Article

ಹಲವು ಬಣ್ಣದ 'ಗ್ರಾಫಿಟಿಯ ಹೂವು'

ಕಾವ್ಯವೆಂಬ ವೈನು ಕುಡಿದಷ್ಟು ಅಮಲೇರುವ, ತಿಂದಷ್ಟೂ ಹಸಿಯುವ ವಿಚಿತ್ರ ವಿಲಕ್ಷಣದ ರೋಗ ಕವಿ ಮನಸ್ಸಿಗಲ್ಲದೆ ಮತ್ತಾರಿಗೂ ಇರಲಾರದು. ಬೆಚ್ಚನೆಯ ಬೆಂಕಿಯ ಕಾವಿನಲ್ಲಿ ನವಿರೇಳುವ ಭಾವನೆಗಳನ್ನು ಅಕ್ಷರಗಳಲ್ಲಿ ಬಂಧಿಸುವ ಜೈಲರ್ ನಂತಹ ಕವಿ, ಎಣಿಸಲಾಗದಷ್ಟು ಭಾವನೆಗಳಲ್ಲಿ ಬಂಧಿಯಾಗಿರುವ ಶತಮಾನದ ಖೈದಿ ಎಂದರೆ ತಪ್ಪಾಗಲಾರದು. ಇಂಥ ಭಾವನೆಗಳ ಕಾರಾಗೃಹದ ಖಾಯಂ ಖೈದಿಯಂತ್ತಿರುವ ಆಕರ್ಷ ಪ್ರತಿ ಉಸಿರಿಗೊಂದು ಕವಿತೆ ಕಟ್ಟಿ ಆಕಾಶಕ್ಕೆ ಹಾರಬಲ್ಲ ಮತ್ತು ಹೂಗಿಡಕ್ಕೆ ಪರಿಮಳವ ಬಿಗಿದು ಮಣ್ಣಾಗಬಲ್ಲ!

'ಗ್ರಾಫಿಟಿಯ ಹೂವು' ಕಾವ್ಯದ ತುಮುಲ, ತುರಿಕೆಗಳು ಪ್ರತಿಯೊಬ್ಬರಿಗೂ ಅನುಭವಕ್ಕೆ ಬಂದಿರುವವೆ; ಆದರೆ, ಅವುಗಳನ್ನು ಅಭಿವ್ಯಕ್ತಿಸಿದ ರೀತಿ ಮಾತ್ರ ಫ್ರೆಶ್ ಅನ್ನಿಸುದಲ್ಲೆ ಸಂಕಲನದ ಸುಮ ಘಮ್ಮೆನ್ನುವುದು. ಬದುಕಿನ ಬಂಡಾಯತನದೊಂದಿಗೆ ಅಸಹಾಯಕ ರಾಜಿತನಗಳು ಮನುಷ್ಯ ಮನಸ್ಸಿನ ಮಿಡಿತದಷ್ಟೇ ಸತ್ಯ !

ಇಲ್ಲಿನ ಪ್ರತಿ ಕವಿತೆಯಲ್ಲೂ ಅಂಥ ಮುಖಗನ್ನಡಿಯನ್ನು ಕಾಣಬಹುದು. ಒಂದೇ ಕವಿತೆ ಏಕಕಾಲಕ್ಕೆ ಕವಿಯ ಅಸ್ತವ್ಯಸ್ತತೆಯೊಂದಿಗೆ ಓದುಗನ ಅಥವಾ ಲೋಕದ ಅಸ್ತವ್ಯಸ್ತತೆಯನ್ನು ತೋರಿಸುವುದು ಈ ಸಂಕಲನದ ವಿಶಿಷ್ಟವಾದ ಗುಣವೆಂದು ನನಗನ್ನಿಸುತ್ತದೆ. ಓದುವಾಗಲೆಲ್ಲ ಒಂದು ಗುಟುಕಿಗೆ ಧಕ್ಕಿದ್ದಂತೆ ಕಂಡರೂ ಕೂಡ, ಹೊಸ ಪ್ರತಿಮಾ ದೃಷ್ಟಿಕೋನ ಮತ್ತು ಮಾನಸಿಕ ವ್ಯಾಪಾರದ ಚಲನೆ ತಟ್ಟನೆ ನಿಲ್ಲಿಸಿ ಮತ್ತೆ ಮುಂದೆ ಸಾಗಿಸುತ್ತವೆ.

    " ನೀವು ಅರಿವೇ ಇಲ್ಲದೆ 

    ನೀವು ಮಲಗಿದ್ದಾಗ ಗಾಜಾಗಿರುತ್ತೀರಿ

    ಕೈ ಕಾಲುಗಳೆಲ್ಲ ಯಾವುದೋ ಕಿಟಕಿಯ ಕಂಬಿಗಳಾಗಿ,

    ಗಾಜನ್ನೇ ಉಸಿರಾಡುತ್ತಿರಬಹುದು ".....               

   " ಎಂದಿನಂತೆ ಅವನು ಇಡೀ ನಗರವನ್ನು 

   ಒಂದು ಗ್ರಾಫಿಟಿಯ ಹೂವಾಗಿಸಿ

   ಈ ನಗರಕ್ಕೆ ಮತ್ತು ಮಳೆಗೆ

   ಅದರ ಇರುವಿಕೆಯನ್ನು ಬಿಟ್ಟುಬಿಡುತ್ತಾನೆ "....               

    " ಕೆಲವೊಮ್ಮೆ ಈ ಕಾಂಕ್ರೀಟ್ ಗೋಡೆಗಳಲ್ಲಿ ಹುದುಗಿ

     'ಇನ್ನೂ ಬದುಕಿದ್ದೇನೆ' ಎಂದು ಕಿರಚಬೇಕೆನಿಸುತ್ತದೆ"..             

     " ಎದುರು ಚರಂಡಿಯಲ್ಲಿನ ನೀರು 

     ಆಗಾಗ್ಗೆ ಇಲ್ಲಿ ಮನುಷ್ಯನ ವಿಕೃತಗಳಾಗಿ 

     ಕೋಣೆಯ ಒಳಗೂ ಹೊರಗೂ ಹರಿದು...." 

ಈ ಬಗೆಯ ಹತ್ತು ಹಲವು ಸಾಲುಗಳು ಈ ಸಂಕಲನದಲ್ಲಿ ಕಾಣಲು ಸಾಧ್ಯವಿದೆ. ಹಾಗೆಂದ ಮಾತ್ರಕ್ಕೆ ಈ  'ಗ್ರಾಫಿಟಿಯ ಹೂವಿ'ಗೆ " ನಗರ ಸಂವೇದನೆ " ಎಂಬ ಹಣೆ ಪಟ್ಟಿ ಕೊಟ್ಟರೆ, ವಿಮರ್ಶಕನ ಅಲ್ಪಮತಿಯಂತ ವಿಕೃತಿ ಚರಂಡಿಯ ನೀರಾಗಿ ಕೋಣೆಯ ಒಳಗೂ, ಹೊರಗೂ ಹರಿದು ಬಿಡಬಹುದು. ನನಗನ್ನಿಸಿದ ಹಾಗೆ ಈ ಸಂಕಲದಲ್ಲಿರುವ ಪ್ರತಿ ಕಾವ್ಯವು ಮನುಷ್ಯನೊಂದಿಗೆ ಹಾಗೂ ಮನುಷ್ಯನಂತೆ ಜೀವ ಹೊಂದಿರಬಹುದಾದ ಪ್ರತಿ ವಸ್ತು, ಜೀವಿಗಳ ಸಮೂಹ ಸಂವೇಧನೆಯೇ ಆಗಿದೆ. ಹೀಗಿರುವ ಕಾವ್ಯದಲ್ಲಿನ ರಚನೆ, ಪ್ರತಿಮೆ ಹಾಗೂ ಅಭಿವ್ಯಕ್ತಗೊಂಡ ಭಾಷೆಯ ಆಧಾರದ ಮೇಲೆ "ನಗರ ಸಂವೇಧನೆ" ಎಂದು ಪೋಸ್ಟ್ ಮಾರ್ಟ್ಂ ಮಾಡದಿರುವುದು ಒಳ್ಳೆಯದು. 

ಇನ್ನು ಕಾವ್ಯದ ರಚನೆಗೆ ಬರುವುದಾದರೆ, ಕನ್ನಡ ಸಾಹಿತ್ಯದ ಹೊಸ ತಲೆಮಾರಿನ ತಲ್ಲಣ, ಸಹಜ ಸ್ಥಿತಿಗತಿ ಹಾಗೂ ಪ್ರತಿಮಾನ್ವೇಷಣೆಯನ್ನು ಕಾಣಬಹುದು. ಬರೆದದ್ದನ್ನೇ ಬರೆಯದ ಬೇರೊಂದು ಬಗೆಯ ಬರಹದ ಘಮಲು ಗ್ರಾಫಿಟಿಯ ಹೂವಿನಲ್ಲಿದೆ. ಸಹಜವಾಗಿ ಬರೆದಷ್ಟೇ ಕವಿಯಾಗಬಲ್ಲ ಎಂಬ ಮಾತಿಗೆ ಆಕರ್ಷ ಉದಾಹರಣೆಗೆ ಸಿಗಬಲ್ಲ ಕವಿ ಎಂದು ಹೇಳಬಹುದು.

ಆತನ ಮುಂದಿನ ಬರಹಗಳನ್ನು ಅತ್ಯಂತ ಕೂತೂಹಲದಿಂದ ಎದುರು ನೋಡುತ್ತಾ, ಇನ್ನಷ್ಟು ಹೊಸತನ್ನು ನೀಡಲಿ ಎಂದು ಒಬ್ಬ ಓದುಗನ ಆಶಾಗೋಪುರವನ್ನು ಆತನ ಹೆಗಲ ಮೇಲಿರಿಸಿ, ಕವಿಯ ಜವಾಬ್ದಾರಿಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡು ಮುಂದುವರಿಯಲಿ ಎಂದು ಆಶಿಸುತ್ತೇನೆ !

ಈ ಪುಸ್ತಕ ಹೆಚ್ಚಿನ ಮಾಹಿತಿಗಾಗಿ  ಇಲ್ಲಿ ಕ್ಲಿಕ್ ಮಾಡಿ

ಚಾಂದ್ ಪಾಷಾ (ಕವಿಚಂದ್ರ)