Story

ಶೆಟ್ಟಿ ಮತ್ತು ವೇಶ್ಯೆ

ಈ ಕಥೆ ಶುರುವಾಗೋದೆ ಬಯಲುಸೀಮೆಯ "ಕೆಂಚನಗದ್ದೆ" ಎಂಬ ಪುಟ್ಟ ಹಳ್ಳಿಯಲ್ಲಿ. ಕೆಂಚನಗದ್ದೆಯ ಶೆಟ್ಟರೊಬ್ಬರಿಗೆ ಇತ್ತೀಚಿಗಷ್ಟೆ ಮದುವೆಯಾಗಿತ್ತು. ಶೆಟ್ಟರಂತೂ ವಿಪರೀತ ಕಾಮಿಗಳು , ಮದುವೆಯಾಗಿ ೩ ವರ್ಷದೊಳಗೆ ಶೆಟ್ಟರ ಮಡದಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ‌ ನೀಡಿದ್ದಳು. ಮದುವೆಯಾಗಿ ಇಷ್ಟು ವರ್ಷ ಕಳೆದರೂ ಶೆಟ್ಟಿರಿಗೆ ಅವರ ಕಾಮದ ಆಸೆ‌ ಈಡೇರಿರಲ್ಲಿಲ್ಲ. ಹಸಿಹುಲ್ಲನ್ನು ಕಬಳಿಸುವ ಹಸುವಿನ ಹಾಗೆ ಹೆಂಡತಿಗಾಗಿ ಕಾಯುತ್ತಲೆ ಇರುತ್ತಿದ್ದರು. ಪ್ರತಿನಿತ್ಯ ರಾತ್ರಿ ಹೆಂಡತಿಯೊಡನೆ ಮಲಗಲು ಹೊರಕೋಣೆಗೆ ಹೋದಾಗಲ್ಲೆಲ್ಲ ಶೆಟ್ಟರಿಗೆ ವಿಪರೀತ ಕೋಪ ಬರುತ್ತಿತ್ತು. ಆದರೂ, ಮಕ್ಕಳಿಗಾಗಿ ಹೀಗೆಲ್ಲ ಮಾಡುತ್ತಿರುವುದೆಂಬ ಎಂಬ ಒಂದೇ ಕಾರಣಕ್ಕಾಗಿ ತೆಪ್ಪಗಾಗುತ್ತಿದ್ದರು.

ಮರುದಿನ ಶೆಟ್ಟರು ತಮ್ಮ ಕಾರ್ಯಲಯಕ್ಕೆ ಹೋಗುವಾಗ, ಮಾರ್ಗಮಧ್ಯದಲ್ಲಿ ಕಾಫಿ ಕುಡಿಯಲು ಒಂದು ಪೆಟ್ಟಿಗೆ ಅಂಗಡಿಯ ಮುಂದೆ ಕೂತಿದ್ದ ಇಬ್ಬರು ಮಧ್ಯಮ ವಯಸ್ಕರರಿಬ್ಬರು ಸಂಕೋಚವಾಗಿ ಯಾವುದೋ ವಿಷಯವಾಗಿ ಮಾತಾಡುತ್ತಿರುವುದು ಶೆಟ್ಟರ ಕರ್ಣಗಳಿಗೆ ಬಿದ್ದವು. ಅವರಿಬ್ಬರು ಹಿಂದಿನ ರಾತ್ರಿ ವೇಶ್ಯಯ ಮನೆಗೆ ಹೋಗಿಬಂದಿದ್ದುದರ ವಿಚಾರವಾಗಿ ಮಾತಾಡುತ್ತಿದ್ದರು. ಅದನ್ನೆಲ್ಲ ಕೇಳಿಸಿಕೊಂಡ ಶೆಟ್ಟರಿಗೆ ತಮಗೂ ವೇಶ್ಯೆಯ ಮನೆಗೆ ಹೋಗಬೇಕೆಂಬ ಆಸೆಯಾಗಿ ಅದೇ ದಿನ ರಾತ್ರಿ ಶೆಟ್ಟರು ವೇಶ್ಯೆಯ ಮನೆಗೆ ಹೋದಾಗ ಆಕೆ ಅವರನ್ನು ಆದರದಿಂದ ಸ್ವಾಗತಿಸಿದಳು. ಅವರನ್ನು ಕುಳ್ಳರಿಸಿ ಕುಡಿಯಲು ಹಾಲು ಕೊಟ್ಟಳು ಅಷ್ಟರೊಳಗೆ ಅವಳ ಮನೆಯ ಒಂದು ಕೋಣೆಯಿಂದ ಕಂದಮ್ಮವೊಂದರ ಅಳುವಿನ ಶಬ್ದ ಕೇಳಿಸಿತು. ತಕ್ಷಣ ! ಅವಳು ಆ ಕೋಣೆಗೆ ಹೊಕ್ಕಿ ಕಂದಮ್ಮನಿಗೆ ಹಾಲುಣಿಸಿ ಮಲಗಿಸಿ ಬಂದಳು.

ಇನ್ನೇನು ಪಕ್ಕದ ಕೋಣೆಗೆ ಶೆಟ್ಟರನ್ನು ಕರೆದೊಯ್ಯಬೇಕೆನ್ನುವಷ್ಟರಲ್ಲಿ ಯಾರೋ ಬಾಗಿಲು ಬಡಿದ ಶಬ್ದವಾಗಿ, ಆಕೆ ಬಾಗಿಲು ತೆರೆದಾಗ ಪಕ್ಕದ ಮನೆಗೆ ಟೀವಿ ನೋಡಲು ಹೋಗಿದ್ದ ಅವಳ ಹಿರಿಯ ಮಗ ಹಸಿವಾಗಿ ಮನೆಗೆ ಬಂದಿದ್ದ. ಅವನಿಗೆ ಅಡುಗೆ ಮನೆಯಲ್ಲಿ ಉಳಿದು-ಪಳಿದಿದ್ದ ಅನ್ನವನ್ನ ಹಾಕಿಕೊಟ್ಟು ಮಗುವಿದ್ದ ಕೋಣೆಗೆ ಕಳುಹಿಸಿ ಚಿಲಕ ಹಾಕಿಕೊಂಡಳು. ನಂತರ ಶೆಟ್ಟರನ್ನ ಇನ್ನೊಂದು ಕೋಣೆಗೆ ಕರೆತಂದಳು. ಇಷ್ಟೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಶೆಟ್ಟರು ಅವಳನ್ನ ಪ್ರಶ್ನೆಸುತ್ತಾರೆ- " ನೀನೊಬ್ಬಳು ವೇಶ್ಯೆ? ಇವರು ನಿನಗೆ ಹುಟ್ಟಿದ ಮಕ್ಕಳಾ? ನೀನು ಇವರನ್ನ ಸಾಕ್ತಾ ಇದ್ದೀಯಾ?" ಎಂದಾಗ ಅವಳ ಕಾಣಲ್ಲಿ ಕಣ್ಣೀರವ್ವ ನೀರಾಗಿ ಹೊರಬಂದಳು.

ತನ್ನ ಬದುಕಿನ ಕಥೆಯ ಹೇಳಲಾರಂಭಿಸಿದಳು- "ನನ್ನ ಹೆಸರು ನಿಂಗವ್ವ ಅಂತ. ನಂಗೆ ಮದುವೆಯಾಗಿ ಹತ್ತು ವರ್ಷ ಆಯ್ತು. ನನ್ನ ಗಂಡ ವಿಪರೀತ ಕುಡುಕನಾಗಿದ್ದ. ಎಲ್ಲ ಕೆಟ್ಟ ಚಟಗಳಿಗೆ ದಾಸನಾಗಿಬಿಟ್ಟಿದ್ದ. ಅವನ ಚಟಗಳ ನಡುವೆಯೂ ಇಬ್ಬರು ಮಕ್ಕಳನ್ನು ಉಡುಗೊರೆಯಾಗಿ ಕೊಟ್ಟು ಹೋದ. ಅವನ ಕೆಟ್ಟ ಚಟಗಳು ಇನ್ನೊಬ್ಬಳು ಹೆಂಗಸೊಟ್ಟಿಗೆ ಸಂಬಂಧ ಬೆಳೆಸುವ ಮಟ್ಟಿಗೆ ಹೋಗಿತ್ತು. ಇಷ್ಟೆಲ್ಲಾ ಕೆಟ್ಟ ಚಟಗಳಿಗೆ ದಾಸನಾಗಿದ್ದವನಿಗೆ ಖಾಯಿಲೆ ಬಾ ಅಂದ್ರೆ ಬಾರದೆ ಇರುತ್ತಾ ಸ್ವಾಮಿ? ಅದೆಂತ್ತದ್ದೋ ಏಡ್ಸ್‌ ಎಂಬ ಹೆಮ್ಮಾರಿ ಖಾಯಿಲೆಗೆ ತುತ್ತಾಗಿ ಸಿವನ ಪಾದ ಸೇರ್ಬುಟ್ಟ ಆ ಮನುಷ್ಯ. ಎಷ್ಟೆ ಪ್ರಯತ್ನಿಸಿದ್ರು ಉಳಿಸಿಕೊಳ್ಳೋಕೆ ಆಗಲೇ ಇಲ್ಲ. ಅವನೇನೋ ಸತ್ತೋದ ಆದರೆ, ಅವನು ಮಾಡಿರೋ ಸಾಲ ಎಲ್ಲ ನನ್ನ ಮೇಲೆ ಬಿತ್ತು. ಹಾಗೋ ಹೀಗೋ ಮಾಡಿ ಕಷ್ಟ ಪಟ್ಟು ಕೆಲಸಕ್ಕೆ ಸೇರಿದೆ ಆದರೆ, ಅವರು ಕೊಡೋ ಸಂಬಳ ನನ್ನಿಬ್ಬರು ಮಕ್ಕಳನ್ನು ಸಾಕಲು ಸಾಲದಾಯಿತ. ವಿಧಿಯಿಲ್ಲದೆ ಈ ಕಾರ್ಯಕ್ಕೆ ಕೈ ಹಾಕಿದೆ. ನಂಗೂ ವಯಸ್ಸಾಯಿತಲ್ವ? ಗಿರಾಕಿಗಳು ಕಡಿಮೆಯಾಗುತ್ತಾ ಇದ್ದಾರೆ. ದೇವರ ಹಾಗೆ ಇವತ್ತು ನೀವು ಬಂದಿದ್ದೀರಿ, ನಾಳೆ ನನ್ನ ಮಗನ ಶಾಲೆಗೆ ಫೀಸು ಕಟ್ಟೋಕೆ ಹಣದ ಅವಶ್ಯಕತೆ ಇತ್ತು. ಹಾಗಾಗಿ, ಪರದಾಡ್ತಾ ಇದ್ದೆ. ನೀವು ನನ್ನನ್ನ ಹೇಗಾದರೂ ಉಪಯೋಗಿಸಿಕೊಳ್ಳಿ , ನನ್ನ ಮಗನ ಶಾಲೆಯ ಫೀಸು ಕಟ್ಟೋಕೆ ಹಣ ಕೊಡಿ "ಎಂದು ಗೋಗರೆದಳು. ಇಷ್ಟೆಲ್ಲಾ ಮೌನವಾಗಿ ಆಲಿಸಿದ ಶೆಟ್ಟರಿಗೆ ತನ್ನ ಹೆಂಡತಿ ಮಕ್ಕಳ ನೆನಪಾಗಿ ಜೇಬಿನಲ್ಲಿದ್ದ ಕಾಸನ್ನು ಅವಳಿಗೆ ಕೊಟ್ಟು ಮರುಮಾತಾಡದೆ ಮನೆಗೆ ಹಿಂದಿರುಗಿದರು. ಮನೆಗೆ ಬಂದವರೆ , ಮನೆಯ ಬಾಗಿಲು ಬಡಿದಾಗ ಮಧ್ಯರಾತ್ರಿ 12 ಗಂಟೆಯಾಗಿತ್ತು, ತಡವಾಗಿ ಬಂದಿದ್ರು ಅವರ ಹೆಂಡತಿ ಪ್ರೀತಿಯಿಂದ ಮಾತಾಡಿಸಿದಳು, ಬನ್ನಿ! ಊಟ ಮಾಡಿ, ತುಂಬಾ ಸುಸ್ತಾಗಿದ್ದೀರ? ಅಂತೆಲ್ಲಾ ಪ್ರಶ್ನೆಸಿದಾಗ, ಶೆಟ್ಟರು ಹೆಂಡತಿಯ ಪ್ರೀತಿಯ ಕಂಡು ಮೌನಿಯಾದ್ರು. ಊಟ ಬೇಡ ಎಂದು ಉತ್ತರಿಸಿ, ಮೌನವಾಗಿಯೇ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿ ಯೋಚಿಸಲಾರಂಭಿಸಿದರು. ' ತಾನೇನಾದರೂ ಆ ಹೆಣ್ಣಿನ ಸಹವಾಸ ಮಾಡಿದ್ರೆ? ಅವಳ ಗಂಡನ ಹಾಗೆ ನಾನು ಖಾಯಿಲೆ‌ ಹತ್ತಿಸಿಕೊಂಡು ಸತ್ತಿದ್ರೆ? ತನ್ನ ಹೆಂಡತಿಯೂ ಅವಳ ದಾರಿಯನ್ನೆ ಹಿಡಿಯಬೇಕಾಗಿತ್ತೇನೋ? ಎಂಬ ಗೊಂದಲದ ಪ್ರಶ್ನೆಗಳೊಂದಿಗೆ ತಾನೇನು ತಪ್ಪು ಮಾಡಿಲ್ಲವೆಂದು ನೆಮ್ಮದಿಯಿಂದ ಮಲಗಿಬಿಟ್ರು.

ಚಂದನ ವೆಂಕಟೇಶ್

ಯುವ ಬರಹಗಾರ್ತಿ ಚಂದನ ವೆಂಕಟೇಶ್ ಮೂಲತಃ ಹಾಸನ ಜಿಲ್ಲೆಯವರು. ಬರಹದ ಜೊತೆಗೆ ಫೇಸ್ಬುಕ್ ನಂತಹ ಆನ್ ಲೈನ್ ಫ್ಲಾಟ್ ಫಾರ್ಮ್ ನಲ್ಲಿ ‘ವಾರದ ಕಥೆ ಚಂದನ ಜೊತೆ’ ಎಂಬ ಪರಿಕಲ್ಪನೆಯೊಂದಿಗೆ ಮೌಲ್ಯಾಧಾರಿತ ಕತೆಗಳನ್ನು ಹೇಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ, 2017 ರಲ್ಲಿ ಹಾಸನ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳಾನಾಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಅಲ್ಲದೇ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ‘ಸಾಹಿತ್ಯ ಶ್ರೀ’ ಬಿರುದನ್ನು ನೀಡಿದೆ. ‘ಫ್ರಿಮ್ರೋಸ್ ಮೇಲಿನ ಶಾಪ’ ಚಂದನ ವೆಂಕಟೇಶ್ ಅವರ ಮೊದಲ ಅನುವಾದಿತ ಕತಾಸಂಕಲನ.

More About Author