
ಲೇಖಕ ಶರಣಗೌಡ ಬಿ.ಪಾಟೀಲ ತಿಳಗೂಳ ಅವರು ಬರೆದ 'ವಿಪರ್ಯಾಸ..!' ಕವಿತೆಯ ಸಾಲುಗಳು...
ಜಾತಿ ಮತ ಹಿಡಿದು
ಹೊಡೆದಾಡದಿರೆಂದು
ಸಾರಿ ಹೇಳಿದ ಸಂತರ
ಮಾತು ಮರೆತು
ಸಾಗುತಿರುವದೇಕೆ?
ಮಾನವೀಯತೆ ಬೀಜ
ಬಿತ್ತಿ ಮೌಲ್ಯಯುತ
ಬೆಳೆ ತೆಗೆಯಲು
ಬೋಧಿಸಿದ ದಾರ್ಶನಿಕರ
ತತ್ವ ಪಾಲಿಸದೆ ಅಸಹಿಷ್ಣತೆ
ತೋರುವದೇಕೆ?
ಪ್ರೀತಿ ನಂಬಿಕೆ ಶಾಂತಿ
ಸಮಾನತೆ ಕುರಿತು ಬರೆದಿಟ್ಟ
ವಚನಕಾರರ ವಚನ
ಪಚನ ಮಾಡಿಕೊಳ್ಳದೆ
ದುರಾಲೊಚಿಸುವದೇಕೆ?
ಸೌಹಾರ್ದ ಸಹಬಾಳ್ವೆ
ನಡೆಸಿರೆಂದು ಹೇಳಿದ
ಮಹಾತ್ಮರ ಕರೆಗೆ
ಓಗೊಡದೆ ದುರಾತ್ಮರಂತೆ
ವರ್ತಿಸುವದೇಕೆ ?
ಅಷ್ಟ ಮದ ಸುಟ್ಟು ಹಾಕಿ
ಗಟ್ಟಿತನ ಬೆಳೆಸಲು
ಹಿತೋಪದೇಶ ನೀಡಿದ
ಶರಣ ಚಿಂತನೆಗೆ ಕಿವಿಗೊಡದೆ
ಶಾಂತಿ ಕದಡುವದೇಕೆ?
ಅವರ ತತ್ವಾದರ್ಶ ಪಾಲಿಸಿದ
ಹೊರತು ನಾವಾಗಲಾರೆವು
ಪೂರ್ಣ ಮನುಜರೆನ್ನುವದು
ಮರೆತು ಬದುಕುವದೇಕೆ ?
ಶರಣಗೌಡ ಬಿ.ಪಾಟೀಲ ತಿಳಗೂಳ
ಲೇಖಕ ಶರಣಗೌಡ ಪಾಟೀಲ ಅವರು ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)
ಪ್ರಶಸ್ತಿ-ಪುರಸ್ಕಾರಗಳು: ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ. ಸಾಧಕ ಶಿಕ್ಷಕ ಪ್ರಶಸ್ತಿ, ಕನ್ನಡ ನಾಡು ಲೇಖಕರ ಓದುಗರ ಸ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪುಸ್ತಕ ಪ್ರಶಸ್ತಿ ಗುರುಕುಲ ಪ್ರತಿಷ್ಠಾನದಿಂದ ಸಾಹಿತ್ಯ ಶರಭ ಪ್ರಶಸ್ತಿಗಳು ಲಭಿಸಿವೆ.
More About Author