ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮನೋವಿಜ್ಞಾನದ ಪಾತ್ರ ಅತ್ಯಂತ ಮಹತ್ವದ್ದು


'ವಿಕ್ಟರ್ ಫ್ರಾಂಕಲ್' ಪ್ರಕಾರ ವ್ಯಕ್ತಿ ಒಳ್ಳೆಯವನಾಗುವುದಕ್ಕೆ ಅಥವಾ ಕೆಟ್ಟವನಾಗುವುದಕ್ಕೆ ಅವನು ಆಂತರಿಕವಾಗಿ ಕೈಗೊಳ್ಳುವ ನಿರ್ಧಾರಗಳು ಕಾರಣವೇ ಹೊರತು ಅವನ ಬಾಹ್ಯ ಪ್ರಪಂಚವಲ್ಲ' ಎನ್ನುತ್ತಾರೆ ನರಹಳ್ಳಿ ಬಾಲಸುಬ್ರಹ್ಮಣ್ಯ. ಅವರು ವೈ.ಜಿ. ಮುರಳೀಧರನ್ ಅವರ "ವಿಕ್ಟರ್ ಫ್ರಾಂಕಲ್’ ಕೃತಿ ಕುರಿತು ಬರೆದ ಮುನ್ನುಡಿ ಬರಹ ಇಲ್ಲಿದೆ.

ಆಧುನಿಕ ಜಗತ್ತಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಗ್ರಾಹಕನಿಗೆ ಅಪಾರವಾದ ಅವಕಾಶಗಳಿವೆ, ಆಯ್ಕೆಗಳಿವೆ. ಬೇಕಾದ್ದನ್ನು ಮನೆ ಬಾಗಿಲಿಗೆ ತಂದುಕೊಡುವ ನೂರಾರು ವಾಣಿಜ್ಯ ಸಂಸ್ಥೆಗಳಿವೆ. ತಂತ್ರಜ್ಞಾನ ಭೋಗ ಜೀವನಕ್ಕೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟಿದೆ. ಆದರೆ ಅದರ ಜೊತೆಗೆ ಅನೇಕ ಅಪಾಯಗಳೂ ಹೆಣೆದುಕೊಂಡಿವೆ. ಕೊಂಚ ಎಚ್ಚರ ತಪ್ಪಿದರೂ ಗ್ರಾಹಕರು ಮೋಸ ಹೋಗುವ ಸಾಧ್ಯತೆ ಇದೆ. ಒಂದು ಕ್ಲಿಕ್ ಏನು ಬೇಕಾದರೂ ಮಾಡಿಬಿಡಬಹುದು. ಹೀಗಾಗಿ ಗ್ರಾಹಕ ಹೆಚ್ಚು ಜಾಗೃತನಾಗಿರ ಬೇಕಾಗುತ್ತದೆ. ಆತನಿಗೆ ಈ ಕ್ಷೇತ್ರದಲ್ಲಿ ಪ್ರಾಥಮಿಕ ಜ್ಞಾನ ಇರಬೇಕಾಗುತ್ತದೆ. ಶಾಲಾ ಕಾಲೇಜುಗಳಲ್ಲಿ, ನಮ್ಮ ಪಠ್ಯಪುಸ್ತಕಗಳಲ್ಲಿ ಈ ಜ್ಞಾನ ಸಿಗುವುದಿಲ್ಲ. ನಮ್ಮ ಸಾರ್ವಜನಿಕ ಬದುಕಿನಲ್ಲಿಯೇ ನಾವು ಈ ತಿಳುವಳಿಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಬಗೆಯ ಅರಿವು ಆಧುನಿಕ ಬದುಕಿನಲ್ಲಿ ಅನಿವಾರ್ಯ ಅಗತ್ಯ. ನಮ್ಮ ಸಂದರ್ಭದಲ್ಲಿ ಸಾಮಾಜಿಕ ಕಾಳಜಿಯನ್ನಿಟ್ಟುಕೊಂಡು ಇಂತಹ ಅರಿವನ್ನು ಮೂಡಿಸುತ್ತಿರುವವರು ವೈ.ಜಿ. ಮುರಳೀಧರನ್. ಸುಮಾರು ಎರಡು ದಶಕಗಳಿಂದ ಗ್ರಾಹಕ ಜಾಗೃತಿ ಹಾಗೂ ಮಾಹಿತಿ ಹಕ್ಕಿನ ಆಂದೋಲನದಲ್ಲಿ ಮುರಳೀಧರನ್ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಮುರಳೀಧರನ್ ಮೂಲತಃ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯವನ್ನು ಆಸಕ್ತಿಯಿಂದ ಅಧ್ಯಯನ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲೂ ಅವರಿಗೆ ಪ್ರಭುತ್ವವಿದೆ. ಸಮಕಾಲೀನ ಜಾಗತಿಕ ವಿದ್ಯಮಾನಗಳ ಬಗ್ಗೆ ಅವರಿಗೆ ಸದಾ ಕುತೂಹಲ. ಬದಲಾಗು ತ್ತಿರುವ ಸಾಮಾಜಿಕ ಸನ್ನಿವೇಶಕ್ಕೆ ಕನ್ನಡ ಮನಸ್ಸನ್ನು ಸಿದ್ಧಗೊಳಿಸಬೇಕೆಂಬುದು ಅವರ ಹಂಬಲ. ಅವರ ಎಲ್ಲ ಬರವಣಿಗೆಯ ಹಿಂದೆ ಈ ಆಶಯವಿದೆ. ಈ ಹಿನ್ನೆಲೆಯಲ್ಲಿ ಅವರು ಇದುವರೆಗೆ 40 ಪುಸ್ತಕಗಳನ್ನು 3000ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.

ತಂತ್ರಜ್ಞಾನ ನಮ್ಮ ಬದುಕಿಗೆ ಎಲ್ಲ ರೀತಿಯ ಸವಾಲುಗಳನ್ನು ಒದಗಿಸಿಕೊಟ್ಟಿದೆ. ಚೆಲುವಾಗಿಸಿದೆ. ಆದರೆ ನೆಮ್ಮದಿಯನ್ನು ದೊರಕಿಸಿ ಕೊಡುವಲ್ಲಿ ಸೋತಿದೆ ಎಂಬುದು ಎಲ್ಲ ಸಂವೇದನಾಶೀಲರ ಅಭಿಮತ, ಪ್ರಖ್ಯಾತ ಮನೋವಿಜ್ಞಾನಿ 'ಎರಿಕ್ ಫ್ರಾಮ್' 'ಇಂದು ನಾವು ಒಂದು ರೋಗಿಷ್ಠ ಸಮಾಜದಲ್ಲಿ ಬದುಕುತ್ತಿದ್ದೇವೆ. ನೈತಿಕ ಅನಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಚುಕ್ಕಾಣಿ ಇಲ್ಲದ ನಾವೆಯಲ್ಲಿ ಚಲಿಸುತ್ತಿದ್ದೇವೆ. ಅಧಿಕವಾಗಿ ಉತ್ಪಾದಿಸುವುದು, ಮೇರೆ ಮೀರಿ ಅನುಭವಿಸುವುದು ಇವುಗಳಲ್ಲಿಯೇ ನಿರತರಾಗಿದ್ದೇವೆ. ಭೋಗ ಸಂಸ್ಕೃತಿಯಲ್ಲಿ ಮುಳುಗಿ ಹೋಗಿರುವ ನಾವು ಅದರಿಂದ ಹೊರಬರುವ ಬಗ್ಗೆ ಯೋಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮನೋವಿಜ್ಞಾನದ ಪಾತ್ರ ಅತ್ಯಂತ ಮಹತ್ವದ್ದು' ಎನ್ನುತ್ತಾನೆ. ಸಾಮಾಜಿಕ ಕಾಳಜಿಯ ಮುರಳೀಧರನ್‌ರವರಿಗೆ ಎರಿಕ್ ಫ್ರಾಮ್‌ನ ಈ ಮಾತುಗಳು ಬಹಳವಾಗಿ ಕಾಡಿವೆ. ಇದರಿಂದಾಗಿ ಸಹಜವಾಗಿ ಅವರು ಮನೋವಿಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ತಾಳಿದ್ದಾರೆ. ಅದರ ಫಲವೇ ಈ ಕೃತಿ.ಇತ್ತೀಚೆಗೆ ಓದುಗ ವಲಯದಲ್ಲಿ ಗಾಢ ಪ್ರಭಾವ ಬೀರಿದ ಕೃತಿಗಳಲ್ಲೊಂದು ವಿಕ್ಟರ್ ಫ್ರಾಂಕಲ್‌ರ "ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್". ಸುಮಾರು ಒಂದು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ ಈ ಕೃತಿ ಜಗತ್ತಿನ 28 ಭಾಷೆಗಳಲ್ಲಿ ಅನುವಾದಗೊಂಡಿದೆ. ನಮ್ಮ ಕಾಲದಲ್ಲಿ ಹೆಚ್ಚು ಚರ್ಚೆಗೊಳಗಾಗಿರುವ ಕೃತಿಗಳಲ್ಲಿ ಇದೂ ಒಂದು. ಈ ಪುಸ್ತಕವನ್ನು ಕುರಿತು ಸುಮಾರು 5000ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಸುಮಾರು ಹತ್ತು ವರ್ಷಗಳ ಹಿಂದೆ ಸಿವಿಜಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿತ್ತು ಎಂಬ ಮಾಹಿತಿ ಇದೆ. ಇತ್ತೀಚೆಗೆ ಸುಭಾಷ್ ರಾಜಮಾನೆ "ಬದುಕಿನ ಅರ್ಥವನ್ನು ಹುಡುಕುತ್ತಾ" ಎಂಬ ಹೆಸರಿನಲ್ಲಿ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಶಿವಾನಂದ ಬೇಕಲ್ ಅವರು ಸಹ "ಬದುಕಿನ ಅರ್ಥದ ಹುಡುಕಾಟದಲ್ಲಿ ಮನುಷ್ಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆಂದು ಕೇಳಿದ್ದೇನೆ. ಅತ್ಯಂತ ಪ್ರಸಿದ್ಧವಾದ ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ ಎಂಬ ಈ ಕೃತಿ ಕನ್ನಡಕ್ಕೆ ಅನುವಾದ ವಾಗಿದ್ದರೂ ಫ್ರಾಂಕಲ್‌ರ ಬಗ್ಗೆ ಹೆಚ್ಚಿನ ಮಾಹಿತಿಗಳು ನಮಗೆ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮುರಳೀಧರನ್ ಅವರು ವಿಕ್ಟರ್ ಫ್ರಾಂಕಲ್‌ರ ಜೀವನ ಚಿತ್ರ ಹಾಗೂ ಅವರು ಪ್ರತಿಪಾದಿಸಿದ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ವಿವರ ನೀಡಲು ಈ ಕೃತಿಯಲ್ಲಿ ಪ್ರಯತ್ನಿಸಿದ್ದಾರೆ.

ವಿಕ್ಟರ್ ಫ್ರಾಂಕಲ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದು ತುಂಬಾ ಕಡಿಮೆ. ಸ್ನೇಹಿತರ ಹಾಗೂ ಪತ್ನಿಯ ಒತ್ತಾಯಕ್ಕೆ ಮಣಿದು ತಮ್ಮ ಜೀವನದ ಕೆಲ ವಿವರಗಳನ್ನು ಬರೆದರೂ ಅದನ್ನು ಪ್ರಕಟಿಸಲು ಅಪೇಕ್ಷಿಸಲಿಲ್ಲ. ಆದರೆ ಅವರ ಸ್ನೇಹಿತರು ಫ್ರಾಂಕಲ್‌ರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ "ವಾಟ್ ಇಸ್ ನಾಟ್ ಇನ್ ಮೈ ಬುಕ್ಸ್" ಎಂಬ ಹೆಸರಿನಲ್ಲಿ ಆ ಹಸ್ತಪ್ರತಿಯನ್ನು ಜರ್ಮನ್ ಭಾಷೆಯಲ್ಲಿ ಪ್ರಕಟಿಸಿದರು. ಫ್ರಾಂಕಲ್‌ರ ಮರಣಾನಂತರ ಅವರ ಬಗ್ಗೆ ಮೂರು ಪುಸ್ತಕಗಳು ಪ್ರಕಟವಾಗಿವೆ. ಮನೋವಿಜ್ಞಾನದ ಜನಕ ಎಂದು ಪ್ರಸಿದ್ಧನಾದ ಸಿಗಂಡ್ ಫ್ರಾಯ್ಡ್ ಹಾಗೂ ವೈಯಕ್ತಿಕ ಮನೋವಿಜ್ಞಾನ ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದ ಆಲ್ಫ್ರೆಡ್ ಆಡ್ಡೆರ್‌ನನ್ನು ಜಗತ್ತಿಗೆ ಕೊಟ್ಟ ಆಸ್ಟ್ರಿಯಾ ದೇಶದ ರಾಜಧಾನಿ ವಿಯನ್ನಾ ನಗರವೇ ವಿಕ್ಟರ್ ಫ್ರಾಂಕಲ್‌ಗೂ ಜನ್ಮ ನೀಡಿದೆ. ವಿಯನ್ನಾ ನಗರದ ಒಂದು ಯಹೂದಿ ಕುಟುಂಬದಲ್ಲಿ ಜನಿಸಿದ ವಿಕ್ಟರ್ ಫ್ರಾಂಕಲ್ ತಂದೆ ಗಾಬ್ರಿಯೆಲ್ ಫ್ರಾಂಕಲ್, ತಾಯಿ ಪ್ರಾಗ್ ಮೂಲದ ಎಲ್ಲಾ ಫ್ರಾಂಕಲ್. ಫ್ರಾಂಕಲ್ ಹುಟ್ಟಿದ ಮನೆಯ ಎದುರಿನ ಮನೆಯಲ್ಲಿಯೇ ಮನೋವಿಜ್ಞಾನಿ ಆಡ್ಲರ್ ವಾಸಿಸುತ್ತಿದ್ದನಂತೆ. ಮಹಾಯುದ್ಧದ ಪರಿಣಾಮವಾಗಿ ವಿಯನ್ನಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ಫ್ರಾಂಕಲ್‌ ಬಾಲ್ಯ ಬಡತನದಲ್ಲಿಯೇ ಕಳೆಯಿತು. ದೈನಿಕ ಬದುಕನ್ನು ಸಾಗಿಸುವುದೇ ದುಸ್ತರವಾಗಿತ್ತು.

ನೆಲದ ಗುಣ ಹಾಗೂ ಪರಿಸರದ ಪ್ರಭಾವವಿದ್ದಿರಬೇಕು, ಚಿಕ್ಕಂದಿನಿಂದಲೇ ಫ್ರಾಂಕಲ್‌ಗೆ ಮನೋವಿಜ್ಞಾನದ ಬಗ್ಗೆ ಆಸಕ್ತಿ ಬೆಳೆದಿತ್ತು. ಹದಿಹರೆಯದಲ್ಲಿಯೇ ಆತ ಈ ಬದುಕಿಗೆ ಏನಾದರೂ ಅರ್ಥವಿದೆಯೇ ಎಂದು ಶಿಕ್ಷಕರನ್ನು ಪ್ರಶ್ನಿಸುತ್ತಿದ್ದನಂತೆ. ಮನೋವಿಜ್ಞಾನಿ ಆಗಬೇಕೆಂಬ ಹಂಬಲ ಅವರ ಪ್ರಾಥಮಿಕ ಆದ್ಯತೆಯಾಗಿದ್ದರೂ, ಬಹುಮುಖಿಯಾದ ಅನೇಕ ಸೃಜನಶೀಲ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಹಿಪ್ಪೋಟಿಸಮ್ ಕಲಿತಿದ್ದರು. ವ್ಯಂಗ್ಯಚಿತ್ರ ರಚಿಸುತ್ತಿದ್ದರು. ಕನ್ನಡಕದ ಫೋಮ್‌ಗಳ ವಿನ್ಯಾಸ ರೂಪಿಸುತ್ತಿದ್ದರು, ಪರ್ವತಾರೋಹಣ ಮಾಡುತ್ತಿದ್ದರು. ಪೈಲೆಟ್ ಆಗಿ ವಿಮಾನ ಓಡಿಸಿದ್ದೂ ಉಂಟು. ಸಾಹಿತ್ಯದಲ್ಲೂ ಆಸಕ್ತಿ ಇದ್ದು ಎರಡು ಕಥೆ ಒಂದು ನಾಟಕವನ್ನು ಅವರು ಬರೆದಿದ್ದಾರೆ. ಈ ಎಲ್ಲವೂ ಅವರನ್ನು ಕ್ರಿಯಾಶೀಲ ವಾಗಿಡಲು ನೆರವಾಗಿದ್ದವು.

ಈ ಕೃತಿಯ ಅತ್ಯಂತ ಮುಖ್ಯವಾದ ಭಾಗವೆಂದರೆ ಅವರ ಬದುಕಿನ ಎರಡನೆಯ ಘಟ್ಟವಾದ ಯಾತನಾ ಶಿಬಿರದ ದಿನಗಳು. 1938ರಲ್ಲಿ ಹಿಟ್ಲ‌ರ್ ಆಸ್ಟ್ರಿಯ ದೇಶವನ್ನು ವಶಪಡಿಸಿಕೊಂಡ ನಂತರ ಅಲ್ಲಿದ್ದ ಯಹೂದಿಗಳ ಬದುಕು ನರಕಸದೃಶವಾಯಿತು. ಹಿಟ್ಲರ್‌ನ ನಾಜಿಗಳು ಅತ್ಯಂತ ಅಮಾನವೀಯವಾಗಿ ನಡೆದುಕೊಂಡು ಸಾವಿರಾರು ಜನ ಯಹೂದಿಗಳನ್ನು ಸೆರೆಮನೆಗೆ ತಳ್ಳಿದರು. ಆ ಗುಂಪಿನಲ್ಲಿ ಫ್ರಾಂಕಲ್‌ ಕುಟುಂಬವೂ ಸೇರಿತ್ತು. ಯಾತನಾ ಶಿಭಿರದ ಅವಧಿಯಲ್ಲಿ ಫ್ರಾಂಕಲ್ ತನ್ನ ಕುಟುಂಬದ ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾದರು. ತಂದೆ ಗ್ಯಾಬ್ರಿಯಲ್ ಯಾತನಾ ಶಿಬಿರಕ್ಕೆ ಬಂದ ಆರು ತಿಂಗಳಲ್ಲಿ ತೀರಿಕೊಂಡರು. ತಾಯಿಯನ್ನು ಗ್ಯಾಸ್‌ ಚೇಂಬರ್‌ಗೆ ಕಳುಹಿಸಿ ಸುಡಲಾಯಿತು. ಸಹೋದರ ಹಾಗೂ ಆತನ ಪತ್ನಿ ಗಣಿ ಕೆಲಸದಲ್ಲಿ ತೀರಿಕೊಂಡರು. ಪತ್ನಿ ಟಿಲ್ಲಿ ಹಸಿವು ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಸಾವನ್ನಪ್ಪಿದ್ದರು. ನಾಜಿಗಳ ನಿಯಂತ್ರಣದಲ್ಲಿದ್ದ ಅನೇಕ ಯಾತನಾ ಶಿಬಿರಗಳಲ್ಲಿ ಆಶವಿಟ್ಟ ಶಿಬಿರ ಅತ್ಯಂತ ಭಯಾನಕ ಕೇಂದ್ರವಾಗಿತ್ತು. ಅಲ್ಲಿ ಅವರು ಪಡೆದ ದಾರುಣ ಅನುಭವಗಳೇ ಮನೋವಿಜ್ಞಾನದ ಅವರ ಮುಂದಿನ ಅಧ್ಯಯನಕ್ಕೆ ಸಾಮಗ್ರಿಯನ್ನು ಒದಗಿಸಿತು.

ಫ್ರಾಂಕಲ್, ಜೀವನದಲ್ಲಿ ಎಷ್ಟೇ ಕಷ್ಟವನ್ನು ಅನುಭವಿಸಿದರೂ ಬದುಕಿನ ಬಗ್ಗೆ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಅವರ ಪ್ರಕಾರ ವ್ಯಕ್ತಿ ಒಳ್ಳೆಯವನಾಗುವುದಕ್ಕೆ ಅಥವಾ ಕೆಟ್ಟವನಾಗುವುದಕ್ಕೆ ಅವನು ಆಂತರಿಕವಾಗಿ ಕೈಗೊಳ್ಳುವ ನಿರ್ಧಾರಗಳು ಕಾರಣವೇ ಹೊರತು ಅವನ ಬಾಹ್ಯ ಪ್ರಪಂಚವಲ್ಲ. ವ್ಯಕ್ತಿ ಪರಿಸ್ಥಿತಿಗೆ ಯಾವ ರೀತಿ ಸ್ಪಂದಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ಅವನಿಗೆ ಇದ್ದೇ ಇರುತ್ತದೆ. ಅದನ್ನು ಯಾರೂ ಅವನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ಅವರ ಖಚಿತ ನಂಬಿಕೆ. ಈ ಸಿದ್ಧಾಂತವನ್ನು ಅವರು ಕಡೆಯವರೆಗೂ ಪ್ರತಿಪಾದಿಸುತ್ತಲೇ ಬಂದರು.

ಫ್ರಾಂಕಲ್ ಆರಂಭದಲ್ಲಿ ಫ್ರಾಯ್ಡ್ ಹಾಗೂ ಅರ್ಡ್ಡೆರ ಪ್ರಭಾವಕ್ಕೆ ಒಳಗಾದರೂ, ಬಹಳ ಬೇಗ ಅದರಿಂದ ಹೊರಬಂದು ತಮ್ಮದೇ ಆದ ಸಿದ್ಧಾಂತ ರೂಪಿಸಿಕೊಳ್ಳಲು ಪ್ರಯತ್ನಿಸಿದರು. ಫ್ರಾಯ್ಡ್ನ 'ಸುಖದ ಇಚ್ಛಾಶಕ್ತಿ' ಹಾಗೂ ಆಡೇರ್‌ನ 'ಅಧಿಕಾರದ ಇಚ್ಛಾಶಕ್ತಿ' ಇವುಗಳಿಗೆ ಬದಲಾಗಿ ಫ್ರಾಂಕಲ್ 'ಅರ್ಥದ ಇಚ್ಛಾಶಕ್ತಿ' ಎಂಬ ಹೊಸ ಪರಿಕಲ್ಪನೆಯನ್ನು ಪ್ರತಿಪಾದಿಸಿದರು. ಚರಿತ್ರೆಯ ಒಂದು ಘಟ್ಟದಲ್ಲಿ ಮನುಷ್ಯ ಸಾವಿರಾರು ವರ್ಷಗಳಿಂದ ತನಗೆ ಮಾರ್ಗದರ್ಶನ ನೀಡುತ್ತಿದ್ದ ಪರಂಪರೆಯ ಸಂಬಂಧವನ್ನು ಕಡಿದುಕೊಂಡ. ಇದರ ಪರಿಣಾಮದಿಂದಾಗಿ ಹತಾಶೆ ಅವನನ್ನು ಕಾಡಲಾರಂಭಿಸಿತು. ಈ ಹತಾಶ ಭಾವದಿಂದ ಮನುಷ್ಯನನ್ನು ಪಾರು ಮಾಡಲು, ಬದುಕಿಗೊಂದು ಅರ್ಥ ಕಂಡುಕೊಳ್ಳಲು ಅವರು ಲೋಗೋಥೆರಪಿ ಎಂಬ ಚಿಕಿತ್ಸಾ ವಿಧಾನವನ್ನು ಆರಂಭಿಸಿದರು, ವ್ಯಕ್ತಿ ತನಗೆ ಎದುರಾಗುವ ನೋವು ಕಷ್ಟ ಸಂಕಟ ಇತ್ಯಾದಿಗಳನ್ನು ತನ್ನ ಬದುಕಿಗೊಂದು ಅರ್ಥ ಕಂಡುಕೊಳ್ಳುವ ಮೂಲಕ ಸಮರ್ಥವಾಗಿ ನಿರ್ವಹಿಸಬಹುದೆಂಬುದು ಲೋಗೋ ಥೆರಪಿಯ ಹಿಂದಿನ ಸಿದ್ಧಾಂತ. ಇದನ್ನೇ ಅವರು ಅರ್ಥದ ಇಚ್ಛಾಶಕ್ತಿ ಎಂದು ಕರೆದದ್ದು.

ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾದದ್ದರಿಂದ ಅವರವರ ಬದುಕಿನ ಅರ್ಥವನ್ನು ಅವರೇ ಕಂಡುಕೊಳ್ಳಬೇಕು ಎಂದು ಫ್ರಾಂಕಲ್ ಪ್ರತಿಪಾದಿಸುತ್ತಾರೆ. ಮನುಷ್ಯ ಸದಾ ಸುಖದ ಅನ್ವೇಷಣೆಯಲ್ಲಿ ಇರುತ್ತಾನೆ. ಅಧಿಕಾರಕ್ಕಾಗಿ ಹಾತೊರೆಯು ತ್ತಿರುತ್ತಾನೆ. ಅದರ ಬದಲು ತನ್ನ ಬದುಕಿಗೊಂದು ಅರ್ಥ ಕಂಡುಕೊಳ್ಳಲು ಆತ ತನ್ನನ್ನು ತೊಡಗಿಸಿಕೊಂಡಾಗ ಸಹಜವಾಗಿಯೇ ಮನುಷ್ಯನಿಗೆ ಬದುಕಿನ ಬಗ್ಗೆ ಭರವಸೆ ಮೂಡುತ್ತದೆ. ಫ್ರಾಂಕಲ್ ಹೇಳುವಂತೆ ಪರಿಸ್ಥಿತಿ ಎಷ್ಟೇ ಭಯಾನಕವಾಗಿದ್ದರೂ, ವ್ಯಕ್ತಿ ಎಷ್ಟೇ ಅಸಹಾಯಕನಾಗಿದ್ದರೂ ಅದನ್ನು ಮೀರಿ ನಿಲ್ಲುವ ಶಕ್ತಿ ಮನುಷ್ಯನಿಗೆ ಇದೆ. ವೈಯಕ್ತಿಕ ಸೋಲನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯ ಆತನಿಗೆ ಇದೆ. ಇದು ಸಾಧ್ಯವಾಗಬೇಕಾದರೆ ನಮ್ಮ ಶಕ್ತಿ ಸಾಮರ್ಥ್ಯಗಳನ್ನು ನಾವು ಸರಿಯಾಗಿ ಗುರುತಿಸಿಕೊಳ್ಳಬೇಕು ಅಷ್ಟೇ.

ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ ಪುಸ್ತಕವನ್ನು ಓದಿ ಅನೇಕರು ಪ್ರಭಾವಿತ ರಾಗಿದ್ದಾರೆ. ಹತಾಶ ಭಾವದಿಂದ ಹೊರಬಂದು ತಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆ ಯನ್ನು ತಂದುಕೊಂಡಿದ್ದಾರೆ. ಫ್ರಾಂಕಲ್‌ರ ಚಿಂತನೆ ಮಾತ್ರವಲ್ಲ, ಅವರ ಬದುಕೂ ಸಹ ಭರವಸೆಯನ್ನು ಮೂಡಿಸುತ್ತದೆ. ಮುರಳೀಧರನ್ ಅವರ ಈ ಪುಸ್ತಕ ಕನ್ನಡ ಮನಸ್ಸಿಗೊಂದು ಭರವಸೆಯ ಕೊಡುಗೆ. ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಇಂತಹ ಪುಸ್ತಕಗಳು ಅತ್ಯಗತ್ಯ.

-ನರಹಳ್ಳಿ ಬಾಲಸುಬ್ರಹ್ಮಣ್ಯ

MORE FEATURES

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...