋದರೂ
ನಡೆಯುತಲಿಹುದು ಕಾಲು.
ಮುಸುಕಿದ ಮೋಡ ಸರಿದರೆ ಚೂರು
ಬೆಳಕಿಗೂ ಒಂದು ಬಯಲು.

ಯಾವುದು ಚೆಂದ ಯಾವುದು ಅಂದ
ಬಾಳಿನ ಬಣ್ಣ ಮಾಸಿರಲು.?
ಕಣ್ಣಲೇ ಜನಸಿದ ಕನಸಿನ ದೋಣಿಯು
ಸೇರುವ ಮುನ್ನ ಮುಳಗಿರಲು.‌

ರವಿ ಶಿವರಾಯಗೊಳ

ರವಿ ಶಿವರಾಯಗೊಳ

ರವಿ ಶಿವರಾಯಗೊಳ ಅವರು ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಭೀವರ್ಗಿ ಎಂಬ ಪುಟ್ಟ ಹಳ್ಳಿಯವರು. ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರುವ ಅವರು ಸದ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರ ಅವರ ಆಸಕ್ತಿಯಾಗಿದೆ. ದಿನಪತ್ರಿಕೆಗಳಾದ ವಿಶ್ವವಾಣಿ, ಕರ್ಮವೀರ, ಉದಯವಾಣಿ, ಓ ಮನಸೇ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕವಿತೆ, ಕವನ, ಕಥೆ, ಲೇಖನ ಪ್ರಕಟಗೊಂಡಿರುತ್ತದೆ.

More About Author