Article

ಹೆಣ್ಣಿನ ನೈಜ ಕಥನಗಳ ‘ವಿಮುಕ್ತೆ’

ಇಂದಿನ ಯುವಜನತೆ ಭಾಷೆಯನ್ನು ಕಳೆದುಕೊಳ್ಳುತ್ತಿದ್ದಾರೆ, ಯಂತ್ರ ನಾಗರಿಕತೆಯ ಬೆನ್ನು  ಹತ್ತುತ್ತಾ ನೈಜ ಬದುಕಿನ ಹದವನ್ನು ಮೀರುತ್ತಿದ್ದಾರೆ, ಬದುಕಿನ ಚಿಕ್ಕ ಪುಟ್ಟ ನವಿರು ಭಾವಗಳನ್ನು ಅನುಭವಿಸುವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುತ್ತಿಲ್ಲ- ಎಂಬೆಲ್ಲ ದೂರುಗಳನ್ನು ಅಲ್ಲಗಳೆಯುವಂತೆ ಕೆಲವರು ತಮ್ಮನ್ನು ತಾವು ಸೃಜನಶೀಲ ಕ್ಷೇತ್ರದಲ್ಲಿ ನಿರೂಪಿಸಿಕೊಳ್ಳುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಂತೂ ಇಂತಹ ಯುವಜನರ ಒಂದು ಸಮೂಹವೇ ಇದೆ.

ಈಗಿನ್ನು ವಿದ್ಯಾರ್ಥಿಯಾಗಿದ್ದು ಅನುವಾದ ಕ್ಷೇತ್ರದಲ್ಲಿ ಗಟ್ಟಿ ನೆಲೆಯನ್ನು ಕಂಡುಕೊಳ್ಳುತ್ತಿರುವ ಅಜಯ್ ವರ್ಮಾ ಅಲ್ಲೂರಿ ಕೇವಲ ನಾಲ್ಕು ವರ್ಷಗಳ ಹಿಂದೆ ತೇಜಸ್ವಿ ಓದು ಕಾರ್ಯಕ್ರಮವನ್ನು ನಡೆಸುತ್ತೇವೆಂದು ಕರ್ನಾಟಕದಾದ್ಯಂತ ತಿರುಗುತ್ತಿದ್ದು ಇಂದು ‘ಹಾಣಾದಿ’ಯಂತಹ ಅದ್ಭುತ ಕಾದಂಬರಿಯೊಂದನ್ನು ಬರೆದಿರುವ ಕಪಿಲ ಹುಮನಾಬಾದೆ, ಬಿಸಿಲಿನಲ್ಲಿ ಕಾರ್ಮಿಕರೊಂದಿಗೆ ದುಡಿಯುತ್ತಲೇ ಬೆಂಕಿಯಂತಹ ಕವನಗಳನ್ನು ಬರೆಯುವ ಸಚಿನ್ ಅಂಕೋಲ, ಈಗಾಗಲೇ ನಾಲ್ಕು ಒಳ್ಳೆಯ ಕಾದಂಬರಿಗಳನ್ನು ಬರೆದು ತಮ್ಮದೇ ಸ್ವಂತ ಪ್ರಕಾಶನದ ಮೂಲಕ ಅದನ್ನು ಪ್ರಕಟಿಸುವುದಲ್ಲದೆ ಇತ್ತೀಚೆಗೆ ಬೇರೆಯವರ ಪುಸ್ತಕಗಳನ್ನೂ ಪ್ರಕಟಿಸುತ್ತಿರುವ ಅನುಷ್ ಶೆಟ್ಟಿ- ನನ್ನ ಸ್ನೇಹ ವಲಯದಲ್ಲಿರುವ ಇವರೆಲ್ಲರೂ ಯುವಕರ ಬಗೆಗಿನ ಆರೋಪಗಳನ್ನು ಪುನರ್' ಪರಿಶೀಲಿಸುವಂತೆ ಮಾಡಿದ್ದಾರೆ.

ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ ಓಲ್ಗಾ ಅವರ ಕಥಾಸಂಕಲನ ‘ವಿಮುಕ್ತೆ’ಯನ್ನು ಅಜಯ್ ಇತ್ತೀಚೆಗಷ್ಟೇ ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನು ‘ಬಕುಲದ ಬಾಗಿಲಿನಿಂದ’ ಎಂಬ ಅಂಕಣದಲ್ಲಿ ಪೌರಾಣಿಕ ಪಾತ್ರಗಳ ಬಗ್ಗೆ ಬರೆಯುತ್ತಿರುವಾಗ ಅದಕ್ಕೆ ಸಂಬಂಧಿಸಿದ ತನ್ನ ಅನುವಾದ ಕತೆಗಳನ್ನು ನನ್ನ ಓದಿಗಾಗಿ ಅಜಯ್ ಕಳಿಸುತ್ತಿರುವುದರಿಂದ ಹೆಚ್ಚಿನವುಗಳನ್ನು ಈಗಾಗಲೇ ಓದಿದ್ದೆ. ಆದರೆ ಎಲ್ಲವನ್ನೂ ಒಟ್ಟಾಗಿ ಪುಸ್ತಕದಲ್ಲಿ ಓದುವ ಖುಷಿಯೇ ಬೇರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿರುವ ಇಲ್ಲಿನ ಕಥೆಗಳನ್ನು ಓದುತ್ತಾ ಹೋದಂತೆಲ್ಲ ಬಿಡುಗಡೆಯ ಕನಸು ಹೊತ್ತ ಹೆಣ್ಣಿನ ಕಥನಗಳು ನಮ್ಮೆದುರು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಇಲ್ಲಿನ ಎಲ್ಲ ಕಥೆಗಳಲ್ಲಿ ಕಂಡುಬರುವ ಸಾಮಾನ್ಯ ಪಾತ್ರವೆಂದರೆ ಸೀತೆ. ರಾಮಾಯಣದ ಬೇರೆ ಬೇರೆ ಕಾಲಘಟ್ಟದ ಪ್ರಮುಖ ಸ್ತ್ರೀಪಾತ್ರಗಳೆಲ್ಲವೂ ಸೀತೆಯೊಂದಿಗೆ ಮುಖಾಮುಖಿಯಾಗುತ್ತಲೇ ಅವಳನ್ನು ವಿಮುಕ್ತೆಯಾಗಿಸುವ ಕಸುವನ್ನು ನೀಡುತ್ತಾ ಹೋಗುತ್ತಾರೆ. ಶೂರ್ಪನಖಿ, ರೇಣುಕೆ, ಅಹಲ್ಯೆ, ಮಂಡೋದರಿ, ಊರ್ಮಿಳೆ ಇವರೆಲ್ಲರ ಜೊತೆಗೆ ರಾಮನೂ ಇಲ್ಲಿ ಬಿಡುಗಡೆಗೆ ಹಂಬಲಿಸುವ ಜೀವವೆ. ಹೆಣ್ಣೊಬ್ಬಳು ಹೆಣ್ಣಿನ ಚರಿತೆಯನ್ನು ಕಥಿಸಿದಾಗ ಅವೆಷ್ಟು ನೈಜವಾಗಿರುತ್ತವೆ ಎಂಬುದಕ್ಕೆ ಇಲ್ಲಿಯ ಕಥೆಗಳನ್ನು ಓದಲೇಬೇಕು. ಹೆಣ್ಣುಗಳ ನಡುವೆ ಪೈಪೋಟಿ, ಅಸೂಯೆ, ವೈರತ್ವ ಮೊದಲಾದ ತಾಮಸ ಗುಣಗಳು ಮಾತ್ರವೇ ಇರಲು ಸಾಧ್ಯ ಎಂಬ ಪರಿಪಾಠವನ್ನು ಮುರಿದು, ಒಂದು ಹೆಣ್ಣಿಗೆ ಇನ್ನೊಬ್ಬಳು ಆಸರೆಯಾಗಿ ಹೆಗಲು ಕೊಡುವ ಸಂತೈಸುವ ಪಾತ್ರಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಇದು ವಾಸ್ತವ ಕೂಡಾ ಹೌದು. ತನ್ನ ಗಂಡನ ಕೂಡಿಕೆಯವಳೇ ಆಗಿರಲಿ, ತನ್ನನ್ನು ಹುರಿದು ಮುಕ್ಕಿದ ನಾದಿನಿಯೇ ಆಗಿರಲಿ ಕಷ್ಟವೆಂದು ಬಂದಾಗ ಎಲ್ಲ ಮರೆತು ಮಡಿಲಲ್ಲಿಟ್ಟು ಸಂತೈಸಿದ ಅದೆಷ್ಟೋ ಹೆಣ್ಣು ಜೀವಗಳನ್ನು ನೋಡಿದ ನನಗೆ ನಾದಿನಿಯೇ ಆಗಿರಲಿ, ಕಷ್ಟವೆಂದು ಬಂದಾಗ ಎಲ್ಲ ಮರೆತು ಮಡಿಲಲ್ಲಿಟ್ಟುಕೊಂಡು ಸಂತೈಸಿದ ಅದೆಷ್ಟೋ ಹೆಣ್ಣುಜೀವಗಳನ್ನು ನೋಡಿದ ನನಗೆ ಇಲ್ಲಿಯ ಕಥೆಗಳನ್ನು ಓದುತ್ತಿರುವಂತೆ ಅವರೆಲ್ಲರನ್ನೂ ಮತ್ತೆ ಮುಟ್ಟಿ ಬಂದ ಅನುಭವವಾಯಿತು. ಹಾಗಾಗಿಯೇ ಇಲ್ಲಿ ಸೀತೆಯನ್ನು ಮಂಡೋದರಿ ಸಂತೈಸುತ್ತಾಳೆ. ಶೂರ್ಪನಖಿ ಸೀತೆಗೆ ಆತ್ಮಸಖಿಯಾಗುತ್ತಾಳೆ.

ಹೆಣ್ಣನ್ನು ವ್ಯಾಖ್ಯಾನಿಸುವ ಸೌಂದರ್ಯ, ಸೌಶೀಲ್ಯ, ಪಾತಿವ್ರತ್ಯ ಈ ಎಲ್ಲ ಪದಗಳಿಗೆ ಇಲ್ಲಿಯ ಪಾತ್ರಗಳು ತಮ್ಮ ಅನುಭವ ಲೋಕದ ಮೂಲಕವೇ ‍ಭಿನ್ನ ವ್ಯಾಖ್ಯಾನವನ್ನು ನೀಡುತ್ತವೆ. ತನ್ನ ಮೂಗನ್ನು ಕಳಕೊಂಡು ಕುರೂಪಿಯಾದ ಶೂರ್ಪಣಖಿ ಸುಂದರವಾದ ಬನವನ್ನು ಸೃಷ್ಟಿಸುತ್ತಾಳೆ. ಗಂಡನ ಅಗಲುವಿಕೆಯ ನಂತರವೂ ಮಂಡೋದರಿ ತನ್ನ ಅಲಂಕಾರವನ್ನು ತೆಗೆಯುವುದನ್ನು ವಿರೋಧಿಸುತ್ತಾಳೆ. ತನ್ನನ್ನು ವಿಚಾರಿಸುವ ಹಕ್ಕನ್ನು ತಾನು ಯಾರಿಗೂ ಕೊಡಲಾರೆ ಎಂದು ಪಟ್ಟು ಹಿಡಿವ ಅಹಲ್ಯೆ ಜ್ಞಾನದ ದಾರಿಯಲ್ಲಿ ಸಾಗುತ್ತಾಳೆ. ಊರ್ಮಿಳೆ ತನ್ನ ಅಕ್ಕ ಸೀತೆಗೆ ವಿಮುಕ್ತೆಯಾಗುವ ದಾರಿ ತೋರಿಸುತ್ತಾಳೆ. ರಾಜನಾಗಿ ಆಜ್ಞೆ ನೀಡಬೇಕಾದ ರಾಮ ಮಾತ್ರ ಕೊನೆಯವರೆಗೂ ಅಧಿಕಾರದ ಕಬಂಧ ಬಾಹುಗಳಲ್ಲಿ ಬಂಧಿತರಾಗಿ ಉಳಿಯುತ್ತಾನೆ.

ಇಲ್ಲಿನ ಕಥೆಗಳನ್ನು ಓದುವಾಗ ಕನ್ನಡದ ನುಡಿಗಟ್ಟಿನಲ್ಲಿ ಒಡಮೂಡಿದ ರಚನೆಗಳೇನೋ ಅನ್ನಿಸಲು ಕಾರಣ ಅಜಯ್ ಅವರ ಸಶಕ್ತವಾದ ಅನುವಾದ. ಇಲ್ಲಿಯ ಎಲ್ಲ ಕಥೆಗಳನ್ನು ಓದಿನ ಓಘಕ್ಕೆ ತಡೆಯಾಗದ ಸರಳ ಸುಂದರ ಶೈಲಿಯಲ್ಲಿ ಅವರು ಕಟ್ಟಿಕೊಟ್ಟಿದ್ದಾರೆ. ಕೃತಿಕಾರನ ಮಾತಿನಲ್ಲಿ ಅವರೇ ಹೇಳಿಕೊಂಡಂತೆ- ಅನುವಾದಕ್ಕೆ ಕೇವಲ ಭಾಷೆಯ ಅರಿವು ಮಾತ್ರ ಸಾಲದು, ಭಾವವನ್ನು ಅರಿತು ಇನ್ನೊಂದು ಭಾಷೆಯಲ್ಲಿ ಹಿಡಿದಿಡಬಲ್ಲ ಕಸುವೂ ಕೂಡಾ ಬೇಕು. ಅದನ್ನು ಈಗಿನ್ನೂ ವಿದ್ಯಾರ್ಥಿಯಾಗಿರುವ ಅಜಯ್ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಸಮಾಜದ ಕಡುವಿರೋಧದ ನಡುವೆಯೂ ಪುರಾಣದ ಪಾತ್ರಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡಿ ಪುನರ್ ಲಿಖಿಸಿದವರು ಓಲ್ಗಾ. ಇಲ್ಲಿಯ ಸ್ತ್ರೀಪಾತ್ರಗಳ ಮಾತುಗಳನ್ನು ಗಮನಿಸಿದರೆ ಅವರ ಪಾತ್ರಪೋಷಣೆಯ ನಾವೀನ್ಯತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು.

“ಸಾಫಲ್ಯಕ್ಕೆ ಅರ್ಥವು ಗಂಡಸಿನ ಸಾಂಗತ್ಯದಲ್ಲಿ ಇಲ್ಲವೆಂದು ಗ್ರಹಿಸಿದ್ದೇನೆ ಸೀತಾ. ಅದು ಅರಿವಾದ ಮೇಲೆಯೇ ನನಗೆ ಈತನೊಂದಿಗೆ ನಂಟು ಬೆಳೆದಿದೆ.”

- ಶೂರ್ಪನಖಿ

“ಸತ್ಯ ಎಂದೂ ಒಂದೇ ರೀತಿ ಇರುವುದಿಲ್ಲವೆಂದು, ನಿರಂತರ ಬದಲಾಗುತ್ತಾ ಇರುತ್ತದೆ ಎಂದು ತಿಳಿದುಕೊಳ್ಳುವುದೇ ನಾನು ಸಂಪಾದಿಸಿದ ಜ್ಞಾನ.”

- ಅಹಲ್ಯೆ


“ಒಂದು ಮಡಕೆಯನ್ನು ಸುಂದರವಾಗಿ ರೂಪಿಸಲು ಸಾಧನೆ, ಏಕಾಗ್ರತೆ, ಮರಳು ಮತ್ತದಲ್ಲಿರುವ ನೀರಿನ ಅಂಶ ಇನ್ನೂ ಏನೇನೋ ಕಾರಣಗಳಿರುತ್ತವೆ. ಅದೆಲ್ಲವನ್ನೂ ಗ್ರಹಿಸಲಾಗದ ಮಹಾಜ್ಞಾನಿ ಜಮದಗ್ನಿ ಮಹರ್ಷಿ ತಪಸ್ಸಿನಿಂದ ಅದೆಷ್ಟು ಜ್ಞಾನ ಸಂಪಾದಿಸಿದರೂ ಹೆಂಡತಿಯ ಪಾತಿವ್ರತ್ಯದ ಬಗ್ಗೆ ಹಠ ಬಿಡದ ಮುಮುಕ್ಷನು.”

- ರೇಣುಕೆ

“ರಾಮ ಸೀತೆಯನ್ನು ತ್ಯಜಿಸಬಲ್ಲ, ಏಕೆಂದರೆ ಸೀತೆ ತನ್ನವಳು.
ಆದರೆ ರಾಜ್ಯವನ್ನು ತ್ಯಜಿಸಲಾರ, ಅದು ರಘುವಂಶದ್ದು.”

- ‘ಬಂಧಿತ’ ಕಥೆ.

“ಮದುವೆಯ ಮುಂಚೆ ನೀನು ಅಲಂಕರಣೆಯನ್ನು ಮಾಡಿಕೊಳ್ಳಲಿಲ್ಲವೇ? ನಾವು ನಮ್ಮ ಆನಂದಕ್ಕಾಗಿ, ವಿಲಾಸಕ್ಕಾಗಿ ನಮ್ಮ ದೇಹವನ್ನು ಗೌರವಿಸುವುದಕ್ಕಾಗಿ ಅಲಂಕರಿಸಿಕೊಳ್ಳುತ್ತೇವೆ. ಅದನ್ನು ನೋಡಿ ಗಂಡಂದಿರು ಸಂತೋಷಗೊಳ್ಳಬಹುದು. ಕೆಲವರು ಬೇಸರವೂ ಪಡಬಹುದು. ಆದರೆ ನಾವೂ, ನಮ್ಮ ದೇಹಗಳೂ ನಮ್ಮದಲ್ಲವೇ ಸೀತಾ? ನಾವು ಅವುಗಳನ್ನು ಗೌರವಿಸಬೇಕಲ್ಲವೇ?”

- ಮಂಡೋದರಿ

ರಾವಣ ಆರ್ಯರ ಅನುಕರಣೆ ಮಾಡಿ ಕಾಡನ್ನು ನಾಶಗೊಳಿಸಿ ಲಂಕಾನಗರವನ್ನು ಕಟ್ಟಿದರೆ, ಮಂಡೋದರಿ ತನ್ನ ಶೋಕದ ಶಮನಕ್ಕಾಗಿ ಅಶೋಕ ವನವನ್ನು ನಿರ್ಮಿಸಿಕೊಳ್ಳುತ್ತಾಳೆ. ದ್ರಾವಿಡ ಸಂಸ್ಕೃತಿಯ ಚೆಲುವನ್ನು ಓಲ್ಗಾ ತೆರೆದಿಡುವ ಬಗ್ಗೆ ಹೀಗೆ.
ಅಶೋಕವನದಲ್ಲಿ ಸೀತೆಯ ಶೋಕ ಹರಡಿಕೊಳ್ಳುತ್ತಲೇ ಲಂಕೆಗೆ ಉರಿದು ಹೋಗುತ್ತದೆ. ಕಡುಚೆಲುವ ಮಡದಿಯನ್ನು ಮನೆಯಲ್ಲಿಟ್ಟುಕೊಂಡು ಅದೇ ಸಾಮಾನ್ಯ ರೂಪಿನ ಸೀತೆಯನ್ನು ಅಪಹರಿಸಿ ತಂದ ಒಡೆಯನ ಕೆಡುಕುತನಕ್ಕೆ ಮಂಡೋದರಿಯ ಸಖಿ ನಯನೆ ದುಃಖಿಸುವಾಗ ಅವಳ ಕಣ್ಣೀರಿನ ಹನಿಗಳು ಹೂವುಗಳ ಮೇಲೆ ಬೀಳುತ್ತವೆ. ಆಗ ಬರುವ ಮಾತುಗಳು ನೋಡಿ-

“ಇಬ್ಬನಿ ಎಷ್ಟು ಬಿಸಿಯಾಗಿದೆ, ಏಕೆ-ಏನೀ ವೈಪರೀತ್ಯ ?” ಎಂದು ಹೂವುಗಳು ಗಾಬರಿಗೊಂಡವು. ಇಂಥದ್ದೊಂದು ಅಮೂಲ್ಯ ಕಥಾ ಗುಚ್ಛವನ್ನು ಕನ್ನಡಕ್ಕೆ ತಂದುದಲ್ಲದೆ ಲೇಖಕಿಯ ವಿಸ್ತಾರವಾದ ಸಂದರ್ಶನವನ್ನು ಇದರೊಳಗೆ ಸೇರ್ಪಡೆಗೊಳಿಸಿರುವ ಅಜಯ್ ನಂತಹ ಹುಡುಗರು ನಮ್ಮ ಮುಂದಿರುವಾಗ ಯುವಜನಾಂಗವನ್ನು ದೂರಲು ಮನಸ್ಸಾದರೂ ಹೇಗೆ ಬಂದೀತು ! ನಿಮ್ಮ ಅಭಿಪ್ರಾಯವನ್ನು ಬರೆಯಿರಿ ಎಂದು ವಿನಯದಿಂದ ಕೇಳಿದ ಅಜಯನಿಗೆ ಮತ್ತಷ್ಟು ಬರೆಯಿರಿ ಎಂದಷ್ಟೇ ಹೇಳಬಲ್ಲೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಧಾ ಅಡುಕಳ