Poem

ಊರುಗಳೇ ದಿಂಬಾದವು

ಗಾಢ ನಿದ್ರೆಯಲ್ಲಿದ್ದೆ ನಾನು 
ಅದಕ್ಕೆ ಕಾರಣ ಪಕ್ಕದಲ್ಲಿದ್ದ ನೀನು 
ಊರುಗಳು ತಲೆದಿಂಬಾಗಿದ್ದವು 
ಪ್ರಜ್ಞೆಯಿರದಷ್ಟು ಎವೆ ಮುಚ್ಚಿದ್ದವು 

ಹಿತವಾದ ಮಡಿಲಲ್ಲಿ ಮಲಗಿದವಳಿಗೆ 
ಊರುಗಳು ಬದಲಾಗಿದ್ದೇ ಅರಿವಾಗಲಿಲ್ಲ 
ಕನಸಲ್ಲೇನೋ ತಲೆಯ ಸರಿಸಿದಂತಾಗಿ 
ಮತ್ತೆ ಎಳೆದುಕೊಂಡು ಮಲಗೇಬಿಟ್ಟೆನು 

ತಲೆದಿಂಬ ಗಾತ್ರ ವ್ಯತ್ಯಾಸವಾದಂತಾದರೂ 
ಏರಿದ್ದ ನಿದ್ರೆ ಕಣ್ಣು ತೆರೆಯಲೂ ಬಿಡಲಿಲ್ಲ 
ನಿನ್ನ ಜೋರು ಧನಿಯೇ ನನ್ನ ಎಚ್ಚರಿಸಿದ್ದು 
ಆ ಗಾಢ ನಿದ್ರೆಯಲ್ಲೂ ಮೊನಚು ಮಾತು ಚುಚ್ಚಿದ್ದು 

ಕಣ್ಣರಳಿಸಿದಾಗಲೇ ತಿಳಿದದ್ದು ಆ ರಾತ್ರಿಯ ಪ್ರಯಾಣದಲ್ಲಿ 
ಊಟದ ವಿರಾಮದಲ್ಲಿ ನೀ ಕೆಳಗಿಳಿದು ಹೋದದ್ದು 
ನೀ ಬರುವವರೆಗೂ ನನ್ನ ಶಿರಕ್ಕೆ ಬದಲಾದ ಊರುಗಳವೋ 
ಕಾಳಜಿಯ ಕರಗಳಾವೋ ನಾನರಿಯೆ 
ಆದರೆ ಅವೂ ಕೂಡ ತಲೆದಿಂಬೇ ಆಗಿದ್ದವು ನಿನ್ನಂತೆ 

ನೀನೇಕೆ ಆ ಹೊತ್ತಲ್ಲಿ
ಅಷ್ಟೊಂದು ಚೀರಾಡಿದೆ
ನಿದ್ರೆಯಲ್ಲಿದ್ದವಳ ಮೇಲೆ 
ಇಲ್ಲಿ ತಪ್ಪು ಯಾರದ್ದು 
ನಿದ್ರಿಸಿದವಳದ್ದೋ? 
ಬದಲಾದ ಊರುಗಳದ್ದೋ? 

ಒಳಗಿದ್ದ ಉದ್ದೇಶವೇನೋ 
ನಡೆದ ಸನ್ನಿವೇಶವೇನೋ 
ಕೊಟ್ಟಿದ್ದು ಮಾತ್ರ 
ಹಿತವಾದ ಅನುಭವವೇ.... 
ಆ ಕ್ಷಣಕ್ಕೆ ನೀನೇ ಅವನಾಗಿದ್ದೆ.. 

ಆಡಿಯೋ
ವಿಡಿಯೋ

ತೇಜಾವತಿ ಹೆಚ್.ಡಿ.

ಕವಯತ್ರಿ, ಕಥೆಗಾರ್ತಿ ತೇಜಾವತಿ ಹೆಚ್. ಡಿ. ಅವರು ವೃತ್ತಿಯಿಂದ ಕನ್ನಡ ಶಿಕ್ಷಕಿ. ಮೂಲತಃ ತುಮಕೂರಿನವರು. ಕಾವ್ಯ,ಕತೆ,ಲೇಖನ, ಕಾದಂಬರಿ ಮತ್ತು ಪ್ರಬಂಧ ಕ್ಷೇತ್ರ ಅವರ ಆಸಕ್ತಿಯ ಕ್ಷೇತ್ರಗಳು. ಕಾಲಚಕ್ರ - ಹೊನ್ನುಡಿ ಸಂಕಲನ ಹಾಗೂ ಮಿನುಗುವ ತಾರೆ - ಕವನ ಸಂಕಲನ ಪ್ರಕಟಣೆ ಕಂಡಿದೆ. ಅವರ ಹಲವಾರು ಬರಹಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಉತ್ತಮ ಶಿಕ್ಷಕ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಕರುನಾಡ ಚೇತನ ಪ್ರಶಸ್ತಿ’ದೊರೆತಿವೆ.

More About Author