Back To Top

 ಸ್ವತಂತ್ರ ಪತ್ರಕರ್ತರಾಗಿ ದುಡಿಯಲು ಆಯ್ಕೆಗಳು ಹಲವು – ಗುರುಪ್ರಸಾದ್ ಟಿ. ಎನ್

ಸ್ವತಂತ್ರ ಪತ್ರಕರ್ತರಾಗಿ ದುಡಿಯಲು ಆಯ್ಕೆಗಳು ಹಲವು – ಗುರುಪ್ರಸಾದ್ ಟಿ. ಎನ್

ಪುತ್ತೂರು: ಸ್ವತಂತ್ರ ಪತ್ರಿಕೋದ್ಯಮ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹು ಬೇಡಿಕೆಯ ಕ್ಷೇತ್ರ. ಸ್ವತಂತ್ರ ಪತ್ರಕರ್ತರಾಗಿ ದುಡಿಯಲು ಆಯ್ಕೆಗಳು ಹಲವಾರು ಇರುತ್ತದೆ. ಇಲ್ಲಿ ಪತ್ರಕರ್ತರು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಬೇರೆ ಬೇರೆ ಕೆಲಸಗಳನ್ನು ಮಾಡಿ ಆದಾಯವನ್ನು ಗಳಿಸಬಹುದು ಎಂದು ಮಂಗಳೂರಿನ ಹವ್ಯಾಸಿ ಪತ್ರಕರ್ತ ಗುರುಪ್ರಸಾದ್ ಟಿ.ಎನ್ ಹೇಳಿದರು.

ಅವರು ಇಲ್ಲಿನ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿಚಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡಿದ ಕೆಲಸಗಳು ಎಂದಿಗೂ ವ್ಯರ್ಥವಲ್ಲ. ವರದಿಗಾರಿಕೆ, ನುಡಿಚಿತ್ರ ಬರವಣೆಗೆ, ಕಾರ್ಟೂನ್ ಬಿಡಿಸುವುದು ಹೀಗೆ ಅನೇಕ ಮಜಲುಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಯಶಸ್ವಿ ಹವ್ಯಾಸಿ ಪತ್ರಕರ್ತರಾಗಲು ಸಾಧ್ಯ ಎಂದು ಸಲಹೆ ನೀಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ನಿರ್ದಿಷ್ಟ ಆದಾಯಕ್ಕೆ ಅವಲಂಬಿತರಾಗಿರುವುದು ಕಷ್ಟ. ಆದರೆ ಇಲ್ಲಿ ಕೆಲವೊಂದು ಸಂದರ್ಭದಲ್ಲಿ ನಮ್ಮ ಕೆಲಸಕ್ಕೆ ನಿರೀಕ್ಷೆಗೂ ಮೀರಿ ಆದಾಯಗಳನ್ನು ಮಾಡಬಹುದು. ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಆಯ್ಕೆಗಳಿವೆ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ. ಪಿ. ಆರ್ ನಿಡ್ಪಳ್ಳಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಹವ್ಯಾಸಿ ಪತ್ರಿಕೊದ್ಯಮದಲ್ಲಿ ತೊಡಗಿಸಿಕೊಂಡರೆ ಮುಂದೆ ಉದ್ಯೋಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಉಪಯೋಗವಾಗುತ್ತದೆ. ಅಲ್ಲದೇ ಹವ್ಯಾಸಿ ಪತ್ರಿಕೋದ್ಯಮದಿಂದ ಸಣ್ಣ ಪುಟ್ಟ ಆದಾಯವನ್ನು ಪಡೆದು ವಿದ್ಯಾಭ್ಯಾಸವನ್ನು ಅಡೆತಡೆಯಿಲ್ಲದೆ ಮುಂದುವರೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಶ್ರೀ ಪಿ.ಕೆ ಉಪಸ್ಥಿತರಿದ್ದರು. ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಭಟ್ ಸ್ವಾಗತಿಸಿ, ದೀಪ್ತಿ ಅಡ್ಡಂತಡ್ಕ ನಿರ್ವಹಿಸಿದರು.

Prev Post

ಕನ್ನಡ ಸಾಹಿತ್ಯ ಪರಿಷತ್ತು ಹಳ್ಳಿ ಹಳ್ಳಿಯಲ್ಲಿ ಸಾಹಿತ್ಯದ ಪ್ರಸಾರದ ಕೆಲಸ ಮಾಡುತ್ತಿದೆ: ಡಾ.…

Next Post

ವನ್ಯ ಸಂರಕ್ಷಣೆಗೆ ನಿಂತ ‘ಕಸ್ವಿ ಹಸಿರು ದಿಬ್ಬಣ’ | ಶಶಿಸ್ಕಾರ ನೇರಲಗುಡ್ಡ

post-bars

Leave a Comment

Related post