Article

ನೈಜ ಚಿತ್ರಣದ 'ಕೆಂಗುಲಾಬಿ'

ಕಥೆಗಾರ, ಪತ್ರಕರ್ತ ಹನುಮಂತ ಹಾಲಿಗೇರಿ ಅವರ ಜನಪ್ರಿಯ ಕಾದಂಬರಿ 'ಕೆಂಗುಲಾಬಿ'. ಇದು ವೇಶ್ಯಾ ಪ್ರಪಂಚದ ತೀರಾ ಮಾನವೀಯ ಕಾಳಜಿಯ ಬರಹ. ಈ  ಮೊದಲ ಕಾದಂಬರಿಯಿಂದಲೇ ಲೇಖಕರು ಕಥೆ ಹೇಳುವ ಕೌಶಲ್ಯ ರೂಢಿಸಿಕೊಂಡು ಭರವಸೆ ಮೂಡಿಸಿದ್ದಾರೆ. ಈ ಕಾರಣಕ್ಕೆ, ಕೃತಿಯು 5ನೇ ಮುದ್ರಣ ಕಂಡಿದೆ.

ಲೈಂಗಿಕ ವೃತ್ತಿಯು ಸರಿ ಅಥವಾ ತಪ್ಪು ಎಂದು ಕಾದಂಬರಿ ವಾದಿಸದು. ಒಂದು ಹೊತ್ತಿನ ಅನ್ನಕ್ಕಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಬದುಕಬೇಕಾದ ಅನಿವಾರ್ಯ ಸ್ಥಿತಿ ಕಥೆಯ ಮೂಲ ವಸ್ತು. ’ವೇಶ್ಯೆಯರ ಬದುಕಿನ ಅನಾವರ” ಎಂಬ ಟ್ಯಾಗ್ ಲೈನ್ ಹೊಂದಿದೆ ಈ ಕಾದಂಬರಿ. ಹಾಗಂತ ಇಡೀ ಪುಸ್ತಕದಲ್ಲಿ ಒಮ್ಮೆಯೂ ಓದುಗನನ್ನು ತಣಿಸುವುದಕ್ಕಾಗಿ ರೋಚಕ ತಂತ್ರ ಬಳಸಿಲ್ಲ. ಬದುಕಿನ ಘಟನೆಗಳ ಮೂಲಕ ಕಥೆ ಹೇಳುತ್ತ ಹೋಗುವ ಹನುಮಂತ ಹಾಲಿಗೇರಿ, ಜನಪ್ರಿಯತೆಯ ಆಮಿಷಕ್ಕೆ ಒಳಗಾಗದೇ ಸಂಯಮದಿಂದ ಕಥೆ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಮಹಿಳೆ, ಕೆಳಜಾತಿ, ವರ್ಗದ ಮಹಿಳೆಯರ ಬದುಕಿನ ದುಸ್ಥಿತಿಯ ಚಿತ್ರಣವು ದೊರೆಯುತ್ತದೆ.

 ಗ್ರಾಮೀಣ ಬದುಕಿನ ಊಳಿಗಮಾನ್ಯ ಶೋಷಕ ವ್ಯವಸ್ಥೆ, ಅದು ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕಟ್ಟಿದ ಸಂಪ್ರದಾಯದ ಗೋಡೆಗಳು, ಜಾತೀಯತೆ, ಅಸಹಾಯಕ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ, ಮಧ್ಯವರ್ತಿಗಳ ಹಾರಾಟ, ಮಾರಾಟಗಾರರ ಜಾಲ, ಅಸಹಾಯಕತೆಗಳು ಮನ ಮಿಡಿಯುವಂತೆ ಚಿತ್ರಿತವಾಗಿವೆ.

ಮುನ್ನುಡಿಯಲ್ಲಿ ಲೇಖಕರು 'ಪ್ರಕೃತಿಯ ಎಲ್ಲ ಜೀವಿಗಳಿಗೆ ಊಟ ನೀರಡಿಕೆಯಷ್ಟೆ ಮೈಥುನವು ಪ್ರಾಥಮಿಕ ಅಗತ್ಯ ಮತ್ತು ನಿಸರ್ಗ ನಿಯಮ. ಅದನ್ನು ಬಂಧಿಸಲು ಹೋದಷ್ಟೂ ಅಪಾಯ ಹೆಚ್ಚು. ಬಂಧಿಸಿದ್ದರ ಪ್ರತಿರೋಧವಾಗಿ, ಈ ಅಮಾಯಕ ಹುಡುಗಿಯರು ಈ ವಿಷವರ್ತುಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವರು ನಮ್ಮಂಥವರ ತಾಯಿ, ಮಗಳು, ಹೆಂಡತಿ, ಅಕ್ಕ-ತಂಗಿಯರಾಗಬಹುದಿತ್ತು. ಆಗಿರಬಹುದು ಕೂಡ... ಇದೆಲ್ಲಕ್ಕೂ ಅವಕಾಶವಾಗದೆ ಈ ವೇಶ್ಯೆಯರು ಬೀದಿಗಿಳಿಯಬೇಕಾಗಿ ಬಂದದ್ದು ದುರಂತ ಸತ್ಯ’ ಎಂದು ಹೇಳಿರುವುದು ಕಾದಂಬರಿಯಲ್ಲಿ ಕಥೆಯು ನಡೆಯವ ಸ್ವರೂಪವನ್ನು ಕುರಿತು ಸೂಚ್ಯವಾಗಿ ಹೇಳಿದಂತಿದೆ.

ಮುಖ್ಯವಾಗಿ ಈ ಕಾದಂಬರಿ ಹನುಮಂತ ಹಾಲಿಗೇರಿಯವರ ಕಲ್ಪನೆಯ ಕೂಸಲ್ಲ. ವೇಶ್ಯಾ ಜಗತ್ತಿನೊಳಗಿನ ತಿರುಗಾಟದನುಭವ ಮತ್ತು ಅಲ್ಲಿಯ ಕರಾಳ ಮುಖವನ್ನು ಪರಿಚಯಿಸುವ ಕೈಗನ್ನಡಿಯಾಗಿದೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವು ಕೆ. ಲಕ್ಕಣ್ಣವರ