Poem

ತಮಟೆಯ ಹಾಡು

ತಮಟೆ ತೊಗಲ ತೀಡಿ ತೀಡಿ
ತಮಟೆ ದನಿಯ ಹೊಸತು ಮಾಡಿ
ಜಗದ ಜಡವ ಸಾರಿದೆ
ಬೆವರ ತಾಪ ಸೋಕಿದೆ

ಮೋಡ ತಾರೆ ಗ್ರಹಗಳಲ್ಲಿ
ಮುತ್ತು ರತ್ನ ಉದುರುತಿರಲು
ರೆಟ್ಟೆ ಹೊಟ್ಟೆ ಬೆವರ ಜೊತೆಗೆ
ಕುಳಿತುಕೊಂಡೆ ಮಾತಿಗೆ

ಒಡಲತುಂಬ ಕಾವ್ಯ ಕಟ್ಟೆ
ನದಿಗಳಲ್ಲಿ ಹರಿಯಬಿಟ್ಟೆ
ಕನಸು ತೇಲಿ ಮೂಟೆಗಟ್ಟೆ
ಬಾಯಿ ಬಿಚ್ಚಿ ಹಾರಿಬಿಟ್ಟೆ

ಹರಿತವಾದ ಹಲ್ಲು ಮೂಡಿ
ಹಸಿ ಹಸಿವು ಹೊಟ್ಟೆಯೊಳಗೆ
ಗೋಳಾಡುವ ಬಾಯಿ ಮುಚ್ಚಿ
ಕೆಂಡ ಸುರಿವ ನಾಲಿಗೆ

ಗಾಳಿ ಮಳೆ ಬಿಸಿಲಿನಲ್ಲಿ
ಬದುಕುವವರ ರೆಕ್ಕೆಗಳು
ಸಿಟ್ಟಿನಿಂದ ನಕ್ಕಾಗ
ಬಾನೆತ್ತರ ಬಿರುಗಾಳಿ

ಆಡು ಭಾಷೆ ಹಾಡುವವರ
ಕ್ರಾಂತಿಪದದ ದನಿಯಾದೆ
ಒಲವಾದೆ ಬಲವಾದೆ
ತಲೆಯೆತ್ತಿ ನಡೆವ ಛಲವಾದೆ

ಓ ಬಂಡಾಯಗಾರ
ಇರುವೆ ಸಾಲಿನೊಡೆಯ
ಕನ್ನಡವ್ವನ ಕರಿಯ

ತಬರ-ಬೆಲ್ಚಿ ಕಾಡಿದಂತೆ
ಖೈರ್ಲಾಂಜಿ- ವೇಮುಲ ಕಾಡಲಿಲ್ಲವೇ
ಇನ್ನೂ ಅಲ್ಲೇ ಕುಂತವರ ಕೂಗು
ಮೊನ್ನೆಯವರೆಗೂ ಕೇಳಿತಲ್ಲವೇ

ಮುಳ್ಳಿನ ಆಲಿಂಗನಕ್ಕೆ
ತೋಳ್ದೆರದ ಚಳಿಯಾದೆಯಲ್ಲ
ನೋವನೇಕೆ ಹೇಳಲಿಲ್ಲ
ತಬ್ಬಿದ್ದು ನಲವತ್ತೇಳರ ಸ್ವಾತಂತ್ರ್ಯವೇ

ಹೋಗಿ ಬಾ ಹೋಗಿ ಬಾ
ಕನ್ನಡದ ಕ್ರಾಂತಿಕವಿಯೆ
ನಿನ್ನ ಹೆಜ್ಜೆ ಗುರುತುಗಳು
ಕಬ್ಬಂಡೆ ಮೇಲೆ ಮೂಡಿವೆ

 

ವಿಕಾಸ್ ಆರ್ ಮೌರ್ಯ

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.  ಹಾಗೇ 'ನೀಲವ್ವ' ಎಂಬ ಕತಾಸಂಕಲನ ಹಾಗೂ 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಜೀರುಂಡೆ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಬರೆದ ಬುದ್ಧಬೆಳಕು ನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಕರ್ನಾಟಕದಲ್ಲಿ ಕೋಮವಾದದ ವಿರುದ್ಧ ನಡೆದ ಬಹುಮುಖ್ಯ ಚಳುವಳಿ ಚಲೋ ಉಡುಪಿಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.

More About Author