ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಲೀಂ ಅವರ ತೆಲುಗು ಕಥೆಗಳನ್ನು ಅತ್ಯಂತ ಮನೋಜ್ಞವಾಗಿ ಅನುವಾದಿಸಿರುವ ಧನಪಾಲ ನಾಗರಾಜಪ್ಪ ಮೂಲ ತೆಲುಗು ಕಥೆಗಳ ಆಶಯಗಳಿಗೆ ಎಲ್ಲೂ ಧಕ್ಕೆಯಾಗದಂತೆ ಕಥಾನುಭೂತಿಗಳನ್ನೂ ಸಹ ಸಮರ್ಥವಾಗಿ ಅನುವಾದಿಸುವಲ್ಲೂ ಯಶಸ್ವಿಯಾಗಿದ್ದಾರೆ. ಈ ಕಥಾ ಸಂಕಲನದ ಹೆಸರೇ ಸೂಚಿಸುವಂತೆ ಕಥೆಗಳು ಓದುಗರನ್ನು ಕಾಡುವಲ್ಲಿ ಎಲ್ಲೂ ಎಡುವುದಿಲ್ಲ. ಪ್ರತಿ ಕಥೆಯ ಅಂತರಭಾವ, ಅನುಭೂತಿ ನಿಮ್ಮ ಎದೆಯ ಕದ ತಟ್ಟಿ ಹೃದಯವನ್ನು ಆರ್ದ್ರಗೊಳಿಸುತ್ತದೆ. ಕಥಾ ಹಂದರ ಮತ್ತು ಪಾತ್ರಗಳೆಲ್ಲಾ ಜೀವಂತಿಕೆಯಿಂದ ನಮ್ಮನ್ನು ಕಾಡುವ ಅನುಭವವಾಗುವುದು ಸತ್ಯ. ಕಥೆ ಕಾಡಲೇಬೇಕು. ಸಾಹಿತಿ ಮತ್ತು ಸಾಹಿತ್ಯದ ನಿಜವಾದ ಆಶಯವೇ ಸಮಾಜವನ್ನು ಪರಿಕಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಕಾಡುವ ಕಥೆಗಳು ನಮ್ಮೊಳಗಿನ ಮನುಷ್ಯತ್ವಕ್ಕೆ ಸವಾಲೊಡ್ಡಿ, ಚಿಂತನೆಗಳಿಗೆ ಅಣಿಸುತ್ತವೆ. ಒಂದೊಂದು ಕಥೆಯೂ ವಿಭಿನ್ನ ಹಾಗೂ ವಿಶಿಷ್ಟ. ಆದ್ದರಿಂದ ಓದುಗ ತನ್ನನ್ನು ತಾನು ಕಥೆಗಳ ಓದಿನಲ್ಲಿ ಕಳೆದುಕೊಂಡು ವಾಸ್ತವದ ಅನ್ವೇಷಣೆಗೆ ತೊಡುಗುವಂತೆ ಈ ಕಥೆಗಳು ಮಾಡುತ್ತವೆ.
ಸಂವೇದನೆಗಳ ತೀವ್ರತರನಾದ ಪ್ರಸರಣದಿಂದ ಈ ಕಥೆಗಳ ಸರಳ ಭಾಷೆ, ಸಹಜ ಶೈಲಿ, ಪಾತ್ರಚಿತ್ರಣ, ಕಥಾ ಹಂದರಗಳು ಹೃದಯವೀಣೆಯನ್ನು ಮೀಟುತ್ತವೆ. ಅರ್ಧ ಸತ್ಯದ ತೆರೆದ ಬಾಗಿಲಲ್ಲಿ ಮಾನವೀಯತೆಯ ಹುಡುಕಾಟವೇ ಕಾಡುವ ಕಥೆಗಳಲ್ಲಿ ಮಾರ್ದನಿಸಿದೆ. ಎಲ್ಲಾ ಕಥೆಗಳು ಎಚ್ಚೆತ್ತ ಮನುಷ್ಯನ ಪ್ರಾತಿನಿಧಿಕವಾದ ಅಂತಃಕರಣದ ಧ್ವನಿಯಾಗಬೇಕಾದ ಸಮಾಜಮುಖಿ ಚಿಂತನೆಗಳನ್ನು ಒಳಗೊಂಡಿವೆ. ನಮ್ಮನ್ನು ಕಾಡಿ, ತಿದ್ದಿ ತೀಡಿ, ಪ್ರಗತಿಗಾಮಿ ಸಮಾಜ ನಿರ್ಮಾಣಕ್ಕೆ ಅಣಿಗೊಳಿಸುವಂತೆ ಈ ಕಥೆಗಳು ಪ್ರೇರೇಪಿಸುತ್ತವೆ. ಈ ಸಂಕಲನದಲ್ಲಿನ ಕಥೆಗಳಲ್ಲಿ ಸ್ತ್ರೀವಾದಿ ಸಂವೇದನೆಗಳ ನೈಜತೆ ಎದ್ದು ಕಾಣುತ್ತದೆ. ತಳ ಸಮುದಾಯಗಳ ಆಂತರಿಕ ತುಮುಲಗಳು, ಜಾತಿ ವ್ಯವಸ್ಥೆಗಳಲ್ಲಿ ನಲುಗಿದ ಬಡ ಜೀವಗಳು, ಬಂಡವಾಳಶಾಹಿಗಳ ಅಟ್ಟಹಾಸ, ನಿರ್ಭಿಡ ಶೋಷಣೆ, ಮುಖವಾಡ ಧರಿಸಿಕೊಂಡು ಬದುಕುತ್ತಿರುವ ಎಡಬಿಡಂಗಿತನಗಳೆಲ್ಲವೂ ಕಥೆಗಳುದ್ದಕ್ಕೂ ಎಳೆ ಎಳೆಯಾಗಿ ಅನಾವರಣಗೊಂಡಿದೆ. ಓದುಗರ ಒಳಗೆ ಹುಟ್ಟುವ ಅಕ್ರೋಶ ಮತ್ತು ಸಾತ್ವಿಕ ಸಿಟ್ಟುಗಳು ಪ್ರತಿಭಟನಾತ್ಮಕ ರೂಪ ಪಡೆಯುವುದರಲ್ಲಿ ಸಂದೇಹವೇ ಇಲ್ಲ
ನನ್ನನ್ನು ಕಾಡಿದ ಸ್ರ್ತೀ ಪಾತ್ರಗಳು ಬಹುವಾಗಿ ಮನಸ್ಸನ್ನು ಆವರಿಸಿಕೊಂಡಿವೆ. ಮನೋವೇದನೆಯ ಜೊತೆಯಲ್ಲಿ ಇದ್ದೂ ಇಲ್ಲದಂತೆ ಬದುಕುವ ಛಲಗಾತಿಯರ ಹೋರಾಟಮಯ ಜೀವನ ನಮ್ಮೊಳಗಿನ ಹೆಣ್ತನವನ್ನು ಜಾಗೃತಗೊಳಿಸುತ್ತದೆ. 'ಆಧಾರ' ಕಥೆಯಲ್ಲಿ ಬರುವ ಕಸ್ತೂರಿ ನಮ್ಮೆಲ್ಲರ ಅಮ್ಮನೇ ಆಗಿದ್ದಾಳೆ. ತನ್ನೊಡಲಾಳದ ಸಾವಿರ ನೋವು, ದುಃಖಗಳನ್ನು ಸೆರಗಿನ ತುದಿಯಲ್ಲೇ ಕಟ್ಟಿಕೊಂಡು ಸೈ ಎನಿಸಿಕೊಂಡು ಬದುಕುವ ಅದೆಷ್ಟೋ ಹೆಣ್ಣು ಮಕ್ಕಳ ಜೀವನವನ್ನು ಈ ಪಾತ್ರ ಪ್ರತಿನಿಧಿಸಿದೆ. ಸಂಸಾರದ ಸಂಪೂರ್ಣ ಜವಬ್ದಾರಿಯನ್ನು ಹೊತ್ತು ಗಂಡನ ಹೆಗಲಿಗೆ ಆಸರೆಯಾಗುವ ಕಸ್ತೂರಿ ತನ್ನ ಹೆಣ್ಣು ಮಕ್ಕಳ ಕಷ್ಟಗಳಿಗೂ ಪರಿಹಾರ ಸೂಚಿಸುವಲ್ಲಿ ಜೀವನದ ಧಾವಂತತೆ ತೆರೆದುಕೊಳ್ಳುತ್ತದೆ. ಬಂದದ್ದನ್ನು ಸ್ವೀಕರಿಸಿ ನೋವನ್ನುಂಡು ನಗುವ ಸ್ತ್ರೀ ಪ್ರತಿನಿಧಿಯಾಗಿ ಕಸ್ತೂರಿ ನಮ್ಮ ಮುಂದಿದ್ದಾಳೆ. ಆಕೆ ಮಗಳು ನೀರಜಾಳಿಗೆ ಹೇಳುವ ಬುದ್ಧಿಮಾತುಗಳು ಸಮಾಜಮುಖಿ ಚಿಂತನೆಗಳಿಗೆ ತೊಡಗಿಸುತ್ತದೆ. `ದೇಶ ಸೇವೆಗೆ ಸಿವಿಲ್ ಸರ್ವೀಸ್ಸ್ ಒಂದೇ ದಾರಿಯಲ್ಲ. ಸ್ವಯಂ ಸೇವಾ ಸಂಸ್ಥೆಯ ಮೂಲಕ ರೈತರ ಆತ್ಮಹತ್ಯೆಗಳನ್ನು ತಡೆಯುವ ಹಾಗೂ ಖಿನ್ನತೆಗೆ ಒಳಗಾದ ರೈತನಿಗೆ ಧೈರ್ಯ ತುಂಬುವ ಕೆಲಸವೂ ಸಹ ಅಷ್ಟೇ ಮುಖ್ಯವಾದುದ್ದು' ಎಂದು ಕಸ್ತೂರಿ ಹೇಳುವ ಮಾತುಗಳು ಸಾಮುದಾಯಿಕ ಆಶಯವಾಗಿ ಹೊರಹೊಮ್ಮಲೇಬೇಕಾದ ವಾಸ್ತವಿಕ ನುಡಿಗಳಾಗಿವೆ.
'ನರಕ ಕೂಪ' ಕಥೆ ಪ್ರಸ್ತುತ ಸಮಾಜದಲ್ಲಿ ನಡೆಯುವ ಪೌರಕಾರ್ಮಿಕರ ಮೇಲಿನ ಪರೋಕ್ಷವಾದ ದೌರ್ಜನ್ಯವನ್ನು ತೆರೆದಿಡುತ್ತದೆ. ಮಲ ಹೊರುವ ಮತ್ತು ಡ್ರೈನೇಜನ್ನು ದುರಸ್ತಿ ಮಾಡುವ ಅಮಾನವೀಯ ಕೆಲಸಗಳು ಸೇವೆಯ ಬ್ಯಾನರಿನಡಿಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ದೌರ್ಜನ್ಯಗಳೆಂಬುವುದನ್ನು ಈ ಕಥೆ ಬಿಚ್ಚಿಡುತ್ತದೆ. ನಿತ್ಯವೂ ಮಾಧ್ಯಮಗಳಲ್ಲಿನ ವರದಿಗಳನ್ನು ನೋಡಿದಾಗ ಪೌರಕಾರ್ಮಿಕನ ಸಾವು ಯಾವ ಮಹತ್ವವನ್ನು ಪಡೆದುಕೊಳ್ಳದೆ ಕೇವಲ ಪರಿಹಾರ ಧನಗಳಲ್ಲಿ ಮುಗಿದುಹೋಗುವ ಕರಾಳತೆಯನ್ನು ನೆನಪಿಸುತ್ತದೆ. ಒಳ ಚರಂಡಿ ದುರಸ್ತಿ ಕೆಲಸದ ನರಕ ಯಾತನೆಯನ್ನು ಈ ಕಥೆ ಹೃದ್ಯವಾಗಿ ಚಿತ್ರಿಸಿದೆ. ಹೀನ ಬದುಕು, ಹಸಿವು, ಬಡತನ, ನಿರುದ್ಯೋಗದಂತಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರ ಈ ಕಥೆಯ ನಿಜವಾದ ಯಶಸ್ಸು ಇರುವುದು ಪೌರಕಾರ್ಮಿಕನ ಮಗಳ ಮಾತುಗಳಲ್ಲಿ. ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕಿಗೆ ಇರುವ ಮೌಲ್ಯ ಮೋಸಗಾರ ಮತ್ತು ವಂಚಕರ ಜೀವನಕ್ಕಿಂತ ಶ್ರೇಷ್ಠ ಎಂಬುವುದನ್ನು ಕಥೆ ಸಾರುತ್ತದೆ. ಯಾದಗಿರಿಯಂತಹ ವ್ಯಕ್ತಿಗಳು ನಮ್ಮ ಕಣ್ಣೆದುರಿನಲ್ಲೇ ಇದ್ದಾರೆ. ಇವರು ಆಡಳಿತಶಾಹಿಯ ಪ್ರತಿನಿಧಿಗಳು. ಸಿಂಗಣ್ಣನ ಸಾವು ತುಂಬಾ ಸಹಜವಾಗಿಯೇ ಅಂತ್ಯಗೊಳ್ಳುವ ಸಂದರ್ಭ ನಮಗೆ ಅಮಾನವೀಯ ಅನಿಸದೆ ಇರದು. ತನ್ನ ಮದುವೆಯಲ್ಲಿ ಎದುರಾದ ಸಮಸ್ಯೆ ತನ್ನ ಮಗಳ ಮದುವೆಗೂ ಅಡ್ಡಿಯಾಗಬಹುದೆಂಬ ಒಳಬೇಗುದಿ ನೈಜವಾಗಿ ಕಾಡುತ್ತದೆ. ಕಥೆಯ ನಿಜವಾದ ಫಲಿತ ಪೌರಕಾರ್ಮಿಕನ ಮಗಳ ಮಾತುಗಳಲ್ಲಿದೆ. ವೃತ್ತಿ ಗೌರವವನ್ನು ಎತ್ತಿ ಹಿಡಿಯುವ ಈ ಕಥೆ ತುಂಬಾ ಅರ್ಥಪೂರ್ಣವಾಗಿದೆ.
'ಗೀತೆಯ ಸಾರ' ಕಥೆ ಜೀವನದಲ್ಲಿ ಎಂತಹ ದುರ್ಬರ ಪರಿಸ್ಥಿತಿಗಳು ಬಂದರೂ ಮೆಟ್ಟಿನಿಲ್ಲಬೇಕಾದ ಅನಿವಾರ್ಯತೆಯನ್ನು ತಿಳಿಸುತ್ತದೆ. ರಾಮ ಪ್ರಸಾದ್ ಒಬ್ಬ ಯಶಸ್ವಿ ವ್ಯಕ್ತಿಯಾದರೆ, ಸುಧಾಕರ್ ಎಲ್ಲವನ್ನು ಸೋತರೂ ಗೆಲುವನ್ನು ಸಾಧಿಸಿದವನಾಗಿದ್ದಾನೆ. ಅನಿರೀಕ್ಷತವಾಗಿ ಬದುಕಿನಲ್ಲಿ ಬರುವ ಘಟನೆಗಳಿಗೆ ಸೋತರೆ ನಮ್ಮ ಅಸ್ತಿತ್ವವೇ ಇಲ್ಲವಾಗುವಂತಹ ಸ್ಥಿತಿಗೆ ತಲುಪುತ್ತೇವೆ. `ಶೋ ಆಫ್' ಜೀವನ ಶೈಲಿಗಿಂತ `ಚೀಯರ್ ಆಫ್' ಜೀವನದ ನೈಜ ಸತ್ಯ ಈ ಕಥೆಯಲ್ಲಿದೆ. ಒಬ್ಬ ಸಾಹಿತಿ ಅಥವಾ ಲೇಖಕ ಬರವಣಿಗೆಗೆ ವಿಷಯವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಣಗಾಡಿದರೆ ಒಬ್ಬ ಸಾಮಾನ್ಯ ಮನುಷ್ಯ ಅಂತಹುದ್ದೇ ಜೀವನವನ್ನು ಸಾಫಲ್ಯಗೊಳಿಸಿಕೊಂಡ ಬಗೆ ಎಂತಹವರಿಗೂ ಮಾರ್ಗದರ್ಶಿ. ನನ್ನನ್ನು ಬಹುವಾಗಿ ಕಾಡಿದ ಕಥೆ *ಜೋ ಜೋ ಲಾಲಿ*.ನನ್ನ ಹೃದಯಕ್ಕೆ ತಾಕಿ, ಅರಿವಿಲ್ಲದಂತೆಯೇ ಕಂಬನಿ ಹರಿಸುವಂತೆ ಮಾಡಿತು. ಒಡಲಾಳದ ಕಿಚ್ಚು ಹೊತ್ತಿ ಧಗಧಗ ಉರಿಯದೆ, ಕಿಚ್ಚು ಬೆಂಕಿಯಾಗದೆ ಬೆಳಕಾದ ಕಥೆಯಿದು. ತಣ್ಣನೆಯ ಪ್ರತಿರೋಧದ ನಡುವೆಯೂ ಮನವ ಸಂತೈಸಿಕೊಳ್ಳುವ ಕಥಾನಾಯಕ ತುಂಬಾ ಅಪರೂಪದ ಪಾತ್ರವಾಗಿ ಗಮನ ಸೆಳೆಯುತ್ತಾನೆ. ಕಥಾನಾಯಕ ಪ್ರಭಾಕರನ ಪಾತ್ರ ಮಾದರಿ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾದರೆ, ರವಿಕುಮಾರನಂತಹವರು ಕೂಡಾ ನಮ್ಮ ಸುತ್ತಮುತ್ತಲೂ ಇರುವ ಎಡಬಿಡಂಗಿಗಳೇ ಆಗಿದ್ದಾರೆ. ಅಧಿಕಾರಿಗಳ ಬಲಹೀನತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಿಬ್ಬಂದಿಗಳು, ವೈಯಕ್ತಿಕ ಬದುಕಿನಲ್ಲಿ ಸುಮ್ಮನೆ ಮೂಗು ತೂರಿಸುವ ನಾಚಿಕೆಗೇಡಿಗಳು, ಅವಕಾಶಕ್ಕಾಗಿ ಹಪಹಪಿಸುವ ಸ್ವಾರ್ಥಿಗಳ ಮುಖವಾಡ ಇಲ್ಲಿ ಬಯಲಾಗಿದೆ. ಪ್ರಭಾಕರನ ಅಂತರಂಗದ ತುಮುಲ ಮಾನವೀಯತೆಯಿಂದ ಮಹಾಮಾನವೀಯತೆಯಾಗಿ ಪರಿವರ್ತನೆಗೊಳ್ಳುವ ಪರಿ ನಿಜಕ್ಕೂ ಹೃದಯವನ್ನು ಕಲಕುತ್ತದೆ. ಸಮಾಜದಲ್ಲಿನ ದ್ರೋಹಿಗಳಿಗೆ ಈ ಕಥೆ ಚುಚ್ಚದೇ ಇರಲಾರದು. ತನ್ನ ಹಾಸಿಗೆಯನ್ನು ಹಂಚಿಕೊಳ್ಳಲು ಬಂದ ಪ್ರತಿ ಹೆಣ್ಣುಮಕ್ಕಳಲ್ಲಿ ತಾಯಿಯನ್ನು ಕಾಣುವ ಉದಾತ್ತ ಚಾರಿತ್ರ್ಯದಿಂದ ಪ್ರಭಾಕರ ಮಾನವತೆಯ ಉತ್ತುಂಗಕ್ಕೇರುತ್ತಾನೆ. ಅದೆಷ್ಟೋ ಹೆಣ್ಣುಮಕ್ಕಳಿಗೆ ತನ್ನ ಮಂಚದ ಮೇಲೆ ಮಲಗಿಸಿ ತಲೆತಟ್ಟಿ ಲಾಲಿ ಹಾಡಿ ಮಲಗಿಸುವ ಕಥೆಯ ಹಿಂದಿನ ವ್ಯಥೆ ಅಬ್ಬಾ ಹೃದಯವನ್ನು ಹಿಂಡುತ್ತದೆ! `ಹಣಕ್ಕಾಗಿ ದೇಹ ಮಾರಿಕೊಳ್ಳುವ ಹೆಣ್ಣು ಮಕ್ಕಳೆಲ್ಲಾ ನನ್ನ ತಾಯಿಂದಿರು' ಎನ್ನುವ ಪ್ರಭಾಕರ್ ನಮ್ಮ ಸಮಾಜಕ್ಕೆ ಆದರ್ಶ ಪುರುಷನಾಗುತ್ತಾನೆ. `ಅದೆಷ್ಟೋ ರಾತ್ರಿಗಳು ನೀವು ನಿದ್ದೆಗೆಟ್ಟಿರುತ್ತೀರಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ' ಎಂದು ವೇಶ್ಯೆಯನ್ನು ಉಣಿಸಿ, ಮಲಗಿಸುವ ಪಾತ್ರ ನಮ್ಮನ್ನು ಕಾಡದೇ ಇರದು. ತನ್ನ ತಾಯಿಯ ಇಂತಹ ವೃತ್ತಿಯಿಂದಲೇ ಬಂದ ಹಣದ ಸಹಕಾರದಿಂದ ಇಂದು ತಾನೊಬ್ಬ ಉನ್ನತ ಅಧಿಕಾರಿಯಾಗಿದ್ದಕ್ಕೆ ಈಗ ತಾನು ಬೆಲೆತೆರಬೇಕಾದ ಸಾಮಾಜಿಕ ಜವಬ್ದಾರಿಯ ಅರಿವು ಪ್ರಭಾಕರನ ವ್ಯಕ್ತಿತ್ವಕ್ಕೆ ಮೆರುಗು ನೀಡಿದೆ.
ಇಲ್ಲಿನ ಕಥೆಗಳಲ್ಲಿನ ಕಥಾಹಂದರ, ಪಾತ್ರಚಿತ್ರಣ, ವಿಷಯ ನಿರೂಪಣೆ, ಕಥಾ ನಿರ್ದೇಶನ, ವಸ್ತು ವಿಶ್ಲೇಷಣೆಗಳು ಎಂತಹವರನ್ನೂ ತನ್ನ ಓದಿನ ತೆಕ್ಕೆಗೆ ತೆಗೆದುಕೊಂಡು ಚಿಂತನೆಗೆ ಈಡುಮಾಡಿ ಮನವನ್ನು ಆಕರ್ಷಿಸಿ, ಆವರಿಸಿ ಕಾಡಿಸಿಯೇ ಕಾಡುತ್ತವೆ. ಈ ಕಥೆಗಳಲ್ಲಿ ಸ್ತ್ರೀ ಸಂವೇದನೆಯ ಸ್ವಗತ, ಪುರುಷ ವೇದನೆಯ ಪರ ಗತಗಳೆರಡೂ ಹದವರಿದಿವೆ. ಆಕ್ರೋಶಗಳಿದ್ದರೂ ತೀವ್ರತರವಾದ ಪ್ರತಿರೋಧಗಳಿಲ್ಲ. ತಣ್ಣನೆಯ ಸಾಂತ್ವನದ ಬದುಕಿನಲ್ಲಿಯೇ ಸಾರ್ಥಕತೆ ಕಂಡುಕೊಳ್ಳುವತ್ತ ತುಡಿಯುವ ಕಥಾನಾಯಕ-ನಾಯಕಿಯರು ಸೋಲಿನಲ್ಲಿ ಗೆಲುವು ಕಂಡವರು, ನೋವು ನುಂಗಿ ನಕ್ಕವರು. ಸ್ತ್ರೀ ಸಂವೇದನೆಯ ಆಂತರಿಕ ತುಮುಲಗಳನ್ನು ತೆರೆದಿಡುವ ಇಲ್ಲಿನ ಕಥೆಗಳಿಗೆ ಸಮಾಜಮುಖಿ, ಜೀವನ್ಮುಖಿ ಬದುಕಿನ ತುಡಿತವಿದೆ. ಹೆಣ್ತನದ ಅಭಿವ್ಯಕ್ತಿಯ ಆಚೆ ಈಚೆಯ ಕಥಾನಕಗಳು ಈ ಸಂಕಲನದುದ್ದಕ್ಕೂ ಒಂದೊಂದು ರೂಪ ತಾಳಿವೆ. ಅನಾದಿ ಕಾಲದಿಂದಲೂ ಬಾಹುಬಂಧನಗಳ ಸುಳಿಗೆ ಸಿಕ್ಕ ಹೆಣ್ಣು ತನ್ನ ಬಿಡುಗಡೆಯ ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ತುಡಿತದೊಂದಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣದಿಂದಲೇ ಸಂಸ್ಕೃತಿ, ಸಂಸ್ಕಾರಗಳ ಪ್ರತಿನಿಧಿಗಳಾಗಿಯೇ ಹೆಚ್ಚುಗಾರಿಕೆಯನ್ನು ಪಡೆದಿದೆ.
ಬಹುಪಾಲು ಕಥೆಗಳು ಜಗತ್ತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ತೆರೆದಿಡುವಲ್ಲಿ ಯಶಸ್ವಿಯಾಗಿವೆ. ಸಾಮಾನ್ಯ ಜಗತ್ತನ್ನು ತೆರೆದ ಕಣ್ಣುಗಳಿಂದ ನೋಡುವ ಹಾಗೂ ಮಾನವೀಯತೆಯ ಸಹಜ ಕಾಳಜಿಯ ಇಂದಿನ ತುರ್ತು ಅಗತ್ಯವನ್ನು ತೋರುತ್ತವೆ. ನಮ್ಮನ್ನು ಕಾಡುವ ಚಿತ್ರಗಳು ಪದಗಳಾಗಿ ಕಥೆಗಳಲ್ಲಿ ಜೀವಂತ ರೂಪ ತಾಳಿವೆ. ದೈವದಾಟವನ್ನು ಹಾಗೂ ದೈವಿಚ್ಛೆಯನ್ನು ನಂಬಿದ ಪಾತ್ರಗಳು ಸಾಫಲ್ಯತೆ ಪಡೆದರೆ, ಬಂದುದ್ದನ್ನು ಸ್ವೀಕರಿಸಿ ಹದವರಿತ ಬಾಳನ್ನು ಒಪ್ಪಿ ಅಪ್ಪಿಕೊಳ್ಳುವ ಪಾತ್ರಗಳು ಮನಸೂರೆಗೊಳ್ಳುತ್ತವೆ. ಮಾನವ ಸಂಬಂಧಗಳಲ್ಲಿನ ನಾಟಕೀಯತೆ, ಕೃತಕತೆಗಳಿಗೆ ನಲುಗಿಹೋಗುವ ಹುಲು ಮಾನವರ ವ್ಯಥೆ ಒಂದೆಡೆಯಾದರೆ, ದೈವದಾಟಕ್ಕೂ ದಕ್ಕದ ಮಿಕ್ಕಿದ ಕಥೆಗಳು ಆತ್ಮವಿಶ್ವಾಸಕ್ಕಾಗಿ ಹಾತೊರೆಯುವುದನ್ನು ಕಾಣಬಹುದು. ಬೌದ್ಧಿಕ ಅಸ್ಪೃಶ್ಯತೆ, ಒಣ ಸಿದ್ಧಾಂತ, ಅವಕಾಶವಾದಿತನಗಳಿಂದ ಸದ್ಯದ ಸಮಾಜ ನಲುಗಿದೆ. ಹೋರಾಟಗಳಿಂದ ಸಾಧಿಸಲಾರದದ್ದನ್ನು ಮಾನವೀಕ ಚಿಂತನೆಗಳ ನೆಲೆಗಳಲ್ಲಿ ಕಂಡುಕೊಳ್ಳಬಹುದಾದ ಸಾಧ್ಯತೆ ಈ ಕಥೆಗಳಲ್ಲಿ ಚರ್ಚಿತವಾಗಿದೆ.
ಒಟ್ಟಾರೆಯಾಗಿ ಸಲೀಂ ಅವರ ತೆಲುಗು ಕಥೆಗಳನ್ನು ಅತ್ಯಂತ ಪ್ರೀತಿ, ಕಾಳಜಿಯಿಂದ ಕನ್ನಡಕ್ಕೆ ಅನುವಾದಿಸಿರುವ ಧನಪಾಲರು ಅಭಿನಂದನಾರ್ಹರು. ನೈತಿಕತೆಗೆ ಪೂರಕವಾಗಿ ಜೀವನ್ಮುಖಿ ಚಿಂತನೆಗಳಿಗೆ ತೊಡಗಿಸುವ ಅನುವಾದಿತ ಕಥೆಗಳು ಮಾನವೀಯ ಮೌಲ್ಯಗಳ ಖಜಾನೆಯಾಗಿವೆ. ಇಂತಹ ವೈಚಾರಿಕ ಮತ್ತು ಪ್ರಗತಿಪರ ಆಶಯಗಳನ್ನು ಹೊತ್ತ ಕೃತಿಗಳು ಧನಪಾಲರಿಂದ ಹೊರಬರಲಿ. ಕ್ರಿಯಾಶೀಲ ಮನಸ್ಸಿನ ಕಥೆಗಾರರಿಂದ ಸಾಹಿತ್ಯ ಕಣಜ ಸದಾ ಶ್ರೀಮಂತವಾಗಿರಲೆಂದು ಹಾರೈಸುವೆ.
ಪುಸ್ತಕದ ಹೆಚ್ಚಿನ ಮಶಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ